ನಾವು ಕನ್ನಡಿಗರು ದೀಪಾವಳಿ ಆಚರಿಸೋಣ, ದಿವಾಳಿಯಾಗೋದು ಬೇಡ!
ದೀಪಾವಳಿ... ಆ ಪದದಲ್ಲಿ ಒಂದು ರೀತಿಯ ಆಪ್ಯಾಯಮಾನತೆಯಿದೆ. ಸಾಲು ಸಾಲು ದೀಪದ ಮೂಲಕ ನಿಶೆಯೆಂಬ ಭಯವನ್ನೆಲ್ಲ ದೂರ, ಬಹುದೂರ ಕಳಿಸುವ ಶಕ್ತಿಯಿದೆ. ದಕ್ಷಿಣ ಭಾರತದಲ್ಲಿ ಅ.18 ರಿಂದ ಅಧಿಕೃತವಾಗಿ ದೀಪಾವಳಿಗೆ ಚಾಲನೆ. ಅದಕ್ಕೆಂದೇ ಈಗಾಗಲೇ ಶುಭಾಶಯಗಳ ವಿನಿಮಯ ಶುರುವಾಗಿದೆ.
ಜ್ಞಾನದ ಬೆಳಕಿನ ಉತ್ಸವ ದೀಪಾವಳಿ ಶುಭತರಲಿ
"ಹ್ಯಾಪಿ ದಿವಾಳಿ" ಎಂದು ಯಾರಾದರೂ ವಿಷ್ ಮಾಡಿದರೆ ದೀಪಾವಳಿಯ ಬೆಳಕು ಮಂಕಾದಂತನ್ನಿಸುತ್ತದೆ. 'ದೀಪಾವಳಿ' ಎಂಬ ಸುಂದರ ಅಕ್ಷರಪುಂಜವಿರುವಾಗ ನಾವ್ಯಾಕೆ ಮತ್ತೊಬ್ಬರಿಂದ ದಿವಾಳಿ ಎಂಬ ಪದವನ್ನು ಎರವಲು ಪಡೆಯಬೇಕು? ಆ ಪದದೊಂದಿಗೆ ನಮ್ಮತನವನ್ನೂ ದಿವಾಳಿ ಮಾಡಿಕೊಳ್ಳಬೇಕು?
ದಿವಾಳಿ ಬೇಡ ದೀಪಾವಳಿ ಬೇಕು ಎಂದು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲೂ ಚರ್ಚೆ ನಡೆಯುತ್ತಿದೆ. ದಿವಾಳಿ ಎಂಬುದು ಪಂಜಾಬಿ ಪದ ಅದೂ ಭಾರತದ ಒಂದು ಭಾಷೆಯೇ ಆಗಿರುವಾಗ ಆ ಪದ ಬಳಸಿದರೆ ತಪ್ಪೇನು ಎಂಬುದು ಹಲವರ ಪ್ರಶ್ನೆ. ಮತ್ತಷ್ಟು ಜನ, ದೀಪಾವಳಿಯೋ, ದಿವಾಳಿಯೋ ಹಬ್ಬದ ಹೆಸರು ಅದು ಅಷ್ಟೇ. ಸಂಭ್ರಮ ಪಡಬೇಕಾದ್ದು ಮುಖ್ಯ ಎಂದಿದ್ದಾರೆ. ಈ ಎಲ್ಲದರ ಹೊರತಾಗಿಯೂ ಕನ್ನಡದಲ್ಲಿ ದಿವಾಳಿ ಎಂಬ ಪದಕ್ಕಿರುವ ಅರ್ಥವೇ ಬೇರೆ. ದರಿದ್ರ, ಭಿಕಾರಿ, ನಿರ್ಗತಿಕ ಎಂಬ ಅರ್ಥವನ್ನು ಕೊಡುವ ಇದೇ ಪದವನ್ನು ಬಳಸಬೇಕಾದ ಅನಿವಾರ್ಯತೆಯೇನಾದರೂ ನಮಗಿದೆಯೇ? ಯಾರೋ ಆ ಪದ ಬಳಸುತ್ತಾರೆಂದು ನಾವು ಅಸ್ಮಿತೆ ಮರೆಯಬೇಕೆ ಎಂಬುದು ಮತ್ತಷ್ಟು ಜನರ ಪ್ರಶ್ನೆ.
ಬೆಳಕಿನ ಹಬ್ಬ ದೀಪಾವಳಿ ಹೀಗಿದ್ದರೆ ಚೆನ್ನ: 10 ಸಲಹೆಗಳು
ಒಟ್ಟಿನಲ್ಲಿ ಬೆಳಕಿನ ಹಬ್ಬ ದೀಪಾವಳಿಯನ್ನು ನಮ್ಮತನ ಮರೆಯದೇ ಆಚರಿಸೋಣ ಎಂಬುದು ನಮ್ಮ ಕಳಕಳಿ. ಸರ್ವರಿಗೂ ದೀಪಾವಳಿಯ ಶುಭಾಶಯಗಳು.