ಇಂದು ಅಕ್ಷಯ ತೃತೀಯ, ನಿಮ್ಮ ಬದುಕು ಬಂಗಾರವಾಗಲಿ: ಒಂದಷ್ಟು ಮಾಹಿತಿ
ಸಮೃದ್ಧಿಯ ಸಂಕೇತವಾಗಿರುವ ಅಕ್ಷಯ ತೃತೀಯ ಇಂದು. ಈ ದಿನ ಕೈಗೊಳ್ಳುವ ಎಲ್ಲಾ ಶುಭಕಾರ್ಯಗಳಿಗೆ ಯಶಸ್ಸು ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ.
ಅಕ್ಷಯ ತೃತೀಯ ದಿವಸ ಜೀವನದ ಹೊಸ ಕೆಲಸ, ಉದ್ಯೋಗ ಪ್ರಾರಂಭ, ಚಿನ್ನಾಭರಣ ಖರೀದಿಗೆ ಶುಭದಿನ. ಈ ದಿವಸ ಸಾಮಾನ್ಯವಾಗಿ ಶುಭ ಕಾರ್ಯಗಳನ್ನು ಮಾಡಿದರೆ, ಅಕ್ಷಯವಾಗಿ ಪರಿಣಮಿಸುವುದು. ಈ ತೃತೀಯ ತಿಥಿಯ ಜೊತೆ ರೋಹಿಣಿ ನಕ್ಷತ್ರವಿದ್ದರೆ ಪುಣ್ಯಕರ ಎಂಬುದು ಪುರಾಣದಲ್ಲಿದೆ.
ಅಕ್ಷಯ ತೃತೀಯದ ಬಗ್ಗೆ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯರಿಂದ ವಿವರಣೆ
ಈ ಅಕ್ಷಯ ತೃತೀಯದಂದು ರವಿ ಮತ್ತು ಚಂದ್ರ ಏಕಕಾಲದಲ್ಲಿ ಅತ್ಯಚ್ಛ ಪ್ರಮಾಣ ತಲುಪಿ ಉಚ್ಛರಾಶಿಯಲ್ಲಿ ಉಜ್ವಲತೆ ಉಂಟಾಗುತ್ತದೆ. ವೇದವ್ಯಾಸರು ಗಣಪತಿಯೊಂದಿಗೆ ಒಪ್ಪಂದ ಮಾಡಿಕೊಂಡು ಮಹಾಭಾರತ ಬರೆಸಲು ಪ್ರಾರಂಭಿಸಿದ್ದು ಕೂಡ ಈ ಅಕ್ಷಯ ತೃತೀಯದಂದೇ. ಚಿನ್ನ ಕೊಳ್ಳಿ, ಸಾದ್ಯವಾದರೆ ದಾನ ಮಾಡಿ, ಹೊಸ ಯೋಜನೆಗಳಿಗೆ ಅಡಿಪಾಯ ಹಾಕಿ ಯಶಸ್ಸು ಖಂಡಿತವಾಗಿಯೂ ನಿಮ್ಮದಾಗಿ ನಿಮ್ಮ ಬಾಳು ಬಂಗಾರವಾಗಲಿ ಎಂಬುದು ನಮ್ಮ ಹಾರೈಕೆ.
ಅಕ್ಷಯ ತೃತೀಯದ ವಿಶಿಷ್ಟತೆಯೇನು?
ಅಕ್ಷಯ ತೃತೀಯವೆಂದರೆ ಗಂಗಾ ದೇವಿ ಸ್ವರ್ಗದಿಂದ ಧರೆಗಿಳಿಸದ ದಿನ, ಬಸವೇಶ್ವರರು ಹಾಗೂ ಪರಶುರಾಮ ಜನಿಸಿದ್ದು ಇದೇ ದಿನ, ಅಕ್ಷಯ ತೃತೀಯ ದಿನದಂದು ವಿಷ್ಣುವನ್ನು ಪೂಜಿಸಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆಯೂ ಎಲ್ಲರಲ್ಲಿದೆ. ಗಂಗಾ ನದಿಯಲ್ಲಿ ಸ್ನಾನ ಮಾಡುವುದುರಿಂದ ಎಲ್ಲಾ ದೋಷಗಳು ಪರಿಹಾರವಾಗುತ್ತದೆ ಎನ್ನುವ ನಂಬಿಕೆಯೂ ಇದೆ.
ಆಸ್ತಿ, ಚಿನ್ನಾಭರಣ ಖರೀದಿಗೆ ಇಂದು ಯೋಗ್ಯ ದಿನ
ಅಕ್ಷಯ ತೃತೀಯದಂದು ಚಿನ್ನಾಭರಣ, ಭೂಮಿ ಇತ್ಯಾದಿ ಖರೀದಿ, ಹೂಡಿಕೆಗೆ ಉತ್ತವಾದ ದಿನವಾಗಿದೆ. ಜನರು ಉಳಿತಾಯ ಮತ್ತು ಸಂಪತ್ತಿನ ಸದುಪಯೋಗ ಹಾಗೂ ಸಮೃದ್ಧಿಗಾಗಿ ಖರೀದಿ ಮತ್ತು ಹೂಡಿಕೆಯಲ್ಲಿ ತೊಡಗುತ್ತಾರೆ.
ಅಬ್ಬಾ! ಅಕ್ಷಯ ತೃತೀಯಕ್ಕೆ ಇಷ್ಟೆಲ್ಲ ಇತಿಹಾಸ ಇದೆಯಾ?
ದೇವತಾ ಕಾರ್ಯ ಹಾಗೂ ದಾನಕ್ಕೆ ಇಂದು ಶ್ರೇಷ್ಠ ದಿನ
ದೇವತಾ ಕಾರ್ಯ ಹಾಗೂ ದಾನವನ್ನು ಮಾಡಲು ಅಕ್ಷಯ ತೃತೀಯ ತುಂಬಾ ಶ್ರೇಷ್ಠವಾದ ದಿನವಾಗಿದೆ. ಯಾರಿಗೆ ದಾನ ಮಾಡಬೇಕು ಎಂಬುದನ್ನು ಕೂಡ ತಿಳಿದುಕೊಂಡಿರಬೇಕು. ನಾವೇ ಚಿನ್ನವನ್ನು ಖರೀದಿಸಿ ನಾವೇ ತೊಟ್ಟುಕೊಳ್ಳಬೇಕೆಂದೇನು ಇಲ್ಲ, ದಾನವನ್ನು ಎಷ್ಟು ಶ್ರದ್ಧೆ, ಭಕ್ತಿಯಿಂದ ಮಾಡುತ್ತೀರೋ ಅಷ್ಟು ಯಶಸ್ಸು ನಿಮ್ಮದಾಗುತ್ತದೆ.
ಅಕ್ಷಯ ತೃತೀಯದಂದು ಯಾರಿಗೆ ದಾನ ನೀಡಬೇಕು
ನಾವು ವರ್ಷಗಳ ಕಾಲ ಮಾಡಿದ ಪಾಪಗಳೆಲ್ಲವೂ ಪರಿಹಾರವಾಗಲಿ ಎನ್ನುವ ಅರ್ಥದಿಂದ ದಾನವನ್ನು ಮಾಡುತ್ತೇವೆ. ಚಿನ್ನ ಅಥವಾ ಇನ್ಯಾವುದೇ ದಾನವನ್ನು ಪಡೆಯಬೇಕಿರುವವರು ಶುದ್ಧವಾಗಿರಬೇಕು, ಪ್ರತಿನಿತ್ಯ ಜಪ-ತಪ ಇತ್ಯಾದಿಯನ್ನು ಮಾಡಿ ಪಾಪದ ಫಲಗಳನ್ನು ಹೊತ್ತು ನೀಗಿಸಿಕೊಳ್ಳುವಂತಹ ವ್ಯಕ್ತಿಯಾಗಿರಬೇಕು ಅಂಥವರಿಗೆ ನೀವು ದಾನ ಮಾಡಬೇಕು.
ಅಕ್ಷಯ ತೃತೀಯ, ದಿನದ ಮಹತ್ವ ಏನು, ಮಾಡಬೇಕಾದ್ದೇನು?
ಅಕ್ಷಯ ತೃತೀಯ ಎಂದರೇನು?
ಅಕ್ಷಯ ಎಂದರೆ ಕ್ಷಯವಿಲ್ಲದಿರುವುದು ಎಂದರ್ಥ ತೃತೀಯವೆಂದರೆ ವೈಶಾಖ ಮಾಸದ ಮೂರನೆಯ ದಿನ, ಅಕ್ಷಯ ತೃತೀಯದಂದು ಸಾಕಷ್ಟು ಐತಿಹಾಸಿಕ ಘಟನೆಗಳು ಸಂಭವಿಸಿದೆ. ಇಂದು ಪರಶುರಾಮನನ್ನು ನೆನೆಯಿರಿ, ಶ್ರೀಕೃಷ್ಣನ ಅವತಾರ ಪರಶುರಾಮ ಧರೆಯೊಳಗೆ ಜನಿಸಿದ ದಿನ ಇಂದು. ಈ ಅಕ್ಷಯ ತೃತೀಯದಂದು ಪಿತೃದೇವತೆಗಳ ಪ್ರೀತ್ಯರ್ಥ ಶ್ರಾದ್ಧವನ್ನೂ ಕೂಡ ಮಾಡಬಹುದು.