ಮಹಾಘಟಬಂಧನ್ ನ ಪ್ರಧಾನಿ ಅಭ್ಯರ್ಥಿ ಯಾರು ಎಂದು ಬಿಜೆಪಿ ಹುಳ ಬಿಡುತ್ತಿರುವುದು ಏಕೆ?
Recommended Video
ವಿರೋಧ ಪಕ್ಷಗಳೆಲ್ಲ ಸೇರಿ ಒಟ್ಟಾಗುತ್ತಿರುವುದು ಕಂಡು ಬಿಜೆಪಿಗೆ ದಿಗಿಲಾಗುತ್ತಿದೆಯಾ? ಅದರ ಹೇಳಿಕೆ ಗಮನಿಸಿದಾಗ ಅದು ನಿಜ ಎನಿಸುತ್ತದೆ. ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳು ಒಗ್ಗೂಡಿ ಲೋಕಸಭೆ ಚುನಾವಣೆ ಎದುರಿಸಿದರೆ ಪ್ರಧಾನಿ ಅಭ್ಯರ್ಥಿ ಯಾರು ಎಂದು ಬಿಜೆಪಿ ಪ್ರಶ್ನೆ ಮಾಡುತ್ತಿದೆ.
ಆ ಮೂಲಕ ತನ್ನದೇ ಪಕ್ಷದಲ್ಲಿ ಒಂದು ಚುನಾವಣೆ ಹಿಂದಷ್ಟೇ ಜಾರಿಗೆ ತಂದ ನಿಯಮವನ್ನು ಇದೀಗ ಅಸ್ತ್ರದ ರೀತಿ ಬಳಸಿಕೊಳ್ಳಲು ಯತ್ನಿಸುತ್ತಿದೆ. ಅಂದಹಾಗೆ ಯಾವುದೇ ಪಕ್ಷವು ರಾಜ್ಯಗಳ ವಿಧಾನಸಭೆ ಚುನಾವಣೆ ಇರಲಿ ಅಥವಾ ಲೋಕಸಭೆ ಚುನಾವಣೆ ಇರಲಿ ಮುಖ್ಯಮಂತ್ರಿ ಅಥವಾ ಪ್ರಧಾನಿ ಅಭ್ಯರ್ಥಿಯ ಘೋಷಣೆ ಮಾಡುವುದು ಸಾಂವಿಧಾನಿಕ ಅಲ್ಲವೇ ಅಲ್ಲ.
ಪ್ರಧಾನಿ ಅಭ್ಯರ್ಥಿ ಯಾರೆಂದು ಪ್ರಕಟಿಸಿ : ಮಹಾಘಟಬಂಧನಕ್ಕೆ ಬಿಜೆಪಿ ಸವಾಲು!
ಅಂದರೆ ಚುನಾವಣೆ ಮುಗಿದು, ಆಯ್ಕೆಯಾದ ಶಾಸಕರು ಅಥವಾ ಸಂಸದರು ಸೇರಿ ತಮ್ಮ ನಾಯಕರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆ ಮೂಲಕ ಮುಖ್ಯಮಂತ್ರಿ ಅಥವಾ ಪ್ರಧಾನಮಂತ್ರಿಯ ಆಯ್ಕೆ ಆಗುತ್ತದೆ. ಸಂವಿಧಾನ ಬದ್ಧವಾಗಿ ಇದೇ ನಿಯಮ. ಆತ್ಮವಿಶ್ವಾಸದ ಕೊರತೆ ಇರುವ ಕಾರಣಕ್ಕೆ ಹಾಗೂ ಪರಸ್ಪರ ಅಪನಂಬಿಕೆ ಇರುವುದರಿಂದ ವಿರೋಧ ಪಕ್ಷಗಳ ಮೈತ್ರಿಕೂಟದಿಂದ ಪ್ರಧಾನಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡಲ್ಲ ಎಂದು ಬಿಜೆಪಿ ದೊಡ್ಡ ಧ್ವನಿ ಮಾಡುತ್ತಿದೆ.
ಉತ್ತರಪ್ರದೇಶದಲ್ಲಿ ಏಕೆ ಮುಂಚಿತವಾಗಿ ಘೋಷಣೆ ಮಾಡಲಿಲ್ಲ?
ಹಾಗಿದ್ದರೆ ಉತ್ತರಪ್ರದೇಶ ಹಾಗೂ ತ್ರಿಪುರಾ ವಿಧಾನಸಭಾ ಚುನಾವಣೆಗಳಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಗಳನ್ನು ಬಿಜೆಪಿ ಏಕೆ ಮುಂಚಿತವಾಗಿ ಘೋಷಣೆ ಮಾಡಿರಲಿಲ್ಲ ಎಂಬ ಪ್ರಶ್ನೆ ಬರುತ್ತದೆ. ಅಷ್ಟೇ ಅಲ್ಲ, ಬಹಳ ಕಡೆ ಅದೇ ನಿಯಮವೇ ಪಾಲಿಸಿಕೊಂಡು ಬರಲಾಗುತ್ತದೆ. ಕಳೆದ ಬಾರಿ ಲೋಕಸಭೆ ಚುನಾವಣೆ ವೇಳೆ ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸುವ ಹಿಂದೆ ಸಂಪನ್ಮೂಲ ಕ್ರೋಡೀಕರಣ ಹಾಗೂ ವರ್ಚಸ್ಸು ಎಂಬ ಎರಡು ಲೆಕ್ಕಾಚಾರ ಇತ್ತು.
ಬಿಜೆಪಿಯ ಹಿರಿಯರು ಮೋದಿ ಆಕ್ಷೇಪ ವ್ಯಕ್ತಪಡಿಸಿದ್ದರು
ಕಟ್ಟಾ ಹಿಂದುತ್ವವಾದಿ, ಗೋಧ್ರಾ ಹತ್ಯಾಕಾಂಡದ ನೆರಳು ಇನ್ಯಾವುದೇ ಆಕ್ಷೇಪಗಳು ಇದ್ದರೂ ನರೇಂದ್ರ ಮೋದಿ ಉದ್ಯಮಿಗಳ ಸ್ನೇಹಿ, ಜತೆಗೆ ದೊಡ್ಡ ಮಟ್ಟದ ಭ್ರಷ್ಟಾಚಾರ ಆರೋಪ ಇಲ್ಲ. ಅವರನ್ನು ಮುಂದೆ ನಿಲ್ಲಿಸಿಕೊಂಡು ಚುನಾವಣೆ ಎದುರಿಸಬಹುದು ಎಂಬ ಕಾರಣಕ್ಕೆ ಮುಂಚಿತವಾಗಿಯೇ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡಿಬಿಟ್ಟಿತು. ಅದಕ್ಕೆ ಆ ಪಕ್ಷದಲ್ಲೇ ಹಲವು ಹಿರಿಯರು ಆಕ್ಷೇಪ ವ್ಯಕ್ತಪಡಿಸಿದ್ದರು.
ವಿಶ್ಲೇಷಣೆ : ಅಕಸ್ಮಾತ್ ಚುನಾವಣೋತ್ತರ ಸಮೀಕ್ಷೆ ಸತ್ಯವಾದರೆ...
ಮಧ್ಯಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಅದೇ ದಾಳ
ಮಧ್ಯಪ್ರದೇಶದ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಬಿಜೆಪಿ ಮತ್ತದೇ ದಾಳ ಉರುಳಿಸಿತು. ಅಲ್ಲಿ ಕಾಂಗ್ರೆಸ್ ಗೆದ್ದರೆ ಮುಖ್ಯಮಂತ್ರಿ ಯಾರು? ಎಂಬುದು ಬಿಜೆಪಿಯ ಪ್ರಶ್ನೆ ಆಗಿತ್ತು. ಹೌದು, ಅದರಿಂದ ಆಗಬೇಕಾದ್ದೇನು ಎಂಬ ಪ್ರಶ್ನೆಗೆ ಉತ್ತರ ಬೇಕಲ್ಲವಾ? ಭಾರತದ ಚುನಾವಣಾ ಪದ್ಧತಿಯಲ್ಲಿ ಆ ಅಂಶಕ್ಕೆ ಮಾನ್ಯತೆಯೇ ಇಲ್ಲ ಎಂಬುದನ್ನು ಭಾರತೀಯ ಜನತಾ ಪಕ್ಷ ಬೇಕೆಂತಲೇ ಮರೆಮಾಚುತ್ತಿದೆ. ಮೊದಲಿಗೆ ಜನರಿಂದ ಆಯ್ಕೆ ಆಗಬೇಕು. ಆ ನಂತರ ಜನಪ್ರತಿನಿಧಿಗಳು ಸೇರಿ ತಮ್ಮ ನಾಯಕನನ್ನು ಆರಿಸಿಕೊಳ್ಳಬೇಕು. ಹೀಗಲ್ಲದೆ ಮುಂಚಿತವಾಗಿಯೇ ಪ್ರಧಾನಿ ಅಥವಾ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡುವುದು ಸಂವಿಧಾನದ ಆಶಯಕ್ಕೆ ವಿರುದ್ಧ ಆಗುತ್ತದೆ.
ಮಹಾಘಟಬಂಧನ್ ಬಗ್ಗೆ ಅನುಮಾನ ಮೂಡಿಸುವ ಪ್ರಯತ್ನ
ಇದೀಗ ಮಹಾಘಟಬಂಧನ್ ಬಗ್ಗೆ ಜನರಲ್ಲಿ ಅನುಮಾನ ಮೂಡಿಸಲು ಅಂಥದ್ದೇ ಪ್ರಯತ್ನ ಮಾಡುತ್ತದೆ. ಆದರೆ ರಾಜಕೀಯ ಅನುಭವ ಇರುವ ನಾಯಕರೆಲ್ಲ ಒಂದೇ ಧ್ವನಿಯ ಉತ್ತರ ನೀಡುತ್ತಿದ್ದಾರೆ. ಮೊದಲಿಗೆ ಚುನಾವಣೆ ನಡೆದು, ಫಲಿತಾಂಶ ಬರಲಿ. ಯಾವ ಪಕ್ಷ ಹೆಚ್ಚಿನ ಸ್ಥಾನ ಪಡೆದು, ಸರ್ವ ಸಮ್ಮತ ಅಭ್ಯರ್ಥಿಯಾಗಿ ಒಬ್ಬರನ್ನು ಆಯ್ಕೆ ಮಾಡಲಾಗುವುದೋ ಅವರೇ ಪ್ರಧಾನಿ ಎನ್ನುತ್ತಿದ್ದಾರೆ. ಇಂಥ ಒಗ್ಗಟ್ಟು ಹಾಗೂ ರಾಜಕೀಯ ಬುದ್ಧಿವಂತಿಕೆ ಬಿಜೆಪಿ ಪಾಲಿಗೆ ಹೊಡೆತ ಆಗಲಿದೆ. ಆದ್ದರಿಂದ ಪ್ರಧಾನಿ ಅಭ್ಯರ್ಥಿ ಯಾರು ಎಂಬ ಹುಳ ಬಿಡುತ್ತಿದೆ ಬಿಜೆಪಿ.