ದಾವಣಗೆರೆ; ಕೆಲಸ ಖಾಲಿ ಇದೆ, ಅ.30ರೊಳಗೆ ಅರ್ಜಿ ಹಾಕಿ
ದಾವಣಗೆರೆ, ಅಕ್ಟೋಬರ್ 21; ದಾವಣಗೆರೆ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಖಾಲಿ ಇರುವ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲು ಆಸಕ್ತ, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಅಕ್ಟೋಬರ್ 30 ಕೊನೆಯ ದಿನವಾಗಿದೆ.
ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮತ್ತು ದಾವಣಗೆರೆ ಜಿಲ್ಲಾಡಳಿತ ವತಿಯಿಂದ ದಾವಣಗೆರೆ ತಾಲ್ಲೂಕು ಆನಗೋಡು ಸಮೀಪ ಹುಳುಪಿನಕಟ್ಟೆ ಗ್ರಾಮ ವ್ಯಾಪ್ತಿಯಲ್ಲಿ ಸ್ಥಾಪಿಸಲಾಗುತ್ತಿರುವ ದಾವಣಗೆರೆ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಆಯ್ಕೆಯಾದವರು ಕೆಲಸ ಮಾಡಬೇಕಿದೆ.
ದಾವಣಗೆರೆ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರವು ನೊಂದಾಯಿತ ಸೊಸೈಟಿ ಮೂಲಕ ನಿರ್ವಹಿಸಲ್ಪಡುತ್ತಿದ್ದು, ವಿಜ್ಞಾನ ಕೇಂದ್ರದಲ್ಲಿ ಕ್ಯುರೇಟರ್ ಮತ್ತು ತಾಂತ್ರಿಕ ಸಹಾಯಕರ ತಲಾ 1 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.

ಅಭ್ಯರ್ಥಿಗಳನ್ನು ಒಂದು ವರ್ಷದ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಕ್ಯುರೇಟರ್ ಹುದ್ದೆಗೆ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಪದವಿಯಲ್ಲಿ ಮೆಕ್ಯಾನಿಕಲ್, ಕಂಪ್ಯೂಟರ್ ಸೈನ್ಸ್, ಇನ್ಫಾರ್ಮೇಶನ್ ಸೈನ್ಸ್ನಲ್ಲಿ ಪದವಿ ಹೊಂದಿದವರು ಅರ್ಜಿ ಸಲ್ಲಿಸಬಹುದು.
ಎಂ. ಎಸ್. ಸಿ. ಯಲ್ಲಿ ಭೌತಶಾಸ್ತ್ರ, ರಾಸಾಯನಶಾಸ್ತ್ರ, ಪ್ರಾಣಿಶಾಸ್ತ್ರ, ಅರಣ್ಯಶಾಸ್ತ್ರ, ಪರಿಸರ ವಿಜ್ಞಾನ ಗಳಲ್ಲಿ ಪದವಿ ಹೊಂದಿದ್ದು, ಸಂಶೋಧನೆ, ವಿನ್ಯಾಸ, ವರ್ಕ್ಶಾಪ್, ಎಂಇ, ಎಂಟೆಕ್, ಪಿಹೆಚ್ಡಿ (ವಿಜ್ಞಾನ) ಗಳಲ್ಲಿ ಬೋಧಿಸಿದ 1 ವರ್ಷದ ಅನುಭವವಿರಬೇಕು. ಒಟ್ಟಾರೆ ವೇತನ ತಿಂಗಳಿಗೆ ರೂ. 25,000 ನೀಡಲಾಗುತ್ತದೆ.
ತಾಂತ್ರಿಕ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸುವವರು ಮಾನ್ಯತೆ ಪಡೆದ ಸಂಸ್ಥೆಯಿಂದ 3 ವರ್ಷ ಡಿಪ್ಲೋಮಾ ಕೋರ್ಸ್ನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್, ಇನ್ಸ್ಟ್ರೂಮೆನ್ಟೇಶನ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ಪದವಿ ಹೊಂದಿರಬೇಕು. ಕನಿಷ್ಠ 1 ವರ್ಷದ ಅನುಭವವಿರಬೇಕು. ಒಟ್ಟಾರೆ ವೇತನ ರೂ. 20,000 ನೀಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಅರ್ಜಿ ಸಲ್ಲಿಸಲು ಆಸಕ್ತ ಅಭ್ಯರ್ಥಿಗಳು ನಿಗದಿತ ನಮೂನೆಯನ್ನು ಉಪನಿರ್ದೇಶಕರು (ಆಡಳಿತ) ಸಾರ್ವಜನಿಕ ಶಿಕ್ಷಣ ಇಲಾಖೆ, ಕೆ.ಇ.ಬಿ ಸರ್ಕಲ್ ಹತ್ತಿರ, ದಾವಣಗೆರೆ ಇವರ ಕಾರ್ಯಾಲಯದಲ್ಲಿ ಪಡೆದು, ದೃಢೀಕೃತ ದಾಖಲೆಗಳೊಂದಿಗೆ ಅಕ್ಟೋಬರ್ 30 ರಂದು ಸಂಜೆ 5 ಗಂಟೆಯೊಳಗಾಗಿ ಇದೇ ಕಾರ್ಯಾಲಯಕ್ಕೆ ಸಲ್ಲಿಸಬೇಕು.
ಈ ಹುದ್ದೆಗಳು ಸರ್ಕಾರದಿಂದ ಅನುಮೋದಿತ ಹುದ್ದೆಗಳಾಗಿರುವುದಿಲ್ಲ ಹಾಗೂ 1 ವರ್ಷದ ಅವಧಿಗೆ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುವುದು. ಖಾಯಂ ಮಾಡಲು ಯಾವುದೇ ಅವಕಾಶವಿರುವುದಿಲ್ಲ.
1 ವರ್ಷದ ಗುತ್ತಿಗೆ ಅವಧಿಯನ್ನು ತೃಪ್ತಿಕರವಾಗಿ ಪೂರೈಸಿದಲ್ಲಿ, ಆದ್ಯತೆಯ ಮೇರೆಗೆ ಅಗತ್ಯವಿದ್ದಲ್ಲಿ ಮತ್ತೂಂದು ವರ್ಷಕ್ಕೆ ವಿಸ್ತರಿಸಲಾಗುವುದು. ಆಯ್ಕೆಯಾದ ನಂತರ ತಪ್ಪು ಮಾಹಿತಿ ಅಥವಾ ನಕಲಿ ದಾಖಲೆಗಳು ಕಂಡು ಬಂದಲ್ಲಿ ಯಾವುದೇ ಮುನ್ನೆಚ್ಚರಿಕೆ ನೀಡದೆ ನೇಮಕಾತಿ ರದ್ದುಪಡಿಸಿ ಕಾನೂನಿನ ರೀತಿ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಲಾಗುತ್ತದೆ.
ಆಯ್ಕೆ ಸಮಿತಿಯ ನಡೆಸುವ ಸಂದರ್ಶನದ ಆಧಾರದ ಮೇಲೆ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗುವುದು. ಹೆಚ್ಚಿನ ವಿವರಗಳಿಗಾಗಿ ಆಸಕ್ತರು ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ದೂರವಾಣಿ ಸಂಖ್ಯೆ 08192-231607 ಸಂಪರ್ಕಿಸಬಹುದು.
ಅರ್ಜಿ ಆಹ್ವಾನ; ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ಸ್ವ-ಸಹಾಯ ಸಂಘಗಳು ಸದೃಡ ಹೊಂದಲು ಕಿರು ಉದ್ದಿಮೆಗಾಗಿ 1 ಲಕ್ಷ ರೂ. ಸಾಲ ನೀಡಲಾಗುತ್ತಿದ್ದು, ಇದಕ್ಕಾಗಿ ಆಸಕ್ತಿಯುಳ್ಳ ಅರ್ಹ ಮಹಿಳಾ ಸ್ವ-ಸಹಾಯ ಸಂಘಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಕಲಬುರಗಿ ಗ್ರಾಮೀಣ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಈ ಕುರಿತು ಪ್ರಕಟಣೆ ಹೊರಡಿಸಿದ್ದಾರೆ. ಅರ್ಜಿ ಸಲ್ಲಿಸುವ ಸ್ವ-ಸಹಾಯ ಗುಂಪು ಆದಾಯೋತ್ಪನ್ನ ಚಟುವಟಿಕೆ ನಡೆಸುತ್ತಿರಬೇಕು ಹಾಗೂ 10 ವರ್ಷಗಳಿಂದ ಸಕ್ರಿಯವಾಗಿರಬೇಕು.
ಅರ್ಜಿ ಸಲ್ಲಿಸಲು 2021ರ ನವೆಂಬರ್ 2 ಕೊನೆಯ ದಿನವಾಗಿದೆ. ಷರತ್ತು, ಅರ್ಜಿ ನಮೂನೆ ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಗ್ರಾಮೀಣ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಲು ಮನವಿ ಮಾಡಲಾಗಿದೆ.












Click it and Unblock the Notifications