ಪಂಜಾಬ್ನಲ್ಲಿ ಕಾಂಗ್ರೆಸ್ ಪ್ರಯೋಗಿಸಿದ ಐಎಸ್ಐ ಅಸ್ತ್ರಕ್ಕೆ ಕ್ಯಾಪ್ಟನ್ ಉತ್ತರ ರೋಚಕ!
ಚಂಡೀಘರ್, ಅಕ್ಟೋಬರ್ 26: ಪಂಜಾಬ್ ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ರಾಜಕೀಯ ಪಕ್ಷಗಳು ಮತ್ತು ನಾಯಕರು ತಂತ್ರ-ರಣತಂತ್ರಗಳನ್ನು ಹೆಣೆಯುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ವಿರುದ್ಧ ಅಂಥದ್ದೇ ಒಂದು ಅಸ್ತ್ರ ಪ್ರಯೋಗಕ್ಕೆ ಕಾಂಗ್ರೆಸ್ ಮುಂದಾಗಿದೆ.
ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರ ಪಾಕಿಸ್ತಾನಿ ಸ್ನೇಹಿತೆ ಅರೂಸಾ ಅಲಂ ಐಎಸ್ಐ ಜೊತೆಗೆ ನಂಟು ಹೊಂದಿದ್ದಾರೆ ಎಂಬ ಆರೋಪವನ್ನು ಪ್ರಚಾರ ಅಸ್ತ್ರವಾಗಿ ಬಳಸಿಕೊಳ್ಳುವುದಕ್ಕೆ ಕಾಂಗ್ರೆಸ್ ಯೋಜನೆ ಹಾಕಿಕೊಂಡಿತ್ತು. ಆದರೆ ಕೈ ಪಾಳಯ ಹೆಣೆದ ರಣತಂತ್ರಕ್ಕೆ ಕ್ಯಾಪ್ಟನ್ ಸಿಂಗ್ ತಿರುಗೇಟು ನೀಡಿದ್ದಾರೆ.
ರೈತರ ಸಮಸ್ಯೆಯನ್ನು ಬಗೆಹರಿಸುವಲ್ಲಿ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಆಲೋಚನೆಯಿಂದ ತಾನು ಹಿಂಜರಿಯುವುದಿಲ್ಲ ಎಂದು ಕ್ಯಾಪ್ಟನ್ ಅಮರಿಂದರ್ ಸಿಂಗ್ ಈಗಾಗಲೇ ಬಹಿರಂಗವಾಗಿ ಘೋಷಿಸಿದ್ದಾಗಿದೆ. ಇದರಿಂದ ಕೆರಳಿದ ಕಾಂಗ್ರೆಸ್ ಅವರನ್ನು ಹಿಮ್ಮೆಟ್ಟಿಸುವ ಹಟಕ್ಕೆ ಬಿದ್ದಿದೆ. ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ನೇತೃತ್ವದಲ್ಲಿ ಪಂಜಾಬ್ ಸುರಕ್ಷಿತವಾಗಿಲ್ಲ, ಐಎಸ್ಐ ಶಾಂತಿ ಕದಡುವ ಪ್ರಯತ್ನ ಮಾಡುತ್ತದೆ ಎಂದು ಕ್ಯಾಪ್ಟನ್ ಸಿಂಗ್ ಪದೇ ಪದೆ ನೀಡುತ್ತಿರುವ ಹೇಳಿಕೆಗಳು ಕಾಂಗ್ರೆಸ್ ಪಕ್ಷಕ್ಕೆ ಸುಳಿವೊಂದನ್ನು ನೀಡಿದೆ.

ಕಾಂಗ್ರೆಸ್ ವಲಯದಲ್ಲಿ ಚರ್ಚೆಯಾದ ವಿಚಾರ
ಪಾಕಿಸ್ತಾನ್ ಗುಪ್ತಚರ ಇಲಾಖೆ(ಐಎಸ್ಐ) ಬಗ್ಗೆ ಕ್ಯಾಪ್ಟನ್ ಅಮರೀಂದರ್ ಸಿಂಗ್ ಹರಿಹಾಯ್ದ ಕಾರಣವನ್ನೇ ಬಳಸಿಕೊಳ್ಳಲು ಕಾಂಗ್ರೆಸ್ ಆಲೋಚಿಸಿದೆ. ಕಾಂಗ್ರೆಸ್ ಹಿರಿಯ ನಾಯಕತ್ವರೊಬ್ಬರು ಪಾಕಿಸ್ತಾನಿ ಬರಹಗಾರ್ತಿ ಮತ್ತು ಕ್ಯಾಪ್ಟನ್ ಸ್ನೇಹಿತೆ ಅರೂಸಾ ಆಲಂರನ್ನು ಚುನಾವಣಾ ಪ್ರಚಾರ ಅಸ್ತ್ರವಾಗಿ ಬಳಸಿಕೊಳ್ಳಲು ನಿರ್ಧರಿಸಿದ್ದಾರೆ ಎಂದು ಪಕ್ಷದ ಆಂತರಿಕ ವಲಯದಿಂದ ತಿಳಿದು ಬಂದಿದೆ.

ಐಎಸ್ಐ ಮತ್ತು ಕ್ಯಾಪ್ಟನ್ ಸಿಂಗ್ ಸ್ನೇಹಿತೆಗೆ ನಂಟು
ಪಂಜಾಬ್ ಕಾಂಗ್ರೆಸ್ ಸಮಿತಿ ರಾಜ್ಯಾಧ್ಯಕ್ಷ ನವಜೋತ್ ಸಿಂಗ್ ಸಿಧು ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಮೊಹಮ್ಮದ್ ಮುಸ್ತಫಾ ಅವರು, ಮೊದಲಿಗೆ ಕ್ಯಾಪ್ಟನ್ ಅಮರೀಂದರ್ ಸಿಂಗ್ ಮತ್ತು ಪಾಕಿಸ್ತಾನದ ನಂಟಿನ ವಿಷಯವನ್ನು ಪ್ರಸ್ತಾಪಿಸಿದರು. ಕೆಲವು ದಿನಗಳ ನಂತರ ರಾಜ್ಯ ಆಡಳಿತದಲ್ಲಿ ಅರೂಸಾ ಅಲಂ ಹಸ್ತಕ್ಷೇಪದ ವಿಷಯವನ್ನು ಪಿಸಿಸಿ ಮುಖ್ಯಸ್ಥರ ಪತ್ನಿ ನವಜೋತ್ ಕೌರ್ ಪ್ರಸ್ತಾಪಿಸುತ್ತಿದ್ದಂತೆ ಉಪ ಮುಖ್ಯಮಂತ್ರಿ ಸುಖಜಿಂದರ್ ಸಿಂಗ್ ರಾಂಧವಾ ಅದನ್ನು ಗಂಭೀರವಾಗಿ ತೆಗೆದುಕೊಂಡರು. ಅಲ್ಲದೇ ಐಎಸ್ಐ ಹಾಗೂ ಅರೂಸಾ ಅಲಂ ನಡುವಿನ ನಂಟು "ಕಂಡುಹಿಡಿಯಲು" ತನಿಖೆಗೆ ಆದೇಶಿಸಿದರು.

ಏನಿದೆ ಕಾಂಗ್ರೆಸ್ ತಂತ್ರಗಾರಿಕೆ?
"ಕ್ಯಾಪ್ಟನ್ ಅಮರೀಂದರ್ ಸಿಂಗ್ ವಿರುದ್ಧದ ಕಾಂಗ್ರೆಸ್ ತಂತ್ರಗಾರಿಕೆ ಸರಳವಾಗಿದೆ. ಅವರು ಐಎಸ್ಐಯಿಂದ ಬೆದರಿಕೆ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಐಎಸ್ಐ ಜೊತೆಗೆ ನಂಟು ಹೊಂದಿರುವ ಪಾಕಿಸ್ತಾನಿ ಶಂಕಿತರೊಬ್ಬರಿಗೆ ಆತಿಥ್ಯವನ್ನು ನೀಡುತ್ತಿದ್ದಾರೆ ಎಂದು ನಾವು ಅವರಿಗೆ ನೆನಪಿಸಲು ಹೊರಟಿದ್ದೇವೆ," ಎಂದು ಕಾಂಗ್ರೆಸ್ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ. ಆದರೆ ಈ ಕ್ರಮ ಕಾಂಗ್ರೆಸ್ ನಿರೀಕ್ಷಿಸಿದ ರೀತಿಯಲ್ಲಿ ಫಲಿತಾಂಶವನ್ನು ನೀಡಿಲಿಲ್ಲ ಎಂದು ಹೇಳಲಾಗುತ್ತಿದೆ. ಅಮರೀಂದರ್ ಸಿಂಗ್ ವಿರುದ್ಧದ ವೈಯಕ್ತಿಕ ದಾಳಿಗಳು ಅವರ ಮೇಲಿನ ಒತ್ತಡವನ್ನು ಹೆಚ್ಚಿಸಲಿವೆ ಎಂದು ಪಕ್ಷದೊಳಗಿನ ಕೆಲವು ನಾಯಕರು ಅಭಿಪ್ರಾಯಪಟ್ಟಿದ್ದಾರೆ.

ವೈಯಕ್ತಿಕ ದಾಳಿಗಳಿಗೆ ಕ್ಯಾಪ್ಟನ್ ಉತ್ತರವೇ ಮೌನ
ಕಾಂಗ್ರೆಸ್ ಮಾಡುತ್ತಿರುವ ಆರೋಪಗಳಿಗೆ ಕ್ಯಾಪ್ಟನ್ ಅಮರೀಂದರ್ ಸಿಂಗ್ ನೀಡಿದ ಉತ್ತರವು ಕೈ ಪಾಳಯದಲ್ಲಿ ಅಚ್ಚರಿ ಮೂಡಿಸಿದೆ. ಕಾಂಗ್ರೆಸ್ ಮಾಡುತ್ತಿರುವ ಎಲ್ಲ ಆರೋಪಗಳ ಬಗ್ಗೆ ಅಮರೀಂದರ್ ಸಿಂಗ್ ಪ್ರತಿಕ್ರಿಯೆ ನೀಡದೇ ಮೌನಕ್ಕೆ ಶರಣಾಗಿದ್ದಾರೆ. ಆದರೆ ಈ ರೀತಿ ವೈಯಕ್ತಿಕ ದಾಳಿಗಳು ಮುಂದಿನ ದಿನಗಳಲ್ಲಿ ಅವರ ಹೋರಾಟಕ್ಕೆ ಮದ್ದುಗುಂಡುಗಳನ್ನು ನೀಡಿದಂತೆ ಎಂದು ಕ್ಯಾಪ್ಟನ್ ಹತ್ತಿರದ ನಾಯಕರೊಬ್ಬರು ಹೇಳಿದ್ದಾರೆ.
ಅಲ್ಲದೇ ಪಾಕಿಸ್ತಾನಿ ಪತ್ರಕರ್ತೆ ಅರೂಸಾ ಅಲಂ ಜೊತೆಗಿನ ಸಂಪರ್ಕದ ಕುರಿತು ಸ್ವತಃ ಅಮರೀಂದರ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಅರೂಸಾ ಅಲಂ ಸಾರ್ವಜನಿಕರು ಮತ್ತು ರಾಜಕೀಯದ ನಾಯಕರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಲು ಬಯಸುತ್ತಾರೆ ಎಂದು ಹೇಳುವ ಚಿತ್ರಗಳನ್ನು ಸಹ ಬಿಡುಗಡೆ ಮಾಡಿದ್ದಾರೆ. ಸೋಮವಾರ, ಪ್ರಮುಖ ನಾಯಕರೊಂದಿಗೆ ಅರೂಸಾ ಅಲಂ ಗುರುತಿಸಿಕೊಂಡಿರುವ ಫೋಟೋಗಳನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದರಲ್ಲದೇ ಕಾಂಗ್ರೆಸ್ಸಿನ ಸಂಕುಚಿತ ಮನೋಭಾವದ ಬಗ್ಗೆ ವ್ಯಂಗ್ಯವಾಡಿದರು.
ದುರಾದೃಷ್ಟವಶಾತ್, ಭಾರತ ಮತ್ತು ಪಾಕಿಸ್ತಾನದ ನಡುವಿನ ಸಮಯದ ವೀಸಾಗಳನ್ನು ನಿಷೇಧಿಸಲಾಗಿದೆ. ಇಲ್ಲದಿದ್ದರೆ, ನಾನು ಅವರನ್ನು ಮತ್ತೆ ಆಹ್ವಾನಿಸುತ್ತಿದ್ದೆನು ಎಂದು ಬರೆದುಕೊಂಡಿದ್ದಾರೆ. ಇದರ ಜೊತೆಗೆ ಪೋಸ್ಟ್ ಹಿಂದೆ ತಮ್ಮ ಹಿಂದಿನ ಸಹದ್ಯೋಗಿಗಳು ಮಾಡಿದ ವೈಯಕ್ತಿಕ ದಾಳಿಗೆ ಪ್ರತಿಕ್ರಿಯೆ ನೀಡುವ ಉದ್ದೇಶವಿಲ್ಲ ಎಂದು ಕ್ಯಾಪ್ಟನ್ ಅಮರೀಂದರ್ ಸಿಂಗ್ ಉಲ್ಲೇಖಿಸಿದ್ದಾರೆ.

ಅರೂಸಾ ಅಲಂ ಯಾರು?
ಅರೂಸಾ ಅಲಂ ಪಾಕಿಸ್ತಾನ ರಕ್ಷಣಾ ಪತ್ರಕರ್ತೆ. ಕಳೆದ 2018ರಲ್ಲಿ ಇಮ್ರಾನ್ ಖಾನ್ ಪ್ರಮಾಣವಚನಕ್ಕೆ ಹಾಜರಾಗಿದ್ದಕ್ಕೆ ಹಾಗೂ ಪಾಕಿಸ್ತಾನದ ಸೇನಾ ಮುಖ್ಯಸ್ಥನನ್ನು ಅಪ್ಪಿಕೊಂಡಿದ್ದಕ್ಕಾಗಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ವಿರುದ್ಧ ನವಜೋತ್ ಸಿಂಗ್ ಸಿಂಗ್ ನವಜೋತ್ ಸಿಧು ವಾಗ್ದಾಳಿ ನಡೆಸಿದ್ದರು. ಅಂದೂ ಸಹ ಅರೂಸಾ ಆಲಂ ಹೆಸರು ಮುಂಚೂಣಿಗೆ ಬಂದಿತ್ತು. ಅದಕ್ಕೂ ಮೊದಲು 2004ರಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದಾಗ ಕ್ಯಾಪ್ಟನ್ ಅಮರೀಂದರ್ ಸಿಂಗ್ ರನ್ನು ಭೇಟಿ ಮಾಡಿದ ಪತ್ರಕರ್ತೆ ಅರೂಸ್ ಅಲಂ, ಅವರ ಮನೆಗೆ ಆಗಾಗ ಭೇಟಿ ನೀಡುತ್ತಿದ್ದರು. ಇತ್ತೀಚೆಗೆ ಅವರ ಪ್ರಮಾಣವಚನ ಸಮಾರಂಭದಲ್ಲೂ ಭಾಗವಹಿಸಿದ್ದರು.












Click it and Unblock the Notifications