ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ಅರ್ಜಿ ಹಾಕಿ
ಬೆಂಗಳೂರು, ಅಕ್ಟೋಬರ್ 19; ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ದ್ವಿತೀಯ ದರ್ಜೆ ಸಹಾಯಕರು 'ಸಿ' ವೃಂದದ ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಿದೆ.
ಈ ಅಧಿಸೂಚನೆ ಅಕ್ಟೋಬರ್ 12ರಂದು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟವಾಗಿದೆ. ಅಧಿಸೂಚನೆ ಪ್ರಕಟಿಸಿದ 20 ದಿನದೊಳಗೆ ಆಸಕ್ತ, ಅರ್ಹ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಕೆ ಮಾಡಬಹುದಾಗಿದೆ.
ಇಲಾಖಾ ವೃಂದ ಮತ್ತು ನೇಮಕಾತಿ ನಿಯಮಾನುಸಾರ 13 ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ಮಾಜಿ ಸೈನಿಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸರ್ಕಾರಿ ಮುದ್ರಣಾಲಯದಲ್ಲಿ ಲಭ್ಯವಿರುವ ಸರ್ಕಾರದಿಂದ ನಿಗದಿಪಡಿಸಿದ ಅರ್ಜಿ ನಮೂನೆ ಮೂಲಕ ದ್ವಿ ಪ್ರತಿಯಲ್ಲಿ ಅರ್ಜಿ ಸಲ್ಲಿಸಬೇಕು.

ಪರಿಶಿಷ್ಟ ಜಾತಿ 2, 2ಎ 2, 2ಬಿ 1, 3ಎ 1, ಸಾಮಾನ್ಯ 7 ಸೇರಿದಂತೆ ಒಟ್ಟು 13 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಅರ್ಜಿ ಸಲ್ಲಿಸುವವರು ಮಾಜಿ ಸೈನಿಕರಾಗಿರತಕ್ಕದ್ದು. ಕರ್ನಾಟಕ ರಾಜ್ಯದ ಜಿಲ್ಲಾ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಿಂದ ಮಾಜಿ ಸೈನಿಕರ ಗುರುತಿನ ಚೀಟಿ ಪಡೆದಿರಬೇಕು. ಎಲ್ಲಾ ಹುದ್ದೆಗಳು ಮಾಜಿ ಸೈನಿಕರಿಗೆ ಮಾತ್ರ ಮೀಸಲಾಗಿರುತ್ತವೆ.
ಶೈಕ್ಷಣಿಕ ಅರ್ಹತೆ; ಭಾರತದ ಕಾನೂನು ರೀತಿ ಸ್ಥಾಪಿತವಾದ ಪದವಿ ಪೂರ್ವ ಕಾಲೇಜುಗಳಿಂದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು ಅಥವ ಸರ್ಕಾರವು ಅಂತಹ ಪರೀಕ್ಷೆಗೆ ಸಮಾನವೆಂದು ಅಂಗೀಕರಿಸಿದ ವಿದ್ಯಾರ್ಹತೆಯನ್ನು ಹೊಂದಿರಬೇಕು. 10ನೇ ತರಗತಿ ಉತ್ತೀರ್ಣರಾದ ನಂತರ ಸಶಸ್ತ್ರ ಪಡೆಗೆ ಸೇರ್ಪಡೆಗೊಂಡು ಕನಿಷ್ಠ 15 ವರ್ಷ ಸೇವೆ ಸಲ್ಲಿಸಿ ಸಶಸ್ತ್ರ ಪಡೆಗಳಲ್ಲಿ ಇಂಡಿಯನ್ ಆರ್ಮಿ/ ಏರ್ ಫೋರ್ಸ್/ ನೇವಿಯಿಂದ ಸ್ಪೆಷಲ್ ಸರ್ಟಿಫಿಕೇಟ್ ಪಡೆದವರಿಗೆ ಸಶಸ್ತ್ರ ಪಡೆಗಳಿಂದ ವಿತರಿಸಿದ ಪದವಿ ಪ್ರಮಾಣ ಪತ್ರ ಹೊಂದಿರಬೇಕು.
ಅರ್ಜಿ ಸಲ್ಲಿಕೆ ಮಾಡುವ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಲು ನಿಗದಿ ಪಡಿಸಿದ ಕೊನೆಯ ದಿನಾಂಕದಂದು ಗರಿಷ್ಠ 50 ವರ್ಷಗಳನ್ನು ಮೀರಬಾರದು. ಹುದ್ದೆಗಳನ್ನು ಕರ್ನಾಟಕ ನಾಗರೀಕ ಸೇವೆಗಳು (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು 2021ರ ಉಪ ನಿಯಮ 6 (2) ಪ್ರಕಾರ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಶೇಕಡಾವಾರು ಪ್ರಮಾಣದ ಆಧಾರದ ಮೇಲೆ ಹಾಗೂ ಚಾಲ್ತಿಯಲ್ಲಿರುವ ಮೀಸಲಾತಿ ನಿಯಮಗಳ ಅನ್ವಯ ಮಾಡಲಾಗುತ್ತದೆ.
ಅರ್ಜಿಗಳನ್ನು ಸಲ್ಲಿಕೆ ಮಾಡಲು ವಿಳಾಸ; ಅಧ್ಯಕ್ಷರು,ಇಲಾಖಾ ನೇಮಕಾತಿ ಸಮಿತಿ. ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ. #58, ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಭವನ. ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ರಸ್ತೆ, ಬೆಂಗಳೂರು 560025.
ಅಭ್ಯರ್ಥಿಗಳಿಗೆ ಪ್ರಮುಖ ಸೂಚನೆಗಳು; ಈ ಹುದ್ದೆಗಳ ಸಂಖ್ಯೆ ಬದಲಾವಣೆಗೆ ಒಳಪಟ್ಟಿರುತ್ತದೆ. ಹುದ್ದೆಗಳು ಕರ್ನಾಟಕ ರಾಜ್ಯಕ್ಕೆ ಸೀಮಿತ. ಅಭ್ಯರ್ಥಿಗಳು ರಾಜ್ಯದ ಯಾವುದೇ ಭಾಗದಲ್ಲಿ ಕಾರ್ಯ ನಿರ್ವಹಣೆ ಮಾಡಲು ಸಿದ್ಧರಿರಬೇಕು. ಅರ್ಜಿಗಳನ್ನು ಸಲ್ಲಿಕೆ ಮಾಡುವ ಅಭ್ಯರ್ಥಿಗಳು ಯಾವುದೇ ಶುಲ್ಕವನ್ನು ಪಾವತಿ ಮಾಡಬೇಕಿಲ್ಲ. ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆಗೆ ಕರೆದಾಗ ಯಾವುದೇ ಭತ್ಯೆಯನ್ನು ನೀಡುವುದಿಲ್ಲ.
ಅಪೂರ್ಣವಾದ, ಅಗತ್ಯ ದಾಖಲೆಗಳನ್ನು ಲಗತ್ತಿಸದ ಮತ್ತು ಸಮಯ ಮೀರಿ ಬಂದ ಅರ್ಜಿಗಳನ್ನು ತಿರಸ್ಕಾರ ಮಾಡಲಾಗುತ್ತದೆ. ಈ ನೇಮಕಾತಿಯನ್ನು ಯಾವುದೇ ಹಂತದಲ್ಲಿ ಕಾರಣ ನೀಡದೇ ರದ್ದುಗೊಳಿಸುವ ಅಧಿಕಾರವು ನೇಮಕಾತಿ ಸಮಿತಿ ಹೊಂದಿದೆ ಎಂದು ಸ್ಪಷ್ಟಪಡಿಸಲಾಗಿದೆ.
ಕನ್ನಡ ಕಡ್ಡಾಯ ಪರೀಕ್ಷೆ; ಎಸ್ಎಸ್ಎಲ್ಸಿ/ 10ನೇ ತರಗತಿ ಪರೀಕ್ಷೆಯಲ್ಲಿ ಪ್ರಥಮ ಅಥವ ದ್ವಿತೀಯ ಭಾಷೆಯಾಗಿ ಕನ್ನಡ ಭಾಷೆಯನ್ನು ತೆಗೆದುಕೊಂಡು ಉತ್ತೀರ್ಣರಾದ ಮಾಜಿ ಸೈನಿಕರನ್ನು ಹೊರತುಪಡಿಸಿ ಉಳಿದ ತೃತೀಯ ಭಾಷೆ/ ಐಚ್ಛಿಕ ವಿಷಯವನ್ನಾಗಿ ಕನ್ನಡ ಭಾಷೆಯನ್ನು ತೆಗೆದುಕೊಂಡು ಉತ್ತೀರ್ಣರಾಗಿರುವ ಮಾಜಿ ಸೈನಿಕರು ಕನ್ನಡ ಭಾಷಾ ಪರೀಕ್ಷೆ ಅರ್ಹತೆಯನ್ನು ಪಡೆಯದ ಹೊರತು ಆಯ್ಕೆಗೆ ಅರ್ಹರಲ್ಲ.











Click it and Unblock the Notifications