ಹಿಜಾಬ್ ವಿವಾದ: ಹೈಕೋರ್ಟ್ ವಿಚಾರಣೆ ಸಂಪೂರ್ಣ ವಿವರ ಇಲ್ಲಿದೆ
ಬೆಂಗಳೂರು, ಫೆಬ್ರವರಿ 08: ರಾಜ್ಯದ ಕೆಲವು ಭಾಗಗಳಲ್ಲಿ ಹಿಜಾಬ್ ವಿವಾದ ಭುಗಿಲೆದ್ದಿದ್ದು ಹೈಕೋರ್ಟ್ ಇಂದು ವಾದ ಆಲಿಸಿದೆ. ವಿದ್ಯಾರ್ಥಿಗಳು ಮತ್ತು ಜನರು ಶಾಂತಿ ಮತ್ತು ನೆಮ್ಮದಿಯನ್ನು ಕಾಪಾಡುವಂತೆ ಕರ್ನಾಟಕ ಹೈಕೋರ್ಟ್ ಮಂಗಳವಾರ ಮನವಿ ಮಾಡಿದೆ. ಮಂಗಳವಾರ ಅರ್ಜಿದಾರರ ವಕೀಲರಿಂದ ಸುಮಾರು 4 ಗಂಟೆ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಬುಧವಾರ ಮಧ್ಯಾಹ್ನಕ್ಕೆ ಮುಂದೂಡಿದೆ.
ಕರಾವಳಿಯ ಉಡುಪಿಯ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಕೆಲ ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ಬುಧವಾರಕ್ಕೆ ಕರ್ನಾಟಕ ಹೈಕೋರ್ಟ್ ಮುಂದೂಡಿಕೆ ಮಾಡಿದೆ. "ಕಾಲೇಜು ಆವರಣದಲ್ಲಿ ಇಸ್ಲಾಮಿಕ್ ನಂಬಿಕೆಯ ಪ್ರಕಾರ ಹಿಜಾಬ್ ಧರಿಸುವುದು ಸೇರಿದಂತೆ ಅಗತ್ಯ ಧಾರ್ಮಿಕ ಆಚರಣೆಗಳನ್ನು ಆಚರಿಸಲು ಮೂಲಭೂತ ಹಕ್ಕು ಆಗಿದೆ," ಎಂಬ ಬಗ್ಗೆ ಖಚಿತಪಡಿಸಲು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರ ಏಕ ಸದಸ್ಯ ಪೀಠ ಹೇಳಿದೆ.
"ನ್ಯಾಯಾಲಯವು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರನ್ನು ಶಾಂತಿ ಮತ್ತು ನೆಮ್ಮದಿಯನ್ನು ಕಾಪಾಡಿಕೊಳ್ಳಲು ವಿನಂತಿಸುತ್ತದೆ. ಸಾರ್ವಜನಿಕರ ಬುದ್ಧಿವಂತಿಕೆ ಮತ್ತು ಸದ್ಗುಣದಲ್ಲಿ ನ್ಯಾಯಾಲಯವು ಸಂಪೂರ್ಣ ನಂಬಿಕೆಯನ್ನು ಹೊಂದಿದೆ. ಜನರು ಶಾಂತಿಯನ್ನು ಕಾಪಾಡಿಕೊಳ್ಳುತ್ತಾರೆ ಎಂಬ ನಂಬಿಕೆ ಇದೆ," ಎಂದು ನ್ಯಾಯಾಧೀಶರು ಹೇಳಿದರು. ಒಟ್ಟಿನಲ್ಲಿ ಹೈಕೋರ್ಟ್ನಲ್ಲಿ ಏನು ವಾದ-ವಿವಾದ ನಡೆದಿದೆ, ನ್ಯಾಯಮೂರ್ತಿಗಳು ಹೇಳಿರುವುದು ಏನು ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

ಕೆಲವು ಕಿಡಿಗೇಡಿಗಳ ಕೃತ್ಯ
ಭಾರತೀಯ ಸಂವಿಧಾನದಲ್ಲಿ ಜನರಿಗೆ ನಂಬಿಕೆ ಇರುವಂತೆ ಕೇಳಿಕೊಂಡ ನ್ಯಾಯಮೂರ್ತಿ ದೀಕ್ಷಿತ್, ಕೆಲವು ಕಿಡಿಗೇಡಿಗಳು ಮಾತ್ರ ಈ ವಿಷಯವನ್ನು ದೊಡ್ಡದು ಮಾಡುತ್ತಿದ್ದಾರೆ ಎಂದು ಉಲ್ಲೇಖ ಮಾಡಿದ್ದಾರೆ. "ಆಂದೋಲನ, ಘೋಷಣೆ ಕೂಗುವುದು, ವಿದ್ಯಾರ್ಥಿಗಳು ಪರಸ್ಪರ ಹಲ್ಲೆ ನಡೆಸುವುದು ಒಳ್ಳೆಯದಲ್ಲ," ಎಂದು ಕೂಡಾ ವಿದ್ಯಾರ್ಥಿಗಳಿಗೆ ತಿಳಿಸಿದ್ದಾರೆ.

ಪ್ರತಿಭಟನೆ ನಡೆಸದಂತೆ ಮಧ್ಯಂತರ ಆದೇಶಕ್ಕೆ ಮನವಿ
ಇದಕ್ಕೂ ಮುನ್ನ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವಡಗಿ ತಮ್ಮ ವಾದ ಮಂಡನೆ ಮಾಡಿ, ರಾಜ್ಯದಲ್ಲಿ ಯಾವುದೇ ಸಾರ್ವಜನಿಕ ಪ್ರತಿಭಟನೆ ನಡೆಸದಂತೆ ಮಧ್ಯಂತರ ಆದೇಶ ನೀಡುವಂತೆ ನ್ಯಾಯಾಲಯದ ಮುಂದೆ ಮನವಿ ಮಾಡಿದ್ದಾರೆ. ಹಿಜಾಬ್ಗೆ ಅನುಮತಿ ನೀಡಬೇಕು ಎಂದು ಕೋರಿದ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ದೇವದತ್ತ್ ಕಾಮತ್ ಕೂಡ ನಾವಡಗಿ ಮಾತನ್ನು ಒಪ್ಪಿದ್ದಾರೆ.

ಅರ್ಜಿದಾರರ ಪರ ವಕೀಲ ದೇವದತ್ತ್ ಕಾಮತ್ ಹೇಳುವುದು ಏನು?
ಪ್ರಕರಣದ ವಾದದ ಸಂದರ್ಭದಲ್ಲಿ, ಪರೀಕ್ಷೆಗಳು ಸಮೀಪಿಸುತ್ತಿರುವ ಕಾರಣ ವಿದ್ಯಾರ್ಥಿನಿಯರು ಸ್ಕಾರ್ಫ್ ಧರಿಸಿ ತರಗತಿಗಳಿಗೆ ಹಾಜರಾಗಲು ಅವಕಾಶ ನೀಡಿ ಮಧ್ಯಂತರ ಆದೇಶ ನೀಡುವಂತೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ದೇವದತ್ತ್ ಕಾಮತ್ ಮನವಿ ಮಾಡಿದ್ದಾರೆ. "ಸರ್ಕಾರಿ ಸಂಸ್ಥೆಗಳ ವಿದ್ಯಾರ್ಥಿಗಳು ಇಲಾಖೆ ಸೂಚಿಸಿದಂತೆ ಶಾಲಾ ಸಮವಸ್ತ್ರವನ್ನು ಕಡ್ಡಾಯವಾಗಿ ಧರಿಸಬೇಕು ಹಾಗೂ ಶಾಂತಿ, ಸೌಹಾರ್ದತೆ ಮತ್ತು ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವ ಯಾವುದೇ ಬಟ್ಟೆ ಧರಿಸುವುದನ್ನು ನಿಷೇಧಿಸಲಾಗುತ್ತದೆ ಎಂದು ಫೆಬ್ರವರಿ 5 ರಂದು ಸರ್ಕಾರವು ಹೊರಡಿಸಿರುವ ಆದೇಶವು ಸಂವಿಧಾನದಲ್ಲಿ ಪ್ರತಿಪಾದಿಸಿರುವ ಮೂಲಭೂತ ಹಕ್ಕುಗಳಿಗೆ ವಿರುದ್ಧವಾಗಿದೆ," ಎಂದು ದೇವದತ್ತ್ ಕಾಮತ್ ಪ್ರತಿಪಾದಿಸಿದರು.

'ಧಾರ್ಮಿಕ ವರ್ಣಭೇದ ನೀತಿ' ಉಲ್ಲೇಖ
ಇನ್ನು "ಹಿಜಾಬ್ ಧರಿಸಿದ ಕೆಲವು ವಿದ್ಯಾರ್ಥಿನಿಯರಿಗೆ ಶಾಲೆಯ ಆವರಣದೊಳಗೆ ಪ್ರವೇಶ ಮಾಡಲು ಅವಕಾಶ ನೀಡಲಾಗಿದೆ. ಆದರೆ ಅವರನ್ನು ಪ್ರತ್ಯೇಕವಾಗಿ ಕುಳಿತುಕೊಳ್ಳುವಂತೆ ಸೂಚನೆ ನೀಡಲಾಗಿದೆ. ಇದು 'ಧಾರ್ಮಿಕ ವರ್ಣಭೇದ ನೀತಿ' ಎಂಬುವುದ ಸ್ಪಷ್ಟ," ಎಂದಿದ್ದಾರೆ. ಇದಕ್ಕೆ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವಡಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಾದ ಪ್ರತಿವಾದಗಳನ್ನು ಆಲಿಸಿದ ಹೈಕೋರ್ಟ್ನ ಏಕಸದಸ್ಯ ನ್ಯಾಯಪೀಠ ವಿಚಾರಣೆಯನ್ನು ಬುಧವಾರ ಮಧ್ಯಾಹ್ನಕ್ಕೆ ಮುಂದೂಡಿದೆ. ಈ ನಡುವೆ ರಾಜ್ಯದಲ್ಲಿ ಹಿಜಾಬ್-ವರ್ಸಸ್-ಕೇಸರಿ ಶಲ್ಯ ವಿವಾದ ಹಿಂಸಾಚಾರದ ರೂಪ ತಳೆದಿದೆ. ರಾಜ್ಯ ಸರ್ಕಾರವು ಹೈಸ್ಕೂಲ್ ಹಾಗೂ ಕಾಲೇಜುಗಳಿಗೆ ಮೂರು ದಿನಗಳ ಕಾಲ ರಜೆ ಘೋಷಣೆ ಮಾಡಿದೆ. (ಒನ್ಇಂಡಿಯಾ ಸುದ್ದಿ)












Click it and Unblock the Notifications