25 ಕ್ಷೇತ್ರಗಳಲ್ಲಿ 162 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಗೋವಿಂದ ಕಾರಜೋಳ ಅವರು ವಿಕಾಸಸೌಧದಲ್ಲಿ ಇಂದು ಪ್ರಶಸ್ತಿ ಪಡೆದವರ ಪಟ್ಟಿಯನ್ನು ಪ್ರಕಟಿಸಿದರು. ಪ್ರಶಸ್ತಿಯನ್ನು ನವೆಂಬರ್ 1ರಂದು ಕನ್ನಡ ರಾಜ್ಯಾತ್ಸವದ ದಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಂಜೆ 6 ಗಂಟೆಗೆ ಪ್ರದಾನ ಮಾಡಲಾಗುವುದು.
ಪ್ರಶಸ್ತಿಯು 1 ಲಕ್ಷ ರು. ನಗದು ಮತ್ತು 20 ಗ್ರಾಂ ಚಿನ್ನದ ಪದಕವನ್ನು ಒಳಗೊಂಡಿರುತ್ತದೆ. ಪ್ರಶಸ್ತಿಗೆ ಅರ್ಜಿ ಗುಜರಾಯಿಸಿದ್ದವರ ಜೊತೆಗೆ ಪ್ರಶಸ್ತಿಗೆ ಅರ್ಜಿ ಸಲ್ಲಿಸದವರ ಸಾಧನೆ ಗುರುತಿಸಿ ಪ್ರಶಸ್ತಿ ಅರಸಿಕೊಂಡು ಬಂದಿರುವುದು ವಿಶೇಷ.
ಪರಿಸರವಾದಿ ಉಲ್ಲಾಸ ಕಾರಂತ್, ನಾಗತಿಹಳ್ಳಿ ಚಂದ್ರಶೇಖರ್, ಯಶವಂತ ಸರದೇಶಪಾಂಡೆ, ಕ್ರೀಡಾಪಟು ಎ. ಅಶ್ವಿನಿ, ಸಿದ್ದಲಿಂಗ ಪಟ್ಟಣಶೆಟ್ಟಿ, ಸ್ನೇಕ್ ಶಾಮ್, ವೀಣಾ ಶಾಂತೇಶ್ವರ, ಬಿಆರ್ ಛಾಯಾ, ಬಿಆರ್ ಲಕ್ಷ್ಮಣರಾವ್, ಲಹರಿ ವೇಲು, ಪತ್ರಕರ್ತ ಹಮೀದ್ ಪಾಳ್ಯ, ವಿಕಾಸ ಗೌಡ ಮುಂತಾದವರು ಪ್ರಶಸ್ತಿ ಸ್ವೀಕರಿಸುತ್ತಿರುವ ಪ್ರಮುಖರು. ಕರ್ನಾಟಕದ ಎಲ್ಲ 30 ಜಿಲ್ಲೆಗಳಲ್ಲಿನ ಸಾಧಕರಿಗೆ ಪ್ರಶಸ್ತಿ ಲಭಿಸುವಂತೆ ಹಂಚಿಕೆ ಮಾಡಲಾಗಿದೆ.
ಪ್ರಶಸ್ತಿ ಪ್ರಕಟಿಸಿ ಮಾತನಾಡಿದ ಗೋವಿಂದ ಕಾರಜೋಳ ಅವರು, ಪ್ರಶಸ್ತಿ ನಿರ್ಧರಿಸಲು ಒಂದು ಸಮಿತಿ ರಚಿಸಲಾಗಿತ್ತು. ಒಟ್ಟು 3500 ಅರ್ಜಿಗಳು ಬಂದಿದ್ದವು. ಅವುಗಳನ್ನು ಪರಿಶೀಲನೆ ಮಾಡಿ 25 ಕ್ಷೇತ್ರಗಳನ್ನು ವಿಂಗಡನೆ ಮಾಡಿ ಒಟ್ಟು 162 ಜನರಿಗೆ ಪ್ರಶಸ್ತಿ ನೀಡಲಾಗಿದೆ ಎಂದು ಹೇಳಿದರು. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ 19 ಜನರ ಸಮಿತಿಯನ್ನು ರಚಿಸಲಾಗಿತ್ತು.
ಕಳೆದ ವರ್ಷ ಪ್ರಶಸ್ತಿಯನ್ನು ನೀಡದ ಕಾರಣ ಎರಡು ವರ್ಷ ಸೇರಿ ಪ್ರಶಸ್ತಿ ನೀಡಲಾಗುತ್ತಿದೆ. ಆರಂಭದಲ್ಲಿ 100 ಸಾಧಕರಿಗೆ ಮಾತ್ರ ಪ್ರಶಸ್ತಿ ನೀಡಬೇಕೆಂದು ಚಿಂತಿಸಲಾಗಿತ್ತು. ಆದರೆ, ಕೊನೆಯಲ್ಲಿ ಪಟ್ಟಿ ಉಬ್ಬಿ ಪ್ರಶಸ್ತಿ ಪಡೆದವರ ಸಂಖ್ಯೆ 162 ಮುಟ್ಟಿದೆ. ಎಲ್ಲ ಸಾಧಕರಿಗೆ ದಟ್ಸ್ ಕನ್ನಡದ ಅಭಿನಂದನೆಗಳು.











Click it and Unblock the Notifications