ದಸರಾ ಎಂದರೆ ಮೈಸೂರು ಸೂಜಿಗಲ್ಲು
ಶರದ್ ಋತುವಿಲಾಸ ; ತ್ರಿಮಾತೆಯರ ಆರಾಧನೆ
ಮೈಸೂರು ಮಹಾರಾಜರು ತಮ್ಮ ಮನೆದೇವರಾದ ಚಾಮುಂಡಾಂಬಿಕೆಯ ಆರಾಧನೆಯನ್ನೇ ಪ್ರಧಾನವಾಗಿಟ್ಟುಕೊಂಡು ತ್ರಿಮಾತೆಯರಾದ ಸರಸ್ವತಿ, ಲಕ್ಷ್ಮೀ ಹಾಗೂ ಲಲಿತೆಯರನ್ನು ಪೂಜಿಸಿ, ಆರಾಧಿಸಿ, ಉತ್ಸವಗಳನ್ನೂ ನಡೆಸುತ್ತಾ ಬಂದಿದ್ದರು. ಇಂದು ರಾಜರ ಆಳ್ವಿಕೆ ಇಲ್ಲದಿದ್ದರೂ ಮೈಸೂರು ರಾಜ ಮನೆತನದವರು ಖಾಸಗಿಯಾಗಿ ನವರಾತ್ರಿ ಉತ್ಸವವವನ್ನು ನಡೆಸಿದರೆ, ಕರ್ನಾಟಕ ಸರ್ಕಾರ ಇದನ್ನು ನಾಡಹಬ್ಬವಾಗಿ ಆಚರಿಸುತ್ತದೆ.
ಆಶ್ವಯುಜ ಮಾಸದ ಮೊದಲ ದಿನದಿಂದ ದಶಮಿಯವರೆಗೆ ಶರದ್ ಋತುವಿನಲ್ಲಿ ಆಚರಿಸುವ ಈ ಹಬ್ಬ ಶಕ್ತಿ ಪೂಜೆಯ ಸಂಕೇತ. ಈ ದಿನಗಳಲ್ಲಿ ದುರ್ಗೆಯ ವಿವಿಧ ರೂಪಗಳನ್ನು ಒಂಬತ್ತು ದಿನವೂ ಪೂಜಿಸಿ, ನವಮಿಯ ದಿನ ಮುಕ್ತಾಯ ಗೊಳಿಸುತ್ತಾರೆ. ಈ ಒಂಬತ್ತು ದಿನಗಳಲ್ಲಿ ಕಾಳರಾತ್ರಿ, ಸರಸ್ವತಿ ಆವಾಹನೆ, ಆಯುಧ ಪೂಜೆ, ಗಜಾಶ್ವಾದಿ ಪೂಜೆ, ಅಮಲು ದೇವತಾ ಪೂಜೆಗಳನ್ನು ಆಯಾ ದಿನಗಳಂದೇ ನಡೆಸಲಾಗುತ್ತದೆ.
ಕಂಕಣ : ದುಷ್ಟ ಶಿಕ್ಷಣ, ಶಿಷ್ಟ ರಕ್ಷಣೆಗಾಗಿ ಆಶ್ವಯುಜ ಮಾಸದ ಮೊದಲನೇ ದಿನವೇ ಮಹಾರಾಜ ದಂಪತಿಗಳು ಮಂಗಳಸ್ನಾನ ಮಾಡಿ ನವರಾತ್ರಿ ವ್ರತಕ್ಕಾಗಿ ಕಂಕಣ ಧರಿಸಿ, ಮಹಾ ಗಣಪತಿಯ ಪೂಜೆಯಾಂದಿಗೆ ಆರಂಭಿಸಿ ನವಗ್ರಹ, ಇಂದ್ರಾದಿ ಅಷ್ಟ ದಿಕ್ ಪಾಲಕರನ್ನೂ ಪ್ರತ್ಯೇಕ ಕಳಶಗಳಲ್ಲಿ ಆವಾಹನೆ ಮಾಡಿ ಪೂಜಿಸುತ್ತಿದ್ದರು. ಆನಂತರ ಪುರಜನರ ಸಮ್ಮುಖದಲ್ಲಿ ರತ್ನ ಸಿಂಹಾಸನಾರೋಹಣ ಮಾಡುತ್ತಿದ್ದರು.
ಜನರಿಗೆ ಮನರಂಜನೆ ದೊರಕಿಸಿಕೊಡುವ ಸಲುವಾಗಿ ಹಾಗೂ ನಾಡಿನ ಪ್ರತಿಭಾವಂತರನ್ನು ಪುರಸ್ಕರಿಸಿ, ಪ್ರೋತ್ಸಾಹಿಸಲು ಕವಿಗೋಷ್ಠಿ, ಸಂಗೀತೋತ್ಸವಗಳು ಅರಮನೆಯಲ್ಲಿ ನಡೆಯುತ್ತಿದ್ದವು. ಇಂದೂ ಸರಕಾರ ಆ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದೆ. ದಸರೆಯ ಸಂದರ್ಭದಲ್ಲಿ ಮೈಸೂರು ಹಾಗೂ ಮೈಸೂರು ರಾಜ್ಯದ ಎಲ್ಲ ದೇವಾಲಯಗಳಲ್ಲೂ ವಿಶೇಷ ಪೂಜೆ ಪುನಸ್ಕಾರಗಳು ನಡೆಯುತ್ತಿದ್ದವು. ಈಗಲೂ ಈ ಸಂಪ್ರದಾಯ ಮುಂದುವರಿದಿದೆ. ಇಡೀ ರಾಜ್ಯವೇ ಹತ್ತು ದಿನಗಳ ಕಾಲ ತುಂಬು ಸಂತಸದಿಂದ ನಾಡ ಹಬ್ಬವನ್ನು ಆಚರಿಸುತ್ತದೆ. ಇದಕ್ಕೆ ಆಯುಧ ಪೂಜೆಯಂದು ವಾಹನಗಳಿಗೆ ಭಕ್ತಿ ಭಾವದಿಂದ ಅಲಂಕಾರ ಮಾಡಿ ಪೂಜಿಸುವುದೇ ಸಾಕ್ಷಿ.