ಭಾರತದ ಮೇಲೆ ದಾಳಿ ನಡೆಸಲು ಜೈಶ್‌ ಉಗ್ರರ ಸಂಚು: ವರದಿ

ನವದೆಹಲಿ, ಆಗಸ್ಟ್‌ 27: ತಾಲಿಬಾನ್‌ ಅಫ್ಘಾನಿಸ್ತಾನಕ್ಕೆ ದಾಳಿ ಮಾಡಿದ ಸಂದರ್ಭದಲ್ಲಿ ಅಲ್ಲಿನ ಜೈಲಿನಲ್ಲಿದ್ದ ಉಗ್ರರನ್ನು ಬಿಡುಗಡೆ ಮಾಡಿದೆ. ಈ ಸಂದರ್ಭದಲ್ಲಿ ತಾಲಿಬಾನ್ ಭಯೋತ್ಪಾದಕರು ಅಫ್ಘಾನ್‌ ಜೈಲುಗಳಿಂದ 100 ಕ್ಕೂ ಅಧಿಕ ಜೈಶ್‌-ಎ-ಮೊಹಮ್ಮದ್‌ (ಜೆಎಎಮ್‌) ಸಂಘಟನೆಯ ಉಗ್ರರನ್ನು ಕೂಡಾ ಬಿಡುಗಡೆ ಮಾಡಿದ್ದಾರೆ. ಪ್ರಸ್ತುತ ಈ ಎಲ್ಲಾ ಉಗ್ರರು ಜೊತೆಗೂಡಿದ್ದು, ಭಾರತದ ಮೇಲೆ ದಾಳಿ ಮಾಡಲು ಸಂಚು ಹೂಡುತ್ತಿದ್ದಾರೆ ಎಂದು ವರದಿಗಳು ತಿಳಿಸಿದೆ. ಮುಖ್ಯವಾಗಿ ಜಮ್ಮು ಮತ್ತು ಕಾಶ್ಮೀರದ ಮೇಲೆ ದಾಳಿ ನಡೆಸಲು ಈ ಜೈಶ್‌-ಎ-ಮೊಹಮ್ಮದ್‌ ಉಗ್ರರು ಮುಂದಾಗಿದ್ದಾರೆ ಎಂದು ಭದ್ರತಾ ಸಂಸ್ಥೆಗಳಿಗೆ ಮಾಹಿತಿ ದೊರೆತಿದೆ ಎಂದು ಹೇಳಲಾಗಿದೆ.

ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ಗೆ ಜಯ ದೊರೆತಂತೆ ನಾವು ಭಾರತದ ಜಮ್ಮು ಮತ್ತು ಕಾಶ್ಮೀರಕ್ಕೆ ದಾಳಿ ನಡೆಸಿ ಜಯ ಗಳಿಸಬೇಕು ಎಂಬಂತಹ ಮಾತುಗಳನ್ನು ಸಾಮಾಜಿಕ ಜಾಲತಾಣದ ಮೂಲಕ ಈ ಭಯೋತ್ಪಾದನಾ ಸಂಘಟನೆ ಜೈಶ್‌-ಎ-ಮೊಹಮ್ಮದ್‌ನ ಮುಖ್ಯಸ್ಥ ಮಸೂದ್‌ ಅಜ್‌ಹರ್‌ ತಮ್ಮ ಉಗ್ರ ಸಂಘಟನೆಯ ಕಾರ್ಯಕರ್ತರಿಗೆ ತಿಳಿಸುತ್ತಿದ್ದಾರೆ ಎಂದು ಭದ್ರತಾ ಸಂಸ್ಥೆಗಳಿಗೆ ಮಾಹಿತಿ ಲಭಿಸಿದೆ.

"ಜೈಶ್‌-ಎ-ಮೊಹಮ್ಮದ್‌ ಸಂಘಟನೆಯನ್ನು ಉಗ್ರರು ನಿರ್ವಹಣೆ ಮಾಡುತ್ತಿರುವ ಹಿನ್ನೆಲೆ ಜಮ್ಮು ಮತ್ತು ಕಾಶ್ಮೀರಕ್ಕೆ ದಾಳಿ ನಡೆಸುವ ಬಗ್ಗೆ ತಮ್ಮ ಉಗ್ರ ಸಂಘಟನೆಯ ಕಾರ್ಯಕರ್ತರಿಗೆ ತಾವು ಜೊತೆಗೂಡಲು ಧರ್ಮ ಉಪದೇಶ ನೀಡಲಾಗಿದೆ," ಎಂದು ಭದ್ರತಾ ಸಂಸ್ಥೆಯ ಅಧಿಕಾರಿಗಳು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿದೆ.

 ತಾಲಿಬಾನ್‌, ಜೈಶ್‌ ಉಗ್ರ ಸಂಘಟನೆ ನಾಯಕರ ಸಭೆ

ತಾಲಿಬಾನ್‌, ಜೈಶ್‌ ಉಗ್ರ ಸಂಘಟನೆ ನಾಯಕರ ಸಭೆ

ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ಭದ್ರತಾ ಸಂಸ್ಥೆಯ ಅಧಿಕಾರಿಗಳು, "ಜೈಶ್‌-ಎ-ಮೊಹಮ್ಮದ್‌ ಹಾಗೂ ತಾಲಿಬಾನ್‌ ಉಗ್ರ ಸಂಘಟನೆಗಳ ಹಿರಿಯ ನಾಯಕರುಗಳು ಈಗಾಗಲೇ ಜೊತೆ ಸೇರಿ ಸಭೆ ನಡೆಸಿದ್ದಾರೆ. ಭಾರತದ ಮೇಲೆ ಗುರಿಯಾಗಿಸಿಕೊಳ್ಳುವ ತಮ್ಮ ಎಲ್ಲಾ ಭಯೋತ್ಪಾದಕ ಚಟುವಟಿಕೆಗಳ ಬಗ್ಗೆ ಜೈಶ್‌-ಎ-ಮೊಹಮ್ಮದ್‌ ಹಾಗೂ ತಾಲಿಬಾನ್‌ ಉಗ್ರ ಸಂಘಟನೆಗಳ ನಾಯಕರುಗಳು ಚರ್ಚೆ ನಡೆಸಿದ್ದಾರೆ. ಅಫ್ಘಾನಿಸ್ತಾನದಲ್ಲಿ ನಡೆದ ಬೆಳವಣಿಗೆಗಳು ಪಾಕಿಸ್ತಾನದ ಈ ಜೈಶ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆಗೆ ಇನ್ನಷ್ಟು ಉತ್ತೇಜನ ನೀಡಿದ್ದಂತಿದೆ. ಅಫ್ಘಾನಿಸ್ತಾನವನ್ನು ತಾಲಿಬಾನ್‌ ವಶಕ್ಕೆ ಪಡೆದಿರುವುದು ಈ ಪಾಕಿಸ್ತಾನ ಭಯೋತ್ಪಾದಕ ಸಂಘಟನೆಗೆ ಧೈರ್ಯ ತುಂಬಿದೆ. ಭಾರತಕ್ಕೆ ಒಳ ನುಸುಳುವ ಎಲ್ಲಾ ಕಾರ್ಯ ಯೋಜನೆಯನ್ನು ಈ ಸಂಘಟನೆಗಳು ಮಾಡುತ್ತಿದೆ," ಎಂದು ಭದ್ರತಾ ಸಂಸ್ಥೆಗಳ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

 ಹಲವಾರು ಉಗ್ರರನ್ನು ಸದೆಬಡಿದ ಭಾರತ ಭದ್ರತಾ ಪಡೆ

ಹಲವಾರು ಉಗ್ರರನ್ನು ಸದೆಬಡಿದ ಭಾರತ ಭದ್ರತಾ ಪಡೆ

ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತದ ಭದ್ರತಾ ಪಡೆಯು ಹಲವಾರು ಉಗ್ರ ಸಂಘಟನೆಯ ಕಾರ್ಯಕರ್ತರನ್ನು ಸದೆಬಡಿದಿದೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರ ಜೊತೆ ಸೇರಿ ಹಲವಾರು ಕಾರ್ಯಚರಣೆಗಳನ್ನು ನಡೆಸಿರುವ ದೇಶದ ಭದ್ರತಾ ಪಡೆಯು ನೂರಾರು ಉಗ್ರರನ್ನು ಹೊಡೆದುರುಳಿಸಿದೆ. "ಜುಲೈ 31 ರಂದು ಪುಲ್ವಾಮದ ಟ್ರಾಲ್‌ ಪ್ರದೇಶದಲ್ಲಿರುವ ಹಂಗಲಮಾರ್ಗ್ ಅರಣ್ಯದ ಒಳಗೆ ಭಾರತೀಯ ಭದ್ರತಾ ಪಡೆ ಸಿಬ್ಬಂದಿಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಯ ಕಮಾಂಡರ್‌ಗಳಾದ ಮೊಹಮ್ಮದ್‌ ಇಸ್ಮಾಯಿಲ್‌ ಹಾಗೂ ಅಬ್ದುಲ್‌ ರಶೀದ್‌ ಗಾಝಿಯನ್ನು ಗುಂಡಿಕ್ಕಿ ಕೊಲ್ಲಲಾಗಿದೆ. 2019 ಫೆಬ್ರವರಿ 14 ರಂದು ನಡೆದ ಪುಲ್ವಾಮ ದಾಳಿಯ ಮಾಸ್ಟರ್‌ ಮೈಂಡ್‌ ಇವರಿಬ್ಬರು ಆಗಿದ್ದರು. ಹಾಗೆಯೇ ರಾಷ್ಟ್ರೀಯ ತನಿಖಾ ಸಂಸ್ಥೆಯ ವಾಂಟೆಡ್‌ ಲೀಸ್ಟ್‌ನಲ್ಲಿ ಇದ್ದರು," ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ತಾಲಿಬಾನ್‌ ಅಫ್ಘಾನ್‌ ವಶಕ್ಕೆ ಪಡೆದ ಬಳಿಕ ಬಂತು ಈ ಉಗ್ರರಿಗೆ ಧೈರ್ಯ

ತಾಲಿಬಾನ್‌ ಅಫ್ಘಾನ್‌ ವಶಕ್ಕೆ ಪಡೆದ ಬಳಿಕ ಬಂತು ಈ ಉಗ್ರರಿಗೆ ಧೈರ್ಯ

ಕಾಶ್ಮೀರ ಕಣಿವೆ ಪ್ರದೇಶದಲ್ಲಿ ಸ್ಥಳೀಯ ಯುವಕರ ಮನವೊಲಿಸಿ ಅವರು ಉಗ್ರ ಸಂಘಟನೆಗೆ ಸೇರುವಂತೆ ಮಾಡುವ ಕಾರ್ಯವನ್ನು ಈ ಇಬ್ಬರು ಉಗ್ರ ಸಂಘಟನೆಯ ಕಮಾಂಡರ್‌ಗಳಾದ ಮೊಹಮ್ಮದ್‌ ಇಸ್ಮಾಯಿಲ್‌ ಹಾಗೂ ಅಬ್ದುಲ್‌ ರಶೀದ್‌ ಗಾಝಿ ಮಾಡುತ್ತಿದ್ದರು ಎಂದು ಹೇಳಲಾಗಿದೆ. "ಈ ಇಬ್ಬರು ಉಗ್ರರನ್ನು ಭಾರತೀಯ ಭದ್ರತಾ ಪಡೆ ಹತ್ಯೆಗೈದಿರುವುದು ಈ ಜೈಶ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆಯ ಚಟುವಟಿಕೆಗಳಿಗೆ ಭಾರೀ ಹಿನ್ನಡೆಯನ್ನು ಉಂಟು ಮಾಡಿತ್ತು. ಆದರೆ ಇತ್ತೀಚೆಗೆ ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಉಗ್ರರು ದಾಳಿ ನಡೆಸಿ ರಾಷ್ಟ್ರವನ್ನೇ ತನ್ನ ವಶಕ್ಕೆ ಪಡೆದ ಹಿನ್ನೆಲೆ ಈ ಜೈಶ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆಯ ಕಾರ್ಯಕರ್ತರಿಗೂ ಧೈರ್ಯ ಬಂದಿದೆ," ಎಂದು ಅಧಿಕಾರಿಗಳು ಹೇಳಿದ್ದಾರೆ. 2001 ರ ಅಕ್ಟೋಬರ್‌ 17 ರಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಜೈಶ್‌-ಎ-ಮೊಹಮ್ಮದ್‌ ಸಂಘಟನೆಯ ಮೇಲೆ ನಿಷೇಧ ಹೇರಿದೆ. ಉಗ್ರ ಸಂಘಟನೆಗಳಾದ ಅಲ್‌-ಖೈದಾ ಹಾಗೂ ತಾಲಿಬಾನ್‌ ಜೊತೆಗೆ ನಂಟು ಹೊಂದಿದ್ದ ಹಿನ್ನೆಲೆ ಜೈಶ್‌-ಎ-ಮೊಹಮ್ಮದ್‌ ಸಂಘಟನೆಯ ಮೇಲೆ ನಿಷೇಧ ಹೇರಲಾಗಿದೆ. ಅಲ್‌-ಖೈದಾ ಹಾಗೂ ತಾಲಿಬಾನ್‌ ಉಗ್ರ ಸಂಘಟನೆಗಳು ಜೈಶ್‌-ಎ-ಮೊಹಮ್ಮದ್‌ಗೆ ಹಣ ಸಹಾಯ, ಶಸ್ತ್ರಾಸ್ತ್ರ ಸರಬರಾಜು, ಯೋಜನೆ ರೂಪಿಸಲು ಸಹಾಯ ಹಾಗೂ ಉಗ್ರರಿಗೆ ಬೇಕಾದ ವಸತಿ ಸೌಲಭ್ಯವನ್ನು ಒದಗಿಸುತ್ತಿತ್ತು ಎಂದು ವರದಿಯಾಗಿದೆ. ಈ ಜೈಶ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆಯ ಮುಖಂಡ ಮಸೂದ್‌ ಅಜ್‌ಹರ್‌ ಅನ್ನು ಕೂಡಾ ವಿಶ್ವ ಸಂಸ್ಥೆಯು ಉಗ್ರ ಎಂದು ಗೊತ್ತು ಪಡಿಸಿದೆ.

 ತಾಲಿಬಾನ್‌ ವಶದಲ್ಲಿ ನಲುಗುತ್ತಿರುವ ಅಫ್ಘಾನಿಸ್ತಾನ

ತಾಲಿಬಾನ್‌ ವಶದಲ್ಲಿ ನಲುಗುತ್ತಿರುವ ಅಫ್ಘಾನಿಸ್ತಾನ

ಸುಮಾರು ಇಪ್ಪತ್ತು ವರುಷಗಳ ಬಳಿಕ ಅಮೆರಿಕ ತನ್ನ ಸೇನೆಯನ್ನು ಅಫ್ಘಾನಿಸ್ತಾನದಿಂದ ಹಿಂದಕ್ಕೆ ಪಡೆದ ಬೆನ್ನಲ್ಲೇ ತಾಲಿಬಾನ್‌ ಉಗ್ರರು ಅಫ್ಘಾನಿಸ್ತಾನದ ಮೇಲೆ ದಾಳಿ ನಡೆಸಿದ್ದು ಈಗ ಅಫ್ಘಾನಿಸ್ತಾನವನ್ನೇ ತನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ತಾಲಿಬಾನ್‌ ಕಾಬೂಲ್‌ಗೆ ದಾಳಿ ಮಾಡುತ್ತಿದ್ದಂತೆ ಅಫ್ಘಾನ್‌ ಅಧ್ಯಕ್ಷ ಅಶ್ರಫ್‌ ಘನಿ ದೇಶದಿಂದ ಪಲಾಯನ ಮಾಡಿದ್ದಾರೆ. ಅಶ್ರಫ್‌ ಘನಿ ಹಣವನ್ನು ತುಂಬಿಕೊಂಡು ಹೋಗಿದ್ದಾರೆ ಎಂದು ರಷ್ಯಾ ವಕ್ತಾರರು ಆರೋಪ ಮಾಡಿದ್ದಾರೆ. ಆದರೆ ಅಶ್ರಫ್‌ ನಾನು ಶಾಂತಿ ಕಾಪಾಡಲು ದೇಶದಿಂದ ಪಲಾಯನವಾದೆ. ನನಗೆ ಚಪ್ಪಲಿ ಹಾಕಲು ಸಮಯವಿರಲಿಲ್ಲ ಇನ್ನು ಹಣ ತುಂಬುವುದು ಯಾವಾಗ ಎಂದು ಹೇಳಿದ್ದಾರೆ. ಈ ನಡುವೆ ತಾಲಿಬಾನ್‌ ಮಾತ್ರ ತನ್ನ ಸರ್ಕಾರ ರಚನೆಗೆ ಸಿದ್ದತೆ ನಡೆಸುತ್ತಿದೆ. ಆದರೆ ಈವರೆಗೂ ಇತರೆ ದೇಶಗಳ ನೆರಳಲ್ಲೇ ಇದ್ದ ಅಫ್ಘಾನಿಸ್ತಾನದ ಆರ್ಥಿಕ ಸ್ಥಿತಿಯು ಈಗ ತೀರಾ ಹದಗೆಟ್ಟಿದೆ. ಕೊರೊನಾ ವೈರಸ್‌ ಸೋಂಕು ಕಾರಣದಿಂದಾಗಿ ಅಫ್ಘಾನ್‌ನ ಆರ್ಥಿಕ ಪರಿಸ್ಥಿತಿ ಅಲ್ಲಾಡಿತ್ತು. ಇನ್ನು ಕೊಂಚ ಆರ್ಥಿಕ ಸ್ಥಿತಿ ಸರ್ಕಾರ ಸರಿದೂಗಿಸಬೇಕು ಎನ್ನುವಷ್ಟರಲ್ಲಿ ತಾಲಿಬಾನ್ ದಾಳಿ ನಡೆಸಿದೆ. ಇನ್ನು ಈ ನಡುವೆ ತಾಲಿಬಾನ್‌ನ ಈ ಹಿಂದಿನ ಆಡಳಿತವನ್ನು ಅರಿತಿರುವ ಅಫ್ಘಾನ್‌ ಜನರು ತಮ್ಮ ದೇಶವನ್ನು ತೊರೆಯುತ್ತಿದ್ದಾರೆ. ಆದರೆ ದೇಶ ತೊರೆಯಲು ಬೇಕಾದ ಅಗತ್ಯ ದಾಖಲೆಗಳು ಇಲ್ಲದೆ ಕೆಲವರು ಪರದಾಡುತ್ತಿದ್ದಾರೆ ಎನ್ನಲಾಗಿದೆ. ಈ ನಡುವೆ ತಾಲಿಬಾನ್‌ ಈ ತಿಂಗಳ ಕೊನೆಯವರೆಗೆ ಇರುವ ರಕ್ಷಣಾ ಕಾರ್ಯಚರಣೆಯ ಗಡುವನ್ನು ವಿಸ್ತರಿಸಲಾಗದು ಎಂದು ಹೇಳಿದೆ. ಅಮೆರಿಕ ಕೂಡಾ ಈ ಗಡುವು ವಿಸ್ತರಿಸಲಾಗದು ಎಂದಿದೆ.

(ಒನ್‌ ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+