ಕೇಜ್ರಿವಾಲ್ ಗೆ ಇಂದಿರಾಗಾಂಧಿಯಂತೆ ಹತ್ಯೆಯ ಭೀತಿ ಏಕೆ?
ನವದೆಹಲಿ, ಮೇ 19: ದೆಹಲಿ ಮುಖ್ಯಮಂತ್ರಿ, ಆಮ್ ಅದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ತಮಗೆ ಜೀವಭಯವಿದೆ ಎಂದು ಹೇಳಿದ್ದಾರೆ.ಮಾಜಿ ಪ್ರಧಾನಿ, ದಿವಂಗತ ಇಂದಿರಾ ಗಾಂಧಿ ಅವರನ್ನು ಹತ್ಯೆ ಮಾಡಿದಂತೆ ತಮ್ಮನ್ನು ಕೊಲ್ಲಲಾಗುತ್ತದೆ ಎಂಬ ಭೀತಿ ವ್ಯಕ್ತಪಡಿಸಿದ್ದಾರೆ. ಕೇಜ್ರಿವಾಲ್ ಅವರು ಈ ರೀತಿ ಹೇಳಲು ಕಾರಣವೇನು? ಇಲ್ಲಿದೆ ಉತ್ತರ
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಬಿಜೆಪಿಯು ತಮ್ಮನ್ನು ಕೊಲ್ಲಲು ಬಯಸುತ್ತಿದೆ. ಒಂದು ದಿನ ತಮ್ಮನ್ನು ಹತ್ಯೆ ಮಾಡಲಿದೆ ಎಂದು ಕೇಜ್ರಿವಾಲ್ ಹೇಳಿಕೆ ನೀಡಿರುವುದನ್ನು ಗಮನಿಸಬೇಕಾಗುತ್ತದೆ. ದೆಹಲಿಯ ಮೋತಿ ನಗರ ಪ್ರದೇಶದಲ್ಲಿ ಚುನಾವಣಾ ಪ್ರಚಾರಕ್ಕಾಗಿ ರೋಡ್ ಶೋ ನಡೆಸುತ್ತಿದ್ದ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ವಾಹನ ಏರಿ ಕೇಜ್ರಿವಾಲ್ ಅವರ ಕೆನ್ನೆಗೆ ಬಾರಿಸಿದ್ದ.
ಇದಕ್ಕೂ ಮುನ್ನ ಕೇಜ್ರಿವಾಲ್ ಅವರಿಗೆ ಆಗಾಗ ಇಂಕ್ ಎರಚುವುದು, ಕೆನ್ನೆಗೆ ಬಾರಿಸಿದ ಘಟನೆಗಳು ನಡೆದಾಗೆಲ್ಲ ಬಿಜೆಪಿ ವಿರುದ್ಧ ಕೇಜ್ರಿವಾಲ್ ಬೊಟ್ಟು ಮಾಡಿ ತೋರಿಸಿದ್ದಾರೆ. ಆದರೆ, ಬಿಜೆಪಿಯಿಂದ ನೇರವಾಗಿ ಪ್ರಾಣಭಯ ಉಂಟಾಗಿದೆ ಎಂದು ಹೇಳಿರಲಿಲ್ಲ.
ಇಂಡಿಯಾ ಟುಡೆ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಕೇಜ್ರಿವಾಲ್ ಈ ಹೇಳಿಕೆ ನೀಡಿದ್ದಾರೆ. ಕೇಜ್ರಿವಾಲ್ ಅವರ ಆರೋಪಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಪರ ವಿರೋಧ ಚರ್ಚೆ ಮುಂದುವರೆದಿದೆ. ಪರೋಕ್ಷವಾಗಿ ದೆಹಲಿಗೆ ಪ್ರತ್ಯೇಕ ರಾಜ್ಯದ ಸ್ಥಾನಮಾನ ಸಿಕ್ಕಿಲ್ಲ. ಪೊಲೀಸ್ ಇಲಾಖೆ ಮೇಲೆ ರಾಜ್ಯ ಸರ್ಕಾರದ ಹಿಡಿತವಿಲ್ಲ ಎಂಬುದನ್ನು ಕೇಜ್ರಿವಾಲ್ ಸೂಚಿಸಿದ್ದಾರೆ.

ಬಿಜೆಪಿ ರಿಪೋರ್ಟ್ ಮಾಡುವ ಪಿಎಸ್ ಒ
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪರ್ಸನಲ್ ಸೆಕ್ಯುರಿಟಿ ಅಧಿಕಾರಿ(ಪಿಎಸ್ ಒ)ಗಳು ಕೇಂದ್ರ ಸರ್ಕಾರದ ಅಧೀನದಲ್ಲಿದ್ದು, ಬಿಜೆಪಿಗೆ ವರದಿ ಸಲ್ಲಿಸಬೇಕಾಗುತ್ತದೆ. ಹೀಗಾಗಿ, ಇಂದಿರಾಗಾಂಧಿ ಅವರನ್ನು ಪಿಎಸ್ ಒಗಳು ಹತ್ಯೆ ಮಾಡಿದಂತೆ ನನ್ನನ್ನು ಕೊಲ್ಲಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಬಿಜೆಪಿ ನನ್ನ ಜೀವ ತೆಗೆಯಲು ಹವಣಿಸುತ್ತಿದೆ. ಅವರು ನನ್ನನ್ನು ಕೊಲೆ ಮಾಡಲಿದ್ದಾರೆ' ಎಂದು ಹೇಳಿದ್ದಾರೆ.

ಹತ್ಯೆ ಬಳಿಕ ಇದು ಭಿನ್ನಮತೀಯರ ಕೃತ್ಯ ಎನ್ನಬಹುದು
ನನ್ನ ಹತ್ಯೆ ಬಳಿಕ ಇದು ಭಿನ್ನಮತೀಯರ ಕೃತ್ಯ ಎಂದು ಪೊಲೀಸರು ತನಿಖೆ ಮುಚ್ಚು ಹಾಕಬಹುದು. ಕ್ಯಾಪ್ಟನ್ ಸಾಬ್(ಅಮರೀಂದರ್ ಸಿಂಗ್) ಮೇಲೆ ಕೋಪ ಇದ್ದರೆ ಕಾಂಗ್ರೆಸ್ ಕಾರ್ಯಕರ್ತರು ಅವರಿಗೆ ಹೊಡೆಯಬಹುದೆ?, ಬಿಜೆಪಿ ಕಾರ್ಯಕರ್ತರು ಮೋದಿ ಜೀ (ಪ್ರಧಾನಿ ನರೇಂದ್ರ ಮೋದಿ) ಮೇಲೆ ಕೋಪಕ್ಕೆ ಅವರನ್ನು ಎಂದಾದರೂ ಹೊಡೆದಿದ್ದಾರರಯೇ? ಎಂದು ಪ್ರಶ್ನಿಸಿದ್ದಾರೆ.

ಎಎಪಿ ಮುಖಂಡರೊಬ್ಬರ ಪೂರಕ ಹೇಳಿಕೆ
ಮುಖ್ಯಮಂತ್ರಿ ಆದ ಬಳಿಕ ಅವರ ಮೇಲೆ ಪೊಲೀಸರ ಸಮ್ಮುಖದಲ್ಲಿಯೇ ಕನಿಷ್ಠ ಆರು ದಾಳಿಗಳಾಗಿವೆ. ಇಂತಹ ಘಟನೆಗಳು ನಡೆದ ಬಳಿಕವೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ನಮಗೆ ದೆಹಲಿ ಪೊಲೀಸರ ಮೇಲೆ ನಂಬಿಕೆ ಇಲ್ಲ ಎಂದು ಎಎಪಿ ಮುಖಂಡ ಸೌರಭ್ ಭಾರದ್ವಾಜ್ ಹೇಳಿದ್ದಾರೆ.

ದೆಹಲಿ ಪೊಲೀಸ್ ವಕ್ತಾರರ ಹೇಳಿಕೆ
ಎಲ್ಲಾ ರಾಜಕೀಯ ಪಕ್ಷಗಳ ಏಳು ಪ್ರಮುಖ ಮುಖಂಡರಿಗೆ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ.ದೆಹಲಿ ಮುಖ್ಯಮಂತ್ರಿಗಳಿಗೆ ನೇಮಿಸಲಾಗಿರುವ ಖಾಸಗಿ ಅಂಗರಕ್ಷಕರು ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಮಾಡುತ್ತಿದ್ದಾರೆ. ಈ ವಿಷಯದಲ್ಲಿ ಯಾವುದೇ ಲೋಪ ದೋಷ ಕಂಡು ಬಂದಿಲ್ಲ ಎಂದು ದೆಹಲಿ ಪೊಲೀಸ್ ಇಲಾಖೆ ಹೆಚ್ಚುವರಿ ಪಿಆರ್ ಒ ಅನಿಲ್ ಮಿತ್ತಲ್ ಹೇಳಿದ್ದಾರೆ.












Click it and Unblock the Notifications