ಮಲೆನಾಡು-ಕರಾವಳಿ ಕರ್ನಾಟಕದಲ್ಲಿ ಭಾರಿ ಮಳೆ ನಿರೀಕ್ಷೆ
ಬೆಂಗಳೂರು ಆಗಸ್ಟ್ 03: ಕರ್ನಾಟಕದಲ್ಲಿ ಕಳೆದ ನಾಲ್ಕೈದು ದಿನದಿಂದ ಅಬ್ಬರಿಸುತ್ತಿರುವ ಮುಂಗಾರು ಮಳೆ ಇನ್ನೂ ಕೆಲವು ದಿನ ಹೀಗೆ ಮುಂದುವರಿಯುವ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರ್ನಾಟಕದಾದ್ಯಂತ ಮುಂದಿನ ಆಗಸ್ಟ 8ರವರೆ ಅತೀ ಭಾರಿಯಿಂದ ಭಾರಿ ಮತ್ತು ಸಾಧಾರಣ ಮಳೆ ಬರುವ ನಿರೀಕ್ಷೆ ಇದೆ. ಇದರಲ್ಲಿ ಮುಖ್ಯವಾಗಿ ರಾಜ್ಯದ ಕರಾವಳಿ ಭಾಗದಲ್ಲಿ ಗುಡುಗು ಸಹಿತ ಅತ್ಯಧಿಕ ಮಳೆ ಬೀಳಲಿದೆ. ಉಡುಪಿ, ಉತ್ತರ ಕನ್ನಡ, ದಕ್ಷಿಣ ಜಿಲ್ಲೆಗಳಲ್ಲಿ ಭಾರಿ ಮಳೆಗೆ ಅಧಿಕ ಹಾನಿ ಸಂಭವಿಸುವ ಸಾಧ್ಯತೆ ಇದೆ.
ಅದೇ ರೀತಿ ಮಲೆನಾಡಿನ ವ್ಯಾಪ್ತಿಗೆ ಬರುವ ಚಿಕ್ಕಮಗಳೂರು, ಮಡಿಕೇರಿ, ಶಿವಮೊಗ್ಗ ಜಿಲ್ಲೆ ಅತ್ಯಧಿಕ ಮಳೆ ಬೀಳಲಿದೆ. ಈ ಜಿಲ್ಲೆಗಳ ಹಲವೆಡೆ ಸುಮಾರು 20ಸೆಂ.ಮೀ.ಗಿಂತಲೂ ಅಧಿಕ ಮಳೆ ದಾಖಲಾಗುವ ಸಂಭವವಿದೆ. ಉಳಿದಂತೆ ಕೊಡಗಿನಲ್ಲಿ ಕೆಲವು ಮಳೆ ಆರ್ಭಟಿಸಲಿದೆ ಎಂದು ಹವಾಮಾನ ಇಲಾಖೆ ವರದಿ ಹೇಳಿದೆ.
ಕರ್ನಾಟಕ ಸೇರಿ ವಿವಿಧ ರಾಜ್ಯಗಳಲ್ಲಿ ಸುರಿದ ಭಾರಿ ಮಳೆ
ಕೆಲವು ದಿನಗಳಿಂದ ಕರ್ನಾಟಕ ಒಳಗೊಂಡಂತೆ ಭಾರತದ ಅಂಡಮಾನ್ ನಿಕೋಬಾರ್ ದ್ವೀಪ, ಅರುಣಾಚಲ ಪ್ರದೇಶ, ಸಿಕ್ಕಿಂ, ಪಶ್ಚಿಮ ಬಂಗಾಳ, ಬಿಹಾರ, ಉತ್ತರ ಪ್ರದೇಶ, ತೆಲಂಗಾಣ, ಲಕ್ಷದ್ವೀಪ, ಕೇರಳ, ರಾಯಲ್ಸೀಮಾ, ಗೋವಾ ಸೇರಿದಂತೆ ಹಲವು ಕಡೆಗಳಲ್ಲಿ ಮಳೆ ಮುಂದುವರಿದಿದೆ. ಪರಿಣಾಮ ಆ ರಾಜ್ಯಗಳಲ್ಲಿ ಜನ ಜೀವನ ಅಸ್ತವೆಸ್ತವಾಗಿದೆ. ಇನ್ನು ಕರ್ನಾಟದಲ್ಲಿ ಅದೇ ರೀತಿಯ ಪರಿಸ್ಥಿತಿ ಕಂಡು ಬಂದಿದ್ದು, ಕರಾವಳಿ, ಮಲೆನಾಡು, ಒಳನಾಡಿನ ಜಿಲ್ಲೆಗಳಲ್ಲಿ ಮನೆ, ರಸ್ತೆಗಳು ಜೀವಕ್ಕೆ ಹಾನಿ ಉಂಟಾದ ಬಗ್ಗೆ ವರದಿ ಆಗಿವೆ.
ರಾಜ್ಯ ಯಾವ ಜಿಲ್ಲೆಗಳಿಗೆ ಮುನ್ಸೂಚನೆ ಇದೆ
ರಾಜ್ಯದ ಕರಾವಳಿ ಜಿಲ್ಲೆಗಳು, ಮಲೆನಾಡು ಹಾಗೂ ಒಳನಾಡಿನ ಎಲ್ಲ ಜಿಲ್ಲೆಗಳಲ್ಲಿ ಹಲವು ಕಡೆಗಳಲ್ಲಿ ಗುಡುಗು ಸಹಿತ ಅತ್ಯಧಿಕ ಮಳೆಯಾಗಲಿದೆ. ಈ ಪೈಕಿ ಕರಾವಳಿ ಜಿಲ್ಲೆಗಳಿಗೆ ಆಗಸ್ಟ್ 4ರಂದು ಆರೆಂಜ್ ಅಲರ್ಟ್, ಆಗಸ್ಟ್ 5 ಮತ್ತು 6ರಂದು ಎರಡು ದಿನ ರೆಡ್ ಅಲರ್ಟ್ ಎಚ್ಚರಿಕೆ ಕೊಡಲಾಗಿದೆ. ಇದೇ ಅವಧಿಯಲ್ಲಿ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗಕ್ಕೆ ಕ್ರಮವಾಗಿ ಮೂರು ದಿನ ರೆಡ್ ಅಲರ್ಟ್ ನೀಡಲಾಗಿದೆ. ಉಳಿದ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರಿ ಮಳೆ ಆಗಬಹುದು ಎಂದು ಅಂದಾಜಿಸಲಾಗಿದೆ.
ಸಿಲಿಕಾನ್ ಸಿಟಿಯ ಮಳೆ ವರದಿ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವ್ಯಾಪಕ ಮಳೆ ಆಗುವ ಹಿನ್ನೆಲೆಯಲ್ಲಿ ಮುಂದಿನ ಮೂರು ದಿನ 'ಆರೆಂಜ್ ಅಲರ್ಟ್' ಘೋಷಿಸಲಾಗಿದೆ. ಪ್ರತಿ ದಿನವು ಮೋಡ ಕವಿದ ವಾತಾವರಣ ಇರಲಿದೆ. ನಗರದ ಕೆಲವು ಕಡೆಗಳಲ್ಲಿ ಗುಡುಗು ಸಹಿತ ಆಗಾಗ ಭಾರಿ ಮಳೆ ಬಿದ್ದರೆ, ಕೆಲವೊಮ್ಮೆ ಒಂದೆರಡು ಕಡೆಗಳಲ್ಲಿ ಜಿಟಿ ಜಿಟಿ ಮಳೆ ಸುರಿಯುವ ನಿರೀಕ್ಷೆ ಇದೆ. ಈ ಅವಧಿಯಲ್ಲಿ ತಾಪಮಾನ ಗರಿಷ್ಠ 29 ಮತ್ತು ಕನಿಷ್ಠ 20ಡಿಗ್ರಿ ಸೆಲ್ಸಿಯಸ್ ಕಂಡು ಬರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ ಜಿಲ್ಲೆಗಳ ತಾಪಮಾನದ ವಿವರ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 28ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶವಿದ್ದರೆ, ತೇವಾಂಶ 81ರಷ್ಟು ಇದೆ. ಇನ್ನು ಗಾಳಿಯ ವೇಗ ಗಂಟೆಗೆ 32ಕಿ.ಮೀ. ಇದೆ. ಇನ್ನು ಬಾಗಲಕೋಟೆಯಲ್ಲಿ 28ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 71ರಷ್ಟು ತೇವಾಂಶ, ಮಂಗಳೂರು 28ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 78ರಷ್ಟು ತೇವಾಂಶ ದಾಖಲಾಗಿದೆ. ಶಿವಮೊಗ್ಗದಲ್ಲಿ 27ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 73ರಷ್ಟು ತೇವಾಂಶ ಇದ್ದು, ಮೈಸೂರು 27ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, ತೇವಾಂಶ 83, ಬಳ್ಳಾರಿಯಲ್ಲಿ 30ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ಮತ್ತು ತೇವಾಂಶ 67 ಇದೆ.
ರಾಯಚೂರಲ್ಲಿ 31ಡಿಗ್ರಿ ಸೆಲ್ಸಿಯಸ್ ಗರಿಷ್ಠ ಮತ್ತು 66ರಷ್ಟು ತೇವಾಂಶ ಇದ್ದು, ಚಿತ್ರದುರ್ಗದಲ್ಲಿ 27ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 73ರಷ್ಟು ತೇವಾಂಶ ಇದೆ. ಕಲಬುರಗಿ 30 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ಹಾಗೂ 63ರಷ್ಟು ತೇವಾಂಶ ಇದ್ದು, ಚಿಕ್ಕಮಗಳೂರಲ್ಲಿ26ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ಹಾಗೂ 70ರಷ್ಟು ತೇವಾಂಶ ದಾಖಲಾಗಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.