ದಸರಾ ವೇಳೆ ಕರಾವಳಿಯಲ್ಲಿ ಟ್ರೆಂಡ್ ಹುಟ್ಟಿಸಿದ ವಿವಿಧ ವೇಷಗಳು
ಮಂಗಳೂರು, ಅಕ್ಟೋಬರ್ 9: ನಾಡಹಬ್ಬ ದಸರಾ ಬಂದರೆ ಸಾಕು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧ ವೇಷಗಳು ಕಾಣಸಿಗುತ್ತದೆ. ಹುಲಿ ಕುಣಿತ ದಸರಾದ ಆಕರ್ಷಣೆಯಾದರೆ, ಇನ್ನುಳಿದ ವೇಷಗಳೂ ದಸರಾ ಸಂದರ್ಭದಲ್ಲಿ ಕಾಣಸಿಗುತ್ತವೆ. ದಸರಾದ ಒಂಭತ್ತು ದಿನದ ವೈವಿಧ್ಯ ವೇಷಗಳು ಜನರಿಗೆ ಮನರಂಜನೆ ನೀಡಿದರೆ, ಇದಕ್ಕೆ ಧಾರ್ಮಿಕ ಹಿನ್ನಲೆಯೂ ಇದೆ.
ಕರಾವಳಿಯ ಹುಲಿವೇಷ ದೇಶ- ವಿದೇಶಗಳಲ್ಲಿ ಪ್ರಖ್ಯಾತಿ ಗಳಿಸಿದೆ. ಹುಲಿವೇಷಧಾರಿಗಳ ಕುಣಿತ, ತಾಸೆಯ ಸದ್ದು, ಎಂಥವರ ಮೈನವಿರೇಳಿಸುವಂತೆ ಮಾಡುತ್ತದೆ. ಹುಲಿವೇಷ ಕರಾವಳಿಯ ಕಲಾ ಪ್ರಕಾರಗಳಲ್ಲಿ ಒಂದಾದರೂ, ಅದನ್ನು ಚಲನಚಿತ್ರಗಳಲ್ಲಿ ಅಳವಡಿಸುವ ಮೂಲಕ ಇಡೀ ದೇಶದಲ್ಲೇ ಹುಲಿಕುಣಿತಕ್ಕೆ ಅಭಿಮಾನಿಗಳು ಹುಟ್ಟುವಂತೆ ಮಾಡಲಾಗಿದೆ.
ದಸರಾ ಸಂದರ್ಭದಲ್ಲಿ ಸಣ್ಣ ಪ್ರಾಯದ ಎಳೆಯ ಮಕ್ಕಳೂ ಹುಲಿವೇಷ ಹಾಕಿರುವುದನ್ನು ಕರಾವಳಿಯಲ್ಲಿ ಕಾಣಬಹುದಾಗಿದೆ. ಹೀಗೆ ಮಕ್ಕಳು ವೇಷ ಹಾಕುವುದಕ್ಕೂ ಧಾರ್ಮಿಕ ಕಾರಣವಿದೆ. ಸಿಂಹವಾಹಿನಿಯಾದ ದೇವಿಯ ಬಳಿ ಮಕ್ಕಳು ಯಾವುದೇ ತೊಂದರೆಗಳಿಲ್ಲದೇ ಜನಿಸಿದರೆ ಅಥವಾ ಜನಿಸುವ ಸಂದರ್ಭದಲ್ಲಿ ಕೈಕಾಲುಗಳಲ್ಲಿ ತೊಂದರೆಯಿದ್ದರೆ ಪರಿಹರಿಸು ಎಂದು ಹೆತ್ತವರು ಹರಕೆ ಹೇಳುವ ಸಂಪ್ರದಾಯ ಕರಾವಳಿ ಭಾಗದಲ್ಲಿದೆ. ಹೀಗೆ ದೇವಿಯ ಕೃಪೆಯಿಂದ ಸಮಸ್ಯೆಗಳೆಲ್ಲಾ ಪರಿಹಾರವಾದರೆ, ದೇವಿಗೆ ಹರಕೆ ರೂಪದಲ್ಲಿ ಹುಲಿಯ ವೇಷ ಹಾಕಿ ದೇವಿಯ ಎದುರಲ್ಲಿ ಕುಣಿಸಿ ಹರಕೆ ಸಂದಾಯ ಮಾಡಲಾಗುತ್ತದೆ.

ಇನ್ನು ದಸರಾ ಸಂದರ್ಭದಲ್ಲಿ ಕಲಾವಿದರು ಹುಲಿವೇಷದ ತಂಡವನ್ನು ರಚಿಸಿ ನವರಾತ್ರಿಯ ಒಂಭತ್ತು ದಿನಗಳ ಕಾಲ ಊರೂರು ತಿರುಗಿ, ಹುಲಿಕುಣಿತ ಮಾಡುತ್ತಾರೆ. ಹೀಗೆ ಒಂಭತ್ತು ದಿನ ಜನ ನೀಡಿದ ಹಣವನ್ನು ಒಂಭತ್ತನೆಯ ದಿನದಂದು ದೇವಿ ಸನ್ನಿಧಿಗೆ ಹೋಗಿ, ಬಂದ ಹಣದಲ್ಲಿ ದೇವಸ್ಥಾನಕ್ಕೆ ಅರ್ಧಪಾಲು ನೀಡಿ ಹರಕೆ ತೀರಿಸಿಕೊಳ್ಳುತ್ತಾರೆ.
ಧಾರ್ಮಿಕ ನಂಬಿಕೆಯುಳ್ಳ ಹುಲಿ ವೇಷಧಾರಿಗಳು ಒಂಭತ್ತು ದಿನವೂ ಮನೆಗೆ ಹೋಗದೆ, ತಂಡದ ಜೊತೆ ದೇವಸ್ಥಾನದಲ್ಲಿ ವಾಸವಿರುತ್ತಾರೆ. ಮದ್ಯ-ಮಾಂಸಗಳಿಂದ ದೂರವಿದ್ದು, ದೈಹಿಕ, ಮಾನಸಿಕ ಶುದ್ಧತೆಯನ್ನು ಕಾಪಾಡಿಕೊಳ್ಳುತ್ತಾರೆ. ಒಮ್ಮೆ ಹುಲಿವೇಷ ಧರಿಸಿದರೆ ಮತ್ತೆ ವೇಷ ತೆಗೆಯುವುದು ಒಂಭತ್ತು ದಿನಗಳ ನಂತರವೇ. ಹೀಗಾಗಿ ಕರಾವಳಿ ಹುಲಿವೇಷ ಕೇವಲ ಮನರಂಜನೆ ಅಥವಾ ನೃತ್ಯ ಪ್ರಾಕಾರವಾಗಿ ಉಳಿಯದೆ ಧಾರ್ಮಿಕ ನಂಬಿಕೆಯಾಗಿ ಉಳಿದಿದೆ.

ಹುಲಿವೇಷದ ಜೊತೆಗೆ ಕರಾವಳಿಯಲ್ಲಿ ವಿವಿಧ ವೇಷಗಳು ಅಲ್ಲಲ್ಲಿ ಕಾಣುತ್ತದೆ. ಅದರಲ್ಲೂ ಈ ಬಾರಿ ಜನಮೆಚ್ಚುಗೆ ಗಳಿಸಿರುವುದು ಆನೆಯ ವೇಷ. ವಿಭಿನ್ನವಾಗಿರುವ ಆನೆ ವೇಷ ಸದ್ಯ ಕರಾವಳಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದೆ. ಗೋಣಿ ಚೀಲದಲ್ಲಿ ತಯಾರಿಸಿರುವ ಆನೆ ವೇಷ ನಿಜ ಆನೆಯನ್ನೇ ಹೋಲುತ್ತಿದೆ. ಆನೆಯ ವೇಷದೊಳಗೆ ಶಶಿಕಾಂತ್ ಮತ್ತು ಗಣೇಶ್ ಎಂಬುವವರಿದ್ದರೆ, ಮಾವುತನಾಗಿ ದಿನೇಶ್ ಸೇವೆ ಸಲ್ಲಿಸುತ್ತಿದ್ದಾರೆ.
ಕೇವಲ ಒಂದು ಸಾವಿರ ರೂಪಾಯಿ ಒಳಗೆ ಈ ಆನೆಯ ಪೃತಿಕೃತಿಯನ್ನು ತಯಾರಿಸಲಾಗಿದೆ. ಕಳೆದ ಹಲವು ವರ್ಷಗಳಿಂದ ದೇವಿಯ ಸೇವೆಗಾಗಿ ವೇಷಗಳನ್ನು ಮಾಡುತ್ತಿದ್ದೇವೆ. ಕಳೆದ ವರ್ಷಗಳಲ್ಲಿ ಸಿಂಹ ಸೇರಿದಂತೆ ವಿವಿಧ ವೇಷಗಳನ್ನು ಮಾಡಿದ್ದೇವು, ಈ ಬಾರಿ ಆನೆಯ ವೇಷ ಮಾಡಿದ್ದೇವೆ. ಜನರಿಗೆ ತುಂಬಾ ಖುಷಿಯಾಗಿದೆ. ಈ ಕಾರ್ಯ ಹಣಕ್ಕಾಗಿ ಮಾಡುತ್ತಿಲ್ಲ. ದೇವಿಯ ಸೇವೆ ಅಂತಾ ಪರಿಗಣಿಸಿ ಮಾಡುತ್ತಿದ್ದೇವೆ ಅಂತಾ ದಿನೇಶ್ ಹೇಳಿದ್ದಾರೆ.
ಇದರ ಜೊತೆಗೆ ಬಾವಲಿ, ಯಕ್ಷಗಾನ ವೇಷಧಾರಿಗಳು, ಮಂತ್ರವಾದಿ, ಕರಡಿ, ಸಿಂಹ ವೇಷಗಳೂ ದಸರಾ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅಲ್ಲಲ್ಲಿ ಕಾಣಸಿಗುತ್ತವೆ.












Click it and Unblock the Notifications