ಸಕಲೇಶಪುರ, ಮಡಿಕೇರಿಯಲ್ಲಿ ಕೆಲಸ ಖಾಲಿ ಇದೆ
ಮಡಿಕೇರಿ, ಡಿಸೆಂಬರ್ 21; ಸಾಂಬಾರ ಮಂಡಳಿಯ ಸಕಲೇಶಪುರ ಪ್ರಾದೇಶಿಕ ಕಚೇರಿ ಮತ್ತು ಮಡಿಕೇರಿಯ ವಿಭಾಗೀಯ ಕಚೇರಿಯಲ್ಲಿ ಗುಮಾಸ್ತ ಸಹಾಯಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಕರೆಯಾಗಿದೆ.
ಸಕಲೇಶಪುರ ಪ್ರಾದೇಶಿಕ ಕಚೇರಿ ಮತ್ತು ಮಡಿಕೇರಿಯ ವಿಭಾಗೀಯ ಕಚೇರಿಯಲ್ಲಿ ತಲಾ ಒಂದು ಗುಮಾಸ್ತ ಸಹಾಯಕ ಹುದ್ದೆ ಖಾಲಿ ಇದೆ. ಆಸಕ್ತ, ಅರ್ಹ ಅಭ್ಯರ್ಥಿಗಳು ಜನವರಿ 9ರ ತನಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 64 ವರ್ಷದೊಳಗಿನ ವಯೋಮಿತಿ ನಿಗದಿ ಮಾಡಲಾಗಿದೆ. ನಿವೃತ್ತಿ ಹೊಂದಿದ ಸರ್ಕಾರಿ ನೌಕರರು, ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.

ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ಭಾರತೀಯ ಸಾಂಬಾರ ಮಂಡಳಿ, ವಿಭಾಗೀಯ ಕಚೇರಿ, ಕುಶಾಲ್ ರೆಸಿಡೆನ್ಸಿ, ಎರಡನೇ ಮಹಡಿ, 14 ನೇ ಬ್ಲಾಕ್, ನ್ಯೂ ಎಕ್ಸ್ಟೆಕ್ಷನ್, ಮಡಿಕೇರಿ ಇವರನ್ನು ಸಂಪರ್ಕಿಸಬಹುದುದ. ದೂರವಾಣಿ ಸಂಖ್ಯೆಗಳು 08272-295056, 9087716080.
ಸಮುದಾಯ ಸಂಪನ್ಮೂಲ ವ್ಯಕ್ತಿ ಹುದ್ದೆ; ಕೌಶಲ್ಯಾಭಿವೃದ್ಧಿ ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿ ದೀನ ದಯಾಳ್ ಅಂತ್ಯೋದಯ ಯೋಜನೆ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಹುದ್ದೆಗಳನ್ನು ಗೌರವಧನ ಆಧಾರದ ಮೇಲೆ ಭರ್ತಿ ಮಾಡಲಾಗುತ್ತಿದೆ.
ಹೊಸದಾಗಿ ಹುದ್ದೆಗಳನ್ನು ಸೃಜಿಸಿ ಗೌರವ ಧನದ ಆಧಾರದ ಮೇಲೆ ಒಂದು ವರ್ಷಕ್ಕೆ ಪ್ರಭಾರ ಗುತ್ತಿಗೆ ಆಧಾರದ ಮೇಲೆ ಮಡಿಕೇರಿ ನಗರಸಭೆಯಲ್ಲಿ ಸಮುದಾಯ ಸಂಪನ್ಮೂಲ ವ್ಯಕ್ತಿಯಾಗಿ ನಿಯುಕ್ತಿಗೊಳಿಸಲು ಅನುಮೋದನೆ ಸಿಕ್ಕಿದೆ.
ಆಸಕ್ತರು ತಮ್ಮ ಅರ್ಜಿಯನ್ನು ಈ ಕಚೇರಿಯಲ್ಲಿ ಲಭ್ಯವಿರುವ ನಮೂನೆಯನ್ನು ಪಡೆದು ಭರ್ತಿಮಾಡಿ ಅಗತ್ಯ ಧೃಡೀಕೃತ ದಾಖಲೆಗಳೊಂದಿಗೆ ಡಿಸೆಂಬರ್ 31ರೊಳಗೆ ಕಚೇರಿಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಕಚೇರಿ ವೇಳೆಯಲ್ಲಿ ಖುದ್ದಾಗಿ ಭೇಟಿ ನೀಡಿ ಡೇ-ನಲ್ಮ್ ಶಾಖೆಯಲ್ಲಿ ಮಾಹಿತಿ ಪಡೆಯಬಹುದು.
ಅರ್ಹತೆಗಳು; ಸಂಪನ್ಮೂಲ ವ್ಯಕ್ತಿ ಹುದ್ದೆಗೆ ಅರ್ಜಿ ಸಲ್ಲಿಸುವವರು ಪ್ರದೇಶ ಮಟ್ಟದ/ ಸ್ವಸಹಾಯ ಸಂಘದ ಕನಿಷ್ಠ 3 ವರ್ಷದ ಮಹಿಳಾ ಸದಸ್ಯರಿದ್ದು, ವಯೋಮಿತಿ 18 ರಿಂದ 45 ವರ್ಷವಾಗಿದೆ.
ಸದಸ್ಯರಾಗಿರುವ ಕುರಿತು ಸಂಘದ ಸದಸ್ಯತ್ವದ ದೃಡೀಕರಣ ಪ್ರಮಾಣ ಪತ್ರ ನೀಡಬೇಕು. ದ್ವೀತಿಯ ಪಿಯುಸಿ ಪಾಸಾಗಿರಬೇಕು. ಹೆಚ್ಚಿನ ವಿದ್ಯಾಭ್ಯಾಸ ಹೊಂದಿದವರಿಗೆ ಆಯ್ಕೆಯಲ್ಲಿ ಆದ್ಯತೆ ನೀಡಲಾಗುವುದು. ಧೃಡೀಕೃತ ಶೈಕ್ಷಣಿಕ ದಾಖಲಾತಿ ಲಗತ್ತಿಸಿರಬೇಕು. ಕನಿಷ್ಠ ಕಂಪ್ಯೂಟರ್ ನಿರ್ವಹಣೆಯ ಜ್ಞಾನ ಹೊಂದಿರಬೇಕು. ಈ ಕುರಿತು ಧೃಡೀಕೃತ ಪ್ರಮಾಣ ಪತ್ರವಿರಬೇಕು.
ಅಭ್ಯರ್ಥಿಯು ಸ್ವ ಸಹಾಯ ಸಂಘದಿಂದ ಸಾಲ, ಪಡೆದು ಮರು ಪಾವತಿ ಮಾಡಿರಬೇಕು/ ಚಾಲ್ತಿಯಲ್ಲಿರಬೇಕು. ಸಂಘದಲ್ಲಿ ಪಡೆದ ಸಾಲ ಮರು ಪಾವತಿಸದೇ ಸುಸ್ತಿದಾರರಾಗಿರಬಾರದು. ಈ ಕುರಿತು ಸಂಘದಿಂದ ದೃಢೀಕರಣ ಪತ್ರ ಕೊಡಬೇಕು.
ಸಂಪನ್ಮೂಲ ವ್ಯಕ್ತಿಗಳು ಮಡಿಕೇರಿ ನಗರಸಭೆಯ ವ್ಯಾಪ್ತಿಯಲ್ಲಿ ವಾಸಿಸುತ್ತಿರಬೇಕು. ಈ ಕುರಿತು ಅಗತ್ಯ ದಾಖಲೆ ಲಗತ್ತಿಸಬೇಕು. ಆಯ್ಕೆಯಾಗುವ ಸಂಪನ್ಮೂಲ ವ್ಯಕ್ತಿಗಳು ಸರಕಾರ ಸೂಚಿಸುವ ಬೇರೆ ಬೇರೆ ಸ್ಥಳಗಳಲ್ಲಿ, ಜಿಲ್ಲೆಗಳಲ್ಲಿ ಹೊರ ರಾಜ್ಯಗಳಲ್ಲಿ ನೀಡುವ ತರಬೇತಿ ಅಥವಾ ಇತರೆ ಚಟುವಟಿಕೆಗಳಲ್ಲಿ ಭಾಗವಹಿಸಲು ಸಿದ್ಧರಿರಬೇಕು.
ಸ್ವ ಸಹಾಯ ಸಂಘ ನಿರ್ವಹಿಸಬೇಕಾದ ಪುಸ್ತಕಗಳ ಹಾಗೂ ವಹಿಗಳ ಬಗ್ಗೆ ಜ್ಞಾನವನ್ನು ಹೊಂದಿರಬೇಕು. ಈ ಹುದ್ದೆಗೆ ಅರ್ಜಿ ಸಲ್ಲಿಸಬಯಸುವವರು ಯಾವುದೇ ಸರ್ಕಾರಿ/ ಸರ್ಕಾರೇತರ ಸಂಸ್ಥೆಗಳಲ್ಲಿ ಪೂರ್ಣಾವಧಿ ಅಥವಾ ತಾತ್ಕಾಲಿಕ ಉದ್ಯೋಗಸ್ಥರಾಗಿರಬಾರದು.












Click it and Unblock the Notifications