ಕೊಡಗಿನಲ್ಲಿ ಮನೆಮಾಡಿದ ಕಕ್ಕಡ ಪದ್ನಟ್ನ ಸಂಭ್ರಮ
ಕೊಡಗಿನಲ್ಲೀಗ ಆಟಿ (ಕಕ್ಕಡ) 18ರ (ಆ.3) ಸಂಭ್ರಮ ಮನೆ ಮಾಡಿದೆ. ಸಾಮಾನ್ಯವಾಗಿ ಇಷ್ಟರಲ್ಲೇ ಭತ್ತದ ನಾಟಿ ಕೆಲಸವೂ ಮುಗಿದು ಹೋಗುತ್ತಿತ್ತು. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಆ ರೀತಿಯಾಗುತ್ತಿಲ್ಲ. ಭತ್ತದ ನಾಟಿ ಕಾರ್ಯ ನಿಧಾನವಾಗುತ್ತಿದೆ. ಭತ್ತದ ಕೃಷಿ ಕಾರ್ಯ ಕಡಿಮೆಯಾಗುತ್ತಿದೆ. ಆದರೆ ಆಚರಣೆಗಳನ್ನು ಮಾತ್ರ ಜೀವಂತವಾಗಿ ಉಳಿಸಿಕೊಂಡು ಬರಲಾಗುತ್ತಿದೆ.
ಸಾಮಾನ್ಯವಾಗಿ ಕೊಡಗಿನಲ್ಲಿ ನಡೆಯುವ ಹಬ್ಬಾಚರಣೆಗಳು ಕಾಲ ಮತ್ತು ಭತ್ತದ ಕೃಷಿಯನ್ನು ಅವಲಂಬಿಸಿದ್ದು ಅದರ ಸುತ್ತಲೂ ನಡೆಯುತ್ತಿದೆ. ಹಿಂದಿನ ಕಾಲದಲ್ಲಿ ಭತ್ತದ ಕೃಷಿಯೇ ಜೀವಾಳವಾಗಿತ್ತು. ಆ ಸಮಯದಲ್ಲಿ ಆಟಿ(ಕಕ್ಕಡ) ತಿಂಗಳೆಂದರೆ ಕೊಡಗಿನವರಿಗೆ ಬಿಡುವಿಲ್ಲದ ದುಡಿಮೆಯ ಕಾಲವಾಗಿತ್ತು.
ವಿಶೇಷ ವರದಿ: ಕೊರೊನಾ ಮಾರಿಯನ್ನು ದೂರ ಮಾಡಲು ಬಂದ ಆಟಿ ಕಳೆಂಜ!
ಭತ್ತದ ಕೃಷಿಯಲ್ಲಿ ತೊಡಗಿಸಿಕೊಂಡವರಿಗೆ ಹೊರ ಪ್ರಪಂಚದ ಪರಿವೇ ಇರುತ್ತಿರಲಿಲ್ಲ. ಜುಲೈ 17ರಿಂದ ಆರಂಭವಾಗಿ ಆಗಸ್ಟ್ 16ರವರೆಗಿನ ಒಂದು ತಿಂಗಳ ಅವಧಿಯನ್ನು ಆಟಿ (ಕೊಡವ ಭಾಷೆಯಲ್ಲಿ ಕಕ್ಕಡ) ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ಶುಭ ಕಾರ್ಯಗಳು ನಿಷಿದ್ಧವಾಗಿದ್ದು, ಕೃಷಿ ಕೆಲಸಗಳಿಗೆ ಅದರಲ್ಲೂ ಭತ್ತದ ಕೃಷಿಗೆ ಜನ ಹೆಚ್ಚಿನ ಆದ್ಯತೆ ನೀಡುತ್ತಿದ್ದರು.
ಆಟಿ ತಿಂಗಳಲ್ಲಿ ತುಳುನಾಡಿನ ಮನೆಗಳಲ್ಲಿ ವೈವಿಧ್ಯ ತಿನಿಸುಗಳ ಘಮಲು
ಆಟಿ ತಿಂಗಳಲ್ಲಿ ಮಳೆ ಮತ್ತು ಬಿಡುವಿಲ್ಲದ ಕೆಲಸದ ನಡುವೆ ಕೊರೆವ ಚಳಿ, ಮಳೆಯಲ್ಲೇ ಕೆಲಸ ಮಾಡುತ್ತಿದ್ದವರಿಗೆ ತಮ್ಮ ಶರೀರವನ್ನು ಶೀತದಿಂದ ರಕ್ಷಿಸಿಕೊಳ್ಳುವ ಅಗತ್ಯತೆಯೂ ಇತ್ತು. ಆಗ ಬಂದಿದ್ದೇ ಆಟಿ ಪದ್ನಟ್ ಆಚರಣೆ. ಈ ಕುರಿತ ವಿವರ ಇಲ್ಲಿದೆ ಓದಿ...
ಭತ್ತದ ಕೃಷಿ ಸುಲಭದ ಕೆಲಸವಾಗಿರಲಿಲ್ಲ
ಈ ನಾಟಿ ಕೆಲಸ ಎನ್ನುವುದು ಇಲ್ಲಿ ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಸುರಿಯುವ ಮಳೆ, ಕೊರೆಯುವ ಚಳಿಯಲ್ಲಿ ಕೆಸರುಗದ್ದೆಯಲ್ಲಿ ನಾಟಿ ನೆಡುವುದು ಎಂದರೆ ಅದು ಕಷ್ಟದ ಕೆಲಸವೂ ಹೌದು ಜತೆಗೆ ವಿಭಿನ್ನ ಅನುಭವವೂ ಹೌದು. ಇಲ್ಲಿ ಹೆಂಗಸರು ಪೈರು ಕಿತ್ತರೆ ಗಂಡಸರು ನಾಟಿ ನೆಡುತ್ತಿದ್ದರು. ಆಳುಕಾಳುಗಳನ್ನಿಟ್ಟು ಕೆಲಸ ಮಾಡಲು ಸಾಧ್ಯವಾಗದ ಸಣ್ಣ ಹಿಡುವಳಿದಾರರು ಕೂಡು ಆಳುಗಳಾಗಿ ಕೆಲಸ ಮಾಡುತ್ತಿದ್ದರು.
ಆಗ ಇನ್ನೂ ಗದ್ದೆಗೆ ಯಂತ್ರೋಪಕರಣಗಳು ಇಳಿದಿರಲಿಲ್ಲ. ಎತ್ತುಗಳನ್ನು ಬಳಸಿ ಉಳುಮೆ ಮಾಡಲಾಗುತ್ತಿತ್ತು. ಬೆಳಿಗ್ಗೆ 5ಗಂಟೆಗೆ ಮಳೆಯಿರಲಿ, ಚಳಿಯಿರಲಿ ಯಾವುದನ್ನೂ ಲೆಕ್ಕಿಸದೆ ಎತ್ತುಗಳೊಂದಿಗೆ ಗದ್ದೆಗೆ ತೆರಳಿ ಉಳುಮೆ ಆರಂಭಿಸಿದರೆ 11ಗಂಟೆ ವೇಳೆಗೆ ಉಳುಮೆ ನಿಲ್ಲಿಸಲಾಗುತ್ತಿತ್ತು. ಆ ನಂತರ ಉಳುಮೆ ಮಾಡುತ್ತಿರಲಿಲ್ಲ. ಇನ್ನು ನಾಟಿಯನ್ನು ಎಲ್ಲರೂ ಸೇರಿಕೊಂಡು ಮಾತನಾಡುತ್ತಾ ಹರಟೆ ಹೊಡೆಯುತ್ತಾ ಮಾಡುತ್ತಿದ್ದರಿಂದ ಆಯಾಸವೂ ಗೊತ್ತಾಗುತ್ತಿರಲಿಲ್ಲ.
ಸುತ್ತಮುತ್ತಲೇ ದೊರೆಯುತ್ತಿದ್ದ ಆಹಾರಪದಾರ್ಥ
ಕುಂಭದ್ರೋಣ ಮಳೆ ಸುರಿದರೂ ಜಗ್ಗದೆ ಕೆಲಸ ಮಾಡುತ್ತಿದ್ದರು. ಮಳೆಯಿಂದ ಕಾಪಾಡಲು ವಾಟೆ(ಬಿದಿರಿನ ರೀತಿಯ ಚಿಕ್ಕದಾದ ಸಸ್ಯ)ಯಿಂದ ಮಾಡಿದ ಕೊರಂಬು(ಗೊರ್ಗ) ಧರಿಸುತ್ತಿದ್ದರು. ಇನ್ನು ಹೆಚ್ಚಿನ ಪ್ರಮಾಣದಲ್ಲಿ ಗದ್ದೆಗಳೇ ಇದ್ದುದರಿಂದಾಗಿ ಅವುಗಳಲ್ಲಿ ನಾಟಿ ಮಾಡಿ ಮುಗಿಸುವ ಹೊತ್ತಿಗೆ ಜನರಿಗೆ ಸಾಕು ಸಾಕಾಗಿ ಬಿಡುತ್ತಿತ್ತು.
ಈ ಎಲ್ಲ ಕೆಲಸಗಳು ನಡೆಯುತ್ತಿದ್ದದ್ದು, ಆಟಿ ತಿಂಗಳಲ್ಲಿ ಹೀಗಾಗಿ ಮಳೆ ಮತ್ತು ಬಿಡುವಿಲ್ಲದ ಕೆಲಸದ ನಡುವೆ ಕೊರೆವ ಚಳಿ, ಮಳೆಯಲ್ಲೇ ಕೆಲಸ ಮಾಡುತ್ತಿದ್ದವರಿಗೆ ತಮ್ಮ ಶರೀರವನ್ನು ಶೀತದಿಂದ ರಕ್ಷಿಸಿಕೊಳ್ಳುವ ಅಗತ್ಯತೆಯೂ ಇತ್ತು. ಆಗ ಬಂದಿದ್ದೇ ಆಟಿ ಪದ್ನಟ್ ಆಚರಣೆ.
ತಮ್ಮ ಸುತ್ತ ಮುತ್ತ ಇರುವ ಗಿಡ ಮೂಲಿಕೆಗಳ ಮಹತ್ವ ಕಂಡು ಕೊಂಡಿದ್ದ ಹಿರಿಯರು ಅದನ್ನೇ ಬಳಸಿ ತಮ್ಮ ಆರೋಗ್ಯ ರಕ್ಷಣೆಗಾಗಿ ಕೆಲವೊಂದು ಗಿಡಮೂಲಿಕೆ ಮತ್ತು ಏಡಿ, ಅಣಬೆ, ಬಿದಿರು ಕಣಿಲೆ, ಮರದಲ್ಲಿ ಬೆಳೆಯುವ ಕೆಸದ ಪತ್ರೊಡೆ, ನಾಟಿಕೋಳಿ ಮೊದಲಾದವುಗಳನ್ನು ಹೆಚ್ಚಾಗಿ ಸೇವಿಸುತ್ತಿದ್ದರು. ಇವುಗಳಲ್ಲಿ ಉಷ್ಣಾಂಶವನ್ನು ಹೆಚ್ಚಿಸುವ ಶಕ್ತಿಯಿತ್ತು.
ಆಟಿಸೊಪ್ಪಿನಿಂದ ವಿವಿಧ ಖಾದ್ಯ
ಇದೆಲ್ಲದರ ನಡುವೆ ಆಟಿ 18ನೇ ದಿನ ಕಾಡಿನಲ್ಲಿ ಬೆಳೆಯುತ್ತಿದ್ದ ಆಟಿ ಸೊಪ್ಪನ್ನು ತಂದು ಅದರ ರಸ ತೆಗೆದು ಅದರಲ್ಲಿ ಪಾಯಸ ಸೇರಿದಂತೆ ಇನ್ನಿತರ ತಿನಿಸುಗಳನ್ನು ಮಾಡಿ ಸೇವಿಸಲಾಗುತ್ತಿತ್ತು. ಇನ್ನು ಆಟಿ ಸೊಪ್ಪು ಬಗ್ಗೆ ಹೇಳಬೇಕೆಂದರೆ ಇದು ಕೊಡಗಿನ ಕಾಡುಗಳಲ್ಲಿ, ತೋಟಗಳ ಅಂಚಿನಲ್ಲಿ ಪೊದೆಯಾಗಿ ಬೆಳೆಯುವ ಉದ್ದುದ್ದ ದಂಟಿನ ಮೂರ್ನಾಲ್ಕು ಅಡಿಗೂ ಹೆಚ್ಚು ಎತ್ತರ ಬೆಳೆಯುವ ಸಸ್ಯ.
ಇದರ ವೈಜ್ಞಾನಿಕ ಹೆಸರು ಜಸ್ಟಿಕಾ ವೈನಾಡೆನ್ಸಿಯಂತೆ. ಈ ಸೊಪ್ಪಿನಲ್ಲಿ ಆಟಿ ತಿಂಗಳು ಆರಂಭವಾಗುತ್ತಿದ್ದಂತೆಯೇ ಒಂದೊಂದೇ ಔಷಧಿಗುಣ ಸೇರುತ್ತಾ ಹೋಗಿ 18ನೇ ದಿನಕ್ಕೆ 18 ತರಹದ ಔಷಧಿ ಸೇರುತ್ತದೆ. ಬಳಿಕ ಅದು ಕಡಿಮೆಯಾಗುತ್ತಾ ಹೋಗುತ್ತದೆ ಎನ್ನುವುದು ನಂಬಿಕೆ.
ಆಟಿಸೊಪ್ಪಿನ ನೀಲಿ ಬಣ್ಣದ ರಸ
ಹೀಗಾಗಿ ಆಟಿ 18 (ಆಗಸ್ಟ್ 3)ರಂದು ಈ ಸೊಪ್ಪನ್ನು ತಂದು ಶುಚಿಗೊಳಿಸಿ ಚೆನ್ನಾಗಿ ತೊಳೆದು ನೀರಿನಲ್ಲಿ ಬೇಯಿಸಿದಾಗ ನೀಲಿ ಬಣ್ಣದ ರಸ ಬಿಡುತ್ತದೆ. ಬಳಿಕ ಸೊಪ್ಪನ್ನು ಬೇರ್ಪಡಿಸಿ ರಸವನ್ನು ತೆಗೆದುಕೊಂಡು ಅದರಲ್ಲಿ ಪಾಯಸ, ಬರ್ಪಿ ಸೇರಿದಂತೆ ಹಲವು ಖಾದ್ಯಗಳನ್ನು ಮಾಡಿ ಅದಕ್ಕೆ ಜೇನು ಬೆರೆಸಿ ತಿಂದರೆ ತುಂಬಾ ರುಚಿಯಾಗಿರುತ್ತದೆ. ಇನ್ನು ನಾಟಿ ಕೋಳಿ ಖಾದ್ಯಗಳು ಮನೆಗಳಲ್ಲಿ ಘಮ್ಮೆನ್ನುತ್ತಿರುತ್ತವೆ. ಜತೆಗೆ ಕೆಲವರ ಮನೆಗಳಲ್ಲಿ ಮದ್ಯಕ್ಕೂ ಸ್ಥಾನ ನೀಡಲಾಗುತ್ತದೆ.
ಒಟ್ಟಾರೆ ಕೊಡಗಿನಲ್ಲಿ ಆಚರಿಸಲ್ಪಡುವ ಈ ಆಚರಣೆಗಳು ಇತರರಿಗೆ ಅಚ್ಚರಿಯಾಗಿ ಕಂಡರೂ ಕೊಡಗಿನ ವಾತಾವರಣ, ಕೆಲಸಕಾರ್ಯಗಳು, ಕೃಷಿ ಚಟುವಟಿಕೆಗಳು ಹೀಗೆ ಎಲ್ಲದಕ್ಕೂ ಹೊಂದಿಕೆಯಾಗುವಂತೆ ಹಿರಿಯರು ಇಲ್ಲಿ ಆಚರಣೆಯನ್ನು ತಂದಿದ್ದು, ಕಾಲಘಟ್ಟದಲ್ಲಿ ಬಹಳಷ್ಟು ಬದಲಾವಣೆ ಕಂಡರೂ ಆಚರಣೆಯನ್ನು ಉಳಿಸಿಬೆಳೆಸಿಕೊಂಡು ಮುನ್ನಡೆಯುತ್ತಿರುವುದು ಎದ್ದು ಕಾಣಿಸುತ್ತಿದೆ.
Recommended Video