2021 ಡಿಸೆಂಬರ್: ತಮಿಳುನಾಡು ಹೆಲಿಕಾಪ್ಟರ್ ಪತನದ ಕರಾಳ ಕಥೆ
ನವದೆಹಲಿ, ಡಿಸೆಂಬರ್ 30: ಭಾರತೀಯ ಸೇನೆಯ ಶಕ್ತಿಯಾದ, ಶತ್ರುರಾಷ್ಟ್ರಗಳ ಪಾಲಿನ ಸಿಂಹಸ್ವಪ್ನವಾಗಿ ಕಾಡಿದ, ಉಗ್ರರ ಎದೆಯಲ್ಲಿ ನಡುಕ ಹುಟ್ಟಿಸುತ್ತಿದ್ದ ಅದೊಂದು ಹೆಸರೇ ಭಾರತೀಯ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ಸಿಂಗ್ ರಾವತ್. 2021ರ ಕೊನೆಯ ತಿಂಗಳ ಆರಂಭದಲ್ಲಿ ಇವರ ಅಗಲಿಕೆಯು, ದೇಶದ ಭದ್ರತೆಯನ್ನೇ ಪ್ರಶ್ನೆ ಮಾಡುವ ಹಾಗಾಯಿತು.
ತಮಿಳುನಾಡಿನ ನೀಲ್ಗಿರಿ ಜಿಲ್ಲೆಯ ಕುನೂರ್ ಬಳಿ ಡಿಸೆಂಬರ್ 8ರ ಬುಧವಾರ ನಡೆದ ಸೇನಾ ಹೆಲಿಕಾಪ್ಟರ್ ಪತನದಲ್ಲಿ ಭಾರತದ ಮೊದಲ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ಸೇರಿ ಒಟ್ಟು 13 ಜನರು ಮೃತಪಟ್ಟರು. ಹೆಲಿಕಾಪ್ಟರ್ ಪತನಗೊಂಡ ಸ್ಥಳದಿಂದ ರಕ್ಷಿಸಲ್ಪಟ್ಟಿರುವ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಕೂಡ ತದನಂತದಲ್ಲಿ ಸಾವಿನ ಮನೆ ಸೇರಿದರು. ಆ ಮೂಲಕ ವರ್ಷದ ಕೊನೆಯ ತಿಂಗಳು ಕರಾಳ ನೆನಪಿಗೆ ಸಾಕ್ಷಿ ಆಯಿತು.
ಭಾರತದಲ್ಲಿ ಕೊರೊನಾವೈರಸ್ ಕಡಿಮೆ ಆಯಿತು ಎನ್ನುವಷ್ಟರಲ್ಲೇ ಸುದ್ದಿ ಮಾಡಿದ ಓಮಿಕ್ರಾನ್, ದೇಶದಲ್ಲಿ ಆತಂಕವನ್ನು ಹೆಚ್ಚಿಸಿತು. ಇದರ ಮಧ್ಯೆ ಡಿಸೆಂಬರ್ 25ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ, ಮುನ್ನೆಚ್ಚರಿಕೆ ಡೋಸ್ ವಿತರಣೆಯನ್ನು ಆರಂಭಿಸಲಾಗುವುದು ಎಂದು ಘೋಷಿಸಿದರು. ಡಿಸೆಂಬರ್ ತಿಂಗಳಿನಲ್ಲಿ ನಡೆದ ಘಟನೆಗಳು ಹಾಗೂ ಚಿತ್ರಗಳ ಕುರಿತು ಒಂದು ವಿಶೇಷ ವರದಿಗಾಗಿ ಮುಂದೆ ಓದಿ.

ಭಾರತೀಯ ಸೇನೆ IAF Mi-17V5 ಹೆಲಿಕಾಪ್ಟರ್ ಪತನ
ಕಳೆದ ಡಿಸೆಂಬರ್ 8ರಂದು ಬುಧವಾರ ತಮಿಳುನಾಡಿನ ನೀಲ್ಗಿರಿ ಜಿಲ್ಲೆಯ ಕುನೂರ್ ಬಳಿ ಭಾರತೀಯ ಸೇನೆ IAF Mi-17V5 ಹೆಲಿಕಾಪ್ಟರ್ ಪತನವಾಯಿತು. ಈ ವೇಳೆ ಸೇನಾ ಹೆಲಿಕಾಪ್ಟರ್ ನಲ್ಲಿದ್ದ ಭಾರತದ ಮೊದಲ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ಸೇರಿ ಒಟ್ಟು 13 ಜನರು ಮೃತಪಟ್ಟಿರು. ಈ ವೇಳೆ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರಿಗೆ ಶೇ.80ರಷ್ಟು ಸುಟ್ಟ ಗಾಯಗಳಾಗಿದ್ದವು, ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಯಿತು. ತುರ್ತು ಚಿಕಿತ್ಸೆ ಹೊರತಾಗಿಯೂ, ವರುಣ್ ಸಿಂಗ್ ಅವರನ್ನು ಬದುಕಿಸಿಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ.

ಹುತಾತ್ಮರಿಗೆ ಪಾಲಂ ವಾಯು ನೆಲೆಯಲ್ಲಿ ಅಂತಿಮ ಗೌರವ
ದೆಹಲಿಯ ಪಾಲಂ ವಾಯು ನೆಲೆಯಲ್ಲಿ ಸಿಡಿಎಸ್ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಮತ್ತು 11 ಸಶಸ್ತ್ರ ಪಡೆ ಸಿಬ್ಬಂದಿಗೆ ಪಾರ್ಥಿವ ಶರೀರವನ್ನು ಇರಿಸಲಾಗಿತ್ತು. ಭಾರತದ ಮೊದಲ ಸೇನಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಪತ್ನಿ ಮಧುಲಿಕಾ ಮತ್ತು ಇತರ 11 ಸಶಸ್ತ್ರ ಪಡೆ ಸಿಬ್ಬಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅಂತಿಮ ನಮನ ಸಲ್ಲಿಸಿದರು.
ತಮಿಳುನಾಡು ಸೇನಾ ಹೆಲಿಕಾಪ್ಟರ್ ಪತನದಲ್ಲಿ ಮೃತಪಟ್ಟ ಸಿಡಿಎಸ್ ಜನರಲ್ ಬಿಪಿನ್ ರಾವತ್, ಮಧುಲಿಕಾ ರಾವತ್, ಎಲ್/ಎನ್ಕೆ ವಿವೇಕ್ ಕೆಆರ್, ಎನ್ಕೆ ಗುರುಶೇವಕ್ ಸಿಂಗ್, ಎಲ್/ಎನ್ಕೆ ಬಿಎಸ್ ತೇಜ, ನಾಯಕ್ ಜಿತೇಂದರ್ ಕೆಆರ್, ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್, ಬ್ರಿಗ್ ಎಲ್ಎಸ್ ಲಿಡರ್, ಹವಾಲ್ದಾರ್ ಸತ್ಪಾಲ್ ರಾಜ್, ಡಬ್ಲ್ಯುಜಿ ಸಿಡಿಆರ್ ಪಿ ಎಸ್ ಚೌಹಾಣ್, ಸ್ಕ್ಎನ್ ಲೀಡರ್ ಕೆ ಸಿಂಗ್, ಜೆಡಬ್ಲ್ಯೂಒ ರಾಣಾ ಪ್ರತಾಪ್ ದಾಸ್ ಮತ್ತು ಜೆಡಬ್ಲ್ಯೂಒ ಪ್ರದೀಪ್ ಎ. ಪಾರ್ಥಿವ ಶರೀರವನ್ನು ಪಾಲಂ ವಾಯು ನೆಲೆಯಲ್ಲಿ ಅಂತಿಮ ಗೌರವ ಸಲ್ಲಿಸಲಾಯಿತು.

ತ್ರಿಸೇನಾ ಮುಖ್ಯಸ್ಥರಿಂದ ಅಂತಿಮ ಗೌರವ ಸಲ್ಲಿಕೆ
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಶ್ರದ್ಧಾಂಜಲಿ ಸಲ್ಲಿಸಿದರು. ಇದೇ ವೇಳೆ ಭಾರತೀಯ ಭೂ ಸೇನಾ ಮುಖ್ಯಸ್ಥ ಜನರಲ್ ಎಂಎಂ ನರವಾಣೆ, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್ ಹರಿ ಕುಮಾರ್ ಮತ್ತು ಐಎಎಫ್ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಅಂತಿಮ ನಮನ ಸಲ್ಲಿಸಿದರು.

ಡಿ.10ರಂದು ಬಿಪಿನ್ ರಾವತ್ ಮತ್ತು ಪತ್ನಿ ಅಂತ್ಯ ಸಂಸ್ಕಾರ
ಭಾರತದ ಮೊದಲ ಸೇನಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಪತ್ನಿ ಮಧುಲಿಕಾ ಅಂತ್ಯಸಂಸ್ಕಾರವನ್ನು ಡಿಸೆಂಬರ್ 10ರಂದು ನಡೆಸಲಾಯಿತು. ಶುಕ್ರವಾರ ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ರವರೆಗೆ ಸಾರ್ವಜನಿಕರ ದರ್ಶನಕ್ಕೆ ಅವಕಾಶ ನೀಡಲಾಯಿತು. ತದನಂತರ ಅಂತಿಮ ಗೌರವ ಸಲ್ಲಿಸಲು ಅವಕಾಶ ನೀಡಲಾಯಿತು. ಬಳಿಕ ಕಾಮರಾಜ್ ಮಾರ್ಗದಿಂದ ದೆಹಲಿ ಕಂಟೋನ್ಮೆಂಟ್ನ ಬ್ರಾರ್ ಸ್ಕ್ವೇರ್ ಸ್ಮಶಾನದವರೆಗೆ ಅಂತಿಮ ಮೆರವಣಿಗೆ ನಡೆಸಿದ್ದು, ದೆಹಲಿ ಕಂಟೋನ್ಮೆಂಟ್ನಲ್ಲಿ ಸಕಲ ಸೇನಾ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನರವೇರಿಸಲಾಯಿತು.

ಬೂಸ್ಟರ್ ಡೋಸ್ ವಿತರಿಸಲು ಘೋಷಿಸಿದ ಪ್ರಧಾನಿ ಮೋದಿ
ಕೊರೊನಾವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ಸೋಂಕಿನ ಭೀತಿಯಲ್ಲಿದ್ದ ಭಾರತೀಯರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿತು. ಭಾರತದಲ್ಲಿ ಜನವರಿ 10ರಿಂದ ವೈದ್ಯಕೀಯ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರು ಹಾಗೂ ಮೊದಲ ಶ್ರೇಣಿ ಕಾರ್ಮಿಕರಿಗೆ ಬೂಸ್ಟರ್ ಡೋಸ್ ನೀಡಲಾಗುವುದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಡಿಸೆಂಬರ್ 25ರಂದು ಘೋಷಿಸಿದರು. ಇದರ ಜೊತೆಗೆ 15 ವರ್ಷದಿಂದ 18 ವರ್ಷದ ಮಕ್ಕಳಿಗೂ ಕೊರೊನಾವೈರಸ್ ಲಸಿಕೆ ನೀಡಲಾಗುವುದು ಎಂದು ಪ್ರಧಾನಿ ಮೋದಿ ಹೇಳಿದರು. ಜನವರಿ 3ರಿಂದ 15 ರಿಂದ 18 ವರ್ಷ ವಯೋಮಾನದ ಮಕ್ಕಳಿಗೆ ಕೊರೊನಾವೈರಸ್ ಲಸಿಕೆ ವಿತರಣೆ ಆರಂಭಿಸಲಾಗುವುದು. ತೀವ್ರ ಅಸ್ವಸ್ಥತೆ ಹೊಂದಿರುವ 60 ವರ್ಷ ಮೇಲ್ಪಟ್ಟ ವೃದ್ಧರು ವೈದ್ಯರ ಶಿಫಾರಸ್ಸಿನ ಮೇಲೆ ಕೊವಿಡ್-19 ಬೂಸ್ಟರ್ ಡೋಸ್ ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ ಎಂದು ಹೇಳಿದ್ದರು.












Click it and Unblock the Notifications