ವಿಸ್ಮಯ : ಗಣಪನ ನೋಡಲು ಬಂದ ಬೀನ್ಸ್ ನಾಗಪ್ಪ!
ಸ್ನೇಹಿತರೆ, ಈ ವರ್ಷ ಗಣಪತಿ ಹಬ್ಬ ಹೇಗಿತ್ತು? ಎಂಥ ಗಣೇಶನ ಮನೆಗೆ ಕರೆಸಿಕೊಂಡಿದ್ರಿ? ಮಣ್ಣಿನ ಗಣಪತಿಯಾ, ಪ್ಲಾಸ್ಟರ್ ಆಫ್ ಪ್ಯಾರಿಸ್ನಿಂದ ತಯಾರಿಸಿದ್ದಾ? ಗಣೇಶನ ಹಬ್ಬ ಮುಗಿಯಿತಲ್ಲ, ಅದರ ಬಗ್ಗೆ ಏನು ಮಾತನಾಡುವುದು ಅಂತೀರಾ? ಸರಿಬಿಡಿ. ನಾವಂತೂ ಈ ಬಾರಿ ನೈಸರ್ಗಿಕ ಬಣ್ಣದಿಂದ ಅಲಂಕೃತಗೊಂಡಿದ್ದ ಮುದ್ದಾದ ವಿಘ್ನ ವಿನಾಯಕರನ್ನೇ ತಂದಿದ್ದೆವು.
ಒಂದೂವರೆ ಗೇಣಿನಷ್ಟು ಇದ್ದ ಗಣಪ ಎಷ್ಟು ಮುದ್ದಾಗಿದ್ದ ಅಂತೀರಾ? ನೋಡಲು ಕಣ್ಣುಗಳೆರಡು ಸಾಲದಾಗಿತ್ತು, ಹೊಗಳಲು ಪದಗಳೇ ಹೊರಳುತ್ತಿಲ್ಲ. ಹಬ್ಬ ಅಚ್ಚಕಟ್ಟಾಗಿಯೇ ಇತ್ತು. ಗಂಡಸರಿಗೆಲ್ಲ ಮನೆಯನ್ನು ತಳಿರು ತೋರಣಗಳಿಂದ ಅಲಂಕರಿಸಿ ಅಂದಗೊಳಿಸಿದ್ದರೆ, ಹೆಂಗಸರು ಪೂಜೆಗೆ ಸಹಕರಿಸಿ, ಗಣಪನ ಬಣ್ಣಿಸುವ ಹಾಡುಗಳನ್ನು ಹಾಡಿ, ರುಚಿಕಟ್ಟಾಗಿ ಕಡುಬು, ಮೋದಕ ಮತ್ತಿತರ ಖಾದ್ಯಗಳಿದ್ದ ಮೃಷ್ಟಾನ್ನ ಭೋಜನ ತಯಾರಿಸಿ ಬಡಿಸುವಲ್ಲಿಯೇ ತೃಪ್ತಿಪಟ್ಟುಕೊಂಡೆವು.
ಇದು ಎಲ್ಲರ ಮನೆಯಲ್ಲಿಯ ನಡೆಯುವ ವಿದ್ಯಮಾನವೇ. ಇದರಲ್ಲಿ ಅಂತಹ ವಿಶೇಷವೇನೂ ಇಲ್ಲವೆನ್ನಿ. ಆದರೆ, ನಮ್ಮ ಮನೆಯಲ್ಲಿ ಗಣೇಶ ಚತುರ್ಥಿಯಂದು ವಿಶೇಷ ಸಂಗತಿಯೊಂದು ಘಟಿಸಿತು. ಅನ್ನ, ಕಟ್ಟಿನ ಸಾರು, ಕಡುಬು, ಆಂಬೋಡೆ, ಮೋದಕ, ಕುಚ್ಚಿದ ಕಡುಬು, ಚಟ್ನಿ, ಪಾಯಸದ ಜೊತೆಗೆ ಎರಡು ಬಗೆಯ ಪಲ್ಯಗಳನ್ನೂ ಮಾಡಲಾಗಿತ್ತು. ಅದರಲ್ಲಿ ಒಂದು ಬೀನ್ಸ್ ಪಲ್ಯ. ಇದರಲ್ಲೇನು ವಿಶೇಷವಿದೆ ಅಂತೀರಾ? ಸ್ವಲ್ಪ ತಡಕೊಳ್ಳಿ ಸ್ವಾಮಿ.
ಇಲ್ಲೇ ಇರುವುದು ವಿಶೇಷ. ಹದಿನೈದಿಪ್ಪತ್ತು ಬೀನ್ಸ್ಗಳನ್ನು ಒಟ್ಟುಗೂಡಿಸಿ ಇನ್ನೇನು ಈಳಿಗೆಮಣೆಯ ಚೂಪಾದ ಈಳಿಗೆಯಿಂದ ಕತ್ತರಿಸಬೇಕು, ಅಷ್ಟರಲ್ಲಿಯೇ ಥಟ್ಟನೆ ಎಲ್ಲ ಬೀನ್ಸ್ಗಳಿಗಿಂತ ಭಿನ್ನವಾದ ಬೀನ್ಸೊಂದು ಕಣ್ಣಿಗೆ ಬಿದ್ದಿತು. ನನ್ನ ಕಣ್ಣನ್ನು ನನಗೇ ನಂಬಲಾಗಲಿಲ್ಲ. ಆ ಬೀನ್ಸ್ ಥೇಟ್ ನಾಗರಹಾವಿನ ರೂಪದಲ್ಲಿತ್ತು. ಚಿತ್ರ ನೋಡಿದರೆ ನಿಮಗೇ ಗೊತ್ತಾಗುತ್ತದೆ. ನನ್ನ ಕಣ್ಣುಗಳನ್ನು ನನಗೇ ನಂಬಲಾಗಲಿಲ್ಲ. ಕಣ್ಣಿಗೆ ಸುಲೋಚನ ಹಾಕಿಕೊಂಡಿದ್ದರಿಂದ ಈ ವಿಸ್ಮಯ ನನ್ನ ಕಣ್ಣಿಗೆ ಬಿದ್ದಿತು.
ಕೂಡಲೆ ಮನೆಯವರನ್ನೆಲ್ಲ ಕೂಗಿ ಕರೆದೆ. ಏನೋ ಆಯಿತೆಂದು ಎಲ್ಲರೂ ತಮ್ಮ ಕೆಲಸಗಳನ್ನೆಲ್ಲ ಅಲ್ಲಿಯೇ ಬಿಟ್ಟು ಧಡಪಡಿಸಿ ಬಂದರು. ಗಣೇಶನ ಹಬ್ಬದಂದು ಗಣಪನ ಹೊಟ್ಟೆಯನ್ನು ಅಲಂಕರಿಸಿರುವ ನಾಗರಹಾವು ಸಾಕ್ಷಾತ್ ನಮ್ಮನೆಗೆ ತರಕಾರಿಯ ರೂಪದಲ್ಲಿ ಬರುವುದೆಂದರೇನು? ಆ ಬೀನ್ಸ್ ನಾಗರ ಹಾವಿನ ಉದ್ದ ನಮ್ಮ ಗಜಾನನನ ಆಕಾರಕ್ಕೆ ಹೇಳಿ ಮಾಡಿಸಿದಂತಿತ್ತು. ಎಲ್ಲರೂ ಒಂದು ಕ್ಷಣ ಈ ವಿಸ್ಮಯಕ್ಕೆ ತಲೆಬಾಗಿ ಗಣೇಶನನ್ನು ಭಕ್ತಿಯಿಂದ ನಮಸ್ಕರಿಸಿದರು. ಮುಂದೇನಾಯಿತು?

ಇದೇನು ಪವಾಡವೋ, ಪ್ರಕೃತಿಯ ವಿಸ್ಮಯವೋ?
ಗಣೇಶ ಹಾಲು ಕುಡಿದಿದ್ದನ್ನು ನಾವು ಕೇಳಿದ್ದೇವೆ. ಎಲ್ಲರಿಂದ ಪ್ರಥಮ ವಂದನೆ ಸ್ವೀಕರಿಸುವ ಗಣೇಶ ಪಪ್ಪಾಯದಲ್ಲಿ, ಗಿಡದ ಬೇರಿನಲ್ಲಿ, ಕಲ್ಲಿನ ಬಂಡೆಯಲ್ಲಿ, ಹಿಮಾಲಯದ ಬಂಡೆಯ ಮೇಲೆ ಒಡಮೂಡಿದ್ದಂತೆ ಕಂಡಿದ್ದನ್ನು ಕೇಳಿದ್ದೇವೆ. ಹಾಗೆಯೆ, ಸಾಯಿಬಾಬಾ ಕಣ್ಣು ತೆರೆದಿದ್ದು ಕೂಡ ಕೇಳಿದ್ದೇವೆ. ಇದೇನು ಪ್ರಕೃತಿಯ ವಿಸ್ಮಯವೋ, ಪವಾಡವೋ ನನಗಂತೂ ತಿಳಿದಿಲ್ಲ. ನನಗಂತೂ ಪವಾಡಗಳಲ್ಲಿ ನಂಬಿಕೆಯೇ ಇಲ್ಲ. ನಾಗರಹಾವು ತರಕಾರಿಯ ರೂಪದಲ್ಲಿ ಬಂದಿದ್ದು ಪ್ರಕೃತಿಯ ವೈಚಿತ್ರ್ಯವೇ ಇರಬೇಕೆಂದು ತಿಳಿದೆವು.

ನಾವು ಮಾಡಿದ ಅತ್ಯುತ್ತಮ ಕೆಲಸವೆಂದರೆ...
ಇಂಥ ವೈಚಿತ್ರ್ಯವನ್ನು ಕಂಡಕೂಡಲೆ ನಾವು ಮಾಡಿದ ಅತ್ಯುತ್ತಮ ಕೆಲಸವೆಂದರೆ, ಅಕ್ಕಪಕ್ಕದವರಿಗೆ, ನೆಂಟರಿಷ್ಟರಿಗೆ, ಸ್ನೇಹಿತರಿಗೆ, ಸಾರ್ವಜನಿಕರಿಗೆ ಈ ವಿಸ್ಮಯವನ್ನು ತೋರಿಸದಿರುವುದು. ಅವರನ್ನೆಲ್ಲಾ ಕರೆಸಿದ್ದರೆ ನಮ್ಮ ಗಣೇಶ ಚತುರ್ಥಿಯ ಸಂಭ್ರಮವೇ ಮಂಗಮಾಯವಾಗುತ್ತಿತ್ತು. ಅದನ್ನು ಕವರ್ ಮಾಡಲೆಂದು ಮೀಡಿಯಾದವರು ಬರುವುದು, ಅವರಿಗೆ ಸಂದರ್ಶನ ಕೊಡುವುದು, ಜನರಲ್ಲೆಲ್ಲ ಮೂಢನಂಬಿಕೆಯ ಬೀಜ ಬಿತ್ತುವುದು ನಮಗೆಲ್ಲ ಬೇಕಾಗಿರಲಿಲ್ಲ. ಸೋ, ಬೀನ್ಸ್ ನಾಗಪ್ಪನನ್ನು ನಾವಷ್ಟೇ ನೋಡಿ ತೃಪ್ತಿಪಟ್ಟುಕೊಂಡೆವು.

ಬೀನ್ಸ್ ನಾಗಪ್ಪನ ಜೊತೆ ಬೆಳ್ಳಿ ನಾಗಪ್ಪನ ಸಂಭಾಷಣೆ
ಅದ್ಹೇಗೆ ಇಂಥ ನಾಗರಬೀನ್ಸ್ ಸೃಷ್ಟಿಯಾಯಿತೋ ಆ ದೇವರೇ ಬಲ್ಲ. ಹೆಡೆಯಿಂದ ಬಾಲದವರೆಗೂ ಥೇಟ್ ನಾಗರಹಾವು. ಹೆಡೆಯೆತ್ತಿ ಆಡುತ್ತಿರುವಂತೆ ಅದರ ಮುಖ, ಇನ್ನೊಂದು ತುದಿಯಲ್ಲಿ ಪಕ್ಕಾ ಹಾವಿನ ಬಾಲದಂತೆ ಚೂಪಾಗಿತ್ತು. ಕಣ್ಣು, ಎರಡು ನಾಲಿಗೆ ಇಲ್ಲ ಎನ್ನುವುದನ್ನು ಬಿಟ್ಟರೆ ಇದು ನಾಗರಹಾವಿನಂತೆ ಇಲ್ಲ ಎಂದು ಯಾರೂ ಅಲ್ಲಗಳೆಯಲಾರರು. ಇನ್ನು ಬೆಳ್ಳಿ ನಾಗರ ಮೂರ್ತಿಯ ಮುಂದೆ ಇಟ್ಟಾಗ, ಎರಡೂ ಸಂಭಾಷಿಸುತ್ತಿವೆಯೇನೋ ಎಂಬಂತಿತ್ತು.

ಆ ಬೀನ್ಸ್ ನಾಗಪ್ಪನ ಕಥೆ ಮುಂದೇನಾಯಿತು?
ಆ ಬೀನ್ಸ್ ನಾಗಪ್ಪನನ್ನು ಮರುದಿನ ತುಂಡುತುಂಡಾಗಿ ಕತ್ತರಿಸಿ ಪಲ್ಯ ಮಾಡಿ ತಿಂದೆವು ಎಂದು ನೀವಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪು ತಪ್ಪು ತಪ್ಪು. ನಮ್ಮ ಗಣಪನಿಗೆ ಹೇಳಿ ಮಾಡಿಸಿದಂತಿದ್ದ, ಆ ಗಣಪನಿಗಾಗಿಯೇ ನಮ್ಮ ಮನೆಗೆ ಆಗಮಿಸಿದ್ದ ಬೀನ್ಸ್ ನಾಗಪ್ಪನನ್ನು ನಾವು ಶೋಕೇಸಿನಲ್ಲಿ ಹಾಗೆಯೇ ತೆಗೆದಿಟ್ಟಿದ್ದೇವೆ. ಎಷ್ಟು ದಿನ ಇರುತ್ತದೋ ಇರಲಿ. ಮುಂದೆ ಯಾರಿಗಾದರೂ ತೋರಿಸಲು ಬರುತ್ತದೆಂದು ಫೋಟೋಗಳನ್ನು ಸಾಕಷ್ಟು ತೆಗೆದಿದ್ದೇವೆ.

ಇಂಥ ನಾಗಪ್ಪ ಸಿಕ್ಕರೆ ನೀವೇನು ಮಾಡುತ್ತಿದ್ದಿರಿ?
ಎಲ್ಲರಿಗೂ ಎಲ್ಲ ಸಂದರ್ಭದಲ್ಲಿಯೂ ಇಂಥ ವಿಸ್ಮಯದ ಅನುಭವ ಆಗಲು ಸಾಧ್ಯವಿಲ್ಲ. ಇದು ನಮಗೆ ಸಿಕ್ಕಿದ್ದು ನಮ್ಮ ಅದೃಷ್ಟವೆಂದೇ ಭಾವಿಸುತ್ತೇವೆ. ಅದೇನೇ ಇರಲಿ, ಇಂಥ ನಾಗಪ್ಪ ಸಿಕ್ಕಿದ್ದರೆ ನೀವೇನು ಮಾಡುತ್ತಿದ್ದಿರಿ? ಪವಾಡ ಎಂದು ಜನರನ್ನು ಸೇರಿಸುತ್ತಿದ್ದಿರಾ, ಅಥವಾ ಕೂಡಲೆ ಪಲ್ಯ ಮಾಡಿಕೊಂಡು ಹೊಟ್ಟೆಗೆ ಹಾಕಿಕೊಳ್ಳುತ್ತಿದ್ದಿರಾ? ಕಾಮೆಂಟ್ ವಿಭಾಗದಲ್ಲಿ ಬರೆದು ತಿಳಿಸಿ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications