ಎನ್ಕೌಂಟರ್ ಹೇಗೆ ಮತ್ತು ಯಾವಾಗ ನಡೆಯುತ್ತದೆ? ನಿಯಮಗಳು ಏನು?
Recommended Video
ಬೆಂಗಳೂರು, ಡಿಸೆಂಬರ್ 06: ತೆಲಂಗಾಣದ ಪಶುವೈದ್ಯೆ ದಿಶಾ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಹತ್ಯೆಗೈದಿದ್ದ ನಾಲ್ವರು ಆರೋಪಿಗಳು ಇಂದು ಬೆಳಿಗ್ಗೆ ಪೊಲೀಸ್ ಎನ್ಕೌಂಟರ್ ನಲ್ಲಿ ಸತ್ತಿದ್ದಾರೆ.
ಪೊಲೀಸರ ಈ ಕ್ರಮಕ್ಕೆ ದೇಶವೇ ಸಂಭ್ರಮಪಡುತ್ತಿದೆ. ಅತ್ಯಾಚಾರ ಎಸಗಿದ ಕೇವಲ ಹತ್ತೇ ದಿನದಲ್ಲಿ ಅತ್ಯಾಚಾರಿಗಳಿಗೆ ಶಿಕ್ಷೆ ಆಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಇದರ ನಡುವೆಯೇ ಈ ಎನ್ಕೌಂಟರ್ ಬಗ್ಗೆಯೂ ಅನುಮಾನಗಳು ಅಲ್ಲಲ್ಲಿ ಕೇಳಿಬರುತ್ತಿವೆ.
ಪೊಲೀಸರು ಎನ್ಕೌಂಟರ್ ಅನ್ನು ಹೇಗೆ ಮತ್ತು ಯಾವ ಸಂದರ್ಭದಲ್ಲಿ ಮಾಡುತ್ತಾರೆ. ಎನ್ಕೌಂಟರ್ ಮಾಡಲು ನಿಯಮಾವಳಿಗಳು ಏನು? ಎನ್ಕೌಂಟರ್ ಆದ ನಂತರದ ಕ್ರಮಗಳೇನು ಎಂಬ ಬಗ್ಗೆ ಮಾಹಿತಿ ಇಲ್ಲಿ ಲಭ್ಯವಿದೆ.
ಪೊಲೀಸ್ ಇಲಾಖೆ ನಿಯಮಾವಳಿಗಳಲ್ಲಿ ಅಥವಾ ಕಾನೂನಿನಲ್ಲಿ 'ಎನ್ಕೌಂಟರ್' ಎಂಬ ಪದವೇ ಇಲ್ಲ. ಎನ್ಕೌಂಟರ್ ಎಂಬುವುದು ಅಧಿಕೃತ ಪದವಲ್ಲ. ರೌಡಿಗಳನ್ನು, ಸಮಾಜಘಾತುಕರನ್ನು ಹೊಡೆದುರುಳಿಸಿದಾಗ ಆ ಕಾರ್ಯಾಚರಣೆಗೆ ಪೊಲೀಸರು ಇಟ್ಟುಕೊಂಡ ಹೆಸರು 'ಎನ್ಕೌಂಟರ್'. ಸಿನಿಮಾಗಳಿಂದಾಗಿ ಈ ಪದ ಅತಿ ಹೆಚ್ಚು ಜನಬಳಕೆಗೆ ಬಂದಿದೆ.

ಪೊಲೀಸ್ ಸೇರಿ ಎಲ್ಲರಿಗೂ ಒಂದು ಹಕ್ಕಿದೆ
ಪೊಲೀಸರು ಮಾತ್ರವಲ್ಲದೆ ಎಲ್ಲ ನಾಗರೀಕರಿಗೆ ಒಂದು ಹಕ್ಕಿದೆ ಅದೇ 'ಆತ್ಮರಕ್ಷಣೆ'. ಯಾವುದೇ ವ್ಯಕ್ತಿ ದೈಹಿಕವಾಗಿ ತೀವ್ರ ಹಲ್ಲೆ, ಆಯುಧ ಪ್ರಯೋಗ ಅಥವಾ ಕೊಲ್ಲುವ ಉದ್ದೇಶದಿಂದ ನಿಮ್ಮ ಮೇಲೆ ಎರಗಿ ಬಂದಾಗ ಆತ್ಮರಕ್ಷಣೆಗಾಗಿ ಆತನ ಮೇಲೆ ಪ್ರತಿದಾಳಿ ನಡೆಸಬಹುದು. ಪ್ರತಿದಾಳಿ ಎಂದರೆ ಕೊಲ್ಲಲೇಬೇಕು ಎಂಬುದಲ್ಲ, ಆದರೆ ಪ್ರತಿದಾಳಿ ಎಂಬುದು ಕೊಲ್ಲುವ ಹಂತಕ್ಕೆ ಹೋಗಿಬಿಟ್ಟರೂ ಅದಕ್ಕೆ ಶಿಕ್ಷೆಯಿಂದ ವಿನಾಯಿತಿ ಇದೆ.

ದಾಳಿಗೆ ಎರಗಿದ ವ್ಯಕ್ತಿಯ ಮೇಲೆ ಗುಂಡು ಹಾರಿಸಬಹುದು
ಪೊಲೀಸ್ ಎನ್ಕೌಂಟರ್ಗಳು ಸಹ ಇದೇ ಮಾದರಿಯಲ್ಲಿ ಆಗುತ್ತವೆ. ಯಾವುದೇ ರೌಡಿ ಅಥವಾ ಸಮಾಜಘಾತುಕ ಪೊಲೀಸರ ಮೇಲೆ ಹಲ್ಲೆ ಅಥವಾ ಕೊಲ್ಲಲು ಯತ್ನಿಸಿದಾಗ ಮಾತ್ರವೇ ಎದುರಿನ ವ್ಯಕ್ತಿ ಅಥವಾ ಆರೋಪಿಯ ಮೇಲೆ ಪೊಲೀಸರು ದಾಳಿ ಮಾಡಬಹುದಾಗಿರುತ್ತದೆ. ಸುಮ್ಮನೇ ಆರೋಪಿಯೊಬ್ಬನ ಮೇಲೆ ಗುಂಡು ಹಾರಿಸಿ ಕೊಂದರೆ ಅದು ಹತ್ಯೆಯೆಂದು ಪರಿಗಣಿಸಲ್ಪಡುತ್ತದೆ. ಅದಕ್ಕೆ ತೀವ್ರ ಸ್ವರೂಪದ ಶಿಕ್ಷೆ ಅನುಭವಿಸಬೇಕಾಗುತ್ತದೆ.

ಪೊಲೀಸರ ಬಂದೂಕು ಕಸಿಯಲು ಯತ್ನಿಸಿದ ಆರೋಪಿಗಳು
ತೆಲಂಗಾಣ ಎನ್ಕೌಂಟರ್ ಪ್ರಕರಣದಲ್ಲಿ ಆರೋಪಿಗಳು 'ಪೊಲೀಸರ ಮೇಲೆ ಕಲ್ಲು ತೂರಿ, ಎಸಿಪಿ ಅವರ ಗುಂಡು ತುಂಬಿದ ಬಂದೂಕು ಕಿತ್ತುಕೊಳ್ಳುವ ಪ್ರಯತ್ನ ಮಾಡಿದರು ಹಾಗಾಗಿ ಆತ್ಮ ರಕ್ಷಣೆ ಮಾಡಿಕೊಳ್ಳಲು ಅವರ ಮೇಲೆ ಗುಂಡು ಹಾರಿಸಲಾಯಿತು' ಎಂದು ಪೊಲೀಸ್ ಪ್ರಾಥಮಿಕ ಹೇಳಿಕೆಯಿಂದ ಗೊತ್ತಾಗಿದೆ.

ಪೊಲೀಸರಿಗೆ ಎನ್ಕೌಂಟರ್ ಒಂದೇ ದಾರಿಯೇ?
ಪೊಲೀಸರಿಗೆ ಎನ್ಕೌಂಟರ್ ಒಂದೇ ದಾರಿಯೇ? ಎಂದರೆ ಅದೂ ಇಲ್ಲ. ಹಲ್ಲೆ ಮಾಡಲು ಯತ್ನಿಸಿದ ಆರೋಪಿಗಳಿಗೆ ಕಾಲಿಗೆ ಅಥವಾ ಸೊಂಟದ ಕೆಳಗಡೆ ಗುಂಡು ಹೊಡೆದು ಅವರನ್ನು ಗಾಯಗೊಳಿಸಿ ತಹಬದಿಗೆ ತರುವ ದಾರಿಯೂ ಇದೆ. ಆರೋಪಿಯ ಕೈಯಲ್ಲಿ ಆಯುಧಗಳು ಇಲ್ಲದೇ ಇದ್ದಾಗ, ಆರೋಪಿಯು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಇದನ್ನು ಪೊಲೀಸರು ಪ್ರಯೋಗಿಸುತ್ತಾರೆ. ಬೆಂಗಳೂರಿನಲ್ಲಿ ಆಗಾಗ್ಗೆ ಇಂತಹಾ ಪ್ರಕರಣಗಳು ನಡೆಯುತ್ತಿರುತ್ತವೆ. ರೌಡಿಗಳ ಕಾಲುಗಳು ಪೊಲೀಸರ ಗುಂಡಿನ ರುಚಿ ನೋಡುತ್ತಲೇ ಇರುತ್ತವೆ.

ಬಂಧಿತ ಆರೋಪಿಗಳು ಹಲ್ಲೆ ಮಾಡಲು ಹೇಗೆ ಸಾಧ್ಯ?
ಬಂಧಿತ ಆರೋಪಿಗಳು ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಲು ಹೇಗೆ ಸಾಧ್ಯ? ಎಂಬ ಪ್ರಶ್ನೆಯೂ ಏಳುತ್ತದೆ. ಹಿಂದೆ ಆರೋಪಿಗಳ ಕೈಗೆ ದೊಡ್ಡ-ದೊಡ್ಡ ಕೋಳಗಳನ್ನು ಹಾಕುವ ಪದ್ಧತಿ ಇತ್ತು. ಆದರೆ ಮಾನವ ಹಕ್ಕು ಆಯೋಗವು ಇದನ್ನು ಖಂಡಿಸಿ ಅರ್ಜಿ ಸಲ್ಲಿಸಿದ ಕಾರಣ, ಆರೋಪಿಗಳಿಗೆ ಕೋಳ ಹಾಕುವ ಪದ್ಧತಿಯನ್ನು ನ್ಯಾಯಾಲಯದ ಆದೇಶದಂತೆ ಕೈಬಿಡಲಾಗಿದೆ. ಹಾಗಾಗಿ ಆರೋಪಿಗಳು ಯಾವ ಸಮಯದಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡುತ್ತಾರೆ. ಯಾವಾಗ ಪೊಲೀಸರ ಕೈಯಿಂದ ತಪ್ಪಿಸಿಕೊಂಡು ಓಡಿಹೋಗುತ್ತಾರೋ ಹೇಳಲಾಗದು. ಪೊಲೀಸರು ಎಲ್ಲ ಪರಿಸ್ಥಿತಿಗಳಿಗೆ ತಯಾರಾಗಿಯೇ ಇರಬೇಕಾಗುತ್ತದೆ.

ಎನ್ಕೌಂಟರ್ ನಂತರ ಪೊಲೀಸರಿಗೆ ತಲೆನೋವು ಹೆಚ್ಚು
ಎನ್ಕೌಂಟರ್ ನಡೆದ ಮೇಲೆ ಪೊಲೀಸರಿಗೆ ತಲೆನೋವು ಹೆಚ್ಚು. ಎನ್ಕೌಂಟರ್ ನಡೆದಾಗ ಅದೊಂದು ಕೊಲೆಯೆಂದೇ ಪರಿಗಣಿತವಾಗಿರುತ್ತದೆ. ಅದರ ಬಗ್ಗೆ ದೂರು ಸಹ ದಾಖಲಾಗುತ್ತದೆ. ಪೊಲೀಸ್ ಇಲಾಖೆಯಲ್ಲಿ ಆಂತರಿಕ ತನಿಖೆಯೊಂದು ಏರ್ಪಡುತ್ತದೆ. ಎನ್ಕೌಂಟರ್ ನಲ್ಲಿ ಭಾಗಿಯಾದ ಎಲ್ಲರೂ ತನಿಖಾಧಿಕಾರಿಗಳಿಗೆ ಪರಿಸ್ಥಿತಿ ವಿವರಿಸಿ ತಾವೇಕೆ ಗುಂಡು ಹಾರಿಸಿ ವ್ಯಕ್ತಿಯನ್ನು ಕೊಲ್ಲಬೇಕಾಯಿತು ಎಂಬುದನ್ನು ವಿವರಿಸಬೇಕಾಗುತ್ತದೆ. ವಿವರಣೆ ಸೂಕ್ತವಾಗಿ, ಸತ್ಯವಾಗಿ ಇದ್ದರೆ ಪೊಲೀಸರು ಬಚಾವ್ ಇಲ್ಲದಿದ್ದರೆ ಪೊಲೀಸರು ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ.

ಚಡಚಣ ಸಹೋದರರ ನಕಲಿ ಎನ್ಕೌಂಟರ್ ಪ್ರಕರಣ
ಸೊಹ್ರಾಬುದ್ಧೀನ್ ಶೇಖ್ ನಕಲಿ ಎನ್ಕೌಂಟರ್ ಪ್ರಕರಣ ದೇಶದೆಲ್ಲೆಡೆ ಸುದ್ದಿ ಮಾಡಿತ್ತು. ಎನ್ಕೌಂಟರ್ ಹೆಸರಲ್ಲಿ ಸೊಹ್ರಾಬುದ್ದೀನ್ ಶೇಖ್ ಮತ್ತು ಆತನ ಪತ್ನಿಯನ್ನು ಕೊಂದ ಪೊಲೀಸರು ಕಠಿಣ ಶಿಕ್ಷೆ ಎದುರಿಸಬೇಕಾಯಿತು. ರಾಜ್ಯದಲ್ಲೇ ನಡೆದ ಗಂಗಾಧರ ಚಡಚಣ, ಧರ್ಮರಾಜ್ ಚಡಚಣ ಪ್ರಕರಣವೂ ಸಹ ನಕಲಿ ಎನ್ಕೌಂಟರ್ಗೆ ಉದಾಹರಣೆ.

ಹಿರಿಯ ಡಿವೈಎಸ್ಪಿ ಹೀಗೆ ಹೇಳುತ್ತಾರೆ
'ಎಲ್ಲಾ ಎನ್ಕೌಂಟರ್ಗಳು ಅಥವಾ ಕಾಲಿಗೆ ಗುಂಡು ಹಾರಿಸುವ ಪ್ರಕರಣಗಳು ಆಕಸ್ಮಿಕವಾಗಿ ಆಗಿಬಿಡುವುದಿಲ್ಲ, ಇಂತಹಾ ಬಹುತೇಕ ಪ್ರಕರಣಗಳು 'ಯೋಜಿತ' ಆಗಿರುತ್ತವೆ. ಒಬ್ಬ ರೌಡಿಯ ಕಾಲಿನ ಮಂಡಿಗೆ ಗುಂಡು ಬಿದ್ದು ಅವನು ಜೀವಮಾನದಲ್ಲಿ ನಡೆಯಲಾಗದೇ ಹೋಗುವ ಸ್ಥಿತಿ ತಲುಪಿದರೆ ಆತನ ಚೇಲಾಗಳು ಇನ್ನಿತರರು ಭಯಗೊಂಡು ಸುಮ್ಮನಾಗುತ್ತಾರೆ. ಎನ್ಕೌಂಟರ್ಗಳೂ ಸಹ ಸಮಾಜಘಾತುಕರಿಗೆ ಭಯ ಹುಟ್ಟಿಸಲೆಂದೇ ಆಗುತ್ತವೆ. ಎಲ್ಲೋ ಕೆಲವು ಮಾತ್ರ ನಿಜವಾಗಿಯೂ ಆತ್ಮರಕ್ಷಣೆಗಾಗಿ ಮಾಡಿದ ಎನ್ಕೌಂಟರ್ ಆಗಿರುತ್ತದೆ' ಎಂದು ಹಿರಿಯ ಡಿವೈಎಸ್ಪಿ ಒಬ್ಬರು 'ಒನ್ಇಂಡಿಯಾ ಕನ್ನಡ' ಕ್ಕೆ ಹೇಳಿದರು.

ತೆಲಂಗಾಣ ಎನ್ಕೌಂಟರ್ ಸುತ್ತಾ ಇರುವ ಅನುಮಾನಗಳೇನು?
ತೆಲಂಗಾಣ ಎನ್ಕೌಂಟರ್ ಗೆ ಮರಳುವುದಾದರೆ, ಇಲ್ಲಿ ಎನ್ಕೌಂಟರ್ ಗೆ ಬಲಿಯಾಗಿರುವ ಆರೋಪಿಗಳೆಲ್ಲರೂ 25 ವರ್ಷಕ್ಕಿಂತಲೂ ಕಡಿಮೆ ವಯಸ್ಸಿನವರು. ಅವರು ಈ ಮೊದಲು ಇಂತಹಾ ಅಪರಾಧ ಪ್ರಕರಣಗಳಲ್ಲಿ ಭಾಗಿ ಆಗಿಲ್ಲ. ಆರೋಪಿಗಳ ಜೀವಕ್ಕೆ ಸಾರ್ವಜನಿಕರಿಂದ ಅಪಾಯ ಇದ್ದ ಕಾರಣ ಭಾರಿ ಬಿಗಿ ಭದ್ರತೆಯಲ್ಲಿ ಅವರನ್ನು ಇರಿಸಲಾಗಿತ್ತು. ಹಾಗಾಗಿ ತಪ್ಪಿಸಿಕೊಂಡು ಹೋಗುವ ಸಾಧ್ಯತೆ ವಿರಳ. ಆರೋಪಿಗಳು ಎಸಿಪಿಯ ಬಂದೂಕನ್ನು ಕಿತ್ತುಕೊಳ್ಳುವ ಪ್ರಯತ್ನ ಮಾಡಿದರು ಎನ್ನಲಾಗಿದೆ. ಹಾಗೆ ಮಾಡಿದ್ದರೆ ಒಬ್ಬ ಆರೋಪಿಯಷ್ಟೆ ಗುಂಡಿಗೆ ಬಲಿ ಆಗಬೇಕಿತ್ತು. ಇವೆಲ್ಲಾ ಅನುಮಾನಗಳು ಈ ಎನ್ಕೌಂಟರ್ ಸುತ್ತಾ ಇವೆ. ಇದಕ್ಕೆಲ್ಲಾ ತನಿಖೆಯಲ್ಲಿ ಉತ್ತರ ಸಿಗಲಿದೆ.

ನ್ಯಾಯವ್ಯವಸ್ಥೆಯ ಮೂಲಕ ನ್ಯಾಯ ದೊರಕಿದ್ದರೆ ಹೆಚ್ಚು ಸಂತೋಷ
ಏನೇ ಆಗಲಿ, ಅತ್ಯಾಚಾರಿ ಆರೋಪಿಗಳು ಹತರಾಗಿದ್ದಾರೆ. ಎನ್ಕೌಂಟರ್ ನಕಲಿಯೋ ಅಸಲಿಯೋ ನ್ಯಾಯ ದೊರಕಿದ ಭಾವ ಇಡೀಯ ದೇಶದ ಜನರಿಗೆ ಇದೆ. ಶಿಕ್ಷೆ ಇಷ್ಟೇ ವೇಗದಲ್ಲಿ ನ್ಯಾಯವ್ಯವಸ್ಥೆಯ ಮೂಲಕ ಆಗಿದ್ದರೆ ಇನ್ನೂ ಹೆಚ್ಚು ಸಂಭ್ರಮ ಪಡಬಹುದಿತ್ತು.












Click it and Unblock the Notifications