ಉತ್ತರ ಕರ್ನಾಟಕ vs ದಕ್ಷಿಣ ಕರ್ನಾಟಕ: ಮದಗಜಗಳ ಕಾಳಗದಲ್ಲಿ ಅಂತಿಮ ಗೆಲವು ಯಾರಿಗೆ?
ಬೆಂಗಳೂರು, ಮಾರ್ಚ್ 27: ಅಶ್ಲೀಲ ಸಿಡಿ ಸ್ಫೋಟ ಪ್ರಕರಣ ಎರಡು ಮದಗಜಗಳ ನಡುವಿನ "ನೀನಾ -ನಾನಾ " ಕಾಳಗಕ್ಕೆ ನಾಂದಿ ಹಾಡಿದೆ. ಜಾರಕಿಹೊಳಿ ಪರವಾಗಿ ಸಿಡಿಲೇಡಿಯ ಪೋಷಕರು ನಿಂತಿದ್ದಾರೆ. ಜಾರಕಿಹೊಳಿ ವಿರುದ್ಧ ಸಿಡಿ ಲೇಡಿ ತಿರುಗಿ ಬೀಳುವ ಮೂಲಕ ಡಿ.ಕೆ. ಶಿ ಪರ ಎಂಬ ನಿಲುವು ತಾಳಿದ್ದಾಳೆ. ಇನ್ನೂ ಸಿಡಿ ಸ್ಫೋಟ ಪ್ರಕರಣದಲ್ಲಿ ಶನಿವಾರ ನಡೆದ ಬೆಳವಣಿಗೆ ಇಬ್ಬರು ಮಹಾ ರಾಜಕಾರಣಿಗಳ ನಡುವಿನ ಆರೋಪ- ಪ್ರತ್ಯಾರೋಪ ಅಧಿಕೃತ ಕದನಕ್ಕೆ ನಾಂದಿ ಹಾಡಿದೆ.
ಇಬ್ಬರು ನಾಯಕರ ಬೆಂಬಲಿಗರು ಬೀದಿಗೆ ಇಳಿದು ಹೋರಾಟ ಮಾಡುತ್ತಿದ್ದಾರೆ. ಈ ಅಶ್ಲೀಲ ಸಿಡಿ ಸ್ಫೋಟ ಪ್ರಕರಣದಲ್ಲಿ ಅತ್ಯಾಚಾರ ಆರೋಪ ಎದುರಿಸುತ್ತಿರುವ ರಮೇಶ್ ಜಾರಕಿಹೊಳಿಗೆ ಮುಳುವಾಗುತ್ತಾ ? ಇಲ್ಲವೇ ಇದು ರಾಜಕೀಯ ಷಡ್ಯಂತ್ರ ಎಂಬ ಅಪವಾದ ಹೊತ್ತ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಭವಿಷ್ಯಕ್ಕೆ ಮಾರಕವಾಗಿ ಪರಿಣಮಿಸಲಿದೆಯಾ ? ಇಬ್ಬರು ಪ್ರಭಾವಿ ನಾಯಕರ ನಡುವಿನ ಈ ಕಾಳಗದಲ್ಲಿ ಜಯ ಯಾರಿಗೆ ? ಮುಂದಿನ ಬೆಳವಣಿಗೆ ಏನು ? ಇನ್ನು ಮುಂದೆ ಆರಂಭವಾಗಲಿರುವ ಅಸಲಿ ಆಟದ ಚಿತ್ರಣ ಇಲ್ಲಿದೆ ನೋಡಿ.
ನಾಳೆ " ಅಶ್ಲೀಲ ಸಿಡಿ ರಣರಂಗ"ಕ್ಕೆ ಇಳಿಯಲಿದ್ದಾಳೆ ಸಿಡಿಗರ್ಲ್ !
ಸಿಡಿ ಷಡ್ಯಂತ್ರದ ಹಿಂದೆ ಮಹಾ ನಾಯಕ ಇದ್ದಾನೆ ಎಂದೇ ಹೇಳಿಕೊಂಡು ಬಂದಿದ್ದ ರಮೇಶ್ ಜಾರಕಿಹೊಳಿ ಶನಿವಾರ ಸಿಡಿಸಿದ ಬಾಂಬ್ ನೇರವಾಗಿ ಡಿ.ಕೆ. ಶಿವಕುಮಾರ್ ವಿರುದ್ಧ ಆರೋಪಿಸಿದರು. ಮಾತ್ರವಲ್ಲ, ಗಂಡಸು ಅಲ್ಲ, ಗಾ... ಎಂಬ ಪದ ಬಳಿಸಿ ಆಡಿದ ಮಾತು ಜಾರಕಿಹೊಳಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಸಿಡಿದೇಳಿದ್ದಾರೆ. ಇನ್ನು ಜಾರಕಿಹೊಳಿ ಬೆಂಬಲಿಗರು ಕೂಡ ಗೋಕಾಕ್ನಲ್ಲಿ ಬೀದಿಗೆ ಇಳಿದು ಟೈರ್ ಗಳಿಗೆ ಬೆಂಕಿ ಹಚ್ಚಿ ಹೋರಾಟಕ್ಕೆ ಇಳಿದಿದ್ದಾರೆ. ಎರಡು ರಾಜಕಾರಣಿಗಳ ನಡುವೆ ದೊಡ್ಡ ಕಾಳಗಕ್ಕೆ ನಾಂದಿ ಹಾಡಿದ ಈ ಅಶ್ಲೀಲ ಸಿಡಿ ಸ್ಫೋಟ ಪ್ರಕರಣ ಸೋಮವಾರ ಬಹುದೊಡ್ಡ ಬೆಳವಣಿಗೆ ಕಾಣಲಿದೆ. ಅಶ್ಲೀಲ ಸಿಡಿ ಪ್ರಕರಣದ ಕೇಂದ್ರ ಬಿಂದು ಸಿಡಿಲೇಡಿ. ಆಕೆ ಸೋಮವಾರ ನ್ಯಾಯಾಧೀಶರ ಮುಂದೆ ಹಾಜರಾಗಿ ಹೇಳಿಕೆ ದಾಖಲಿಸುವ ಸಾಧ್ಯತೆಯಿದೆ. ಈ ಕುರಿತು ಸಿಡಿಲೇಡಿಯ ವಕೀಲ ಜಗದೀಶ್ ಕುಮಾರ್ ಸುಳಿವು ನೀಡಿದ್ದಾರೆ.
ಸಿಡಿ ಲೇಡಿ ಕಾಳಗಕ್ಕೆ ಎಂಟ್ರಿ ಆದ್ರೆ
ಒಂದು ವೇಳೆ ಸಿಡಿ ಲೇಡಿ ನೇರವಾಗಿ ನ್ಯಾಯಾಲಯದ ಮುಂದೆ ಹಾಜರಾಗಿ ನ್ಯಾಯಾಧೀಶರ ಎದುರಲ್ಲಿ ನಿಡುವ ಹೇಳಿಕೆ ಆಧರಿಸಿ ರಮೇಶ್ ಜಾರಕಿಹೊಳಿಯನ್ನು ಬಂಧಿಸಿದರೂ ಅಚ್ಚರಿ ಪಡಬೇಕಿಲ್ಲ. ಯಾಕೆಂದರೆ ನ್ಯಾಯಾಲಯದ ತೀರ್ಪು ಇಲ್ಲಿ ಮಹತ್ವ ಪಡೆದುಕೊಳ್ಳುತ್ತದೆ. ಹೀಗಾಗಿ ಲೇಡಿಯ ಹೇಳಿಕೆ ಮೇಲೆ ಇದು ನಿಂತಿದೆ. ಸಿಡಿ ಲೇಡಿ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸುವ ಮೊದಲೇ ಎಸ್ಐಟಿ ಅಧಿಕಾರಿಗಳು ಸಿಡಿ ಲೇಡಿಯನ್ನು ಪತ್ತೆ ಮಾಡಿ ವಿಚಾರಣೆ ನಡೆಸಿ, ಮಹತ್ವದ ಸಾಕ್ಷಾಧಾರಗಳನ್ನು ಮುಂದಿಟ್ಟರೆ, ಬಹುಶಃ ಸಿಡಿ ಲೇಡಿಯೇ ಇಕ್ಕಟ್ಟಿನಲ್ಲಿ ಸಿಲುಕಿಕೊಳ್ಳುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಸಂತ್ರಸ್ತೆ ಎನ್ನಲಾದ ಯುವತಿ ಮಾತನಾಡಿರುವ ಅಡಿಯೋ, ವಿಡಿಯೋ ಹೇಳಿಕೆಗಳು ಜಾರಕಿಹೊಳಿಗೆ ಅನುಕೂಲವಾಗುವಂತೆ ಕಾಣುತ್ತಿವೆ. ಇದೊಂದು ರಾಜಕೀಯ ಷಡ್ಯಂತ್ರ, ಹನಿಟ್ರ್ಯಾಪ್ ಎಂಬುದನ್ನು ಸಾಬೀತು ಪಡಿಸಲಿಕ್ಕೆ ಅಗತ್ಯ ದಾಖಲೆಗಳನ್ನು ಒಂದಡೆ ಜಾರಕಿಹೊಳಿ ಕುಟುಂಬವೇ ಕಲೆ ಹಾಕಿರುವುದರಿಂದ ಜಾರಕಿಹೊಳಿ ಬಂಧನ ಭೀತಿಗೆ ಒಳಗಾಗದೇ ಧೈರ್ಯವಾಗಿ ಎದುರಿಸುತ್ತಿದ್ದಾರೆ. ಇನ್ನು ಸಿಡಿಲೇಡಿ ಪೋಷಕರು ನೀಡಿರುವ ಹೇಳಿಕೆ ಕೂಡ ಪರೋಕ್ಷವಾಗಿ ಸಹಾಯ ವಾಗಲಿದೆ.
ಎಲ್ಲವೂ ಮೀರಿ ಸಿಡಿಲೇಡಿ ಹೇಳಿಕೆ ಆಧರಿಸಿ ರಮೇಶ್ ಜಾರಕಿಹೊಳಿ ಬಂಧನಕ್ಕೆ ಆಗಿದ್ದಲ್ಲಿ, ಈವರೆಗಿನ ಬೆಳವಣಿಗೆ ನೋಡಿ ಅವರ ಬೆಂಬಲಿಗರು ರೊಚ್ಚಿಗೇಳುವ ಸಾಧ್ಯತೆಯಿದೆ. ಇಲ್ಲವೇ ಸಿಡಿ ಲೇಡಿ ತನ್ನ ಪೋಷಕರು ಹೇಳಿರುವ ಮಾತಿನಲ್ಲಿ ಸತ್ಯವಿದೆ. ನಾನು ಗೊತ್ತಿಲ್ಲದೇ ತಪ್ಪು ಮಾಡಿದೆ. ನನ್ನನ್ನು ಬೇರೆಯವರು ಬಳಸಿಕೊಂಡು ಹೀಗೆ ಅನ್ಯಾಯ ಮಾಡಿದರು. ನಮ್ಮ ಹೆತ್ತವರ ಮಾತಿನಲ್ಲಿ ಸತ್ಯಾಂಶವಿದೆ ಎಂದು ಹೇಳಿದ್ದೇ ಆದಲ್ಲಿ ಈ ಪ್ರಕರಣ ಇನ್ನೊಂದು ದಿಕ್ಕಿಗೆ ಕರೆದೊಯ್ಯಲಿದೆ.
ಜಾರಕಿಹೊಳಿಯ ಹಾದಿ
ಅಶ್ಲೀಲ ಸಿಡಿ ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿ ಇದೇ ಮೊದಲ ಭಾರಿಗೆ ಆಕ್ರೋಶ ಭರಿತ ಮಾತುಗಳನ್ನಾಡಿದ್ದಾರೆ. ಸಿಡಿ ಸ್ಫೋಟಗೊಂಡ ದಿನ ಅಜ್ಞಾತವಾಸಕ್ಕೆ ತೆರಳಿದ್ದ ಜಾರಕಿಹೊಳಿ ಕ್ಯಾಮರಾಗಳನ್ನು ಕೂಡ ಕಣ್ಣು ಎತ್ತಿ ನೋಡಿರಲಿಲ್ಲ. ಆದರೆ, ಸಿಡಿ ಸ್ಫೋಟ ಸುಳಿವು ಪಡೆದ ದಿನದಿಂದಲೂ ಅದರ ಹಿಂದಿನ ರಹಸ್ಯ ಪತ್ತೆ ಮಾಡುವ ಕಾರ್ಯದಲ್ಲಿ ಜಾರಕಿಹೊಳಿ ಬಹಳಷ್ಟು ಶ್ರಮ ಹಾಕಿದ್ದಾರೆ. ಹೀಗಾಗಿ ಮಹತ್ವದ ಸಾಕ್ಷಾಧಾರಗಳನ್ನು ಕೂಡ ಸಂಗ್ರಹಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜಲಸಂಪನ್ಮೂಲ ಸಚಿವ ಸ್ಥಾನದಿಂದ ಕೆಳಗೆ ಇಳಿದ ರಮೇಶ್ ಜಾರಕಿಹೊಳಿ ಬಳಿ ಇದೊಂದು ನಕಲಿ ಸಿಡಿ, ನನ್ನ ತಪ್ಪಿಲ್ಲ ಎಂಬ ಮಾತು ಬಿಟ್ಟು ಯಾವ ಮಾತೂ ಆಡಿರಲಿಲ್ಲ. ಹಾಗಂತ ಸುಮ್ಮನೆ ಕೂತಿರಲಿಲ್ಲ. ಈ ವಿಚಾರದಲ್ಲಿ ಸಹೋದರರೆಲ್ಲರೂ ಒಗ್ಗೂಡಿ ಮನೆತನದ ಮರ್ಯಾದೆ ಉಳಿಸಿಕೊಳ್ಳಲು ದೊಡ್ಡ ಪ್ರಯತ್ನ ನಡೆಸಿದಂತೆ ಕಾಣುತ್ತಿದೆ. ಇದರ ಭಾಗವಾಗಿಯೇ ಕೆಲವು ಸಾಕ್ಷಾಧಾರಗಳನ್ನು ಸಂಗ್ರಹ ಮಾಡುವಲ್ಲಿ ಯಶಸ್ವಿಯಾಗಿದೆ.
ಅಶ್ಲೀಲ ಸಿಡಿ ಅಧಿಕೃತ ಕಾಳಗ
ಅತ್ಯಾಚಾರ ಆರೋಪದಡಿ ಎಫ್ಐಆರ್ ದಾಖಲಾದರೂ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗದ ಜಾರಕಿಹೊಳಿ ನಡೆ ಎಲ್ಲರನ್ನೂ ಚಕಿತಗೊಳಿಸಿತು. ಇದರ ಬೆನ್ನಲ್ಲೇ ಯುವತಿ ಮಾತನಾಡಿರುವ ಅಡಿಯೋ ಬಿಡುಗಡೆ ಆಯಿತು. ಜಾರಕಿಹೊಳಿ ಆರೋಪ ನಿಜ ಎಂಬುದಕ್ಕೆ ಬಹುದೊಡ್ಡ ಪುರಾವೆ ಒದಗಿಸಿದಂತಾಗಿತ್ತು. ಇದರ ಬೆನ್ನಲ್ಲೇ ಸಿಡಿ ಲೇಡಿಯ ಪೋಷಕರು ಅಧಿಕೃತವಾಗಿ ಡಿ.ಕೆ. ಶಿವಕುಮಾರ್ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಡಿ.ಕೆ. ಶಿವಕುಮಾರ್ ಕಡೆಯವರು ದುಡ್ಡು ಕೊಟ್ಟು ನನ್ನ ಸಹೋದರಿಯನ್ನು ಗೋವಾಗೆ ಕಳುಹಿಸಿದ್ದಾರೆ.
ಸಿ.ಡಿ ಪ್ರಕರಣ; ತಮ್ಮ ಮೇಲಿನ ಆರೋಪಕ್ಕೆ ಡಿಕೆಶಿ ನೀಡಿದ ಉತ್ತರ...
ಒಬ್ಬ ಹೆಣ್ಣನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುತ್ತಿದ್ದೀರಾ ? ಎಂದು ಡಿಕೆ ವಿರುದ್ಧ ಸಿಡಿಲೇಡಿಯ ಸಹೋದರ ಪ್ರಶ್ನೆ ಮಾಡಿದ್ದಾರೆ. ಇದು ಡಿ.ಕೆ. ಶಿವಕಮಾರ್ ಅವರ ವರ್ಚಸ್ಸಿಗೆ ಬಹುದೊಡ್ಡ ಪೆಟ್ಟು ಎಂದು ಹೇಳಿದರೂ ತಪ್ಪಾಗಲಾರದು. ಪೋಷಕರು ಡಿ.ಕೆ. ಹೆಸರು ಪ್ರಸ್ತಾಪಿಸಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಬೆನ್ನಲ್ಲೇ ರಮೇಶ್ ಜಾರಕಿಹೊಳಿ ಬಾಂಬ್ ಸಿಡಿಸುವ ಪ್ಲಾನ್ ಕೈ ಬಿಟ್ಟಿದ್ದರು. ನನ್ನ ಬಳಿ ಹನ್ನೊಂದು ಸಾಕ್ಷಿಗಳಿವೆ. ಅವೆಲ್ಲವನ್ನೂ ಎಸ್ಐಟಿಗೆ ಕೊಡುತ್ತೇನೆ. ನಾನೇ ಸ್ವತಃ ಎಸ್ಐಟಿಗೆ ದೂರು ನೀಡುತ್ತೇನೆ. ಅಟ್ರಾಸಿಟಿ ಕೇಸು ಹಾಕಿಸುತ್ತೇನೆ ಎಂದು ನೇರವಾಗಿ ಡಿ.ಕೆ. ವಿರುದ್ಧ ಜಾರಕಿಹೊಳಿ ಗುಡುಗಿದ್ದಾರೆ.
ನಾಳೆ ಅಟ್ರಾಸಿಟಿ ಕೇಸು ದಾಖಲು ?
ಇನ್ನು ತನ್ನ ಬಳಿ ಹನ್ನೊಂದು ಸಾಕ್ಷಿಗಳಿವೆ ಎಂದು ಹೇಳಿಕೆ ನೀಡಿರುವ ರಮೇಶ್ ಜಾರಕಿಹೊಳಿ ವಿರುದ್ಧ ಸಿಡಿ ಲೇಡಿ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿದ ಕೂಡಲೇ , ಜಾರಕಿಹೊಳಿ ಕುಟುಂಬ ಹಲವು ಸಾಕ್ಷಿಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಬಹುದು. ಈಗಾಗಲೇ ಹನ್ನೊಂದು ಸಾಕ್ಷಿಗಳಿವೆ ಎಂದು ಹೇಳಿರುವ ಜಾರಕಿಹೊಳಿ ಬಿಡುಗಡೆ ಮಾಡಲಿರುವ ಸಾಕ್ಷಿಗಳು ಎಷ್ಟು ಮಹತ್ವದ್ದು ಎಂಬುದು ಕೂಡ ಮುಖ್ಯವಾಗುತ್ತದೆ. ಈಗಾಗಲೇ ಡಿ.ಕೆ. ಶಿವಕುಮಾರ್ ಷಡ್ಯಂತ್ರ ನಡೆಸಿದ್ದಾರೆ ಎಂದು ನೇರವಾಗಿ ಜಾರಕಿಹೊಳಿ ಆರೋಪಿಸಿದ್ದಾರೆ.
ಸಿಡಿ ಕೇಸ್: ಮಹಾನಾಯಕ ರಾಜಕೀಯಕ್ಕೆ 'ನಾಲಾಯಕ್' ಎಂದ ರಮೇಶ್ ಜಾರಕಿಹೊಳಿ!
ಇದರ ಬೆನ್ನಲ್ಲೇ ಅವಾಚ್ಯ ಪದಗಳಿಂದ ಡಿ.ಕೆ. ಶಿವಕುಮಾರ್ ಅವರನ್ನು ನಿಂದಿಸಿದ್ದಾರೆ. ಸಿಡಿಲೇಡಿ ಹೇಳಿಕೆ ಬೆನ್ನಲ್ಲೇ ಡಿ.ಕೆ. ಶಿವಕುಮಾರ್ ಹಣ ಕೊಟ್ಟು ಯುವತಿಯನ್ನು ಬಿಟ್ಟು ಟ್ರ್ಯಾಪ್ ಮಾಡಿಸಿದ್ದಾರೆ ಎಂಬುದನ್ನು ಪುಷ್ಠೀಕರಿಸುವ ಸಾಕ್ಷಿಗಳು ಹೊರ ಬಿದ್ದರೆ ಈ ಪ್ರಕರಣ ರಾಜಕೀಯವಾಗಿ ಇನ್ನೂ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ. ರಮೇಶ್ ಜಾರಕಿಹೊಳಿ ಕೂಡ ಡಿ.ಕೆ. ಶಿವಕುಮಾರ್ ವಿರುದ್ಧ ದೂರು ನೀಡಿದರೂ ಅಚ್ಚರಿ ಪಡಬೇಕಿಲ್ಲ.
ಡಿಕೆ ಆಟ ಆಡಿಸುತ್ತಾರಾ ?
ಇನ್ನು ಅವಾಚ್ಚ ಪದಗಳಿಂದ ನಿಂದಿಸಿದರೂ ಡಿ.ಕೆ. ಶಿವಕುಮಾರ್ ಒಂದು ಕೆಟ್ಟ ಪದ ಬಳಿಸಿಲ್ಲ. ಬದಲಿಗೆ ಅವರು ಆಕ್ರೋಶ ದಲ್ಲಿ ಮಾತನಾಡಿರಬಹುದು, ಅವರಿಗೆ ಒಳ್ಳೆಯದಾಗಲಿ ಎಂದಿದ್ದಾರೆ. ಇದರ ಮರ್ಮ ಯಾರಿಗೂ ಗೊತ್ತಿಲ್ಲ. ಸಿಡಿ ಲೇಡಿ ಸಂಪೂರ್ಣ ಬೆಂಬಲಕ್ಕೆ ನಿಂತು ಜಾರಕಿಹೊಳಿಯನ್ನು ಒಂದು ದಿನವಾದರೂ ಜೈಲಿಗೆ ಕಳುಹಿಸಿ ತೀರುತ್ತೇನೆ ಎಂದು ಪಟ್ಟು ಹಿಡಿದು ತಂತ್ರ ರೂಪಿಸಿದರೂ ಅಚ್ಚರಿ ಪಡಬೇಕಿಲ್ಲ. ಯಾಕೆಂದರೆ ಈ ಅಶ್ಲೀಲ ಸಿಡಿ ಪ್ರಕರಣದಲ್ಲಿ ರಾಜಕೀಯ ಬೆಳವಣಿಗೆ ಕಾಣಿಸುತ್ತಿದೆ ಹೊರತೂ ತನಿಖೆ ಬೆಳವಣಿಗೆ ಕಾಣಿಸುತ್ತಿಲ್ಲ. ಎರಡು ಮದಗಜಗಳ ನಡುವಿನ ಅಧಿಕೃತ ಕಾಳಗಕ್ಕೆ ನಾಂದಿ ಹಾಡಿದೆ. ಇದಕ್ಕೂ ನನಗೂ ಸಂಬಂಧವಿಲ್ಲ, ಅದು ಅವರ ವೈಯಕ್ತಿಕ ವಿಚಾರ ಎಂದೇ ಟಾಂಗ್ ಕೊಟ್ಟಿರುವ ಡಿಕೆ ಯಾವ ರೀತಿಯ ಹೊಡೆತ ಕೊಡಲಿದ್ದಾರೆ ಎಂಬುದು ಊಹೆಗೂ ನಿಲುಕದ್ದು.
ಡಿ.ಕೆ. ಹೆಸರು ಪ್ರಸ್ತಾಪಿಸಿ ಹೇಳಿಕೆ ನೀಡುವ ಮೂಲಕ ಸಿಡಿ ಲೇಡಿ ಪೋಷಕರು 'ನಾವು ಬೆಳಗಾವಿ ಪ್ರಾಂತ್ಯದ ಸಾಹುಕಾರನ ಪರ ನಿಲ್ಲುತ್ತೇವೆ ಎಂಬ ಸ್ಪಷ್ಟ ಸಂದೇಶ ಸಾರಿದ್ದಾರೆ. ಇನ್ನು ಈ ಪ್ರಕರಣದ ಕೇಂದ್ರ ಬಿಂದು ಯುವತಿ ಸಿಡಿ ಲೇಡಿ. ಐದನೇ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿಸುವ ಮೂಲಕ ರಮೇಶ್ ಜಾರಕಿಹೊಳಿಗೆ ಇನ್ನೂ ಹುಡುಗಿ ನಿಮ್ಮ ವಿರುದ್ಧ ಇದ್ದಾಳೆ ಎಂಬ ಸಂದೇಶ ರವಾನಿಸಲಾಗಿದೆ. ಈ ಅಶ್ಲೀಲ ಸಿಡಿ ಸ್ಪೋಟ ಪ್ರಕರಣದಿಂದ ಒಂದು ರೀತಿಯಲ್ಲಿ ರಮೇಶ್ ಜಾರಕಿಹೊಳಿ, ಡಿಕೆ ಶಿವಕುಮಾರ್ ಇಬ್ಬರ ರಾಜಕೀಯಕ್ಕೂ ಮುಳುವಾಗಲಿದೆ ಎಂಬುದರಲ್ಲಿ ಅನುಮಾನವೇ ಇಲ್ಲ.