ಧ್ವಜಾರೋಹಣದ ರಹಸ್ಯ: ಗಣರಾಜ್ಯೋತ್ಸವಕ್ಕಿಂತ ಸ್ವಾತಂತ್ರ್ಯ ದಿನಾಚರಣೆ ಹೇಗೆ ಭಿನ್ನ!?
ನವದೆಹಲಿ, ಆಗಸ್ಟ್ 14: ಭಾರತದಲ್ಲಿ ಪ್ರತಿವರ್ಷ ಆಗಸ್ಟ್ 15 ಅನ್ನು ಸ್ವಾತಂತ್ರ್ಯ ದಿನಾಚರಣೆಯನ್ನಾಗಿ ಆಚರಿಸುತ್ತೇವೆ ಎನ್ನುವುದು ಹೊಸ ವಿಷಯವೇ ಅಲ್ಲ. 1947ರ ಆಗಸ್ಟ್ 15ರ ಮಧ್ಯರಾತ್ರಿ 12 ಗಂಟೆ ವೇಳೆಗೆ ಬ್ರಿಟಿಷರ ಕೈಯಲ್ಲಿದ್ದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು. ದೇಶಾದ್ಯಂತ ಈ ಸಂಭ್ರಮವನ್ನು ಪ್ರತಿವರ್ಷ ವಿಶೇಷವಾಗಿ ಆಚರಿಸಲಾಗುತ್ತದೆ.
ಭಾರತದಲ್ಲಿ ಈ ವರ್ಷ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಈ ದಿನದಂದು ಧೈರ್ಯ, ತ್ಯಾಗ, ಬಲಿದಾನ, ಶಾಂತಿ, ಮನುಷ್ಯ ಮತ್ತು ಪ್ರಕೃತಿ ನಡುವಿನ ಬಾಂಧವ್ಯ ಸಾರುವ ಸಂಕೇತವನ್ನು ಸೂಚಿಸುವ ತ್ರಿವರ್ಣ ಧ್ವಜವನ್ನು ಹಾರಿಸಲಾಗುತ್ತದೆ. ದೇಶದ ಸರ್ಕಾರಿ ಕಚೇರಿಗಳು, ಖಾಸಗಿ ಕಚೇರಿಗಳು ಹಾಗೂ ಬೃಹತ್ ಮೈದಾನಗಳಲ್ಲಿ ಧ್ವಜಾರೋಹಣ ಕಾರ್ಯಕ್ರಮವನ್ನು ನಡೆಸಲಾಗುತ್ತದೆ.
ಸ್ವಾತಂತ್ರ್ಯ ದಿನಾಚರಣೆ ದಿನದಂತೆ ಜನವರಿ 26ರ ಗಣರಾಜ್ಯೋತ್ಸವದ ದಿನವೂ ಸಹ ಧ್ವಜಾರೋಹಣವನ್ನು ನೆರವೇರಿಸಲಾಗುತ್ತದೆ. ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವದಂದು ನಡೆಸುವ ಧ್ವಜಾರೋಹಣ ಕಾರ್ಯಕ್ರಮವು ಹೇಗೆ ಭಿನ್ನವಾಗಿವೆ. ಜನವರಿ 26ರಂದು ನೆರವೇರಿಸುವ ಧ್ವಜಾರೋಹಣಕ್ಕಿಂತ ಆಗಸ್ಟ್ 15ರಂದು ನೆರವೇರಿಸುವ ಧ್ವಜಾರೋಹಣ ಹೇಗೆ ವಿಶೇಷವಾಗಿದೆ ಎಂಬುದನ್ನು ಈ ಸ್ಟೋರಿಯಲ್ಲಿ ತಿಳಿದುಕೊಳ್ಳೋಣ.

ಎರಡು ಧ್ವಜಾರೋಹಣದ ನಡುವಿನ ವ್ಯತ್ಯಾಸ ಒಂದು:
ಬ್ರಿಟಿಷರು ಭಾರತವನ್ನು ತೊರೆದ ಸಂದರ್ಭದಲ್ಲಿ ತಮ್ಮ ಧ್ವಜವನ್ನು ತೆಗೆದು ಭಾರತೀಯ ಧ್ವಜವನ್ನು ಹಾರಿಸಲು ಪ್ರಾರಂಭಿಸಲಾಯಿತು. ಅಂದಿನಿಂದ ಪ್ರತಿ ಆಗಸ್ಟ್ 15ರಂದು ರಾಷ್ಟ್ರಧ್ವಜವನ್ನು ಹಾರಿಸುವುದಕ್ಕೆ ಶುರು ಮಾಡಲಾಗಿದೆ. ಆಗಸ್ಟ್ 15ರಂದು ಧ್ವಜವನ್ನು ಮೇಲಕ್ಕೆ ಎಳೆದು ನಂತರ ಅದನ್ನು ಬಿಚ್ಚಲಾಗುತ್ತದೆ. ಈ ಪ್ರಕ್ರಿಯೆಯನ್ನು ಧ್ವಜಾರೋಹಣ ಎಂದು ಕರೆಯಲಾಗುತ್ತದೆ. ಅದೇ ರೀತಿ ಪ್ರತಿವರ್ಷ ಜನವರಿ 26ರಂದು ಧ್ವಜಗಂಬದ ಮೇಲೆ ರಾಷ್ಟ್ರಧ್ವಜವನ್ನು ಕಟ್ಟಲಾಗುತ್ತದೆ. ನಂತರ ಅದನ್ನು ಬಿಚ್ಚಿದಾಗ ಅದರಿಂದ ಪುಷ್ಪ ಮಳೆ ಸುರಿಯುತ್ತದೆ. ಈ ಪ್ರಕ್ರಿಯೆಯನ್ನು ಧ್ವಜ ಬಿಚ್ಚುವಿಕೆ ಎಂದು ಕರೆಯಲಾಗುತ್ತದೆ. ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವದ ದಿನ ನಡೆಯುವ ಧ್ವಜಾರೋಹಣದ ನಡುವಿನ ವ್ಯತ್ಯಾಸ ಹೀಗಿದೆ.
ವ್ಯತ್ಯಾಸ ಎರಡು:
ಎರಡನೇ ವ್ಯತ್ಯಾಸವೆಂದರೆ ಸ್ವಾತಂತ್ರ್ಯ ದಿನಾಚರಣೆಯ ದಿನ ದೇಶದ ಪ್ರಧಾನಿಗಳು ಧ್ವಜಾರೋಹಣ ಮಾಡುತ್ತಾರೆ. ಆದರೆ ಗಣರಾಜ್ಯೋತ್ಸವದ ದಿನದಂದು ಭಾರತದ ರಾಷ್ಟ್ರಪತಿಗಳು ಧ್ವಜವನ್ನು ಬಿಚ್ಚಿಡುತ್ತಾರೆ. ಇದರ ಜೊತೆಗೆ ಗಣರಾಜ್ಯೋತ್ಸವದ ದಿನ ವಿದೇಶಗಳಿಂದ ಗಣ್ಯ ವ್ಯಕ್ತಿಗಳನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸುವ ಸಂಪ್ರದಾಯವಿದೆ.
ವ್ಯತ್ಯಾಸ ಮೂರು:
ದೆಹಲಿಯ ಕೆಂಪು ಕೋಟೆಯಲ್ಲಿ ಸ್ವಾತಂತ್ರ್ಯ ದಿನವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಆದರೆ ದೇಶದ ಗಣರಾಜ್ಯೋತ್ಸವವನ್ನು ಇಂಡಿಯಾ ಗೇಟ್ನಲ್ಲಿನ ರಾಜ್ಪಥ್ ಬಳಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ವ್ಯತ್ಯಾಸ ನಾಲ್ಕು:
ಭಾರತದ ರಾಷ್ಟ್ರಪತಿ ಗಣರಾಜ್ಯೋತ್ಸವದ ಒಂದು ದಿನ ಮುಂಚಿತವಾಗಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುತ್ತಾರೆ. ಪ್ರಧಾನಿ ಪ್ರತಿವರ್ಷ ಆಗಸ್ಟ್ 15ರಂದು ಕೆಂಪು ಕೋಟೆಯಿಂದ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುತ್ತಾರೆ.
ಭಾರತದಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆ ವಿಶೇಷವೇನು?
ಈ ವರ್ಷ ಭಾರತೀಯ ರಾಷ್ಟ್ರಗೀತೆಯ ವಿಡಿಯೋವನ್ನು ಕೆಂಪು ಕೋಟೆಯಲ್ಲಿ ಪ್ರದರ್ಶಿಸಲಾಗುತ್ತದೆ. ಇದನ್ನು ಭಾರತದ ನಾಗರಿಕರು ಬೃಹತ್ ಪ್ರಮಾಣದಲ್ಲಿ ಹಾಡುತ್ತಾರೆ. ರಾಷ್ಟ್ರೀಯ ರಾಷ್ಟ್ರಗೀತೆ ಹಾಡುವ ವಿಡಿಯೋವನ್ನು ನಾಗರಿಕರು rastrugaan.in ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಬಹುದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಇದು ಏಕಕಾಲಕ್ಕೆ ಅತಿಹೆಚ್ಚು ಜನರು ರಾಷ್ಟ್ರಗೀತೆ ಹಾಡುವ ದಾಖಲೆಯನ್ನು ನಿರ್ಮಿಸಲಿರುವ ವಿಡಿಯೋ ಆಗಿದ್ದು, ಆ ಕ್ಷಣಕ್ಕಾಗಿ ಇಡೀ ದೇಶ ಎದುರು ನೋಡುತ್ತಿದೆ.












Click it and Unblock the Notifications