ಹಿಂದುಳಿದ ಕಾಡುಗೊಲ್ಲರ ಅಸ್ಪೃಶ್ಯತಾ ಆಚರಣೆ: ಗೊಲ್ಲರಹಟ್ಟಿಯಲ್ಲಿ ಸಿಕ್ಕ ಇನ್ನೊಂದು ಆಯಾಮ!

ಇದು ಕಳೆದ ವಾರ ವಿವಾದದ ಕೇಂದ್ರಕ್ಕೆ ಬಂದ ಗೊಲ್ಲರಹಟ್ಟಿ ಎಂಬ ಊರಿನ ಅಸಲಿ ಕತೆ. ದಲಿತ ಸಂಸದರನ್ನು ಗ್ರಾಮದ ಒಳಕ್ಕೆ ಬಾರದಂತೆ ತಡೆದರು ಎಂಬ ಕಾರಣಕ್ಕೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾದ ಹಳ್ಳಿ ಇದು. ಇಲ್ಲಿನ ಜನ ಅಸ್ಪೃಶ್ಯತಾ ಆಚರಣೆಯ ಆರೋಪ ಹೊತ್ತುಕೊಂಡರು. ಇಷ್ಟಕ್ಕೂ ಯಾರು ಈ ಜನ? ಇವರೇಕೆ ಅಸ್ಪೃಶ್ಯತೆ ಆಚರಣೆಯಂತಹ ಹೀನ ಮನಸ್ಥಿತಿಯನ್ನು ಇನ್ನೂ ಉಳಿಸಿಕೊಂಡಿದ್ದಾರೆ? ಇಂತಹ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಹೊರಟ 'ಒನ್ ಇಂಡಿಯಾ ಕನ್ನಡ'ಕ್ಕೆ ಸಿಕ್ಕಿದ್ದು ಈವರೆಗೂ ಮಾಧ್ಯಮಗಳಲ್ಲಿ ಬಾರದೇ ಉಳಿದ ಇನ್ನೊಂದು ಆಯಾಮ. ಅಂತಹದೊಂದು ತಳಮಟ್ಟದ ಮಾಹಿತಿಯನ್ನು ಓದುಗರ ಎದುರಿಗೆ ಇಡಲಿದೆ ಈ ವಿಶೇಷ ವರದಿ.

ಪಾವಗಡ ತಾಲೂಕಿನಿಂದ ಹಿರಿಯೂರು ರಸ್ತೆ ಮೂಲಕ 18 ಕಿ.ಮೀ. ದೂರದಲ್ಲಿರುವ ಗುಜ್ಜೀನಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುತ್ತದೆ ಈ ಹಳ್ಳಿ. ಪೂರ್ಣ ಹೆಸರು ಪೆಮ್ಮನಹಳ್ಳಿ ಗೊಲ್ಲರಹಟ್ಟಿ. ಇಲ್ಲಿ ಬುಡಕಟ್ಟು ಸಮುದಾಯಕ್ಕೆ ಸೇರಿದ ಕಾಡುಗೊಲ್ಲರು ವಾಸಿಸುತ್ತಾರೆ. ಈರಮುದ್ದನಹಟ್ಟಿ, ಗೌಡಕಾರನಹಟ್ಟಿ, ಬೊಮ್ಮಣ್ಣಹಟ್ಟಿ ಎಂಬ ಮೂರು ಹಟ್ಟಿಗಳು ಇಲ್ಲಿವೆ. ಇದರಲ್ಲಿ ಈರಮುದ್ದನಹಟ್ಟಿ ಸದ್ಯ ವಿವಾದದ ಕೇಂದ್ರದಲ್ಲಿದೆ.

 ಊರಿಗೆ ಒಬ್ಬ ಪದವೀಧರ

ಊರಿಗೆ ಒಬ್ಬ ಪದವೀಧರ

ಸುಮಾರು 100ಕ್ಕೂ ಹೆಚ್ಚು ಮನೆಗಳಿರುವ ಈ ಗೊಲ್ಲರಹಟ್ಟಿಯಲ್ಲಿ ಬಹುತೇಕರು ಕಡುಬಡವರು. ಸ್ವಾತಂತ್ರ್ಯ ಬಂದು ಕಳೆದ ಇಷ್ಟು ವರ್ಷಗಳಲ್ಲಿ ಸ್ನಾತ್ತಕೋತ್ತರ ಪದವಿ ಪಡೆದವರು ಒಬ್ಬರೇ ಒಬ್ಬರು. ಅಷ್ಟರ ಮಟ್ಟಿಗೆ ಶಿಕ್ಷಣ ಎಂಬುದು ಇನ್ನೂ ಇಲ್ಲಿ ಅರಿವಿಗೆ ದಾರಿ ಮಾಡಿಕೊಟ್ಟಿಲ್ಲ. ಇತ್ತೀಚಿನ ದಿನಗಳಲ್ಲಿ ಊರಿನ ಕೆಲವರು ರಾಜಧಾನಿ ಕಡೆಗೆ ಕೌಶಲ್ಯರಹಿತ ಕೆಲಸಗಳ ಕಡೆಗೆ ಮುಖ ಮಾಡಿದ್ದಾರೆ. ಈವರೆಗೂ ಸರಕಾರಿ ನೌಕರಿ ಎಂಬ ಆದಾಯ ಮೂಲಕ್ಕೆ ತೆರೆದುಕೊಳ್ಳದ ಇಲ್ಲಿನ ಜನರಿಗೆ ಕುರಿ ಸಾಕಾಣಿಯೇ ಕುಲ ಕಸುಬು, ಬದುಕಿನ ಮೂಲ. ಕೆಲವರು ವ್ಯವಸಾಯದಲ್ಲಿ ತೊಡಗಿದ್ದಾರೆ. ಈ ಹಟ್ಟಿಯಲ್ಲಿ ವಾಸಕ್ಕೆ ಯೋಗ್ಯವಾದ ಮನೆಗಳಿಲ್ಲ. ಸರ್ಕಾರದಿಂದ ಯಾವುದೇ ಸವಲತ್ತುಗಳು ಕೂಡ ದೊರೆತಿಲ್ಲ. ಸರಿಯಾದ ರಸ್ತೆಯಿಲ್ಲ, ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡು ಆರೇಳು ತಿಂಗಳಾಗಿದೆ. ಈ ಹಟ್ಟಿಯ ಜನರಿಗೆ ಸರ್ಕಾರದಿಂದ ದೊರೆಯುವ ಗಂಗಾ ಕಲ್ಯಾಣ ಯೋಜನೆ, ದೇವರಾಜು ಅರಸು ನಿಗಮದಿಂದ ಸಿಗುವ ಸೌಲಭ್ಯಗಳು ದೊರೆತಿಲ್ಲ. ಗೊಲ್ಲರಹಟ್ಟಿ ಖಾಸಗಿ ಜಾಗದಲ್ಲಿದೆ, ಕಂದಾಯ ಗ್ರಾಮವಾಗಿಲ್ಲ.

 ಸಂಸದರ ಕಾರನ್ನು ಗ್ರಾಮಸ್ಥರು ನಿಜವಾಗಿಯೂ ತಡೆದಿದ್ದರಾ ?

ಸಂಸದರ ಕಾರನ್ನು ಗ್ರಾಮಸ್ಥರು ನಿಜವಾಗಿಯೂ ತಡೆದಿದ್ದರಾ ?

ಪೆಮ್ಮನಹಳ್ಳಿಗೆ ಭೇಟಿ ನೀಡಿದ ಸಂಸದ ಎ. ನಾರಾಯಣಸ್ವಾಮಿಯನವರನ್ನು ಹಟ್ಟಿಯೊಳಗೆ ಬರಬೇಡಿ ಎಂದು ಗೊಲ್ಲರಹಟ್ಟಿ ಗ್ರಾಮಸ್ಥರು ಬಲವಂತವಾಗಿ ತಡೆದಿದ್ದಾರೆ ಎಂದು ಬಹುತೇಕ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಗ್ರಾಮದ ಜನ ಹೀನ ಸಂಪ್ರದಾಯದ ಆಚರಣೆ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ಎಂಬುದು ಭಾರಿ ಸದ್ದು ಮಾಡಿತ್ತು. ಅಸಲಿ ವಿಚಾರ ಏನೆಂದರೆ, ನಾರಾಯಣಸ್ವಾಮಿ ಗೊಲ್ಲರಹಟ್ಟಿಯೊಳಕ್ಕೆ ಬಂದಿದ್ದಾರೆ. ಆದರೆ, ಅಲ್ಲಿಂದ ಮುಂದೆ ಇರುವ ಸಿದ್ದೇಶ್ವರ, ಈರಣ್ಣ ತಿಮ್ಮಪ್ಪ ಸ್ವಾಮಿಯ ದೇವರ ಗುಡಿಗೆ ಅವರು ಕಾಲಿಟ್ಟಿಲ್ಲ. ಅದಕ್ಕೆ ಕಾರಣವಾಗಿದ್ದು ಹಿಂದಿನಿಂದ ಇಲ್ಲಿ ಪಾಲಿಸಿಕೊಂಡು ಬಂದ ಇನ್ನೊಂದು ಹೀನ ಸಂಪ್ರದಾಯ. ದೇವಸ್ಥಾನಕ್ಕೆ ಹೋಗಲು ಮುಂದಾದ ಸಂಸದರಿಗೆ ಗ್ರಾಮಸ್ಥರು ಹಿಂದೆ ಸಂಸದರಾಗಿರುವ ಚಂದ್ರಪ್ಪ, ಮಾಜಿ ಶಾಸಕ ತಿಮ್ಮರಾಯಪ್ಪ ಕೂಡ ಹೋಗುತ್ತಿರಲಿಲ್ಲ ಎಂದಿದ್ದಾರೆ. "ನೀವು ಹೋಗುವುದಾದರೆ ನಮ್ಮದೇನೂ ಅಭ್ಯಂತರವಿಲ್ಲ," ಎಂದು ಹೇಳಿದ್ದಾರೆ. ಆ ಸಮಯದಲ್ಲಿ ಸಂಸದರು ಹಟ್ಟಿಯಿಂದ ವಾಪಸ್ ಆಗಿದ್ದಾರೆ.

ಇದನ್ನು ಸೂಕ್ಷ್ಮವಾಗಿ ಗ್ರಹಿಸಬೇಕಿದ್ದ ಮಾಧ್ಯಮಗಳು ಒಟ್ಟಾರೆ ಗೊಲ್ಲರಹಟ್ಟಿಗೇ ಪ್ರವೇಶ ಸಿಕ್ಕಿಲ್ಲ ಎಂದು ಮೇಲ್ಮಟ್ಟದ ವರದಿ ನೀಡಿವೆ. ಮೊದಲೇ ದುರ್ಬರ ಸ್ಥಿತಿಯಲ್ಲಿರುವ ಕಾಡುಗೊಲ್ಲರಿಗೆ ಇದು ದೊಡ್ಡ ಮಟ್ಟದ ಸಾಮಾಜಿಕ ಕಳಂಕವನ್ನು ಹೊತ್ತುಕೊಳ್ಳುವಂತೆ ಮಾಡಿದೆ.

 ಅಂದು ಇಲ್ಲ, ಇಂದೇಕೆ ಗೊಲ್ಲರ ಹಟ್ಟಿಗೆ ಬಂದರು?

ಅಂದು ಇಲ್ಲ, ಇಂದೇಕೆ ಗೊಲ್ಲರ ಹಟ್ಟಿಗೆ ಬಂದರು?

ಪೆಮ್ಮನಹಳ್ಳಿ ಗೊಲ್ಲರಹಟ್ಟಿಯ ಗ್ರಾಮಸ್ಥರಿಗೆ ಏಕಾಏಕಿ ಭೇಟಿ ನೀಡಿದ ಸಂಸದ ಎ. ನಾರಾಯಣ ಸ್ವಾಮಿ ಯಾರೆಂದು ಗೊತ್ತೇ ಇರಲಿಲ್ಲ ಎಂಬುದು ಸ್ಥಳದಲ್ಲಿ ಸಿಗುವ ಇನ್ನೊಂದು ಚಿತ್ರಣ. ಇಲ್ಲಿನ ಎಷ್ಟೋ ಜನರಿಗೆ ಚಿತ್ರದುರ್ಗ ಲೋಕಸಭಾ ಸದಸ್ಯರ ಬಗ್ಗೆ ಕನಿಷ್ಟ ಮಾಹಿತಿಯೂ ಇರಲಿಲ್ಲ. ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಗೊಲ್ಲರಹಟ್ಟಿಗೆ ಅವತ್ತಿಗಿನ್ನೂ ಆಕಾಂಕ್ಷಿಯಾಗಿದ್ದ ಎ. ನಾರಾಯಣಸ್ವಾಮಿ ಗೊಲ್ಲರಹಟ್ಟಿಗೆ ಭೇಟಿ ನೀಡಿದ ಬಗ್ಗೆ ಯಾವುದೇ ಮಾಹಿತಿ ಇಲ್ಲಿ ಲಭ್ಯವಾಗುವುದಿಲ್ಲ. ಸಂಸದ ನಾರಾಯಣಸ್ವಾಮಿ ಹಿಂದೆ ಸಮಾಜ ಕಲ್ಯಾಣ ಸಚಿವರಾಗಿದ್ದವರು. ಆಗಲೂ ಇಂತಹದೊಂದು ಜಾತಿ ಮೀರುವ ಕೆಲಸಕ್ಕೆ ಅವರು ಕೈ ಹಾಕಿರಲಿಲ್ಲ. ಅವತ್ತಿಗೆ ಊರಿನ ಸಂಪ್ರದಾಯದ ಕಾರಣಕ್ಕೆ ದೂರವೇ ಉಳಿದವರು ಯಾಕೆ ಈಗ ತಮ್ಮ ಗ್ರಾಮ ಪ್ರವೇಶಕ್ಕೆ ಗೊಲ್ಲರಹಟ್ಟಿಯನ್ನು ಆಯ್ಕೆ ಮಾಡಿಕೊಂಡರು? ಇಲ್ಲಿನ ಅನಕ್ಷರಸ್ಥ ಜನರಲ್ಲಿ ಈ ಕುರಿತು ಒಂದಷ್ಟು ಪ್ರಶ್ನೆಗಳಿವೆ.

 ಸಮಾಜ ಈ ಮೂಲವನ್ನು ಅರ್ಥಮಾಡಿಕೊಳ್ಳಬೇಕಷ್ಟೆ

ಸಮಾಜ ಈ ಮೂಲವನ್ನು ಅರ್ಥಮಾಡಿಕೊಳ್ಳಬೇಕಷ್ಟೆ

ಕಾಡುಗೊಲ್ಲರು ಮತ್ತು ಅವರ ಸಂಪ್ರದಾಯಗಳು ಕಾಲದ ವೇಗಕ್ಕೆ ಬದಲಾವಣೆಗಳಾದೇ ಉಳಿದ ಬಗೆಗಳ ಕುರಿತು ಸಾಕಷ್ಟು ಅಧ್ಯಯನಗಳು ಕರ್ನಾಟಕದಲ್ಲಿ ನಡೆದಿವೆ. ಜಾರಿಯಿಂದ ಉನ್ನತ ಸ್ಥಾನದಲ್ಲಿ ನಾವಿದ್ದೇವೆ ಎಂದು ಇಲ್ಲಿ ಜನ ಅಂದುಕೊಂಡರೂ ಸಾಮಾಜಿಕ ಹಾಗೂ ಆರ್ಥಿಕ ವಿಚಾರಗಳಲ್ಲಿ ಇಲ್ಲಿನ ಜನ ಹಿಂದುಳಿದದ್ದು ಸ್ಪಷ್ಟವಾಗಿ ಗೋಚರಿಸುತ್ತದೆ. ಹೀಗಿರುವಾಗ, ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿದಂತೆ ಮೊದಲೇ ಹಿಂದುಳಿದ ಕಾಡುಗೊಲ್ಲರ ಮೇಲೆ ಅಸ್ಪೃಶ್ಯತೆಯ ಕಳಂಕವನ್ನು ಹೊರಿಸಿದ ಮಾತ್ರಕ್ಕೆ ಸಮಾಜ ಬದಲಾಗುವುದಿಲ್ಲ. ಇದನ್ನು ಮಾಧ್ಯಮಗಳು ಹಾಗೂ ಜನಪ್ರತಿನಿಧಿಗಳು ಅರ್ಥ ಮಾಡಿಕೊಳ್ಳಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+