ಶಬರಿಮಲೆ ಯಾತ್ರೆ: ಅಯ್ಯಪ್ಪ ಸ್ವಾಮಿ ಸನ್ನಿಧಿಯ ಮಹತ್ವವೇನು?
ಪ್ರತಿ ಬಾರಿ ಸಂಕ್ರಾಂತಿ ಸಮೀಪಿಸುತ್ತಿದ್ದಂತೆಯೇ ಅಯ್ಯಪ್ಪ ಸ್ವಾಮಿ ಭಕ್ತರ ಸಂಭ್ರಮ ಮುಗಿಲುಮುಟ್ಟುತ್ತದೆ. ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವರ ಸನ್ನಿಧಿಗೆ ತೆರಳಿ ದೇವರ ಸಾನ್ನಿಧ್ಯದಲ್ಲಿ ಭಕ್ತಿಯ ಪರಾಕಾಷ್ಠೆ ಮೆರೆಯುವ ಗಳಿಗೆಗಾಗಿ ಅವರು ಕಾಯುತ್ತಿರುತ್ತಾರೆ. ಕೇರಳ ಮಾತ್ರವಲ್ಲ, ದಕ್ಷಿಣ ಭಾರತದ ಎಲ್ಲ ರಾಜ್ಯಗಳಿಂದಲೂ ಅಯ್ಯಪ್ಪ ಸ್ವಾಮಿಗೆ ಲಕ್ಷಾಂತರ ಭಕ್ತರಿದ್ದಾರೆ.
ಈ ವರ್ಷ ಕೊರೊನಾ ವೈರಸ್ ಸೋಂಕಿನ ಕಾರಣದಿಂದ ಮಕರ ಸಂಕ್ರಾಂತಿಯಂದು 'ಮಕರ ವಿಳಕ್ಕು' ದರ್ಶನಕ್ಕೆ ಭಕ್ತರಿಗೆ ಈ ಹಿಂದೆ ನೀಡುತ್ತಿದ್ದಂತೆ ಅವಕಾಶ ನೀಡುವ ಸಾಧ್ಯತೆ ಕಡಿಮೆ. 41 ದಿನಗಳ ಕಠಿಣ ವ್ರತ ನಡೆಸಿ ಅಯ್ಯಪ್ಪ ಸ್ವಾಮಿಗೆ ಪೂಜೆ ಸಲ್ಲಿಸಿ ಮಕರ ಜ್ಯೋತಿ ದರ್ಶನ ಮಾಡಿದರೆ ಜನ್ಮ ಸಾರ್ಥಕವಾಗಲಿದೆ ಎಂಬ ನಂಬಿಕೆ ಭಕ್ತರದು. ಹೀಗೆ ಪ್ರತಿ ವರ್ಷವೂ ಸಾವಿರಾರು ಭಕ್ತರು ಚಾಚೂ ತಪ್ಪದೆ ಅಯ್ಯಪ್ಪನ ಸಾನ್ನಿಧ್ಯಕ್ಕೆ ತೆರಳುತ್ತಾರೆ.
ಭಕ್ತಿ ಎನ್ನುವುದು ಇಲ್ಲಿ ಪ್ರಧಾನವಾಗಿ ಕಂಡರೂ ಅಯ್ಯಪ್ಪ ಸ್ವಾಮಿ ಸಾನ್ನಿಧ್ಯ ಭಾರತದ ಜಾತ್ಯತೀತ ಪರಿಕಲ್ಪನೆಗೆ ಬೃಹತ್ ಆಸರೆಯೂ ಹೌದು ಎನ್ನುವುದು ಸತ್ಯ. ಭಕ್ತಿಯ ಜತೆಗೆ ಇದು ಸಾಮಾಜಿಕ ಮಹತ್ವವನ್ನೂ ಪಡೆದುಕೊಂಡಿದೆ. ಏಕೆಂದರೆ ಅಯ್ಯಪ್ಪ ಸ್ವಾಮಿಯ ಮಾಲೆ ಧರಿಸುವ ಪ್ರತಿಯೊಬ್ಬರೂ ಅಯ್ಯಪ್ಪನ ಭಕ್ತರೇ ಆಗಿರುತ್ತಾರೆ. ಪ್ರತಿಯೊಬ್ಬರ ಪಾಲಿಗೂ ಅವರು 'ಸ್ವಾಮಿ'. ವಿಶೇಷವೆಂದರೆ ಇವರೆಲ್ಲರೂ ಜತೆಗೂಡಿ ಮನೆಯಿಂದ ದೂರ ಇದ್ದು, ತಮ್ಮ ಆಹಾರ ತಾವೇ ತಯಾರಿಸುವಾಗ ಯಾವುದೇ ಮೇಲು-ಕೀಳು ಜಾತಿಗಳು ಬರುವುದಿಲ್ಲ. ಅಷ್ಟರಮಟ್ಟಿಗೆ ಅಯ್ಯಪ್ಪ ಸ್ವಾಮಿಯ ಭಕ್ತಿ ಜಾತ್ಯತೀತತೆಯ ಮೌಲ್ಯವನ್ನು ಬಿತ್ತುತ್ತದೆ. ಮುಂದೆ ಓದಿ.

ಏಕತೆ, ಸಹಬಾಳ್ವೆಯ ಮಂತ್ರ
ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ತೆರಳುವ ಭಕ್ತರು ಅಲ್ಲಿನ ಬೆಟ್ಟದ ಭಾಗಗಳಲ್ಲಿ ಬಿಡಾರ ಹೂಡುತ್ತಾರೆ. ಅಲ್ಲಿಯೇ ಆಹಾರ ತಯಾರಿಸಿ ಸೇವಿಸುತ್ತಾರೆ. ಇಲ್ಲಿ ತಯಾರಿಸುವುದು ಊಟ ಆಗಿರುವುದಿಲ್ಲ. ಆ ಪವಿತ್ರ ಪ್ರದೇಶದಲ್ಲಿ ಭಕ್ತರ ಪಾಲಿಗೆ ಇದು ಪ್ರಸಾದ, ಹಾಗೆಯೇ ಇಲ್ಲಿ ಸೇರಿಕೊಳ್ಳುವ ನಾನಾ ಭಾಷೆ, ಜಾತಿಯ ಭಕ್ತರು ಯಾವುದೇ ತಾರತಮ್ಯವಿಲ್ಲದೆ ಜತೆಗೂಡುತ್ತಾರೆ. ಒಬ್ಬರು ತಯಾರಿಸಿದ ಪ್ರಸಾದವನ್ನು ಎಲ್ಲರಿಗೂ ಹಂಚುತ್ತಾರೆ. ಹೀಗೆ ಶಬರಿಮಲೆ ಏಕತೆ, ಜಾತ್ಯತೀತತೆ, ಸಹಬಾಳ್ವೆಯ ಮೂಲತತ್ವಗಳನ್ನು ಸಾರುವ ಕ್ಷೇತ್ರ.

ಕಠಿಣ ವ್ರತ ಪಾಲಿಸುವ ಭಕ್ತರು
ಶಬರಿಮಲೆಗೆ ತೆರಳಲು ಮಾಲೆ ಧರಿಸುವ ಹರಕೆ ಹೊತ್ತವರು ಅತ್ಯಂತ ಕಠಿಣ ವ್ರತವನ್ನು ಪಾಲಿಸುತ್ತಾರೆ. ಕಾಲಿಗೆ ಚಪ್ಪಲಿ ಧರಿಸದೆ, ಬೆಳಿಗ್ಗೆ ಮುಂಚೆ ಕೊರೆಯುವ ಚಳಿಯಲ್ಲಿ ತಣ್ಣೀರು ಸ್ನಾನ ಮಾಡುತ್ತಾರೆ. ಐಷಾರಾಮಿ ಜೀವನ ಹಾಗೂ ಸೌಲಭ್ಯಗಳಿಂದ ದೂರ ಇರುತ್ತಾರೆ. ಸಸ್ಯಾಹಾರ ಮಾತ್ರ ಸೇವಿಸುತ್ತಾರೆ. ಹಾಸಿಗೆ ಮೇಲೆ ಮಲಗುವಂತಿಲ್ಲ. ಕುಟುಂಬದವರ ಸಂಪರ್ಕದಿಂದ ಆದಷ್ಟು ದೂರವೇ ಇರುತ್ತಾರೆ. ಯಾವುದೇ ದುಶ್ಚಟಗಳಿದ್ದರೂ ಈ ಸಮಯದಲ್ಲಿ ಅದನ್ನು ಕೈಬಿಡುತ್ತಾರೆ. ಅನೇಕರು ದುಶ್ಚಟಗಳಿಂದ ಮುಕ್ತರಾಗಲೆಂದೇ ಹರಕೆ ಹೊರುತ್ತಾರೆ. ಹರಕೆ ಹೊತ್ತವರು ಯಾವುದೇ ರೀತಿಯ ಕೆಟ್ಟ ಕೆಲಸಗಳಲ್ಲಿ ತೊಡಗುವಂತಿಲ್ಲ. ಇದೆಲ್ಲವೂ ಒಬ್ಬ ವ್ಯಕ್ತಿಯನ್ನು ಭಕ್ತಿ ಮಾರ್ಗದಲ್ಲಿ ಸಜ್ಜನನ್ನಾಗಿಸುವ ಸದುದ್ದೇಶವನ್ನೂ ಹೊಂದಿದೆ.

ಗುರುಸ್ವಾಮಿಯ ಗೌರವ
ಅಯ್ಯಪ್ಪ ಸ್ವಾಮಿ ಸನ್ನಿಧಿಗೆ ತೆರಳುವ ದೇವಸ್ಥಾನಕ್ಕೆ 18 ಮೆಟ್ಟಿಲುಗಳಿವೆ. ಒಂದು ಮೆಟ್ಟಿಲಿಗೆ ಒಂದು ವರ್ಷದಂತೆ 18 ವರ್ಷ ಯಾತ್ರೆ ಕೈಗೊಂಡ ಭಕ್ತರು ಗುರುಸ್ವಾಮಿ ಎಂಬ ಗೌರವ ಪಡೆದುಕೊಳ್ಳುತ್ತಾರೆ. ಹೊಸದಾಗಿ ಹರಕೆ ಹೊತ್ತವರಿಗೆ ನಿಯಮ ಮತ್ತು ವ್ರತ ಪಾಲನೆಗೆ ಮಾರ್ಗದರ್ಶನ ನೀಡುವುದು, ಶಬರಿಮಲೆ ಯಾತ್ರೆಗೆ ಭಕ್ತರನ್ನು ತಮ್ಮೊಂದಿಗೆ ಕರೆದೊಯ್ಯುವ ಜವಾಬ್ದಾರಿಗಳನ್ನು ಅವರು ನಿರ್ವಹಿಸುತ್ತಾರೆ.

ಮುಸ್ಲಿಮರೂ ಬರುತ್ತಾರೆ
ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಹೋದವರು ಮಕರ ಜ್ಯೋತಿಯ ದರ್ಶನ ಪಡೆಯುವುದು ತಮ್ಮ ಪುಣ್ಯ ಎಂದು ಭಾವಿಸುತ್ತಾರೆ. ಅಯ್ಯಪ್ಪನ ಸನ್ನಿಧಾನದ ಪೂರ್ವಭಾಗದಲ್ಲಿ ಅಯ್ಯಪ್ಪನ ಅನುಯಾಯಿಯಾಗಿ ಪರಿವರ್ತನೆಗೊಂಡ ಮುಸ್ಲಿಂ ವ್ಯಕ್ತಿ ವಾವರನಿಗೆ ಮೀಸಲಾಗಿರುವ ಜಾಗವೊಂದಿದೆ. ಅದನ್ನು 'ವಾವರುನಾಡ' ಎಂದು ಕರೆಯಲಾಗುತ್ತದೆ. ಇಲ್ಲಿಗೆ ಮುಸ್ಲಿಮರು ಸೇರಿದಂತೆ ಎಲ್ಲ ಧರ್ಮೀಯರೂ ಭೇಟಿ ನೀಡುವುದು ವಿಶೇಷ.

ಮಹಿಳೆಯರ ಪ್ರವೇಶಕ್ಕೆ ನಿರ್ಬಂಧ
ಜಾತಿ, ಧರ್ಮಗಳ ಸಾಮರಸ್ಯದ ಪ್ರತೀಕವಾಗಿ ಭಕ್ತಿ ಕೇಂದ್ರ ಗೋಚರಿಸಿದರೂ ಶಬರಿಮಲೆ ಧಾರ್ಮಿಕ ಸ್ಥಳ ಹಲವು ವರ್ಷಗಳಿಂದ ಲಿಂಗ ತಾರತಮ್ಯದ ವಿವಾದಕ್ಕೂ ಒಳಗಾಗಿದೆ. 8 ರಿಂದ 60 ವರ್ಷದವರೆಗಿನ ಮಹಿಳೆಯರು ಇಲ್ಲಿಗೆ ಪ್ರವೇಶಿಸಬಾರದೆಂಬ ನಿಯಮ ಸುಪ್ರೀಂಕೋರ್ಟ್ ಮೆಟ್ಟಿಲೇರಿ ಭಾರಿ ಸಂಘರ್ಷಕ್ಕೂ ಕಾರಣವಾಗಿತ್ತು. ಈ ಪ್ರಕರಣವನ್ನು ಬಗೆಹರಿಸಿ ಸುಪ್ರೀಂಕೋರ್ಟ್ ತೀರ್ಪು ನೀಡಿದ್ದರೂ ದೇವಾಲಯದ ಆಡಳಿತ ಮಂಡಳಿ ಮತ್ತು ಭಕ್ತರು ಮಹಿಳೆಯು ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆಯುವುದಕ್ಕೆ ಸಹಮತ ವ್ಯಕ್ತಪಡಿಸುತ್ತಿಲ್ಲ. ಕೆಲವು ಮಾರುವೇಷದಲ್ಲಿ ದೇವಸ್ಥಾನಕ್ಕೆ ಪ್ರವೇಶಿಸುವ ಪ್ರಯತ್ನ ನಡೆಸಿದ್ದು ತೀವ್ರ ಆಕ್ರೋಶಕ್ಕೆ ಗುರಿಯಾಗಿತ್ತು. ಹೀಗಾಗಿ ಒಂದೆಡೆ ಸಾಮರಸ್ಯದ ಸಂಕೇತವಾಗಿ ಕಾಣಿಸುವ ಅಯ್ಯಪ್ಪ ಸ್ವಾಮಿ ಸನ್ನಿಧಿ, ಇನ್ನೊಂದೆಡೆ ಭಕ್ತಿ ಮತ್ತು ಸಂಘರ್ಷದ ಸ್ವರೂಪವಾಗಿಯೂ ಕಾಣಿಸುತ್ತಿದೆ.
-
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
April 13 Horoscope: 12 ರಾಶಿಗಳಿಗೆ ಇಂದು ಪ್ರೇಮ, ಹಣಕಾಸು, ಉದ್ಯೋಗದಲ್ಲಿ ಏನು ಹೇಳುತ್ತದೆ ನಿಮ್ಮ ರಾಶಿ? -
Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ -
Hardik vs Krunal: ತಮ್ಮ ಹಾರ್ದಿಕ್ ವಿಕೆಟ್ ಕಿತ್ತ ಬೌಲರ್ಗಿಂತ ಹೆಚ್ಚಾಗಿ ಸಂಭ್ರಮಿಸಿದ ಕೃನಾಲ್ ಪಾಂಡ್ಯ, ಭಾರಿ ವೈರಲ್ -
Namma Metro: ಪ್ರಯಾಣಿಕರಿಗೆ ಸಿಹಿ ಸುದ್ದಿ, ಹಳದಿ ಮಾರ್ಗಕ್ಕಾಗಿ ಬಂತು ಹೊಸ ಡ್ರೈವರ್ ಲೆಸ್ ರೈಲು












Click it and Unblock the Notifications