Get Updates
Get notified of breaking news, exclusive insights, and must-see stories!

ಕನ್ನಡ ಎಂಬ ಅವಿಚ್ಛಿನ್ನ ಪರಂಪರೆಯನ್ನು ಕಾಪಿಡಲಿ 'ಕನ್ನಡ ರಾಜ್ಯೋತ್ಸವ'

"ಕನ್ನಡದ ಬಗ್ಗೆ ಅಭಿಮಾನ ಕೇವಲ ಘೋಷಣೆಗಳಿಗೆ ಮೀಸಲಾಗಬಾರದು. ನಾವೆಷ್ಟು ಕನ್ನಡಿಗರಾಗಿದ್ದೇವೆ ಎಂದು ಪ್ರತಿಯೊಬ್ಬ ಕನ್ನಡಿಗನೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ಕನ್ನಡ ಮಾತನಾಡುವುದಕ್ಕೆ ಮಾತ್ರವಲ್ಲ, ಅಚರಣೆಗೂ ಎಂಬುದನ್ನು ಎಲ್ಲರೂ ಅರಿತುಕೊಂಡಾಗ ಭಾಷೆಯ ಶ್ರೀಮಂತಿಕೆ ಹೆಚ್ಚುತ್ತದೆ" ಇವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಟ್ವಿಟ್ಟರ್ ಸಾಲುಗಳು.

ಕನ್ನಡ ರಾಜ್ಯೋತ್ಸವ, ನಾವೆಷ್ಟು ಕನ್ನಡಿಗರಾಗಿದ್ದೇವೆಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳುವುದಕ್ಕೆ ಸಕಾಲವೂ ಹೌದು. ಜಗತ್ತಿನ ಅತ್ಯಂತ ಪ್ರಾಚೀನ ಭಾಷೆಗಳಲ್ಲೊಂದಾದ ಕನ್ನಡ ಇಂದು ಹಲವಾರು ವಿಪ್ಲವಗಳನ್ನು ಎದುರಿಸುತ್ತಿರುವ ಹೊತ್ತಲ್ಲಿ ರಾಜ್ಯೋತ್ಸವದ ನೈಜ ಉದ್ದೇಶದ ಕುರಿತು ಜರೂರಾಗಿ ಚಿಂತನೆ ನಡೆಯುವ ಅಗತ್ಯವಿದೆ.

This is the time to introspect our role to save our mother tongue Kannada

ರಾಜಕಾರಣಿಗಳಿಗೆ ಕನ್ನಡ ಒಂದು ಮತಕಬಳಿಸುವ ಸಾಧನವಾಗದೆ, ಕೆಲ 'ಓರಾಟಗಾರ'ರಿಗೆ ಕನ್ನಡ ಎಂಬ ಅಮೃತಭಾಷೆ ಬಿಟ್ಟಿ ಪ್ರಚಾರದ ಸರಕಾಗದೆ, ಜನಸಾಮಾನ್ಯನಿಗೆ ತನ್ನ ಮಾತೃಭಾಷೆಯೆಂದರೆ ಕೀಳರಿಮೆ ಹುಟ್ಟಿಸದೆ, ಸಾಹಿತಿಗಳಿಗೂ ಎಡ-ಬಲವೆಂಬ ಸಿದ್ಧಾಂತದ ಅಭಿವ್ಯಕ್ತಿಗೆ ಒಂದು ಮಾಧ್ಯಮವಾಗದೆ, ಕನ್ನಡ ಭಾಷೆ ಎಂಬುದು ಒಂದು ಅವಿಚ್ಛಿನ್ನ ಪರಂಪರೆಯಾಗಿ ಉಳಿಯಬೇಕಿದೆ.

ಮೆಟ್ರೋ ನಿಲ್ದಾಣಗಳಲ್ಲಿ ಕನ್ನಡದ ಬೋರ್ಡುಗಳಿಗಾಗಿ ಹೋರಾಡುವ ನಾವು, ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ನೀಡುವೆಂತೆಯೂ ಪಟ್ಟುಹಿಡಿದು ಒತ್ತಾಯಿಸಬೇಕಿದೆ. ಮೆಟ್ರೋದಲ್ಲಿ ಹಿಂದಿ ಹೇರಿಕೆಯ ಹೋರಾಟ ಕೇವಲ ಸೈನ್ ಬೋರ್ಡ್ ಗಳಿಗೆ ಮಸಿ ಬಳಿಯುವುದಷ್ಟಕ್ಕೇ ಸೀಮಿತವಾಗದೆ, ನಮ್ಮ ಮೆಟ್ರೋದಲ್ಲಿ ಉದ್ಯೋಗ ನೀಡುವಾಗ ಕನ್ನಡಿಗರ ಆದ್ಯತೆ ನೀಡಿ ಎಂಬಲ್ಲಿಯವರೆಗೂ ವಿಸ್ತರಿಸಬೇಕಿತ್ತು. ಆದರೆ ಸೈನ್ ಬೋರ್ಡ್ ಗಳ ವಿರುದ್ಧ ಹೋರಾಡುವಾಗ ನಮ್ಮಲ್ಲಿದ್ದ ಜೋಶ್ ಉದ್ಯೋಗಾವಕಾಶಕ್ಕಾಗಿ ಬೇಡಿಕೆ ಇಡುವಾಗ ಉಡುಗಿಹೋಗಿತ್ತು!

ಬೇರೆ ಭಾಷಿಕ ಜನರೊಂದಿಗೆ ಕನ್ನಡದಲ್ಲೇ ವ್ಯವಹರಿಸಿದರೆ ಅವಮಾನ ಎಂಬ ಮನಸ್ಥಿತಿಯಿಂದ ಹೊರಬಂದು, ಕರ್ನಾಟಕದಲ್ಲಿ ವಾಸಿಸುವ, ಇಲ್ಲಿನ ಗಾಳಿ, ನೀರು ಸೇವಿಸುವ ಪ್ರತಿಯೊಬ್ಬನೂ ಕನ್ನಡ ಕಲಿಯಬೇಕೆಂಬ ಅನಿವಾರ್ಯ ಪರಿಸ್ಥಿತಿಯನ್ನು ನಾವು ಸೃಷ್ಟಿಸಬೇಕಿತ್ತು. ಆದರೆ ಅದಾಗಲೇ ಇಲ್ಲ.

ಒಂದನೇ ತರಗತಿಯಿಂದಲೇ ಕಲಿಕೆಯ ಮಾಧ್ಯಮವಾಗಿ ಇಂಗ್ಲಿಷ್ ಭಾಷೆಯನ್ನು ಪರಿಚಯಿಸುವ ಪ್ರಸ್ತಾಪ ಬಂದಾಗಲೂ ಕನ್ನಡದ ಎಷ್ಟೋ ಅಪ್ಪ-ಅಮ್ಮಂದಿರೇ ಅದನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸಲಿಲ್ಲವೇ? ಒಂದನೇ ತರಗತಿಯಿಂದಲೇ ಇಂಗ್ಲಿಷ್ ಮಾಧ್ಯಮದಲ್ಲಿ ಓದುವುದು ನಮ್ಮ ಈ ಸ್ಪರ್ಧಾತ್ಮಕ ಯುಗದಲ್ಲಿ ಅನಿವಾರ್ಯ ಎಂಬುದನ್ನು ಕನ್ನಡದ ಎಷ್ಟೋ ತಂದೆ-ತಾಯಿಯರೇ ಒಪ್ಪಿಕೊಳ್ಳಲಿಲ್ಲವೇ?

"ಒಂದು ಎರಡು ಬಾಳೆಲೆಹರಡು", "ಗಂಟೆಯ ನೆಂಟನೆ ಓ ಗಡಿಯಾರ..." "ನಾಗರಹಾವೇ ಹಾವೊಳು ಹೂವೆ..." "ಬೆಕ್ಕೆ ಬೆಕ್ಕೆ ಮುದ್ದಿನ ಸೊಕ್ಕೆ...", "ನಾಯಿಮರಿ ನಾಯಿ ಮರಿ ತಿಂಡಿ ಬೇಕೆ" ಎಂಬಿತ್ಯಾದಿ ಪದ್ಯಗಳನ್ನೆಲ್ಲ ಇಂದಿನ ಎಷ್ಟೋ ಮಕ್ಕಳು ಕೇಳುವ ಮೊದಲೇ ಅವರ ಕಿವಿಯನ್ನು "ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್", "ಬಾ ಬಾ ಬ್ಲಾಕ್ ಶೀಪ್ " "ಪುಸ್ಸಿ ಕ್ಯಾಟ್ ಪುಸ್ಸಿ ಕ್ಯಾಟ್" ಅಪ್ಪಳಿಸಿರುತ್ತದೆ.

ತಾವು ಕಲಿತ ಕನ್ನಡ ಪದ್ಯಗಳನ್ನು ತಮ್ಮ ಮಕ್ಕಳಿಗೆ ಕಲಿಸುವ ಪ್ರಯತ್ನವನ್ನು ಅಪ್ಪ ಅಮ್ಮ ಮಾಡುವುದರಿಂದ ಒಂದು ಪ್ರಾಚೀನ ಭಾಷೆಯನ್ನು ಮುಂದಿನ ತಲೆಮಾರು ಉಳಿಸುವಂತೆ ಮಾಡುವ ಮಹೋನ್ನತ ಉದ್ದೇಶವಿದೆ. ಆದರೆ ಅದು ನಮಗೆ ಅರ್ಥವಾಗಬೇಕಿದೆ ಅಷ್ಟೆ!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಟ್ವಿಟ್ಟರ್ ಹೇಳಿಕೆಯಂತೆ, "ಕನ್ನಡ ಮಾತನಾಡುವುದಕ್ಕೆ ಮಾತ್ರವಲ್ಲ, ಅಚರಣೆಗೂ ಎಂಬುದನ್ನು ಎಲ್ಲರೂ ಅರಿತುಕೊಂಡಾಗ ಭಾಷೆಯ ಶ್ರೀಮಂತಿಕೆ ಹೆಚ್ಚುತ್ತದೆ" ಎಂಬುದು ಅಕ್ಷರಶಃ ಸತ್ಯ.

ಅದೇನೇ ಇರಲಿ, ಎಲ್ಲ ಕೊರತೆಗಳ ನಡುವಲ್ಲೂ ಪ್ರತಿವರ್ಷ ಕನ್ನಡ ರಾಜ್ಯೋತ್ಸವ ನಡೆಯುತ್ತಲೇ ಇದೆ. ಈ ಬಾರಿಯ ರಾಜ್ಯೋತ್ಸವವಾದರೂ ಕನ್ನಡದ ಅವಿಚ್ಛಿನ್ನ ಪರಂಪರೆಯನ್ನೂ, ಭಾಷೆ ಎಂಬ ಅನರ್ಘ್ಯ ಸಂಪತ್ತನ್ನು ಉಳಿಸುವ ಉದ್ದೇಶದಿಂದ ಆಚರಣೆಯಾಗಲಿ ಎಂಬುದು ಒನ್ ಇಂಡಿಯಾ ಕಳಕಳಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+