ಮಹಿಳೆಗೆ ಅನುಕಂಪದ ನುಡಿಗಳು ಬೇಡ, ಗೌರವ ಬೇಕು
ನೀನು ಮಹಿಳೆಯರನ್ನು ಗೌರವಿಸು ಇಡೀ ಪ್ರಪಂಚ ನಿನ್ನನ್ನು ಗೌರವಿಸುತ್ತದೆ. ಮಹಿಳೆಯರಿಗೆ ಅನುಕಂಪದ ನುಡಿಗಳು ಬೇಡ. ಗೌರವ ಬೇಕು. ಪ್ರತಿಯೊಬ್ಬ ಮಹಿಳೆಯು ಪ್ರಪಂಚಕ್ಕೆ ತೆರೆದುಕೊಂಡಾಗ ಆಕೆ ಇನ್ನಷ್ಟು ಕಲಿಯಲು ಸಾಧ್ಯ ಬೆಳೆಯಲು ಸಾಧ್ಯ. ಈ ಮಾತುಗಳು ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಜನ ವಲಯದಲ್ಲಿ ಕೇಳಿ ಬಂದಂತಹವುಗಳು
ತಾಯಿ, ತಂಗಿ, ಅಕ್ಕ, ಚಿಕ್ಕಮ್ಮ, ಅಜ್ಜಿ ಹೀಗೆ ನಾನಾ ಪಾತ್ರಗಳನ್ನು ನಿರ್ವಹಿಸುತ್ತಾ ಸಂಬಂಧಗಳ ಸರಮಾಲೆಯನ್ನೇ ತೊಟ್ಟು ನಿಂತ ಮಹಿಳೆಯರು ಇದೀಗ ಜಗದಗಲ ತನ್ನ ಛಾಪನ್ನು ಮೂಡಿಸುತ್ತಿರುವುದು ಸ್ವಾಗತಾರ್ಹ. ಹಾಗೆಂದ ಮಾತ್ರಕ್ಕೆ ಆಕೆ ಎಲ್ಲಾ ಅಸಮಾನತೆ, ತಾರತಮ್ಯದಿಂದ ಮುಕ್ತಳೇ?
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ವಿಶೇಷ ವಿಡಿಯೋ ನೋಡಿ:
ಹಿಂದಿನ ಕಾಲಕ್ಕೆ ಹೋಲಿಸಿದರೆ ಆಧುನಿಕತೆಯಲ್ಲಿ ಮಹಿಳೆಯರು ದಿಟ್ಟ ಹೆಜ್ಜೆಯ ಪಯಣ ಆರಂಭಿಸಿದ್ದಾರೆ. ಆತ್ಮವಿಶ್ವಾಸದ ಮನಸ್ಸಿನೊಂದಿಗೆ ಸಾಧನೆಯ ಕಡೆ ಮುಖ ಮಾಡುತ್ತಿದ್ದಾರೆ. ನಯನಾಜೂಕು, ಅಚ್ಚುಕಟ್ಟುತನ, ತಾಳ್ಮೆ, ಸಹನೆ, ಕರುಣೆಯ ಸಾಕಾರ ಮೂರ್ತಿಯಾದ ಈಕೆಗೆ ಒಂದು ದಿನ ಮಾತ್ರ ಮೀಸಲಾದರೆ ಸಾಕೇ?[ತಮ್ಮ ಮುಖಾರವಿಂದ ಇಷ್ಟ ಪಡುವ ಎಲ್ಲರಿಗಾಗಿ ಈ ಲೇಖನ]
'ಒಬ್ಬ ಶಕ್ತಿಯುತ ಮಹಿಳೆಯು ಪ್ರತಿಯೊಬ್ಬರನ್ನು ಆಳವಾಗಿ ಪ್ರೀತಿಸುತ್ತಾಳೆ. ಎಲ್ಲರೊಂದಿಗೆ ಮುಕ್ತವಾಗಿ ಬೆರೆಯುತ್ತಾಳೆ. ಆಕೆ ನೋವುಗಳು ನಗುವಿನಲ್ಲಿಯೇ ಕಳೆದುಹೋಗುತ್ತವೆ. ಆಕೆಯೊಂದು ಆಧ್ಮಾತ್ಮಿಕ ಶಕ್ತಿ. ಮಹಿಳೆಯು ಇಡೀ ಜಗತ್ತಿನ ಅಮೂಲ್ಯ ಗಣಿ."
ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಹಲವು ವಿದ್ಯಾರ್ಥಿಗಳು, ಉದ್ಯೋಗಸ್ಥರು, ಶಿಕ್ಷಕರು ಹೀಗೆ ಅವರು ತಮ್ಮ ಅಭಿಪ್ರಾಯಗಳನ್ನು ನಮ್ಮ ಒನ್ ಇಂಡಿಯಾ ಕನ್ನಡದೊಂದಿಗೆ ಹಂಚಿಕೊಂಡಿದ್ದಾರೆ. ಬನ್ನಿ ವಿಶ್ವ ಮಹಿಳಾ ದಿನಾಚರಣೆ ಬಗ್ಗೆ ಏನೇನು ಹೇಳುತ್ತಾರೆ ನೋಡೋಣ.

ಸಾಫ್ಟ್ ವೇರ್ ಉದ್ಯಮಿ ಪಂಕಜಾ
ಮಹಿಳೆಯರಿಗೆ ಕೇವಲ ಒಂದು ದಿನವನ್ನು ಮೀಸಲಿಟ್ಟ ಮಾತ್ರಕ್ಕೆ ಅವಳ ತ್ಯಾಗ, ಶ್ರಮ ಜೀವನ ಸಾರ್ತಕತೆ ಪಡೆದುಕೊಳ್ಳುವುದಿಲ್ಲ. ಆದರೆ ಆಕೆ ಮಾಡುವ ಪ್ರತಿಯೊಂದು ಕಾರ್ಯಕ್ಕೆ ಒಂದು ಒಳ್ಳೆಯ ನಗುವಿನೊಂದಿಗೆ ಬೀಳ್ಕೊಟ್ಟಾಗ ಈ ದಿನ ನಿಜವಾಗಿಯೂ ಅಮೂಲ್ಯವಾದ ಅರ್ಥ ಪಡೆದುಕೊಳ್ಳುತ್ತದೆ. ಈಕೆ ನಿಜವಾಗಿಯೂ ಒಂದು ಸಮಾಜ, ಕುಟುಂಬದ ನಿಜವಾದ ನಿರ್ಮಾಣ ಕರ್ತೃ. ಮಹಿಳೆಯು ತಮ್ಮದೇ ಆದ್ಯತಾ ಕ್ಷೇತ್ರ ಆರಿಸಿಕೊಂಡು ಪ್ರಪಂಚಕ್ಕೆ ತೆರೆದುಕೊಳ್ಳಬೇಕು. ಮಹಿಳೆಗೆ ಅನುಕಂಪ ತೋರಿಸುವುದಕ್ಕಿಂತ ಗೌರವ ಕೊಡಿ ಎಂದು ಹೇಳುತ್ತಾರೆ ಸಾಫ್ಟ್ ವೇರ್ ಉದ್ಯಮಿ ಪಂಕಜಾ

ಪ್ರೌಢಶಾಲಾ ಶಿಕ್ಷಕಿ ಆಶಾ
ಮಹಿಳೆಯರು ಕೇವಲ ಅಡುಗೆ ಮನೆಗೆ ಮಾತ್ರ ಸೀಮಿತವಾಗಬಾರದು. ಆಕೆ ಮನೆಯಿಂದ ಹೊರಗೆ ಬರಬೇಕು. ನಾಲ್ಕು ಮಂದಿಯೊಂದಿಗೆ ಬೆರೆತು ತನ್ನದೇ ಆದ ಸಾಮರ್ಥ್ಯ ಕಂಡುಕೊಳ್ಳುವತ್ತಾ ಹೆಜ್ಜೆ ಹಾಕಬೇಕು. ಜಗದಗಲ ಇರುವ ನಾನಾ ಕ್ಷೇತ್ರಗಳಲ್ಲಿ ಬೆರೆತು ಕಲಿತು ಹೆಜ್ಜೆಹೆಜ್ಜೆಗೂ ಸಾಧನೆಯ ಗರಿ ಮೂಡಿಸಬೇಕು.

ಸಿಎ ವಿದ್ಯಾರ್ಥಿನಿ ಹರ್ಷಿತಾ ಗೌಡ
ನಮಗೆ ನ್ಯಾಯ ಬೇಕು. ಕೇವಲ ಸಮಾನತೆಯಲ್ಲ. ಸಮಾನತೆಗಾಗಿ ಪುರುಷರೊಂದಿಗೆ ಹೊಡೆದಾಡುವ ಅವಶ್ಯಕತೆ ಇಲ್ಲ. ಏಕೆಂದರೆ ದೇವರು ನಮಗೆ ಸಮಾನತೆಗಿಂತ ನಮಗೆ ನಮ್ಮದೇ ಆದ ಸಾಮರ್ಥ್ಯ ನೀಡಿದ್ದಾನೆ. ನಮಗೆ ಸ್ವಾತಂತ್ರ್ಯ ಬೇಕು. ನಮಗೆ ನಮಗೆ ನಮ್ಮದೇ ಆದ ಮಿತಿಗಳ ಅರಿವಿದೆ. ಮಹಿಳೆಯರು ಕೇವಲ ಸೌಂದರ್ಯ ಪ್ರಜ್ಞೆಯ ಕಡೆ ಮಾತ್ರ ಗಮನ ಹರಿಸುವುದಿಲ್ಲ. ತಮ್ಮ ಗುರಿಗಳ ಕಡೆಗೂ ತಮ್ಮ ಒಲವನ್ನು ತೋರುತ್ತಿದ್ದಾರೆ ಎಂಬುದನ್ನು ಎಲ್ಲರೂ ತಿಳಿದುಕೊಳ್ಳಬೇಕು ಎನ್ನುತ್ತಾರೆ ಹರ್ಷಿತಾ.

ಎಂಜಿನಿಯರ್ ವಿದ್ಯಾರ್ಥಿನಿ ಕೃತಿಕೀರ್ತಿ
ಇಂದಿನ ದಿನಗಳಲ್ಲಿ ಮಹಿಳಾ ಶೋಷಣೆ ವಿರುದ್ಧ ದನಿಗಳು ಕೇಳಿ ಬರುತ್ತಿರುವುದು ಬಹಳ ಸಂತೋಷದ ವಿಷಯ. ನಿಜವಾಗಿಯೂ ಈ ಪ್ರಯತ್ನಗಳು ಮುಂದುವರೆದರೆ ಮಹಿಳೆಯ ನಿಜವಾದ ಶಕ್ತಿಯು ಅರಿವಿಗೆ ಬರುತ್ತದೆ. ಮಹಿಳಾ ದಿನ ಆಚರಣೆ ನಿಜವಾಗಿಯೂ ಸಂತೋಷ ತರುತ್ತದೆ. ಹಲವಾರು ತಾರತಮ್ಯಗಳನ್ನು ತೊಡೆದುಹಾಕುವತ್ತಾ ವಿಶ್ವ ಮಹಿಳಾ ದಿನವೂ ದಾರಿ ದೀಪವಾಗಲಿದೆ ಎಂದು ಹೇಳುತ್ತಾರೆ.

ಬಿ.ಕಾಂ ವಿದ್ಯಾರ್ಥಿ ಸಚಿನ್
ಮಹಿಳೆ ಕೇವಲ ಹೆಣ್ಣಲ್ಲ. ಆಕೆ ದೇವರು. ಮಹಿಳೆಯನ್ನು ಗೌರವಿಸಿದಾಗ ಇಡೀ ಸಮಾಜ ನಮ್ಮನ್ನು ಗೌರವಿಸುತ್ತದೆ ಎಂದು ಸರಳ ಸಜ್ಜನಿಕೆ ಉತ್ತರ ನೀಡುತ್ತಾರೆ ಎಟಿಎನ್ ಎನ್ ಸಿಸಿ ಕಾಲೇಜಿನ ಬಿಕಾಂ ವಿದ್ಯಾರ್ಥಿ ಸಚಿನ್ ಜೈನ್.

ಎಬಿವಿಪಿ ಕಾರ್ಯಕರ್ತ ಮಂಜುನಾಥ್ ಬಸವರಾಜಪ್ಪ
ಮಹಿಳೆ ಮನಸ್ಸು ಮಾಡಿದರೆ ಆಕೆ ಯಾವುದೇ ಪಾತ್ರಗಳನ್ನು ಸಲೀಸಾಗಿ ನಿಭಾಯಿಸಬಲ್ಲಳು. ಇಂದು ಮಹಿಳೆಗಾಗಿ ಈ ದಿನ ಮೀಸಲಿಟ್ಟಿರುವುದು ಸಂತೋಷದಾಯಕ. ಪ್ರತಿದಿನವೂ ಆಕೆಯೂ ತನ್ನದೇ ವಿಶೇಷತೆಗಳೊಂದಿಗೆ ಇನ್ನಷ್ಟು ಸಾಧನೆ ಮಾಡಲಿ ಎನ್ನುತ್ತಾರೆ ಮಂಜುನಾಥ್ ಬಸವರಾಜಪ್ಪ.












Click it and Unblock the Notifications