ಶಬರಿಮಲೆಯ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಮಾಲೆ ಏಕೆ ಧರಿಸಬೇಕು?
ದಕ್ಷಿಣ ಭಾರತದ ಪ್ರಸಿದ್ಧ ದೇವಾಲಯಗಳಲ್ಲಿ ಕೇರಳದಲ್ಲಿರುವ ಶಬರಿಮಲೆ ಸಹ ಒಂದು. ದೇಶದ ವಿವಿಧ ರಾಜ್ಯಗಳಿಂದ ಸಾಮಾನ್ಯ ಜನರು, ಗಣ್ಯರು ಶಬರಿಮಲೆಯ ಅಯ್ಯಪ್ಪ ಸ್ವಾಮಿ ದರ್ಶನಕ್ಕಾಗಿ ಆಗಮಿಸುತ್ತಾರೆ.
ಕೇರಳ ರಾಜ್ಯದ ಪತ್ತನಂತಿಟ್ಟ ಜಿಲ್ಲೆಯಲ್ಲಿನ ಪಶ್ಚಿಮ ಘಟ್ಟಗಳ ಪರ್ವತ ಶ್ರೇಣಿಯಲ್ಲಿ ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಾಲಯವಿದೆ. ದಟ್ಟ ಕಾಡಿನ ನಡುವೆ ಇರುವ ಪ್ರದೇಶ ಪ್ರಾಕೃತಿಕವಾಗಿ ಎಷ್ಟು ಸುಂದರವಾಗಿದೆಯೋ ಶ್ರದ್ಧಾ ಭಕ್ತಿಗೂ ಅಷ್ಟೇ ಪ್ರಸಿದ್ಧಿ ಪಡೆದಿದೆ.
ದೇವಾಲಯ ನಿರ್ಮಾಣಗೊಂಡ ಬಳಿಕ ಮೂರು ದಶಕಗಳ ಕಾಲ ಯಾರಿಗೂ ತಿಳಿದಿರಲಿಲ್ಲ. 12ನೇ ಶತಮಾನದಲ್ಲಿ ಪಂದಳಂನ ರಾಜ ಮಣಿಕಂದನ್ ದೇವಾಲಯವನ್ನು ಪತ್ತೆ ಹಚ್ಚಿದ ಎಂದು ಇತಿಹಾಸ ಹೇಳುತ್ತದೆ.

ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಾಲಯದ ವಿಶೇಷ ಎಂದರೆ ಮಾಲೆ ಧರಿಸದೇ ದೇವಾಲಯಕ್ಕೆ ಹೋಗುವಂತಿಲ್ಲ. ಭಕ್ತರು ಮಾಲೆ ಧರಿಸಿ, ಗುರುಸ್ವಾಮಿಗಳ ಮಾರ್ಗದರ್ಶನದಲ್ಲಿ 41 ದಿನಗಳ ಕಾಲ ವೃತ ಆಚರಣೆ ಮಾಡಿ ಅಯ್ಯಪ್ಪನ ದರ್ಶನ ಪಡೆಯಬೇಕಿದೆ.
ಮಾಲೆ ಧರಿಸುವುದು ಕಡ್ಡಾಯ : ಕೇರಳದಲ್ಲಿರುವ ಈ ದೇವಾಲಯದಲ್ಲಿ ಪ್ರತಿವರ್ಷ ನವೆಂಬರ್ನಿಂದ ಡಿಸೆಂಬರ್ ತನಕ ವಾರ್ಷಿಕ ಪೂಜೆಗಳು ನಡೆಯುತ್ತವೆ. ಮಾಲೆ ಧರಿಸಿ 41 ದಿನಗಳ ವೃತ ಕೈಗೊಂಡ ಭಕ್ತರು ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ನವೆಂಬರ್ನಿಂದ ಜನವರಿ ತನಕ ಭೇಟಿ ನೀಡುತ್ತಾರೆ.
ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಋತುಮತಿಯಾದ ಮಹಿಳೆಯರು ಭೇಟಿ ನೀಡಬಾರದು ಎಂಬ ನಂಬಿಕೆ ಇದೆ. ಈ ಕುರಿತ ವಿವಾದ ಸುಪ್ರೀಂಕೋರ್ಟ್ ಮೆಟ್ಟಿಲನ್ನು ಸಹ ಏರಿತ್ತು. ಇನ್ನೂ ಸಹ ವಿಚಾರಣೆ ನಡೆಯುತ್ತಲೇ ಇದೆ.

ಮಕರ ಜ್ಯೋತಿ ವಿಶೇಷ : ಜನವರಿ 14ರ ಮಕರ ಸಂಕ್ರಾಂತಿಯಂದು ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಅಂದು ಮಕರ ಜ್ಯೋತಿ ರೂಪದಲ್ಲಿ ಅಯ್ಯಪ್ಪ ಸ್ವಾಮಿ ಭಕ್ತರಿಗೆ ದರ್ಶನ ನೀಡುತ್ತಾನೆ ಎಂಬ ನಂಬಿಕೆ ಇದೆ.
ಈ ಜ್ಯೋತಿ ಮಾನವ ನಿರ್ಮಿತ ಎಂಬ ವಾದವೂ ಇದ್ದು, ಅದನ್ನು ಪರಿಶೀಲನೆ ಮಾಡಲು ಹೋಗಿ ದೊಡ್ಡ ವಿವಾದವೂ ಆಗಿತ್ತು. ಆದರೆ, ಮಕರ ಜ್ಯೋತಿ ಮೇಲಿನ ನಂಬಿಕೆ ಅಯ್ಯಪ್ಪ ಭಕ್ತರಲ್ಲಿ ಕಡಿಮೆಯಾಗಿಲ್ಲ. ಪ್ರತಿವರ್ಷವೂ ಜ್ಯೋತಿಯ ದರ್ಶನಕ್ಕಾಗಿ ಭಕ್ತರು ಕಾದು ಕುಳಿತಿರುತ್ತಾರೆ.
ಜನವರಿ ಹೊರತುಪಡಿಸಿದರೆ ಏಪ್ರಿಲ್ 14ರ ವಿಷು ಸಂಕ್ರಾಂತಿ ಮತ್ತು ಪ್ರತಿ ಮಲಯಾಳಂ ಮಾಸದ ಮೊದಲ ಐದು ದಿನ ಶಬರಿಮಲೆಯ ಅಯ್ಯಪ್ಪ ಸ್ವಾಮಿ ದರ್ಶನ ಪಡೆಯಬಹುದು. ಈ ಸಂದರ್ಭಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ.
ಭಗವಂತನಲ್ಲಿ ಐಕ್ಯವಾಗಲು ರಾಜ, ಭಕ್ತಿ, ಯೋಗ, ಕರ್ಮ, ಜ್ಞಾನ ಯೋಗ ಮುಂತಾದ ಮಾರ್ಗಗಳಿವೆ. ಅಯ್ಯಪ್ಪ ಸ್ವಾಮಿ ಭಕ್ತರು ಭಕ್ತಿ ಯೋಗದ ಮೂಲಕ 41 ದಿನಗಳ ವೃತ ಆಚರಣೆ ಮಾಡಿ ದೇವರ ದರ್ಶನ ಪಡೆದು ಪುನೀತರಾಗುತ್ತಾರೆ.
ಕಠಿಣ ವೃತ ಆಚರಣೆ : ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ವೃತ ಆಚರಣೆ ಮಾಡುವುದು ಬಹಳ ಕಠಿಣವಾದದ್ದು. ನವೆಂಬರ್ ತಿಂಗಳು ಚಳಿಗಾಗ ಆಗ ಮುಂಜಾನೆ ಎದ್ದು ತಣ್ಣೀರು ಸ್ನಾನವನ್ನು ಮಾಡಿ ಹತ್ತಿರದ ದೇವಾಲಯಕ್ಕೆ ಭೇಟಿ ಕೊಟ್ಟು, ಬಳಿಕ ಅಯ್ಯಪ್ಪ ಸ್ವಾಮಿ ಪೂಜೆ ಮಾಡಬೇಕು.
ವೃತ ಆಚರಣೆ ಮಾಡುವ ವ್ಯಕ್ತಿ ಚಪ್ಪಲಿ ಧರಿಸುವಂತಿಲ್ಲ. ದಿನಕ್ಕೆ ಎರಡು ಬಾರಿ ಸ್ನಾನ ಮಾಡಿ ಅಯ್ಯಪ್ಪನ ಪೂಜೆ ಮಾಡಬೇಕು. ವೃತದಲ್ಲಿ ಇರುವಾಗ ಸ್ವತಃ ತಯಾರು ಮಾಡಿದ ಆಹಾರ ಸೇವಿಸಬೇಕು. ಬೆಳಗ್ಗೆ ಮತ್ತು ರಾತ್ರಿ ಮಿತವಾದ ಆಹಾರವಿರಬೇಕು.
ಅಯ್ಯಪ್ಪ ಸ್ವಾಮಿ ಭಕ್ತರು ವೃತ ಆಚರಣೆ ಮಾಡುವಾಗ ಕಪ್ಪು ಬಣ್ಣದ ಬಟ್ಟೆ ಧರಿಸುತ್ತಾರೆ. ಮಾಂಸಹಾರ, ಮದ್ಯ ಸೇವಿಸುವಂತಿಲ್ಲ. ಹಿರಿಯರು, ಕಿರಿಯರನ್ನು 'ಸ್ವಾಮಿ' ಎಂದು ಮಾತನಾಡಿಸುತ್ತಾರೆ. ಕೂದಲು ಮತ್ತು ಉಗುರು ಕತ್ತರಿಸುವುದಿಲ್ಲ.
18 ಮೆಟ್ಟಿಲು ಏರಬೇಕು : ವೃತ ಆಚರಣೆ ಮಾಡಿ ಅಯ್ಯಪ್ಪ ಸ್ವಾಮಿ ಸನ್ನಿಧಿಗೆ ಬರುವ ಭಕ್ತರು ನೇರವಾಗಿ ಸ್ವಾಮಿಯ ದರ್ಶನ ಮಾಡುವಂತಿಲ್ಲ. ಅದಕ್ಕಾಗಿ ದೇವಾಲಯಕ್ಕೆ ಹೋಗುವ ಮೊದಲು ಪಂಪಾ ನದಿಯಲ್ಲಿ ಸ್ನಾನ ಮಾಡಬೇಕು. ದೇವಾಲಯ ತಲುಪಲು 18 ಮೆಟ್ಟಿಲುಗಳನ್ನು ಏರಬೇಕು.












Click it and Unblock the Notifications