ಆರೋಗ್ಯಕರ ಬದುಕಿಗೆ ನಿದ್ದೆ ಅತಿಮುಖ್ಯ..!
ನಮ್ಮ ಎಲ್ಲ ಆಯಾಸಗಳನ್ನು ಹೊಡೆದೋಡಿಸಿ ದೇಹವನ್ನು ಉಲ್ಲಾಸಗೊಳಿಸುವ ಶಕ್ತಿಯಿರುವುದು ನಿದ್ದೆಗೆ ಮಾತ್ರ. ಹೀಗಿರುವಾಗ ನಮ್ಮ ದಿನನಿತ್ಯದ ಜೀವನದಲ್ಲಿ ಆರೋಗ್ಯಕರ ನಿದ್ದೆಗೆ ಒತ್ತು ನೀಡುವುದು ಅತಿ ಮುಖ್ಯವಾಗಿದೆ.
ಇತ್ತೀಚೆಗಿನ ದಿನಗಳಲ್ಲಿ ಲೈಫ್ ಸ್ಟೈಲ್ ಒಂದಷ್ಟು ಬದಲಾವಣೆಯಾಗಿದೆ. ಹೀಗಾಗಿ ರಾತ್ರಿಯೆಲ್ಲ ಮೊಬೈಲ್, ಟಿವಿ ನೋಡುತ್ತಾ ನಿದ್ದೆ ಮಾಡಬೇಕಾದ ಸಮಯದಲ್ಲಿ ನಿದ್ದೆ ಮಾಡದೆ, ಇನ್ಯಾವುದೋ ಸಮಯದಲ್ಲಿ ನಿದ್ದೆ ಮಾಡುವುದು ಅಥವಾ ಸರಿಯಾಗಿ ನಿದ್ರಿಸದೆ ಹಗಲು ಹೊತ್ತಿನಲ್ಲಿಯೂ ನಿದ್ದೆಯ ಮಂಪರಿನಲ್ಲಿರುವುದು ಕಾಣಿಸುತ್ತದೆ. ಮೊದಲೆಲ್ಲ ಜನರು ಹಗಲಿನಲ್ಲಿ ಶ್ರಮವಹಿಸಿ ಕೆಲಸ ಮಾಡಿ, ರಾತ್ರಿಯಾಗುತ್ತಿದ್ದಂತೆಯೇ ಮಲಗಿ ನಿದ್ದೆ ಮಾಡುತ್ತಿದ್ದರು. ಇದರಿಂದ ಆರೋಗ್ಯವಾಗಿರುತ್ತಿದ್ದರು.

ನಿದ್ದೆಯಿಂದ ದೇಹಕ್ಕೆ ವಿಶ್ರಾಂತಿ
ಆದರೆ ಇತ್ತೀಚೆಗಿನ ದಿನಗಳಲ್ಲಿ ಹೆಚ್ಚಿನವರು ನಡು ರಾತ್ರಿಯಾದರೂ ಬೇರೆ ಬೇರೆ ಕಾರಣಗಳಿಗೆ ನಿದ್ದೆ ಮಾಡದೆ, ನಿದ್ದೆ ಮಾಡಬೇಕಾದ ಅಮೂಲ್ಯ ಸಮಯವನ್ನು ವ್ಯರ್ಥವಾಗಿ ಕಳೆದು ಬಿಡುತ್ತಾರೆ. ಆದರೆ ಹೀಗೆ ಮಾಡುವುದು ಆರೋಗ್ಯದ ದೃಷ್ಠಿಯಿಂದ ಒಳ್ಳೆಯದಲ್ಲ ಎಂಬುದು ಬಹುತೇಕರಿಗೆ ಗೊತ್ತೇ ಆಗುತ್ತಿಲ್ಲ.
ನಾವು ಸೇವಿಸುವ ಆಹಾರದೊಂದಿಗೆ ನಿಯಮಿತ ನಿದ್ದೆಯೂ ಅವಶ್ಯಕ ಎಂಬುದರಲ್ಲಿ ಎರಡು ಮಾತಿಲ್ಲ. ಒಂದು ವೇಳೆ ನಿದ್ದೆಯಲ್ಲಿ ಏರುಪೇರಾದರೆ ಅದರ ಪರಿಣಾಮ ನೇರವಾಗಿ ನಮ್ಮ ಆರೋಗ್ಯದ ಮೇಲೆ ಬೀರುತ್ತದೆ. ಸಾಮಾನ್ಯವಾಗಿ ನಿದ್ದೆ ಕಡಿಮೆ ಮಾಡುವವರಲ್ಲಿ ಖಿನ್ನತೆ, ಉದ್ವೇಗ, ಅಶಾಂತಿ ತಾಂಡವವಾಡುತ್ತಿರುತ್ತದೆ. ಮತ್ತೊಂದೆಡೆ ಸ್ವಾಭಾವಿಕ ನಿದ್ದೆ ದೇಹದಿಂದ ದೂರವಾಗಿ ನಿದ್ರೆ ಮಾತ್ರೆಯ ಮೂಲಕ ನಿದ್ದೆ ಮಾಡುವಂತಹ ಪರಿಸ್ಥಿತಿಯೂ ಬಂದೊದಗುತ್ತದೆ. ನಿದ್ದೆಯಿಂದ ದೇಹಕ್ಕೆ ವಿಶ್ರಾಂತಿ ದೊರೆಯುತ್ತದೆ. ಆಳವಾದ ನಿದ್ದೆಯಿಂದ ಒಬ್ಬ ವ್ಯಕ್ತಿಯು ಉದ್ವೇಗದಿಂದ ಮುಕ್ತಿ ಪಡೆಯುತ್ತಾನಂತೆ. ಏಕೆಂದರೆ ಮೆದುಳು ಮತ್ತು ಶರೀರಗಳಿಗೆ ಸಂಪೂರ್ಣವಾದ ವಿಶ್ರಾಂತಿ ನಿದ್ದೆಯಿಂದಷ್ಟೆ ದೊರೆಯಲು ಸಾಧ್ಯ.

ನಿದ್ದೆ ಬಾರದಿರುವುದು ಕೂಡ ರೋಗವೇ..
ರಾತ್ರಿಯೆಲ್ಲಾ ನಿದ್ದೆ ಮಾಡಿದ್ದೇ ಆದರೆ, ಮುಂಜಾನೆ ಶರೀರ ಹಗುರವಾಗಿ ಉಲ್ಲಾಸ ಮೂಡುತ್ತದೆ. ಆದರೆ ನಿದ್ದೆಯ ಅಭಾವವಾದರೆ ಮನುಷ್ಯರಲ್ಲಿ ಸಿಡುಕು ಸ್ವಭಾವ ಹೆಚ್ಚಾಗಬಹುದು. ಶರೀರದಲ್ಲಿ ಸ್ನಾಯುಗಳು ದುರ್ಬಲವಾಗಿ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುತ್ತದೆ. ಎಷ್ಟೇ ಪ್ರಯತ್ನ ಮಾಡಿದರೂ ನಿದ್ದೆ ಬಾರದಿರುವುದು, ರಾತ್ರಿಯೆಲ್ಲಾ ಎಚ್ಚರವಾಗಿರುವುದು ಅಥವಾ ರಾತ್ರಿಯೆಲ್ಲಾ ನಿದ್ದೆಬಾರದೆ ಬೆಳಗಿನ ಜಾವ ತಡವಾಗಿ ನಿದ್ದೆ ಬರುವುದು ಇದು ಇನ್ಸೋಮ್ನಿಯಾ(ಅನಿದ್ದೆ) ರೋಗದ ಲಕ್ಷಣಗಳಂತೆ.
ಈ ರೋಗ ಹಲವು ಕಾರಣಗಳಿದ್ದಾಗ ಬರುತ್ತದೆ. ಶರೀರದಲ್ಲಿ ಅತಿಯಾದ ವೇದನೆ, ಹಳೆಯ ಕೆಮ್ಮು, ಮಾನಸಿಕ ವಿಕೃತಿ, ಡಿಪ್ರೆಷನ್ ಮುಂತಾದವು ಅನಿದ್ದೆಗೆ ಕಾರಣವಾಗುತ್ತದೆ. ಅನಿದ್ದೆಯನ್ನು ನಿವಾರಿಸಲು ಉತ್ತಮ ನಿದ್ದೆಯನ್ನು ಪಡೆಯಲು ಯೋಗದಲ್ಲಿ ಕೆಲವು ಕ್ರಮಗಳನ್ನು ವಿವರಿಸಲಾಗಿದೆ. ನಿದ್ದೆ ಬಾರದಿದ್ದಾಗ ಔಷಧಿಗೆ ಶರಣಾಗದೆ ಯೋಗ ವಿಜ್ಞಾನದಲ್ಲಿ ಹೇಳಲಾಗಿರುವ ಕೆಲವು ವಿಶೇಷ ರೀತಿಯ ಆಸನಗಳನ್ನು ಮಾಡುವುದರ ಮೂಲಕ ನಿದ್ದೆಯನ್ನು ಪಡೆಯಬಹುದು ಎಂದು ಹೇಳಲಾಗಿದೆ.

ಅನಿದ್ದೆಗೆ ಯೋಗವೇ ಮದ್ದು
ಶವಾಸನವನ್ನು ಮಾಡುವ ಮೂಲಕ ಅನಿದ್ದೆಯನ್ನು ದೂರ ಮಾಡಬಹುದಾಗಿದ್ದು, ಶವಾಸನ ಮಾಡುವಾಗ ಬೆನ್ನನ್ನು ನೆಲಕ್ಕೆ ಮಾಡಿ ನೀಳವಾಗಿ ಮಲಗಬೇಕು. ಅಂಗೈಗಳನ್ನು ಮೇಲಕ್ಕೆ ಕಾಣುವಂತೆ ಹಿಡಿದಿರಬೇಕು. ಎರಡು ಕಾಲುಗಳ ಮಧ್ಯೆ ಸುಮಾರು ಎರಡು ಅಡಿಗಳ ಅಂತರವಿರಬೇಕು. ಕಣ್ಣುಗಳನ್ನು ಮುಚ್ಚಿಕೊಂಡು ಶರೀರವನ್ನು ಸಂಪೂರ್ಣವಾಗಿ ಸಡಿಲಗೊಳಿಸಬೇಕು. ಶವಾಸನ ಮಾಡುವಾಗ ಶರೀರದ ಯಾವ ಭಾಗದಲ್ಲಿಯೂ ಕೂಡ ಬಿಗಿತವನ್ನು ಸಾಧಿಸಬಾರದು. ಆ ನಂತರ ಧ್ಯಾನವನ್ನು ಉಸಿರಾಟದತ್ತ ಹರಿಸಬೇಕು.
ಶ್ವಾಸ-ಉಚ್ಛಾಸವನ್ನು ಒಂದೇ ಎಂದು ಪರಿಗಣಿಸಿ ಒಂದು... ಎರಡು... ಹೀಗೆ ಎಣಿಸುತ್ತಾ ಹೋಗಬೇಕು. ಎಷ್ಟು ಸಾಧ್ಯವೋ ಅಷ್ಟು ಎಣಿಸುತ್ತಿರಬೇಕು. ಎಣಿಸುವ ಸಂಖ್ಯೆಯನ್ನು ಮರೆಯಬಾರದು. ಒಂದು ವೇಳೆ ಎಣಿಸುವ ಸಂಖ್ಯೆಯನ್ನು ಮರೆತರೂ, ಶರೀರವನ್ನು ಕದಲಿಸಬಾರದು. ಹೀಗೆ ಮಾಡುವುದರಿಂದ ಮನಸ್ಸು ಹಾಗೂ ಶರೀರ ಹಗುರವಾಗುತ್ತದೆ. ಅನಿದ್ದೆಯಿಂದ ಬಳಲುವವರಿಗೆ ಶವಾಸನವು ತುಂಬಾ ಉಪಯುಕ್ತವಾಗಿದ್ದು, ಭಯ, ಚಿಂತೆ, ಶೋಕ, ಕಾಮ ಮುಂತಾದವುಗಳಿಂದ ಬಳಲುವವರು ಶವಾಸನ ಮಾಡುವುದರಿಂದ ಖಂಡಿತವಾಗಿಯೂ ಪರಿಹಾರ ದೊರೆಯುತ್ತದೆ ಎಂಬುದು ಶವಾಸನ ಮಾಡಿ ಪರಿಹಾರ ಕಂಡುಕೊಂಡವರ ಅಭಿಪ್ರಾಯವಾಗಿದೆ.

ಸುಖನಿದ್ದೆಗೆ ಏನೇನು ಮಾಡಬೇಕು?
ಸುಖ ನಿದ್ದೆ ಬೇಕೆಂದರೆ ಪೂರ್ವ ದಿಕ್ಕಿಗೆ ತಲೆಮಾಡಿ ಮಲಗುವುದರಿಂದ, ನಿದ್ದೆ ಮಾಡುವ ಮೂರು ಗಂಟೆಗಳ ಮೊದಲು ಊಟ ಮಾಡುವುದರಿಂದ ಪಚನ ಕ್ರಿಯೆಗೆ ಹೆಚ್ಚಿನ ಭಾರ ಬೀಳುವುದರಿಂದ ನಿದ್ದೆಯು ಸುಲಭವಾಗಿ ಬರುತ್ತದೆ. ಇನ್ನು ಮಲಗುವ ಹಾಸಿಗೆಯು ಅತಿಗಟ್ಟಿಯಾಗಿಯೂ, ಮೆತ್ತಗಾಗಿಯೂ ಇರಬಾರದು. ಮಲಗುವ ಕೋಣೆ ಶಾಂತವಾಗಿದ್ದು, ಗಾಳಿ ಬೆಳಕಾಡುವಂತಿರಬೇಕು. ಮಲಗುವ ಮುನ್ನ ಸ್ನಾನ ಅಥವಾ ಕೈಕಾಲು ತೊಳೆದು ಮಲಗಬೇಕು. ತಜ್ಞರ ಅಭಿಪ್ರಾಯದಂತೆ ಆರೋಗ್ಯವಂತ ಮನುಷ್ಯನಿಗೆ 6 ರಿಂದ 8 ಗಂಟೆಗಳ ನಿದ್ದೆ ಅವಶ್ಯವಿರುತ್ತದೆ. ಅಷ್ಟೇ ಅಲ್ಲ ವಯಸ್ಸಿಗೆ ಅನುಗುಣವಾಗಿ ನಿದ್ದೆಯು ಬೇಕಾಗುತ್ತದೆ.

ಆರೋಗ್ಯಕರ ನಿದ್ದೆಯ ಸಮಯವೆಷ್ಟು?
ಒಂದು ತಿಂಗಳ ಮಗುವಿಗೆ 21 ಗಂಟೆ, ಆರು ತಿಂಗಳ ಮಗುವಿಗೆ 18 ಗಂಟೆ, ಒಂದು ವರ್ಷದ ಮಗುವಿಗೆ 12 ಗಂಟೆ, ನಾಲ್ಕು ವರ್ಷದ ಮಗುವಿಗೆ 11 ಗಂಟೆ, 12 ವರ್ಷ ಮೇಲ್ಪಟ್ಟವರಿಗೆ 10 ಗಂಟೆ, 16 ವರ್ಷದವರಿಗೆ 8 ಗಂಟೆ, 30 ವರ್ಷ ಮೇಲ್ಪಟ್ಟವರಿಗೆ 6 ರಿಂದ 8 ಗಂಟೆಗಳ ಕಾಲ ನಿದ್ದೆಯ ಅವಶ್ಯಕತೆಯಿರುತ್ತದೆ.
ಸಾಮಾನ್ಯವಾಗಿ ಶಾರೀರಿಕ ಹಾಗೂ ಮಾನಸಿಕವಾಗಿ ದಣಿಯುವವರಿಗೆ ನಿದ್ದೆಯು ಚೆನ್ನಾಗಿ ಬರುತ್ತದೆ. ನಿದ್ದೆಯಿಂದ ಆರೋಗ್ಯ ದೊರೆಯುತ್ತದೆ. ಹಾಗೆಂದು ಸದಾ ನಿದ್ದೆಯಲ್ಲೇ ತೊಡಗುವುದು ಆಲಸ್ಯ, ಸೋಮಾರಿತನವನ್ನು ಹುಟ್ಟು ಹಾಕುತ್ತದೆ. ಇದು ಆರೋಗ್ಯಕ್ಕೆ ಅಹಿತಕರವಾಗಿ ಪರಿಣಮಿಸುತ್ತದೆ. ಆದುದರಿಂದ ಸದಾ ಕ್ರಿಯಾಶೀಲ ಚಟುವಟಿಕೆಯಲ್ಲಿ ತೊಡಗಿ ನಿರ್ದಿಷ್ಟ ಸಮಯವನ್ನು ನಿದ್ದೆಗೆ ತೆಗೆದಿಡಿ. ಹಾಗೆಂದು ಸಮಯ ಸಿಕ್ಕಾಗಲೆಲ್ಲಾ ನಿದ್ದೆಗೆ ಜಾರುವುದು ಆರೋಗ್ಯಕರ ಲಕ್ಷಣವಲ್ಲ...
-
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
Amala Paul: ಡೇಟಿಂಗ್ನಲ್ಲೇ ಗರ್ಭಿಣಿಯಾದೆ, ಆತುರದಲ್ಲಿ ಎರಡನೇ ಮದುವೆ ಆಯ್ತು: ಹೆಬ್ಬುಲಿ ನಟಿ ಅಮಲಾ ಪೌಲ್ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
Horoscope March 17; ಈ ರಾಶಿಯವರ ಅದೃಷ್ಟ ಇಂದು ಬದಲಾಗಬಹುದು -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
Piped Gas: ಬೆಂಗಳೂರಿಗರಿಗೆ ತಲುಪದ ಪೈಪ್ಡ್ ಗ್ಯಾಸ್: ಮಹತ್ವಾಕಾಂಕ್ಷಿ ಯೋಜನೆಗೆ ವಿಘ್ನಗಳ ಸರಮಾಲೆ












Click it and Unblock the Notifications