ಏನಿದು ಅಸ್ಸಾಂ-ಮಿಜೋರಾಂ ಗಡಿ ವಿವಾದ: ಇಲ್ಲಿದೆ ಸಂಪೂರ್ಣ ಮಾಹಿತಿ
ದಿಸ್ಪುರ್, ಜು.27: ಈಶಾನ್ಯ ರಾಜ್ಯವಾದ ಅಸ್ಸಾಂ ಮತ್ತು ಮಿಜೋರಾಂನ ಗಡಿಯಲ್ಲಿ ಎರಡೂ ರಾಜ್ಯಗಳ ಪೊಲೀಸರ ನಡುವೆ ರಕ್ತಸಿಕ್ತ ಘರ್ಷಣೆ ನಡೆದಿದ್ದು, ಇದರಲ್ಲಿ 6 ಅಸ್ಸಾಂ ಪೊಲೀಸರು ಸಾವನ್ನಪ್ಪಿದ್ದಾರೆ ಮತ್ತು ಎರಡೂ ರಾಜ್ಯಗಳ ಅನೇಕ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಈ ಹಿಂಸಾಚಾರವು ಉಭಯ ರಾಜ್ಯಗಳ ನಡುವಿನ ಗಡಿ ವಿವಾದದ ಹಿನ್ನೆಲೆ ನಡೆದಿದೆ.
ಇದಕ್ಕೂ ಮುನ್ನ ನಾವು ಪೊಲೀಸರು ಅಪರಾಧಿಗಳು ಮತ್ತು ಭಯೋತ್ಪಾದಕರೊಂದಿಗೆ ಘರ್ಷಣೆ ನಡೆಸಿರುವುದನ್ನು ನಾವೆಲ್ಲರೂ ಕೇಳಿದ್ದೇವೆ, ನೋಡಿದ್ದೇವೆ. ಆದರೆ ನಮ್ಮ ದೇಶದ ಎರಡು ರಾಜ್ಯಗಳ ಪೊಲೀಸರು ಈ ರೀತಿ ಪರಸ್ಪರ ಜಗಳವಾಡುತ್ತಿರುವುದು ದುರದೃಷ್ಟಕರ. ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಈಗ ಪರಸ್ಪರರ ವಿರುದ್ಧ ಬಹಿರಂಗವಾಗಿ ಟ್ವೀಟ್ ಮಾಡುತ್ತಿದ್ದಾರೆ. ದೇಶದ ಗೃಹ ಸಚಿವ ಅಮಿತ್ ಶಾರನ್ನು ಟ್ಯಾಗ್ ಮಾಡುತ್ತಿದ್ದಾರೆ. ಹಾಗೆಯೇ ಈ ಗಡಿ ವಿವಾದ ಬಗೆಹರಿಸಲು ಒತ್ತಾಯ ಮಾಡುತ್ತಿದ್ದಾರೆ.
ಇಂದು ಮಧ್ಯಾಹ್ನ, ಮಿಜೋರಾಂ ಮುಖ್ಯಮಂತ್ರಿ ಜೋರ್ ಮಥಂಗಾ ಹಿಂಸಾತ್ಮಕ ಘರ್ಷಣೆಯ ವೀಡಿಯೊವನ್ನು ಟ್ವೀಟ್ ಮಾಡಿದ್ದಾರೆ. ಅದರಲ್ಲಿ ದೇಶದ ಗೃಹ ಸಚಿವರನ್ನು ಟ್ಯಾಗ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಕೂಡ ಟ್ವೀಟ್ ಮಾಡಿ, ಮಿಜೋರಾಂ ಪೊಲೀಸರು ಅಸ್ಸಾಂ ಪೊಲೀಸರನ್ನು ತಮ್ಮ ಭೂಮಿಯಿಂದ ಹೊರಹಾಕಲು ಬಯಸುತ್ತಾರೆ ಎಂದು ಹೇಳಿದ್ದಾರೆ. ಹಾಗೆಯೇ ಅಸ್ಸಾಂ ಮುಖ್ಯಮಂತ್ರಿ ಕೂಡಾ ಗೃಹ ಸಚಿವ ಅಮಿತ್ ಶಾರನ್ನು ಟ್ವೀಟ್ನಲ್ಲಿ ಟ್ಯಾಗ್ ಮಾಡಿದ್ದಾರೆ.

ಗಡಿ ವಿವಾದ ಪ್ರಾರಂಭವಾದದ್ದು ಹೇಗೆ?
ಅಸ್ಸಾಂ ಮತ್ತು ಮಿಜೋರಾಂ ಗಡಿ ಸುಮಾರು 164 ಕಿ.ಮೀ. ವ್ಯಾಪ್ತಿಯಲ್ಲಿದೆ. ಈ ಗಡಿ ಐಜಾಲ್, ಕೋಲಾಸಿಬ್, ಮಿಜೋರಾಂನ ಮಾಮಿತ್ ಮತ್ತು ಅಸ್ಸಾಂನ ಕಚಾರ್, ಹೈಲೆ ಕಂಡಿ ಮತ್ತು ಕರಿಮ್ಗಂಜ್ ಜಿಲ್ಲೆಗಳ ಮೂಲಕ ಹಾದುಹೋಗುತ್ತದೆ. ಈ ಗಡಿಯ ಸಮೀಪವಿರುವ ಗುಟ್ಗುಟಿ ಗ್ರಾಮದ ಬಳಿ ಮಿಜೋರಾಂ ಪೊಲೀಸರು ಕೆಲವು ತಾತ್ಕಾಲಿಕ ಶಿಬಿರಗಳನ್ನು ಸ್ಥಾಪಿಸಿದಾಗ ವಿವಾದ ಪ್ರಾರಂಭವಾಗಿದೆ.

ಪೊಲೀಸರ ನಡುವೆ ಕಾದಾಟ
ಈ ಶಿಬಿರಗಳನ್ನು ತಮ್ಮ ರಾಜ್ಯದ ಜಮೀನಿನಲ್ಲಿ ನಿರ್ಮಿಸಲಾಗಿದೆ ಎಂದು ಅಸ್ಸಾಂ ಪೊಲೀಸರು ಹೇಳಿದರೆ, ಮಿಜೋರಾಂ ಪೊಲೀಸರು ಈ ಪ್ರದೇಶವು ತಮ್ಮದು. ಅಸ್ಸಾಂ ಪೊಲೀಸರು ತಮ್ಮ ಪ್ರದೇಶದಲ್ಲಿ ಈ ಶಿಬಿರಗಳನ್ನು ಸ್ಥಾಪಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಇದರ ನಂತರ, ಉಭಯ ರಾಜ್ಯಗಳ ಪೊಲೀಸರು ಪರಸ್ಪರ ಗುಂಡು ಹಾರಿಸಲು ಆರಂಭಿಸಿದ್ದಾರೆ. ಈ ಹಿಂಸಾಚಾರದಲ್ಲಿ 6 ಅಸ್ಸಾಂ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದು, ಲ್ಚಾರ್ ಜಿಲ್ಲೆಯ ಎಸ್ಪಿ ಸಹ ಗಾಯಗೊಂಡಿದ್ದಾರೆ. ಮಾತ್ರವಲ್ಲ, ಅನೇಕ ವಾಹನಗಳಿಗೆ ಹಾನಿಯಾಗಿದೆ.

146 ವರ್ಷಗಳ ಹಿಂದಿನ ಈ ಗಡಿ ವಿವಾದ
ಅಸ್ಸಾಂ ಮತ್ತು ಮಿಜೋರಾಂ ನಡುವಿನ ಈ ಗಡಿ ವಿವಾದವು 146 ವರ್ಷಗಳ ಹಿಂದೆಯೇ ಆರಂಭವಾಗಿದೆ. 1875 ರಲ್ಲಿ, ಅಸ್ಸಾಂನಲ್ಲಿ ಮಿಜೋರಾಂ ಮತ್ತು ಕಚಾರ್ ನಡುವಿನ ಗಡಿಯನ್ನು ಬ್ರಿಟಿಷರು ನಿರ್ಧರಿಸಿದ್ದರು. ನಂತರ ಮಿಜೋರಾಂ ಅನ್ನು ಲುಶಾಯ್ ಹಿಲ್ಸ್ ಎಂದು ಕರೆಯಲಾಯಿತು. ಈ ಮೊದಲು ಮಣಿಪುರ, ತ್ರಿಪುರ ಮತ್ತು ಅಸ್ಸಾಂ ರಾಜ್ಯಗಳು ಮಾತ್ರ ಈಶಾನ್ಯದಲ್ಲಿದ್ದರೆ, ಮಿಜೋರಾಂ, ಮೇಘಾಲಯ, ನಾಗಾಲ್ಯಾಂಡ್ ಮತ್ತು ಅರುಣಾಚಲ ಪ್ರದೇಶ ಅಸ್ಸಾಂನ ಭಾಗವಾಗಿದ್ದವು. ಇದನ್ನು ಗ್ರೇಟರ್ ಅಸ್ಸಾಂ ಎಂದು ಕರೆಯಲಾಗುತ್ತಿತ್ತು. ಅರುಣಾಚಲ ಪ್ರದೇಶದ ಕೆಲವು ಭಾಗಗಳನ್ನು ಗ್ರೇಟರ್ ಅಸ್ಸಾಂನಿಂದ ಬೇರ್ಪಡಿಸಿದ ಈಶಾನ್ಯ ಗಡಿನಾಡು ಸಂಸ್ಥೆ ಎಂದು ಕರೆಯಲಾಗುತ್ತಿತ್ತು.
ವಿವಿಧ ಬುಡಕಟ್ಟು ಜನರು ಈ ಪ್ರದೇಶದಲ್ಲಿ ವಾಸಿಸುತ್ತಿದ್ದರು ಮತ್ತು ಆ ಜನರ ಭಾಷೆ, ಸಂಸ್ಕೃತಿ ಮತ್ತು ಗುರುತು ಪರಸ್ಪರ ಭಿನ್ನವಾಗಿ ಉಳಿದಿತ್ತು. ಸ್ವಾತಂತ್ರ್ಯದ ನಂತರ, ಈ ಆಧಾರದ ಮೇಲೆ, ಮಿಜೋರಾಂ, ಮೇಘಾಲಯ, ನಾಗಾಲ್ಯಾಂಡ್ ಮತ್ತು ಅರುಣಾಚಲ ಪ್ರದೇಶ ಅಸ್ಸಾಂನಿಂದ ಪ್ರತ್ಯೇಕ ರಾಜ್ಯಗಳಾದವು. ಆದರೆ ಈ ರಾಜ್ಯಗಳ ನಡುವಿನ ಗಡಿಯ ನಿರ್ಣಯವು ಸ್ವಾತಂತ್ರ್ಯದ ನಂತರವೂ ವಿವಾದದ ವಿಷಯವಾಗಿ ಉಳಿದಿದೆ. 1875 ರ ಒಪ್ಪಂದದ ಪ್ರಕಾರ ಅಸ್ಸಾಂನ ಗಡಿಯನ್ನು ನಿರ್ಧರಿಸಬೇಕೆಂದು ಮಿಜೋರಾಂ ಬಯಸಿದೆ. ಸ್ವಾತಂತ್ರ್ಯಾನಂತರದ ಗಡಿ ಗುರುತಿಸುವಿಕೆಯಿಂದಾಗಿ ತಮ್ಮ ಮಿಜೋ ಭಾಷೆ ಮಾತನಾಡುವ ಅನೇಕ ಜಿಲ್ಲೆಗಳು ಅಸ್ಸಾಂನ ಭಾಗವಾಗಿವೆ ಎಂದು ಮಿಜೋರಾಂ ಸರ್ಕಾರಗಳು ಹೇಳಿಕೊಳ್ಳುತ್ತವೆ.

ರಾಜ್ಯದ ಗಡಿ ವಿವಾದ ಬಗೆಹರಿದಿಲ್ಲ, ಇನ್ನು ದೇಶಗಳ ಗಡಿ ವಿವಾದ?
2005 ರಲ್ಲಿ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ಗಡಿ ಆಯೋಗವನ್ನು ರಚಿಸುವಂತೆ ಸೂಚನೆ ನೀಡಿದ್ದಾರೆ. ಅಸ್ಸಾಂನಲ್ಲಿ ಸುಮಾರು 3 ಕೋಟಿ 12 ಲಕ್ಷ ಜನರು ವಾಸಿಸುತ್ತಿದ್ದಾರೆ. ಅವರಲ್ಲಿ ಬೋಡೋ, ಮಿಸ್ಸಿಂಗ್, ಸೋನೊವಾಲ್, ಕಚಾರಿ, ತಿವಾ ಅಹೋಮ್ ಮುಂತಾದ ಜಾತಿಗಳ ಜನರು ಸೇರಿದ್ದಾರೆ. ಮಿಜೋರಾಂನ ಒಟ್ಟು ಜನಸಂಖ್ಯೆ 1.2 ಮಿಲಿಯನ್ ಆಗಿದ್ದು, ಅಲ್ಲಿ ಹೆಚ್ಚಿನ ಜನರು ಮಿಜೊ ಜಾತಿಗೆ ಸೇರಿದವರಾಗಿದ್ದಾರೆ. ಮತ್ತು ಅವರ ಜನಸಂಖ್ಯೆಯ ಪಾಲು ಶೇಕಡ 74 ಆಗಿದೆ.
ಮಿಜೋರಾಂ ತನ್ನ 700 ಕಿ.ಮೀ ಉದ್ದದ ಗಡಿಯನ್ನು ಮಯನ್ಮಾರ್ ಹಾಗೂ ಬಾಂಗ್ಲಾದೇಶದೊಂದಿಗೆ ಹಂಚಿಕೊಂಡಿದೆ. ಆದ್ದರಿಂದ, ಈ ರಾಜ್ಯವು ಭದ್ರತೆಯ ದೃಷ್ಟಿಕೋನದಿಂದ ಬಹಳ ಸೂಕ್ಷ್ಮವಾಗಿರುತ್ತದೆ. ಮಯನ್ಮಾರ್ ಸರ್ಕಾರವನ್ನು ಉರುಳಿಸಿದ ನಂತರ ಹೆಚ್ಚಿನ ಸಂಖ್ಯೆಯ ನಿರಾಶ್ರಿತರು ಮಿಜೋರಾಂಗೆ ತಲುಪುತ್ತಿದ್ದಾರೆ. ಒಟ್ಟಾರೆಯಾಗಿ, ಈ ಸಂಪೂರ್ಣ ಗಡಿ ವಿವಾದದಿಂದ ಸುಮಾರು 150 ವರ್ಷಗಳಾಗಿವೆ ಆದರೆ ಇಲ್ಲಿಯವರೆಗೆ ಯಾವುದೇ ಪರಿಹಾರ ದೊರಕಿಲ್ಲ. ಇಷ್ಟು ವರ್ಷಗಳಲ್ಲಿ ಎರಡು ರಾಜ್ಯಗಳ ನಡುವಿನ ಗಡಿ ವಿವಾದವನ್ನು ಪರಿಹರಿಸಲು ನಮಗೆ ಸಾಧ್ಯವಾಗದಿದ್ದಾಗ ಇನ್ನು ನೆರೆಯ ರಾಷ್ಟ್ರಗಳೊಂದಿಗಿನ ಇಂತಹ ವಿವಾದಗಳನ್ನು ಬಗೆಹರಿಸಲು ಎಷ್ಟು ಸಮಯ ಬೇಕಾದೀತು ಎಂಬ ಪ್ರಶ್ನೆ ನಮ್ಮ ಎದುರಿದೆ.
ಮಿಜೋರಾಂನಲ್ಲಿ ಮಿಜೋ ನ್ಯಾಷನಲ್ ಫ್ರಂಟ್ ಮತ್ತು ಬಿಜೆಪಿ ಒಕ್ಕೂಟವು ಆಡಳಿತ ನಡೆಸುತ್ತಿದೆ. ಇದು ರಾಜ್ಯದ 40 ಸ್ಥಾನಗಳಲ್ಲಿ 27 ಸ್ಥಾನಗಳನ್ನು ಹೊಂದಿದೆ. ಬಿಜೆಪಿಯಲ್ಲಿ ಒಬ್ಬ ಶಾಸಕ ಮಾತ್ರ ಇದ್ದಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications