ಮಂಡ್ಯದಲ್ಲಿ ಅಕ್ಟೋಬರ್ನಲ್ಲಿ ಸೇನಾ ನೇಮಕಾತಿ
ಮಂಡ್ಯ, ಸೆಪ್ಟೆಂಬರ್ 02 : ಭಾರತೀಯ ಸೇನೆಗೆ ನೇಮಕಾತಿ ಮಾಡುವ ಸಲುವಾಗಿ ಮಂಡ್ಯ ನಗರದ ಡಾ. ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಅಕ್ಟೋಬರ್ 13 ರಿಂದ 19ರ ವರೆಗೆ ನೇಮಕಾತಿ ರ್ಯಾಲಿ ನಡೆಸುತ್ತಿದ್ದು, ಸೇನೆಗೆ ಸೇರಲು ಬಯಸುವ ಯುವಕರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.
'ಈಗಾಗಲೇ ನೇಮಕಾತಿಗೆ ಸಂಬಂಧಿಸಿದಂತೆ ಆನ್ ಲೈನ್ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದ್ದು ಅರ್ಜಿ ಸಲ್ಲಿಸಬಹುದಾಗಿದೆ' ಎಂದು ಭಾರತೀಯ ಸೇನೆಯ ನೇಮಕಾತಿ ವಿಭಾಗದ ನಿರ್ದೇಶಕರಾದ ನವರತನ್ ಸಿಬಿಯ ಅವರು ತಿಳಿಸಿದ್ದಾರೆ.
ಮಂಡ್ಯದಲ್ಲಿ ಸೇನಾ ನೇಮಕಾತಿ ರ್ಯಾಲಿ ಕುರಿತು ನಡೆದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆಗಸ್ಟ್ 28 ರಿಂದ ನೇಮಕಾತಿ ರ್ಯಾಲಿಗೆ ನೋಂದಣಿ ಆರಂಭಗೊಂಡಿದ್ದು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ರಾಮನಗರ, ಚಿಕ್ಕಬಳ್ಳಾಪುರ, ಬಳ್ಳಾರಿ, ಹಾಸನ, ಕೊಡಗು ಹಾಗೂ ಚಿತ್ರದುರ್ಗ ಜಿಲ್ಲೆಗಳ ಅಭ್ಯರ್ಥಿಗಳು ಇದರಲ್ಲಿ ಪಾಲ್ಗೊಳ್ಳಬಹುದು ಎಂದರು.

ಭಾರತೀಯ ಸೇನೆಯ ವೆಬ್ ಸೈಟ್ ನಲ್ಲಿ ನೇಮಕಾತಿಕೆ ಬೇಕಾಗುವ ಶಿಕ್ಷಣ ಅರ್ಹತೆ ಸೇರಿದಂತೆ ಇತರೆ ಮಾಹಿತಿಗಳು ಲಭ್ಯವಿದ್ದು, ಅಭ್ಯರ್ಥಿಗಳು ನೋಂದಣಿ ಮಾಡುವಾಗ ಕಡ್ಡಾಯವಾಗಿ ತಮ್ಮ ಇ-ಮೇಲ್ ವಿಳಾಸ ಹಾಗೂ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು. ಅಲ್ಲದೇ ನೋಂದಣಿಗೆ ಸಂಬಂಧಿಸಿದಂತೆ ಇತರೆ ಮಾಹಿತಿಗೆ ದೂರವಾಣಿ ಸಂಖ್ಯೆ 080-22966517ನ್ನು ಸಂಪರ್ಕಿಸುವಂತೆ ವಿವರಣೆ ನೀಡಿದರು.
ಅಭ್ಯರ್ಥಿಗಳ ದೈಹಿಕ ಫಿಟ್ನೆಸ್ ಪರೀಕ್ಷಿಸಲು 1.6 ಕಿಲೋಮೀಟರ್ ಓಟ ಸೇರಿದಂತೆ ಇತರೆ ದೈಹಿಕ ಫಿಟ್ನೆಸ್ ಪರೀಕ್ಷೆಯನ್ನು ಸ್ವತಂತ್ರ ಅಧಿಕಾರಿಗಳ ತಂಡದಿಂದ ನಡೆಸಲಾಗುತ್ತಿದ್ದು, ಸೇನೆಯ ವೈದ್ಯಕೀಯ ತಂಡದ ವೈದ್ಯರಿಂದ ವೈದ್ಯಕೀಯ ಪರೀಕ್ಷೆ ಹಾಗೂ ದೈಹಿಕ ಮಾಪನ ಪರೀಕ್ಷೆ ನಡೆಯಲಿದೆ. ದೈಹಿಕ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳು ಸಾಮಾನ್ಯ ಪ್ರವೇಶ ಪರೀಕ್ಷೆಗೆ ಆಯ್ಕೆಯಾಗುತ್ತಾರೆ.












Click it and Unblock the Notifications