ಮಕ್ಕಳ ದಸರೆಯಲ್ಲಿ ಚಿಣ್ಣರ ಕಲರವದ ಮೇಳ
ಮೈಸೂರು, ಸೆಪ್ಟೆಂಬರ್.22: ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿ ವತಿಯಿಂದ ನಗರದ ಜಗನ್ಮೋಹನ ಅರಮನೆಯಲ್ಲಿ ಮಕ್ಕಳ ದಸರಾಕ್ಕೆ ಚಾಲನೆ ನೀಡಲಾಯಿತು. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಪಾರಿವಾಳಗಳನ್ನು ಹಾರಿಬಿಡುವ ಮೂಲಕ ಮಕ್ಕಳ ದಸರಾಗೆ ಚಾಲನೆ ನೀಡಿದರು. ಬಳಿಕ ವೇದಿಕೆಯ ಕಾರ್ಯಕ್ರಮವನ್ನು ದೀಪಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು.
ಬಳಿಕ ಮಾತನಾಡಿದ ತನ್ವೀರ್ ಸೇಠ್, 'ಮಕ್ಕಳ ದಸರಾ ಒಂದು ವಿಶಿಷ್ಟ ಕಾರ್ಯಕ್ರಮ. ಶಿಕ್ಷಣ ಕಲಿತು ವಿದ್ಯಾರ್ಥಿಗಳು ಸಾಧನೆಯತ್ತ ಸಾಗಬೇಕು. ತಂದೆ ತಾಯಿಗಳನ್ನು ಖುಷಿ ಪಡಿಸೋದಕ್ಕೆ ಮಾತ್ರ ಸಾಧನೆ ಮಾಡಬಾರದು. ಸಮುದಾಯ ನಿಮ್ಮತ್ತ ನೋಡುವಂತೆ ಸಾಧನೆ ಮಾಡಬೇಕು .ದಸರೆಗೆ ಆಗಮಿಸಿದ ಮಾವುತರು ಹಾಗೂ ಕಾವಾಡಿಗರ ಮಕ್ಕಳು ಕೂಡ ಅವರ ತಾಯಿ ತಂದೆ ಜೊತೆ ಅರಮನೆಗೆ ಆಗಮಿಸಿದ್ದಾರೆ ಅವರು ಕೂಡ ಈ ಬಾರಿ ಸಾಂಸ್ಕೃತಿಕ ನೃತ್ಯ ಮಾಡುತ್ತಿದ್ದಾರೆ. ದಸರಾ ಒಂದು ನಗರಕ್ಕೆ ಸೀಮಿತ ಅಲ್ಲ.ಇದು ನಾಡ ಹಬ್ಬ ಜನರ ಹಬ್ಬ' ಎಂದು ತಿಳಿಸಿದರಲ್ಲದೇ, ನೆರೆದಿದ್ದ ಮಕ್ಕಳಿಗೆ ದಸರಾ ಹಬ್ಬಕ್ಕೆ ಶುಭಾಶಯ ಕೋರಿದರು.

ಡ್ರಾಮ ಜೂನಿಯರ್ಸ್ ಖ್ಯಾತಿಯ ಮಹೇಂದ್ರ, ಆರಿಷಿ, ಅಮಿತ್ ಹಾಗೂ ಸರಿಗಮಪ ಜೂನಿಯರ್ಸ್ ನಲ್ಲಿ ಪಾಲ್ಗೊಂಡಿದ್ದ ವೈಷ್ಣವಿ, ಕಿರುತೆರೆ ಬಾಲನಟಿ ಕಿನ್ನರಿ ಖ್ಯಾತಿಯ ದಿಶಾ ಮುಂತಾದವರು ಮಕ್ಕಳ ದಸರಾದಲ್ಲಿ ಪ್ರಮುಖ ಆಕರ್ಷಣೆಯಾಗಿದ್ದರು. ಜಗನ್ಮೋಹನ ಅರಮನೆಯ ತುಂಬೆಲ್ಲ ಚಿಣ್ಣರ ಕಲರವ ಕೇಳಿಬಂದಿತ್ತು.
ದಸರಾ ವೈಭವ 2017: ಸರಳ ದಸರಾದ ಅಪರೂಪದ ಚಿತ್ರಗಳು
ಸರಿಗಮಪ ಖ್ಯಾತಿಯ ವೈಷ್ಣವಿ ಚೌಕ ಚಿತ್ರದ ಐ ಲವ್ ಯು ಅಪ್ಪ ಅಂತ ಹಾಡು ಹಾಡಿ ರಂಜಿಸಿದರು. ಡ್ರಾಮಾ ಜೂನಿಯರ್ ನ ಮಹೇಂದ್ರ ಖ್ಯಾತ ಚಿತ್ರ ನಟರ ಡೈಲಾಗ್ ಗಳನ್ನು ಹೇಳಿದರು. ವಾಗ್ದೇವಿ ಸಂಗೀತ ಶಾಲಾ ಮಕ್ಕಳಿಂದ ಸಮೂಹ ಗಾಯನ, ವಿವಿಧ ವೇಷ ಭೂಷಣ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಹಿರಿಯ ಪ್ರಾಥಮಿಕ ಶಾಲಾ ವಿಭಾಗದ ಮಕ್ಕಳಿಂದ ಸಮೂಹ ನೃತ್ಯ ನಡೆಯಿತು.

ಅರಮನೆ ಆವರಣದ ಟೆಂಟ್ ಶಾಲೆಯ ಮಾವುತ ಹಾಗೂ ಕಾವಾಡಿ ಮಕ್ಕಳಿಂದ ಕಿಂದರ ಜೋಗಿ ನಾಟಕ ಮತ್ತು ಸಮೂಹ ನೃತ್ಯ , ಏಕಪಾತ್ರಾಭಿನಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದಿಂದ, ಪ್ರೌಢಶಾಲಾ ವಿಭಾಗದವರಿಂದ, ಸಮೂಹ ನೃತ್ಯ ಕಾರ್ಯಕ್ರಮ ಜರುಗಿದವು. ಎರಡು ದಿಗಳ ಕಾಲ ನಡೆಯಲಿರುವ ಮಕ್ಕಳ ದಸರಾ ಕಾರ್ಯಕ್ರಮದಲ್ಲಿ ಚಿತ್ರಕಲೆ, ವಿವಿಧ ವೇಷಭೂಷಣ ಸ್ಪರ್ಧೆ, ಸಾಮೂಹಿಕ ನೃತ್ಯ, ಏಕಪಾತ್ರಾಭಿನಯ,ನಾಟಕ ಸ್ಪರ್ಧೆ, ಭರತ ನಾಟ್ಯ, ಮತ್ತಿತರ ಕಾರ್ಯಕ್ರಮಗಳು ನಡೆಯಲಿವೆ.












Click it and Unblock the Notifications