ಉಕ್ರೇನ್ ವಿಚಾರದಲ್ಲಿ ಭಾರತವೇಕೆ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ?, ಇಲ್ಲಿದೆ ಕಾರಣ
ನವದೆಹಲಿ, ಮಾರ್ಚ್ 01: ರಷ್ಯಾ ಹಾಗೂ ಉಕ್ರೇನ್ ನಡುವೆ ಯುದ್ಧ ನಡೆಯುತ್ತಿದೆ. ಮೂರನೇ ಮಹಾಯುದ್ಧಕ್ಕೆ ದಾರಿಯಾಗುವ ಮುನ್ನವೇ ವಿಶ್ವಸಂಸ್ಥೆ ಸಭೆಗಳನ್ನು ಸೇರಲು ಆರಂಭ ಮಾಡಿದೆ. ಆದರೆ ಒಂದು ವಾರದಲ್ಲಿ ಎರಡನೇ ಬಾರಿಗೆ ರಷ್ಯಾದ ಉಕ್ರೇನ್ ಆಕ್ರಮಣಕ್ಕೆ ಸಂಬಂಧಿಸಿದ ವಿಶ್ವಸಂಸ್ಥೆಯ ನಿರ್ಣಯಕ್ಕೆ ಭಾರತವು ದೂರವಾಗಿ ಉಳಿದಿದೆ. ಅಂದರೆ ಮತದಾನದಿಂದ ಭಾರತವು ದೂರ ಉಳಿದಿದೆ.
ಭಾನುವಾರ, ಉಕ್ರೇನ್ ವಿರುದ್ಧ ರಷ್ಯಾದ ಆಕ್ರಮಣದ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು (UNSC) ಅಪರೂಪದ ವಿಶೇಷ ತುರ್ತು ಅಧಿವೇಶನಕ್ಕೆ ಕರೆ ನೀಡಿತ್ತು. ಆದರೆ ಅಧಿವೇಶನದಿಂದ ಭಾರತ ದೂರ ಸರಿದಿದೆ. ಉಕ್ರೇನ್ ವಿರುದ್ಧ ರಷ್ಯಾ ನಡೆಸುತ್ತಿರುವ ಆಕ್ರಮಣವನ್ನು ಖಂಡಿಸುವ ವಿಚಾರಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮಂಡಿಸಿದ್ದ ನಿರ್ಣಯದಲ್ಲಿ ಮತದಾನಕ್ಕೆ ಭಾರತ ಗೈರು ಹಾಜರಾಗಿದೆ. ಚೀನಾವು ಕೂಡಾ ರಷ್ಯಾ ವಿರುದ್ಧ ನಿಲುವು ತೋರದೆ ಈ ಮತದಾನದಿಂದ ದೂರ ಉಳಿದಿದೆ. ದರೆ ಬೆಲಾರಸ್ ಗಡಿಯಲ್ಲಿ ಮಾತುಕತೆ ನಡೆಸುವ ಮಾಸ್ಕೋ ಮತ್ತು ಕೀವ್ನ ನಿರ್ಧಾರವನ್ನು ನವದೆಹಲಿ ಸ್ವಾಗತಿಸಿದೆ.
ಶುಕ್ರವಾರ ರಾತ್ರಿ, ರಷ್ಯಾ ಆಕ್ರಮಣವನ್ನು ಖಂಡಿಸುವ ಯುಎನ್ಎಸ್ಸಿ ನಿರ್ಣಯದಿಂದ ಭಾರತ ದೂರ ಉಳಿದಿತ್ತು. ಭಿನ್ನಾಭಿಪ್ರಾಯವನ್ನು ಬಗೆಹರಿಸಲು ಮಾತುಕತೆಯೇ ಉತ್ತರ ಎಂದು ನವದೆಹಲಿ ಅಭಿಪ್ರಾಯ ವ್ಯಕ್ತಪಡಿಸಿತ್ತು. ರಾಜತಾಂತ್ರಿಕ ಮಾರ್ಗವನ್ನು ಕೈಬಿಡಲಾಗಿದೆ ಎಂದು "ವಿಷಾದ" ವ್ಯಕ್ತಪಡಿಸಿತು. ಇಲ್ಲಿಯವರೆಗೆ, ಭಾರತವು ರಷ್ಯಾದ ಆಕ್ರಮಣವನ್ನು ಸಂಪೂರ್ಣವಾಗಿ ಖಂಡನೆಯನ್ನು ಕೂಡಾ ಮಾಡಿಲ್ಲ.

ಭಾರತದ ಈ ನಿಲುವಿನ ವಿಚಾರದಲ್ಲಿ, ಭಾರತದ ಒಳಗೆಯೇ ಹಲವಾರು ನಾಯಕರುಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಭಾರತದ ನಿಲುವು ಅಸಮಾಧಾನಕ್ಕೆ ಕಾರಣವಾಗಿದೆ. ಆದರೆ ಉಕ್ರೇನ್ ಹಾಗೂ ರಷ್ಯಾ ವಿಚಾರದಲ್ಲಿ ಭಾರತ ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿರುವುದು ಏಕೆ? ಎಂಬ ಬಗ್ಗೆ ಇಲ್ಲಿದೆ ಪ್ರಮುಖ ಐದು ಕಾರಣಗಳು ಮುಂದೆ ಓದಿ...
ಪ್ರಮುಖ ಐದು ಕಾರಣಗಳು ಯಾವುದು?
1. ಭಾರತಕ್ಕೆ ಉಕ್ರೇನ್ ವಿಚಾರದಲ್ಲಿ ನಿರ್ಧಾರ ಕೈಗೊಳ್ಳಲು ಆಗದೆ ನಡುವೆ ಸಿಲುಕಿದಂತಾಗಿದೆ. ಒಂದೆಡೆ ಭಾರತದ ಹಳೆಯ ಮಿತ್ರ ದೇಶ ರಷ್ಯಾ ಹಾಗೂ ಇನ್ನು ಪಾಶ್ಚಿಮಾತ್ಯದ ಹೊಸ ಮಿತ್ರ ದೇಶಗಳಿಂದ ಒತ್ತಡವಿದೆ.
2. ರಷ್ಯಾವು ಭಾರತದ ರಕ್ಷಣಾ ಶಸ್ತ್ರಾಸ್ತ್ರಗಳ ಅತಿದೊಡ್ಡ ಪೂರೈಕೆದಾರ ದೇಶವಾಗಿದೆ. ಭಾರತಕ್ಕೆ ಬ್ಯಾಲಿಸ್ಟಿಕ್ ಕ್ಷಿಪಣಿ ಜಲಾಂತರ್ಗಾಮಿ ನೌಕೆಯನ್ನು ರಷ್ಯಾ ಒದಗಿಸಿದೆ.
3. ಭಾರತವು ರಷ್ಯಾದಲ್ಲಿ ತಯಾರಾದ 272 Su 30 ಫೈಟರ್ ಜೆಟ್ಗಳನ್ನು ನಿರ್ವಹಿಸುತ್ತದೆ. ಇದು ಎಂಟು ರಷ್ಯಾ ನಿರ್ಮಿತ ಕಿಲೋ ವರ್ಗದ ಜಲಾಂತರ್ಗಾಮಿ ನೌಕೆಯಾಗಿದೆ. 1,300 ಕ್ಕೂ ಹೆಚ್ಚು ರಷ್ಯಾದ ಟಿ-90 ಟ್ಯಾಂಕ್ಗಳನ್ನು ಹೊಂದಿದೆ.
4. ಅಮೆರಿಕದ ಒತ್ತಡದ ನಡುವೆಯೂ ಭಾರತವು S-400 ವಾಯು ರಕ್ಷಣಾ ವ್ಯವಸ್ಥೆಯನ್ನು ಖರೀದಿಸುವ ವಿಚಾರದಲ್ಲಿ ದೃಢವಾಗಿದೆ. ಇದು ರಷ್ಯಾದ ಅತ್ಯಾಧುನಿಕ ಕ್ಷಿಪಣಿ ವ್ಯವಸ್ಥೆಯಾಗಿದೆ. ಕ್ಷಿಪಣಿ ವ್ಯವಸ್ಥೆಯನ್ನು ಖರೀದಿಸಲು ಭಾರತವು 2018 ರಲ್ಲಿ ರಷ್ಯಾದೊಂದಿಗೆ 5 ಬಿಲಿಯನ್ ಡಾಲರ್ ಒಪ್ಪಂದಕ್ಕೆ ಸಹಿ ಹಾಕಿತು.
5. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ರಷ್ಯಾ ಎಲ್ಲಾ ವಿಷಯಗಳಲ್ಲಿಯೂ ಭಾರತದ ಬೆಂಬಲಕ್ಕೆ ನಿಂತಿದೆ ಎಂಬ ವಿಚಾರವನ್ನೂ ಕೂಡಾ ಅಧಿಕಾರಿಗಳು ಹೇಳುತ್ತಾರೆ.
ರಷ್ಯಾದ ವಿರುದ್ಧ ದೃಢವಾದ ಪ್ರತಿಕ್ರಿಯೆಗೆ ಬದ್ಧವಾಗಿ ನಿಲ್ಲಲು ಭಾರತದ ಮೇಲೆ ಯುಎಸ್ ಕೂಡಾ ಒತ್ತಡವನ್ನು ಹೇರುತ್ತಿದೆ. ಗುರುವಾರ, ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಥೋನಿ ಬ್ಲಿಂಕೆನ್ ಈ ಬಗ್ಗೆ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಜೊತೆ ಮಾತನಾಡಿದ್ದಾರೆ. "ಉಕ್ರೇನ್ ಮೇಲೆ ಪೂರ್ವಯೋಜಿತ, ಅಪ್ರಚೋದಿತ ಮತ್ತು ನ್ಯಾಯಸಮ್ಮತವಲ್ಲದ ದಾಳಿ ನಡೆದಿದ್ದು, ಇದನ್ನು ಸಾಮೂಹಿಕವಾಗಿ, ಬಲವಾಗಿ ಖಂಡನೆ ಮಾಡಬೇಕಾಗಿದೆ," ಎಂದು ಒತ್ತಿ ಹೇಳಿದ್ದಾರೆ.
ಇನ್ನೊಂದೆಡೆ ಭಾರತಕ್ಕೆ ರಕ್ಷಣೆ, ವ್ಯಾಪಾರ ಮತ್ತು ತಂತ್ರಜ್ಞಾನದ ವಿಚಾರದಲ್ಲಿ ಯುಎಸ್ ಪ್ರಮುಖ ಪಾಲುದಾರ ರಾಷ್ಟ್ರವಾಗಿದೆ. ಚೀನಾದೊಂದಿಗಿನ ಉದ್ವಿಗ್ನತೆಯಲ್ಲಿ ಅಮೆರಿಕ ಕೂಡ ನವದೆಹಲಿಗೆ ಬಲವಾದ ಬೆಂಬಲವನ್ನು ನೀಡಿದೆ. ವಿಶ್ವಸಂಸ್ಥೆಯಲ್ಲಿ ಫ್ರಾನ್ಸ್ ಕೂಡ ಭಾರತದ ಪ್ರಮುಖ ಮಿತ್ರ ಪಕ್ಷವಾಗಿದೆ. ಈ ನಡುವೆ ಭಾರತದ ನಿಲುವು ಮಾತ್ರ ತೀವ್ರ ಟೀಕೆಗೆ ಕಾರಣವಾಗಿದೆ. ಈ ನಡುವೆ ಕಳೆದ ಒಂದು ದಿನದಲ್ಲೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಉಕ್ರೇನ್ ವಿಚಾರದಲ್ಲಿ ಮೂರು ಬಾರಿ ತುರ್ತು ಸಭೆ ಸೇರಿದ್ದಾರೆ ಎಂದು ವರದಿ ಉಲ್ಲೇಖ ಮಾಡಿದೆ. (ಒನ್ಇಂಡಿಯಾ ಸುದ್ದಿ)












Click it and Unblock the Notifications