ನವೆಂಬರ್ 15ಕ್ಕೆ ಮತ್ತೆ ಶಬರಿಮಲೆ ಓಪನ್, ದೇಗುಲಕ್ಕೆ ದಾರಿ ಹೀಗಿದೆ
ಕೊರೊನಾವೈರಸ್ ಸೋಂಕಿನ ನಡುವೆ ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ದೇವಾಲಯ ಸೀಮಿತ ಭಕ್ತವರ್ಗಕ್ಕಾಗಿ ತೆರೆಯಲಾಗಿತ್ತು. ಅಕ್ಟೋಬರ್ 17ರಿಂದ 21ರ ತನಕ ದೇಗುಲ ಪ್ರವೇಶಕ್ಕೆ ಅವಕಾಶ ನೀಡಲಾಗಿತ್ತು. ಅಕ್ಟೋಬರ್ 21ರಂದು ಸಂಜೆ ಮುಖ್ಯ ತಂತ್ರಿಗಳಾದ ಕಂಧಾರಾರು ರಾಜಿವಾರು ಅವರು ರಾತ್ರಿ ದೀಪಾರಾಧನೆ, ಪಡಿ ಪೂಜೆ, ಅಥಳ ಪೂಜೆ ಹಾಗೂ ಹರಿವರಸಾನಂ ಪೂಜೆ ಕೈಂಕರ್ಯಗಳನ್ನು ಪೂರೈಸಿ ದೇಗುಲದ ಬಾಗಿಲು ಬಂದ್ ಮಾಡಿದ್ದಾರೆ.
ನವೆಂಬರ್ 15 ರಿಂದ ಮತ್ತೆ ಮಂಡಲ ಪೂಜಾ ಮಹೋತ್ಸವದ ನಿಮಿತ್ತ ತೆರೆಯಲಾಗುತ್ತದೆ. ಡಿಸೆಂಬರ್ 27ಕ್ಕೆ ಬಾಗಿಲು ಮುಚ್ಚಲಾಗುತ್ತದೆ. ನಂತರ ಡಿಸೆಂಬರ್ 30ಕ್ಕೆ ಬಾಗಿಲು ತೆರೆದು ಜನವರಿ 15ರ ಮಕರ ಸಂಕ್ರಾಂತಿಯ ಜ್ಯೋತಿ ದರ್ಶನದ ತನಕ ಸೀಮಿತ ಭಕ್ತಾದಿಗಳಿಗೆ ಅವಕಾಶವಿರಲಿದೆ.
ಕಟ್ಟಿನಿಟ್ಟಿನ ನಿಯಮ, ಪರೀಕ್ಷೆ ನಡುವೆ ಇಬ್ಬರು ಭಕ್ತಾದಿಗಳಿಗೆ ಕೊವಿಡ್ 19 ಪಾಸಿಟಿವ್ ಪತ್ತೆಯಾಗಿರುವ ಸುದ್ದಿ ಬಂದಿದೆ. ತಮಿಳುನಾಡಿನ ಭಕ್ತರೊಬ್ಬರು ಹಾಗೂ ಕೇರಳದ ಅಡೂರಿನ ಭಕ್ತರೊಬ್ಬರಿಗೆ ನಿಲಕ್ಕಲ್ ನಲ್ಲಿ ಆಂಟಿಜನ್ ಪರೀಕ್ಷೆಯಲ್ಲಿ ಕೊವಿಡ್ 19 ಪಾಸಿಟಿವ್ ಎಂದು ವರದಿ ಬಂದಿದೆ ಎಂದು ಏಷ್ಯಾನೆಟ್ ಸುದ್ದಿವಾಹಿನಿ ವರದಿ ಮಾಡಿದೆ.

ಕೊವಿಡ್ 19 ನೆಗಟಿವ್ ಪ್ರಮಾಣ ಪತ್ರ ಕಡ್ಡಾಯ
ಕೊವಿಡ್ 19 ನಿಯಮಕ್ಕೆ ಅನುಸಾರವಾಗಿ 250 ಭಕ್ತಾದಿಗಳಿಗೆ ಮಾತ್ರ ಆನ್ ಲೈನ್ ಬುಕ್ಕಿಂಗ್ ಮೂಲಕ ಪ್ರವೇಶಕ್ಕೆ ಅನುಮತಿ ನೀಡಲಾಗಿತ್ತು. ಕೊವಿಡ್ 19 ನೆಗಟಿವ್ ಪ್ರಮಾಣ ಪತ್ರ ಕಡ್ಡಾಯವಾಗಿ ಹೊಂದಿರಬೇಕು ಎಂಬ ನಿಯಮ ವಿಧಿಸಲಾಗಿದೆ. ಒಂದು ವೇಳೆ ನೆಗಟಿವ್ ಪ್ರಮಾಣ ಪತ್ರ ಹೊಂದಿರದಿದ್ದರೆ, ನಿಲಕ್ಕಲ್ ಪ್ರವೇಶ ದ್ವಾರದಲಿರುವ ಆರೋಗ್ಯ ಕೇಂದ್ರಕ್ಕೆ ತೆರಳಿ ಆಂಟಿಜನ್ ಪರೀಕ್ಷೆ ಮಾಡಿಸಿಕೊಂಡು ಯಾವುದೇ ಸಮಸ್ಯೆ ಇಲ್ಲದಿದ್ದರೆ ಮಾತ್ರ ಸನ್ನಿಧಾನಂ ಬಳಿ ಬರಬಹುದಾಗಿದೆ. ತಿಂಗಳ ಪೂಜೆಗೆ 60ವರ್ಷ ಮೇಲ್ಪಟ್ಟ ಮಾಲೆಧಾರರಿಗೆ ಅವಕಾಶ ನಿರ್ಬಂಧಿಸಲಾಗಿದೆ.

ಮಂಡಲ ಪೂಜೆಗೆ 50 ದಶಲಕ್ಷ ಭಕ್ತರು
ಏನಿಲ್ಲವೆಂದರೂ ಶಬರಿಮಲೆಗೆ ಪ್ರತಿವರ್ಷ 40-50 ದಶಲಕ್ಷ ಭಕ್ತರು ಆಗಮಿಸುತ್ತಿದ್ದರು. ಸುಪ್ರೀಂ ಕೋರ್ಟ್ ಮಹಿಳೆಯರಿಗೂ ದೇವಾಲಯ ಪ್ರವೇಶಕ್ಕೆ ಅನುಮತಿ ನೀಡಿರುವುದರಿಂದ ಮಹಿಳಾ ಭಕ್ತರು ದೇಗುಲ ಪ್ರವೇಶಿಸಲು ಯತ್ನಿಸಿದ ಘಟನೆ ಈ ಹಿಂದಿನ ವರ್ಷ ನಡೆದಿತ್ತು. ಆದರೆ, ಈಗ ಆನ್ ಲೈನ್ ನಲ್ಲಿ ಬುಕ್ ಮಾಡಿದ ಸೀಮಿತ ಭಕ್ತರಿಗೆ ಮಾತ್ರ ಪ್ರವೇಶ ಅವಕಾಶ ಸಿಗಲಿದೆ. ತಂತ್ರಿಗಳು, ಆಡಳಿತ ವರ್ಗ ಸೇರಿಸಿದಂತೆ ಎಲ್ಲರ ಆರೋಗ್ಯದ ಬಗ್ಗೆ ದೇವಸ್ವಂ ಮಂಡಳಿ ನಿಗಾವಹಿಸಿದೆ.

ಕರ್ನಾಟಕದಿಂದ ತೆರಳುವ ಭಕ್ತರಿಗಾಗಿ ಮಾಹಿತಿ
ಶಬರಿಮಲೆಯು ಪಶ್ಚಿಮ ಘಟ್ಟದ ದಟ್ಟ ಕಾಡು ಪ್ರದೇಶದಲ್ಲಿ ಬರುತ್ತದೆ. ಕೊಚ್ಚಿ ಮತ್ತು ತಿರುವನಂತಪುರಂಗಳು ಇಲ್ಲಿಗೆ ಹತ್ತಿರದ ವಿಮಾನ ನಿಲ್ದಾಣಗಳು. ಕೊಚ್ಚಿ ವಿಮಾನ ನಿಲ್ದಾಣದಿಂದ 160 ಕಿ.ಮೀ. ಮತ್ತು ತಿರುವನಂತಪುರಂ ವಿಮಾನ ನಿಲ್ದಾಣದಿಂದ 170 ಕಿ.ಮೀ.ದೂರ ರಸ್ತೆ ಮಾರ್ಗವಾಗಿ ಇಲ್ಲಿಗೆ ಆಗಮಿಸಬೇಕಾಗುತ್ತದೆ.
ಶಬರಿಮಲೆಗೆ ರಸ್ತೆ ಮಾರ್ಗವಾಗಿ ಬರುವ ಭಕ್ತಾದಿಗಳೇ ಹೆಚ್ಚು. ಕರ್ನಾಟಕದಿಂದ ತೆರಳುವ ಪ್ರಯಾಣಿಕರು ತ್ರಿಶೂರ್ ಗೆ ತೆರಳಿದರೆ ಅಲ್ಲಿಂದ 210 ಕಿ.ಮೀ. ರಸ್ತೆ ಮಾರ್ಗವಾಗಿ ಚಲಿಸಬೇಕು. ಪಂಬಾದಿಂದ ಸನ್ನಿಧಾನಂಗೆ ಖಾಸಗಿ ವಾಹನಗಳಿವೆ. ಬೆಂಗಳೂರಿನ ಶಾಂತಿನಗರ ಬಸ್ ನಿಲ್ದಾಣದಿಂದ ಶಬರಿಮಲೆಗೆ ನೇರ ಬಸ್ ಸಂಚಾರ ವ್ಯವಸ್ಥೆ ಇದೆ.

ದೇಗುಲದ ಪೂಜಾ ಅವಧಿ
ಬೆಳಿಗ್ಗೆ 4 ರಿಂದ ಬೆಳಿಗ್ಗೆ 7:30 ಅವಧಿಯಲ್ಲಿ ನಿರ್ಮಾಲ್ಯ ದರ್ಶನ, ಗಣಪತಿ ಹೋಮ, ಉಷಾ ಪೂಜಾ, ಕಲಾಭಿಷೇಕಂ ಮತ್ತು ಬೆಳಿಗ್ಗೆ 4:15 ರಿಂದ 12:00 ಗಂಟೆಯವರೆಗೆ ದೇವಾಲಯದ ನೆಯ್ಯಾಭಿಶೇಕಂ(ತುಪ್ಪದ ಅಭಿಷೇಕ) ನ ಸಮಯ. 1.30ಕ್ಕೆ ದೇಗುಲ ಗರ್ಭಗುಡಿ ಬಂದ್ ಮಾಡಲಾಗುತ್ತದೆ. ಸಂಜೆ 4ರಿಂದ ದೀಪಾರಾಧನೆ, ಪುಷ್ಪಾಭಿಷೇಕ, ಅಥಳ ಪೂಜೆ, ಹರಿವರಸಾನಂ ನಡೆಸಲಾಗುತ್ತದೆ. ದೇವಾಲಯವನ್ನು ಸಾಮಾನ್ಯವಾಗಿ ಬೆಳಿಗ್ಗೆ 4 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ತೆರೆಯಲಾಗುತ್ತದೆ. ವಿಶೇಷ ಪೂಜೆಯ ಸಮಯದಲ್ಲಿ ಭಕ್ತಾದಿಗಳು ಬೆಳಿಗ್ಗೆ 3 ರಿಂದ 11 ಗಂಟೆಯವರೆಗೆ ದರ್ಶನ ಪಡೆಯಬಹದು.
Recommended Video

ದೇವಾಲಯದ ವಿಳಾಸ
ದೇವಾಲಯದ ವಿಳಾಸ: ಗುಡ್ಡನಾಡಿನ ಪ್ರದೇಶವಾದರೂ ಕೆಲವು ಮೊಬೈಲ್ ಫೋನ್ ನೆಟ್ವರ್ಕ್ ಸಿಗುತ್ತದೆ. ಕಾಡುಮಾರ್ಗದಲ್ಲಿ ಸಾಗುವಾಗ ನೆಟ್ವರ್ಕ್ ಕಷ್ಟ. ಶಬರಿಮಲೆ ದೇಗುಲದ ಬಳಿ ಮಾಹಿತಿ ಕೇಂದ್ರದಲ್ಲಿ ಅಗತ್ಯ ನೆರವು ಪಡೆದುಕೊಳ್ಳಬಹುದು. ಅಂಚೆ ಕಚೇರಿಯನ್ನು ಹೊಂದಿರುವ ಈ ದೇಗುಲದ ಆವರಣದ ವಿಳಾಸ ಹೀಗಿದೆ:
ಶಬರಿ ಮಲೆ ಅಯ್ಯಪ್ಪ ದೇವಾಲಯ
ಪೆರುನಾಡ್ ಗ್ರಾಮ ಪಂಚಾಯತ್
ಪತ್ತನಂತಿಟ್ಟ ಜಿಲ್ಲೆ
ಕೇರಳ ಭಾರತ- 689662
ಹೆಚ್ಚಿನ ಮಾಹಿತಿಗೆ, ಪ್ರವಾಸಿ ಪ್ಯಾಕೇಜ್ ಬುಕ್ ಮಾಡಿಕೊಳ್ಳಲು ದೇಗುಲದ ಅಧಿಕೃತ ವೆಬ್ ತಾಣ ಕ್ಲಿಕ್ ಮಾಡಿ












Click it and Unblock the Notifications