ಸೋನಿಯಾ ನಿವೃತ್ತಿ ಬಳಿಕ ಯುಪಿಎ ಸಾರಥ್ಯ ಯಾರಿಗೆ?: ಮುಂಚೂಣಿಯಲ್ಲಿ ಯಾರ ಹೆಸರು?
ನವದೆಹಲಿ, ಡಿಸೆಂಬರ್ 10: ಕೇಂದ್ರದಲ್ಲಿನ ಯುಪಿಎ ಮೈತ್ರಿಕೂಟಕ್ಕೆ ಸುದೀರ್ಘ ಸಮಯದಿಂದ ಮುಖ್ಯಸ್ಥರಾಗಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಈ ಸ್ಥಾನದಿಂದ ನಿವೃತ್ತರಾಗಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಮುಂದಿನ ಲೋಕಸಭೆ ಚುನಾವಣೆಯ ವೇಳೆ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟದ ಎದುರು ಕಣಕ್ಕಿಳಿಯುವ ಯುಪಿಎ ಮೈತ್ರಿಕೂಟಕ್ಕೆ ಹೊಸ ಸಾರಥಿ ಬರುವ ಸಾಧ್ಯತೆ ದಟ್ಟವಾಗಿದೆ.
ಯುಪಿಎ ಅಧ್ಯಕ್ಷಗಿರಿಯಿಂದ ಸೋನಿಯಾ ಗಾಂಧಿ ಅವರು ಕೆಳಗಿಳಿದರೆ ಆ ಸ್ಥಾನಕ್ಕೆ ಯಾರು ಬರಲು ಸೂಕ್ತ ಎಂಬ ಚರ್ಚೆ ನಡೆಯುತ್ತಿದೆ. ಹಲವು ಹೆಸರುಗಳು ಕೇಳಿಬರುತ್ತಿದ್ದು, ಅವರಲ್ಲಿ ಹಿರಿಯ ರಾಜಕಾರಣಿ, ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಹೆಸರು ಮುಂಚೂಣಿಯಲ್ಲಿದೆ.
ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿರುವ ಸೋನಿಯಾ ಗಾಂಧಿ ಅವರು ಈ ಹುದ್ದೆಯಲ್ಲಿ ಮುಂದುವರಿಯಲು ಆಸಕ್ತಿ ತೋರಿಸುತ್ತಿಲ್ಲ. ಹೀಗಾಗಿ ತಮ್ಮ ಸ್ಥಾನಕ್ಕೆ ಶೀಘ್ರವೇ ಉತ್ತರಾಧಿಕಾರಿ ಸಿಗಲಿದ್ದಾರೆ ಎಂಬ ಆಶಯದಲ್ಲಿದ್ದಾರೆ. ಈ ಜವಾಬ್ದಾರಿಗೆ ಪವಾರ್ ಸೂಕ್ತ ವ್ಯಕ್ತಿ ಎಂದು ಪ್ರಮುಖವಾಗಿ ಪರಿಗಣಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಮುಂದೆ ಓದಿ.

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೂ ಚುನಾವಣೆ
ಮುಂದಿನ ವರ್ಷದ ಆರಂಭದಲ್ಲಿ ಕಾಂಗ್ರೆಸ್ ನಾಯಕತ್ವದ ಸ್ಥಾನಕ್ಕೆ ಚುನಾವಣೆ ನಡೆಯುವ ಸಾಧ್ಯತೆ ಇದೆ. ಈ ಬಾರಿ ಅಧ್ಯಕ್ಷ ಸ್ಥಾನದಿಂದ ರಾಹುಲ್ ಗಾಂಧಿ ದೂರ ಉಳಿಯುವ ಸಾಧ್ಯತೆ ಹೆಚ್ಚು. ಹೀಗಾಗಿ ಶೀಘ್ರದಲ್ಲಿಯೇ ಕಾಂಗ್ರೆಸ್ ಪಕ್ಷಕ್ಕೆ ಹೊಸ ಅಧ್ಯಕ್ಷರ ಆಯ್ಕೆ ನಡೆಯುವುದು ಬಹುತೇಕ ಖಚಿತವಾಗಿದೆ. ಲೋಕಸಭೆ ಚುನಾವಣೆಯ ಸೋಲಿನ ಬಳಿಕ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ರಾಹುಲ್ ಗಾಂಧಿ ತ್ಯಜಿಸಿದ್ದರಿಂದ ಸೋನಿಯಾ ಗಾಂಧಿ ಅವರನ್ನು ಮಧ್ಯಂತರ ಅಧ್ಯಕ್ಷರನ್ನಾಗಿ ಒತ್ತಾಯಪೂರ್ವಕವಾಗಿ ಆಯ್ಕೆ ಮಾಡಲಾಗಿತ್ತು.
ಕಳೆದ ಬಾರಿ ಸೋನಿಯಾ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ತ್ಯಜಿಸಿದ್ದರೂ ಯುಪಿಎ ಅಧ್ಯಕ್ಷರಾಗಿ ಮುಂದುವರಿದಿದ್ದರು. ಸಂಸದೀಯ ಪಕ್ಷದ ನಾಯಕಿಯಾಗಿದ್ದರು. ಆದರೆ ಈ ಬಾರಿ ಅವರು ಈ ಎಲ್ಲ ಹೊಣೆಗಾರಿಕೆಗಳಿಂದ ಸಂಪೂರ್ಣವಾಗಿ ನಿವೃತ್ತರಾಗಲಿದ್ದಾರೆ ಎಂದು ಹೇಳಲಾಗಿದೆ. ಹೀಗಾಗಿ ಯುಪಿಎ ಸಾರಥ್ಯದಿಂದಲೂ ಕೆಳಕ್ಕಿಳಿಯಲಿದ್ದಾರೆ.

ಅಧ್ಯಕ್ಷಗಿರಿಗೆ ಹಲವು ಹೆಸರು
ಅವರ ಸ್ಥಾನಕ್ಕೆ ಯಾವ ಮುಖಂಡರು ಸೂಕ್ತರಾಗಬಹುದು ಎನ್ನುವ ಪ್ರಶ್ನೆ ಉದ್ಭವಿಸಿದೆ. ಹಿರಿಯ ರಾಜಕಾರಣಿ ಮತ್ತು ರಾಜಕೀಯದಲ್ಲಿ ಚತುರತೆ ಉಳ್ಳವರಾಗಿರಬೇಕು. ಜತೆಗೆ ಇತರೆ ಪಕ್ಷದವರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಒಕ್ಕೂಟವನ್ನು ಮುನ್ನಡೆಸುವ ಸಾಮರ್ಥ್ಯ ಇರಬೇಕು.
ಪ್ರಾದೇಶಿಕವಾಗಿ ಪ್ರಬಲರಾಗಿರುವ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಡಿಎಂಕೆಯ ಎಂಕೆ ಸ್ಟಾಲಿನ್ ಒಳಗೊಂಡಂತೆ ಹೆಚ್ಚಿನ ನಾಯಕರಿಗೆ ರಾಹುಲ್ ಗಾಂಧಿ ಒಳಗೊಂಡಂತೆ ಕಾಂಗ್ರೆಸ್ನ ಯುವ ಮುಖಂಡರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ಕಷ್ಟ. ಜತೆಗೆ ಕಾಂಗ್ರೆಸ್ ಈಗ ಬಹಳ ದುರ್ಬಲ ಸ್ಥಿತಿಯಲ್ಲಿದೆ. ಯುಪಿಎ ಅಧ್ಯಕ್ಷ ಸ್ಥಾನಕ್ಕೆ ಸೋನಿಯಾ ಗಾಂಧಿ ಅವರು ಆಯ್ಕೆಯಾಗುವ ಸಂದರ್ಭದಲ್ಲಿ ಇದ್ದ ಪ್ರಭಾವಳಿ ಭಾರಿ ಪ್ರಮಾಣದಲ್ಲಿ ಕ್ಷೀಣಿಸಿದೆ.

ಶರದ್ ಪವಾರ್ ಸಾಮರ್ಥ್ಯ
ಅಧ್ಯಕ್ಷ ಸ್ಥಾನದಲ್ಲಿರುವ ವ್ಯಕ್ತಿಯ ಮಾತಿಗೆ ಮೈತ್ರಿಕೂಟದ ಎಲ್ಲ ಪಕ್ಷಗಳೂ ಸಹಮತ ವ್ಯಕ್ತಪಡಿಸುವಂತೆ ಇರಬೇಕು. ಆ ಗುಣ ಸೋನಿಯಾ ಗಾಂಧಿ ಅವರ ಅಧ್ಯಕ್ಷತೆಗೆ ಇತ್ತು. ಅಷ್ಟೇ ಅಲ್ಲ, ಹೊಸ ಅಧ್ಯಕ್ಷರಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಪ್ರಾಬಲ್ಯದ ಎದುರು ಸ್ಪರ್ಧಿಸುವ ರಾಜಕೀಯ ತಾಕತ್ತು ಮುಖ್ಯ. ಸದ್ಯದ ಸನ್ನಿವೇಶದಲ್ಲಿ ಈ ಸಾಮರ್ಥ್ಯಗಳಲ್ಲಿ ಮುಂಚೂಣಿಯಲ್ಲಿ ಇರುವುದು ಶರದ್ ಪವಾರ್. ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಆಘಾತ ನೀಡಿ ಶಿವಸೇನಾ-ಎನ್ಸಿಪಿ-ಕಾಂಗ್ರೆಸ್ ಸರ್ಕಾರ ರಚಿಸುವುದರಲ್ಲಿ ಪವಾರ್ ಪ್ರಮುಖ ಪಾತ್ರ ವಹಿಸಿದ್ದರು.

ಶರದ್ ಪವಾರ್ ಅವರನ್ನು ನಂಬಲಾಗದು!
ಮೈತ್ರಿಕೂಟಗಳನ್ನು ನಿಭಾಯಿಸುವುದು ಯುಪಿಎ ಮುಖ್ಯಸ್ಥರಿಗೆ ಇರುವ ಬಹುದೊಡ್ಡ ಜವಾಬ್ದಾರಿ. ಪವಾರ್ ಅವರು ಕರೆ ನೀಡಿದರೆ ಇತರೆ ರಾಜಕೀಯ ನಾಯಕರು ಮಾತಿಗೆ ಬೆಲೆ ನೀಡುವ ಸಂಭವ ಹೆಚ್ಚು. ಆದರೆ ರಾಹುಲ್ ಗಾಂಧಿ ಜತೆ ಮಾತನಾಡಲು ಇಷ್ಟಪಡದ ಮಮತಾ ಬ್ಯಾನರ್ಜಿ, ಶರದ್ ಪವಾರ್ ಅವರಿಗೂ ಕಿಮ್ಮತ್ತು ನೀಡುತ್ತಾರೆ ಎಂದು ಹೇಳಲಾಗದು.
ಇನ್ನೊಂದೆಡೆ ಶರದ್ ಪವಾರ್ ಅವರು ಪ್ರಧಾನಿ ಮೋದಿ ಜತೆಗೂ ಉತ್ತಮ ಸಂಬಂಧ ಹೊಂದಿದ್ದಾರೆ. ಹೀಗಾಗಿ ಅವರಿಗೆ ಕೇಂದ್ರದಲ್ಲಿ ಮೈತ್ರಿಕೂಟವನ್ನು ಮುನ್ನಡೆಸುವುದು ಕಷ್ಟವಾಗಲಾರದು. ಆದರೆ ಒಂದೇ ಸಮಸ್ಯೆಯೇನೆಂದರೆ ಕಾಂಗ್ರೆಸ್ಸಿಗರು ಪವಾರ್ ಅವರನ್ನು ಸಂಪೂರ್ಣವಾಗಿ ನಂಬುವುದಿಲ್ಲ. ಅವರು ಯಾವಾಗ ಬೇಕಾದರೂ ಕೈಕೊಡಬಹುದು.

ಎನ್ಸಿಪಿ ವಿಲೀನಗೊಳಿಸಿ
ಚುನಾವಣೆಗಳಲ್ಲಿ ಕಾಂಗ್ರೆಸ್ ಶೋಚನೀಯ ಸೋಲು ಕಂಡಿದ್ದರೂ ಯುಪಿಎ ಅಧ್ಯಕ್ಷಗಿರಿ ಸೋನಿಯಾ ಗಾಂಧಿ ಅವರ ಬಳಿಯೇ ಇದ್ದಿದ್ದು ಪಕ್ಷಕ್ಕೆ ಒಂದು ಶಕ್ತಿಯಾಗಿತ್ತು. ಹೀಗಾಗಿ ಪವಾರ್ಗೆ ಏಕೆ ಅಧಿಕಾರ ಹಸ್ತಾಂತರಿಸಬೇಕು ಎಂಬ ಪ್ರಶ್ನೆ ಉದ್ಭವಿಸಿದೆ. ಎನ್ಸಿಪಿಯನ್ನು ಕಾಂಗ್ರೆಸ್ನೊಂದಿಗೆ ವಿಲೀನಗೊಳಿಸಬೇಕು ಮತ್ತು ಪವಾರ್ ಅವರನ್ನು ಯುಪಿಎ ಅಧ್ಯಕ್ಷರನ್ನಾಗಿ ನೇಮಿಸಬೇಕು ಎಂದು ಕಾಂಗ್ರೆಸ್ನ ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಆಗ ವಿರೋಧಿ, ಈಗ ಉತ್ತರಾಧಿಕಾರಿ?
ಒಂದು ವೇಳೆ ಸೋನಿಯಾ ಗಾಂಧಿ ಅವರ ಸ್ಥಾನಕ್ಕೆ ಶರದ್ ಪವಾರ್ ಬಂದರೆ ಅದು ಚರ್ಚಾಸ್ಪದ ವಿಷಯವಾಗಲಿದೆ. ಇಲ್ಲಿ ರಾಜಕೀಯ ಇತಿಹಾಸಗಳು ಮುನ್ನೆಲೆಗೆ ಬರಲಿದೆ. ಸೋನಿಯಾ ಗಾಂಧಿ ಅವರು ಪ್ರಧಾನಿಯಾಗದಂತೆ ವಿರೋಧಿಸಿದವರಲ್ಲಿಶರದ್ ಪವಾರ್ ಕೂಡ ಒಬ್ಬರು. ಸೋನಿಯಾ ಗಾಂಧಿ ವಿದೇಶಿಗರಾಗಿದ್ದಾರೆ. ಅವರಿಗೆ ಪ್ರಧಾನಿ ಸ್ಥಾನ ಸಿಗಬಾರದು ಎಂದು ವಿರೋಧಿಸಿ ಕಾಂಗ್ರೆಸ್ನಿಂದ ಹೊರಬಂದು ಎನ್ಸಿಪಿ ಕಟ್ಟಿದ್ದರು. ಇಂದು ಅದೇ ಶರದ್ ಪವಾರ್, ಸೋನಿಯಾ ಗಾಂಧಿ ಅವರ ಉತ್ತರಾಧಿಕಾರಿಯಾಗುವ ಸಾಧ್ಯತೆ ಹೆಚ್ಚಿದೆ.
-
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
13,00,000 ಕೋಟಿ ರೂಪಾಯಿ ಹೂಡಿಕೆದಾರರ ಹಣ ಉಡೀಸ್, ಭಾರತೀಯ ಷೇರುಪೇಟೆಯಲ್ಲಿ ಬಿರುಗಾಳಿ... Stock Market -
Traffic Advisory: ಮಾ.21 ರಂಜಾನ್ ಪ್ರಯುಕ್ತ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿಷೇಧ, ಪರ್ಯಾಯ ಮಾರ್ಗ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
ಕರ್ನಾಟಕ ಉಪಚುನಾವಣೆ: ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ -
ರೈಲ್ವೆ ಇಲಾಖೆಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಏ.15ರ ಗಡುವು: ಟಿ.ಎ.ನಾರಾಯಣಗೌಡ ಹೇಳಿದ್ದೇನು












Click it and Unblock the Notifications