ಯೋಗಿ ಆದಿತ್ಯನಾಥ್, ಪಿಎಂ ಮೋದಿ ನಡುವೆ ಭಿನ್ನಮತ? ಉತ್ತರ ಹೇಳಿತು ವೈರಲ್ ಚಿತ್ರ
ಸತತವಾಗಿ ಐದು ಬಾರಿ ಉತ್ತರ ಪ್ರದೇಶದ ಗೋರಖಪುರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಯೋಗಿ ಆದಿತ್ಯನಾಥ್ 2017ರಲ್ಲಿ ಅಲ್ಲಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ತೆರವಾಗಿದ್ದ ಇವರು ಪ್ರತಿನಿಧಿಸುವ ಲೋಕಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಸೋಲು ಅನುಭವಿಸಿತ್ತು.
ಮುಖ್ಯಮಂತ್ರಿಯಾಗಿದ್ದರೂ, ತಾವು ಪ್ರತಿನಿಧಿಸುತ್ತಿದ್ದ ಕ್ಷೇತ್ರವನ್ನು ಉಳಿಸಿಕೊಳ್ಳಲಾಗದೇ ಇದ್ದದ್ದು ಸಿಎಂ ಯೋಗಿ ಆದಿತ್ಯನಾಥ್ ಮತ್ತು ಬಿಜೆಪಿಗೆ ತೀವ್ರ ಮುಜುಗರವನ್ನು ತಂದೊಡ್ಡಿತ್ತು. ಇದು, ಪ್ರಧಾನಿ ಮೋದಿ, ಬಿಜೆಪಿಯ ರಾಷ್ಟ್ರಾಧ್ಯಕ್ಷರಾಗಿದ್ದ ಅಮಿತ್ ಶಾ ಮತ್ತು ಯೋಗಿ ಆದಿತ್ಯನಾಥ್ ನಡುವಿನ ಭಿನ್ನಾಭಿಪ್ರಾಯಕ್ಕೆ ಮೊದಲು ನಾಂದಿ ಹಾಡಿತು ಎನ್ನುವ ಮಾತು ಚಾಲ್ತಿಯಲ್ಲಿತ್ತು.
ಉತ್ತರ ಪ್ರದೇಶ: ಎಬಿಪಿ ನ್ಯೂಸ್ - ಸಿವೋಟರ್ ಚುನಾವಣಾಪೂರ್ವ ಸಮೀಕ್ಷೆ ಫಲಿತಾಂಶ
ಇದಾದ ನಂತರ, ಬಿಜೆಪಿ ಹೈಕಮಾಂಡ್ ಮತ್ತು ಯೋಗಿ ಆದಿತ್ಯನಾಥ್ ನಡುವೆ ಸಂಬಂಧ ಅಷ್ಟಕಷ್ಟೇ ಎನ್ನುವ ಮಾತುಗಳು ಕೇಳಿ ಬರುತ್ತಿದ್ದವು. ಈಗ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಚಿತ್ರವೊಂದು ಮೋದಿ ಮತ್ತು ಯೋಗಿ ನಡುವೆ ಭಿನ್ನಾಭಿಪ್ರಾಯ ಇದೆಯಾ ಎಂದು ಪ್ರಶ್ನಿಸುವಂತಿದೆ.
ದೇಶದಲ್ಲೇ ಮೊದಲು: ಉತ್ತರ ಪ್ರದೇಶದಲ್ಲಿ ಹಸುಗಳ ತುರ್ತು ಚಿಕಿತ್ಸೆಗೆ ಆಂಬುಲೆನ್ಸ್ ಸೇವೆ
ಯೋಗಿ ಮತ್ತು ಮೋದಿ ನಡುವೆ ಭಿನ್ನಾಭಿಪ್ರಾಯವಿದೆ ಎಂದು ವಿರೋಧ ಪಕ್ಷಗಳು ಸದಾ ಟೀಕಿಸುತ್ತಿದ್ದವು. ಇದಕ್ಕೆ, ಕೆಲವು ದಿನಗಳ ಹಿಂದೆ ನಡೆದ ಪೂರ್ವಾಂಚಲ ಎಕ್ಸ್ ಪ್ರೆಸ್ ವೇ ಉದ್ಘಾಟನೆಯ ಚಿತ್ರಗಳನ್ನು ಹಾಕಿ, ವಿರೋಧ ಪಕ್ಷಗಳು ಮತ್ತೆ ಯೋಗಿ ವಿರುದ್ದ ಮುಗಿಬೀಳಲು ಆರಂಭಿಸಿದ್ದವು. ಅದಕ್ಕೆ, ಯೋಗಿ ಆದಿತ್ಯನಾಥ್ ಈಗ ಉತ್ತರವನ್ನು ನೀಡಿದ್ದಾರೆ.
ಪೂರ್ವಾಂಚಲ ಎಕ್ಸ್ ಪ್ರೆಸ್ ವೇ ಉದ್ಘಾಟನಾ ಕಾರ್ಯಕ್ರಮ
ವಿಧಾನಸಭಾ ಚುನಾವಣಾ ಹೊಸ್ತಿಲಲ್ಲಿರುವ ಉತ್ತರ ಪ್ರದೇಶದಲ್ಲಿನ ಪೂರ್ವಾಂಚಲ ಎಕ್ಸ್ ಪ್ರೆಸ್ ವೇ ಉದ್ಘಾಟನಾ ಕಾರ್ಯಕ್ರಮವನ್ನು ಪ್ರಧಾನಿ ಮೋದಿ ನವೆಂಬರ್ ಹದಿನಾರರಂದು ನೆರವೇರಿಸಿದ್ದರು. ಅಲ್ಲಿನ ಕರ್ವಾಲ್ ಖೇರಿ ಮತ್ತು ಸುಲ್ತಾನಪುರ ನಗರದ ನಡುವಿನ 341 ಕಿ.ಮೀ ಉದ್ದದ ರಸ್ತೆಯಿದಾಗಿದೆ. ಆ ಕಾರ್ಯಕ್ರಮದಲ್ಲಿ ಮೋದಿಯವರು ಅಲ್ಲೇ ಇದ್ದ ಯೋಗಿ ಆದಿತ್ಯನಾಥ್ ಅವರನ್ನು ಬಿಟ್ಟು ಒಬ್ಬರೇ ತಮ್ಮ ಪಾಡಿಗೆ ತೆರಳಿದ್ದರು. ಯೋಗಿ ಆದಿತ್ಯನಾಥ್ ಒಬ್ಬರೇ ಮೋದಿಯವರ ಬೆಂಗಾವಲು ವಾಹನದ ಹಿಂದೆ ನಡೆದುಕೊಂಡು ಹೋಗಿದ್ದರು.
ಯೋಗಿ ಒಬ್ಬರೇ ಇರುವ ಫೋಟೋ ಇಟ್ಟುಕೊಂಡು ವಿರೋಧ ಪಕ್ಷಗಳ ವಾಗ್ದಾಳಿ
ಯೋಗಿ ಒಬ್ಬರೇ ಇರುವ ಫೋಟೋ ಇಟ್ಟುಕೊಂಡು ವಿರೋಧ ಪಕ್ಷಗಳು ವಾಗ್ದಾಳಿ ನಡೆಸಿದ್ದವು. ಯೋಗಿ ಆದಿತ್ಯನಾಥ್ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲಾಗುವುದು ಎಂದು ವಿರೋಧ ಪಕ್ಷಗಳು ಜರಿದಿದ್ದವು. ಆದರೆ, ಇದಕ್ಕೆ ವಿರುದ್ದ ಎನ್ನುವಂತೆ, ರಾಜಧಾನಿ ಲಕ್ನೋದಲ್ಲಿ ನಡೆದ ಘಟನೆಯೊಂದು ವಿರೋಧ ಪಕ್ಷಗಳ ಬಾಯಿ ಮುಚ್ಚಿಸಿದೆ. ಡಿಜಿಪಿ-ಐಜಿಪಿಗಳ ಸಭೆಯಲ್ಲಿ ಪ್ರಧಾನಿ ಮೋದಿಯವರು ತುಂಬಾ ಆತ್ಮೀಯತೆಯಿಂದ ಯೋಗಿ ಆದಿತ್ಯನಾಥ್ ಅವರ ಜೊತೆ ವೇದಿಕೆ ಹಂಚಿಕೊಂಡಿದ್ದರು.
|
ಆದಿತ್ಯನಾಥ್ ಹೆಗಲ ಮೇಲೆ ಮೋದಿ ಕೈಯಿಟ್ಟುಕೊಂಡು ಹೋಗುವ ಚಿತ್ರ
ಯೋಗಿ ಆದಿತ್ಯನಾಥ್ ಅವರ ಹೆಗಲ ಮೇಲೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕೈಯಿಟ್ಟುಕೊಂಡು ಹೋಗುವ ಚಿತ್ರ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಫೋಟೋದೊಂದಿಗೆ ಟ್ವೀಟ್ ಮಾಡಿರುವ ಯೋಗಿ ಆದಿತ್ಯನಾಥ್, "ದೇಶದ ಒಳಿತಿಗಾಗಿ ನಾವು ಆತ್ಮ ಮತ್ತು ಪ್ರಾಣವನ್ನು ತ್ಯಾಗ ಮಾಡಲು ತೀರ್ಮಾನಿಸಿದ್ದೇವೆ. ನವಭಾರತದ ನಿರ್ಮಾಣವೇ ನಮ್ಮ ಧ್ಯೇಯ"ಎಂದು ಯೋಗಿ ಟ್ವೀಟ್ ಮಾಡಿದ್ದಾರೆ. ಯೋಗಿಯವರ ಈ ಟ್ವೀಟಿಗೆ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಲೇವಡಿ ಮಾಡಿದ್ದಾರೆ.
RSS ಶ್ರೀರಕ್ಷೆಯಲ್ಲಿರುವ ಯೋಗಿ ಆದಿತ್ಯನಾಥ್ ಮತ್ತು ಬಿಜೆಪಿಯ ವರಿಷ್ಠರು
ಯೋಗಿ ಆದಿತ್ಯನಾಥ್ ಅವರ ಟ್ವೀಟಿಗೆ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಮತ್ತು ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್, "ರಾಜಕಾರಣದಲ್ಲಿ ಹೀಗೇ ಆಗುತ್ತದೆ ಎಂದು ಹೇಳಲು ಆಗುವುದಿಲ್ಲ, ಇಂದು ಹೆಗಲ ಮೇಲೆ ಕೈಹಾಕಿದವರೇ, ಕತ್ತಿ ಮಸೆಯಲೂ ಬಹುದು"ಎಂದು ಅಖಿಲೇಶ್ ಅಣಕವಾಡಿದ್ದಾರೆ. ಒಟ್ಟಿನಲ್ಲಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಶ್ರೀರಕ್ಷೆಯಲ್ಲಿರುವ ಯೋಗಿ ಆದಿತ್ಯನಾಥ್ ಮತ್ತು ಬಿಜೆಪಿಯ ವರಿಷ್ಠರ ನಡುವೆ ಗೊಂದಲವಿದೆ ಎನ್ನುವ ಗುಸುಗುಸು ಸುದ್ದಿಗೆ ಚುನಾವಣೆಯ ವೇಳೆಯಾದರೂ ಉತ್ತರ ಸಿಗಬಹುದೇ ಎಂದು ಕಾದು ನೋಡಬೇಕಿದೆ.
Recommended Video