ಉತ್ತರ ಪ್ರದೇಶ ಚುನಾವಣೆ: ಪಕ್ಷದ ಗೆಲುವಿಗಿಂತ ಯೋಗಿ ಗೆಲುವು ಮೋದಿ-ಶಾಗೆ ಯಾಕೆ ಮುಖ್ಯ?
ಇನ್ನು, ಪಶ್ಚಿಮ ಬಂಗಾಳದ ಚುನಾವಣೆಯಲ್ಲೂ ಕೆಲವೊಂದು ವಾಹಿನಿಗಳು ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದ್ದವು. ಮಾಧ್ಯಮದವರ ಭವಿಷ್ಯವೇ ಅಂತಿಮ ಎಂದುಕೊಂಡಿದ್ದ ಬಿಜೆಪಿಯವರ ಖುಷಿಗೆ ಪಾರವೇ ಇರಲಿಲ್ಲ. ಆದರೆ, ಫಲಿತಾಂಶ ಪಶ್ಚಿಮ ಬಂಗಾಳಕ್ಕೆ ನೀವೇ ಮುಂದಿನ ಐದು ವರ್ಷ ಸಿಎಂ ಎಂದು ಮತದಾರ ಮಮತಾ ಬ್ಯಾನರ್ಜಿ ಪರ ಮ್ಯಾನ್ಡೇಟ್ ಕೊಟ್ಟುಬಿಟ್ಟ. ಬಿಜೆಪಿ ಹೈಕಮಾಂಡ್ ಇನ್ನೊಂದು ರೌಂಡ್ ಇಲ್ಲಿ ಬಿಸಿಯನ್ನು ಎದುರಿಸಬೇಕಾಗಿ ಬಂತು.
ಉತ್ತರ ಪ್ರದೇಶ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಅಖಿಲೇಶ್ ಯಾದವ್!
ಈಗ, ದೇಶದ ರಾಜಕೀಯದಲ್ಲಿ ಮಹತ್ವದ ಪಾತ್ರವನ್ನು ವಹಿಸುವ ಉತ್ತರ ಪ್ರದೇಶಕ್ಕೆ ಏಳು ಹಂತದ ಚುನಾವಣೆ ಘೋಷಣೆಯಾಗಿದೆ. ಚುನಾವಣಾಪೂರ್ವ ಸಮೀಕ್ಷೆಗಳು ಬಿಜೆಪಿಯೇ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಹೇಳುತ್ತಿದೆ. ಆದರೆ, ಸಮಾಜವಾದದ ಹೆಸರಿನಲ್ಲಿ ಮುಲಾಯಂ ಸಿಂಗ್ ಗರಡಿಯಲ್ಲಿ ಪಳಗಿರುವ ಅಖಿಲೇಶ್ ಯಾದವ್ ಮುಂದೊಡ್ಡುತ್ತಿರುವ ದಾಳಕ್ಕೆ ಬಿಜೆಪಿ ಎಚ್ಚರಿಕೆಯ ಹೆಜ್ಜೆಯನ್ನು ಇಡುವಂತೆ ಮಾಡಿದೆ.
ಬಿಜೆಪಿಗೆ ಉತ್ತರ ಪ್ರದೇಶದಲ್ಲಿ ಅಧಿಕಾರ ಉಳಿಸಿಕೊಳ್ಳುವುದು ಮುಂದಿನ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಬಹುಮುಖ್ಯ. ಆದರೆ, ಅಸೆಂಬ್ಲಿ ಚುನಾವಣೆಯನ್ನು ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ಗೆಲ್ಲುವುದು ಅಷ್ಟೇ ಮುಖ್ಯ ಎನ್ನುವುದಕ್ಕೆ ಇರುವ ಕಾರಣ ಒಂದೇ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಮುಲಾಯಂ ಸಿಂಗ್ ಯಾದವ್ ಸೊಸೆ ಅಪರ್ಣಾ
ಗಂಗಾ ನದಿಯಿಂದ ಕಾಶಿ ವಿಶ್ವನಾಥನ ದೇವಾಲಯಕ್ಕೆ ಫ್ಲೈ ಓವರ್
ಉತ್ತರ ಪ್ರದೇಶ ಚುನಾವಣೆಯ ಹೊಸ್ತಿಲಲ್ಲಿ ಇರುವಾಗ, ಕೇಂದ್ರ ಸರಕಾರ ಸಾಲುಸಾಲು ಅಭಿವೃದ್ದಿಯನ್ನು ಘೋಷಿಸುತ್ತಿದೆ. ವಾರಕ್ಕೆ ಎರಡ್ಮೂರು ಬಾರಿಯಂತೆ ಪ್ರಧಾನಿ ಮೋದಿಯವರು ಅಲ್ಲಿಗೆ ಭೇಟಿ ನೀಡುತ್ತಾರೆ. ವಾರಣಾಸಿಯಲ್ಲಿ ಗಂಗಾ ನದಿಯಿಂದ ಕಾಶಿ ವಿಶ್ವನಾಥನ ದೇವಾಲಯಕ್ಕೆ ಫ್ಲೈ ಓವರ್ ನಿರ್ಮಾಣದ ಉದ್ಘಾಟನೆ ರಾಷ್ಟ್ರವ್ಯಾಪಿ ಲೈವ್ ಪ್ರಸಾರವಾಗುತ್ತದೆ. ಜೊತೆಗೆ, ಅಲ್ಲಿನ ರಾಷ್ಟ್ರೀಯ ಹೆದ್ದಾರಿಯ ಲೋಕಾರ್ಪಣೆ ಕೂಡಾ ಸುದ್ದಿಯಾಗುತ್ತದೆ. ಇದೆಲ್ಲಾ ಅಭಿವೃದ್ದಿ ಕೆಲಸ ಎನ್ನುವುದನ್ನು ಒಪ್ಪಿಕೊಳ್ಳೋಣ. ಆದರೆ..
ರಾಜಕೀಯ ಸಮೀಕರಣವನ್ನು ಮೀರುವಂತಹ ಲೆಕ್ಕಾಚಾರ
ದೇಶದ ವಿವಿಧ ಭಾಗಗಳಲ್ಲಿ ಶಂಕು ಸ್ಥಾಪನೆಗೆ ಹಾಕಿದ ಕಲ್ಲುಗಳು ತ್ರಿಶಂಕು ಪರಿಸ್ಥಿಯಲ್ಲಿ ಇರುವಾಗ, ಉತ್ತರ ಪ್ರದೇಶದ ಯೋಜನೆಯ ಮೇಲೆ ನರೇಂದ್ರ ಮೋದಿಯವರಿಗೆ ವಿಶೇಷ ಕಾಳಜಿ ಯಾಕೆ ಎನ್ನುವ ಪ್ರಶ್ನೆ ಎದುರಾಗುವುದು ಸಹಜ, ಅದು ಮುಂಬರುವ ಚುನಾವಣೆಯ ದೃಷ್ಟಿಕೋನ. ಎಲ್ಲಾ ರಾಜಕೀಯ ಪಕ್ಷಗಳು ಇದೇ ರೀತಿಯ ಹೆಜ್ಜೆಯನ್ನು ಇಡುತ್ತದೆ ಎನ್ನುವುದನ್ನು ಅರಿಯದಷ್ಟು ಮೂರ್ಖರು ನಮ್ಮ ಭಾರತೀಯ ಮತದಾರರಲ್ಲ ಎನ್ನುವುದು ಸ್ಪಷ್ಟ. ಆದರೆ, ಈ ರಾಜಕೀಯ ಸಮೀಕರಣವನ್ನು ಮೀರುವಂತಹ ಲೆಕ್ಕಾಚಾರ ಇನ್ನೊಂದು ಇದೆ ಎಂದು ಹೇಳಲಾಗುತ್ತಿದೆ. ಅದೇನು?
ಯೋಗಿ ಆದಿತ್ಯನಾಥ್ ಸದ್ಯದ ಮಟ್ಟಿಗೆ ಉತ್ತರ ಪ್ರದೇಶ ರಾಜಕೀಯದಲ್ಲೇ ತಲ್ಲೀನ
ಹಿಂದೂ ಹೃದಯ ಸಾಮ್ರಾಟ, ಪ್ರಧಾನಿ ನರೇಂದ್ರ ಮೋದಿಯ ನಂತರ ಬಿಜೆಪಿಗೆ ದಿಕ್ಕು ಯಾರು ಎನ್ನುವ ಪ್ರಶ್ನೆ ಬಂದಾಗ, ಸ್ವಾಭಾವಿಕವಾಗಿ ಬರುವ ಹೆಸರು ಅಮಿತ್ ಶಾ. ಆದರೆ, ಕಟ್ಟಾ ಹಿಂದೂವಾದಿಗಳ ಹೆಸರು ಅಮಿತ್ ಶಾ ಅವರಿಗಿಂತ ಮುನ್ನ ಬರುವುದು ಯೋಗಿ ಆದಿತ್ಯನಾಥ್ ಅವರ ಹೆಸರು. ಇಲ್ಲಿ, ಉತ್ತರ ಪ್ರದೇಶದ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದಕ್ಕಿಂತ ಹೆಚ್ಚಾಗಿ ಮೋದಿ ಮತ್ತು ಅಮಿತ್ ಶಾಗೆ ಇರುವ ಮತ್ತೊಂದು ಗುರಿ ಅದು ಯೋಗಿ ಆದಿತ್ಯನಾಥ್ ಸದ್ಯದ ಮಟ್ಟಿಗೆ ಉತ್ತರ ಪ್ರದೇಶ ರಾಜಕೀಯದಲ್ಲೇ ತಲ್ಲೀನರಾಗುವಂತೆ ಮಾಡುವುದು.
ಆರ್ ಎಸ್ ಎಸ್ ಮುಖಂಡರೂ ಇದರಲ್ಲಿ ನುರಿತವರೇ
ಯೋಗಿ ಆದಿತ್ಯನಾಥ್ ಮಹತ್ವಾಕಾಂಕ್ಷೆಯ ಮನುಷ್ಯ ಎನ್ನುವುದು ಬಿಜೆಪಿ ವಲಯದಲ್ಲಿ ಗೊತ್ತಿರುವಂತಹ ವಿಚಾರ. ಬಿಜೆಪಿಯ ಮಾತೃ ಸಂಘಟನೆ ರಾಷ್ಟ್ರೀಯ ಸ್ವಯಂಸೇವಕ ಸಂಘಟನೆಗೆ ಹಿಂದೂತ್ವದ ವಿಚಾರ ಬಂದಾಗ, ಮೋದಿಗಿಂತ ಹೆಚ್ಚಾಗಿ ಪ್ರಿಯರಾಗಿರುವುದು ಯೋಗಿಯೇ, ಅಮಿತ್ ಶಾ ಆಮೇಲೆ. ಹಾಗಾಗಿ, ಒಂದು ವೇಳೆ ಉತ್ತರ ಪ್ರದೇಶದಲ್ಲಿ ಬಿಜೆಪಿ ಚುನಾವಣೆ ಸೋತರೆ, ವಿರೋಧ ಪಕ್ಷದ ನಾಯಕನ ಸ್ಥಾನದಲ್ಲಿ ಕೂರಲು ಯೋಗಿ ಒಪ್ಪಲಾರರು ಎನ್ನುವುದು ಮೋದಿ-ಶಾ ಜೋಡಿಗೆ ಗೊತ್ತಿರದ ವಿಚಾರವೇನೂ ಅಲ್ಲ. ಇನ್ನು, ಆರ್ ಎಸ್ ಎಸ್ ಮುಖಂಡರೂ ಇದರಲ್ಲಿ ನುರಿತವರೇ..
ಮೋದಿ-ಅಮಿತ್ ಶಾ ಜೋಡಿಗೆ, ಮಾರ್ಚ್ ಹತ್ತರ ದಿನಾಂಕ ಇದಕ್ಕೆ ಉತ್ತರ
ಒಂದು ವೇಳೆ ಹಾಗಾದಲ್ಲಿ, ಯೋಗಿಯವರ ಮುಂದಿನ ಹೆಜ್ಜೆ ಕೇಂದ್ರದ ಕಡೆ ಇದ್ದರೂ ಇರಬಹುದು ಎನ್ನುವ ತಾತ್ಪರ್ಯವೇ ಕಳೆದ ಒಂದು ದಶಕಗಳಿಂದ ದೇಶದ ರಾಜಕಾರಣವನ್ನು ಹಿಡಿದಿಟ್ಟು ಕೊಂಡಿರುವ ಜೋಡಿಗಳಿಗೆ ಅರ್ಥವಾಗದ ರಾಜಕೀಯವೇನೂ ಅಲ್ಲ. ಈ ರಾಜಕೀಯ ಲೆಕ್ಕಾಚಾರವನ್ನು ಅವಲೋಕಿಸುವುದಾದರೆ, ಉತ್ತರ ಪ್ರದೇಶದ ಚುನಾವಣಾ ಫಲಿತಾಂಶ ಬಿಜೆಪಿಯಲ್ಲೂ ಹೊಸ ಭಾಷ್ಯ ಬರೆಯುವುದಂತೂ ಸತ್ಯ. ಅದರಲ್ಲೂ ಮುಖ್ಯವಾಗಿ ಮೋದಿ-ಅಮಿತ್ ಶಾ ಜೋಡಿಗೆ.. ಮಾರ್ಚ ಹತ್ತರ ದಿನಾಂಕ ಇದಕ್ಕೆ ಉತ್ತರ ನೀಡಬಲ್ಲದು.
Recommended Video