ಕುಮಾರಸ್ವಾಮಿ ಅವರೇ ಸೃಷ್ಟಿಸಿಕೊಂಡಿರುವ ಖತರ್ನಾಕ್ ಟೈಂಬಾಂಬು!

Recommended Video

      ಎಚ್ ಡಿ ಕುಮಾರಸ್ವಾಮಿ ಸ್ವಯಂಕೃತ ಅಪರಾಧದಿಂದ ಉಂಟಾದ ತೊಂದರೆಗಳಿವು | Oneindia Kannada

      ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಉಳಿವಿಗೆ ರಾಜಕೀಯ ಸನ್ನಿವೇಶಗಳೇನೋ ಪೂರಕವಾಗಿವೆ. ಆದರೆ ಅದರ ಕತ್ತಿನ ಸುತ್ತ ತಗಲಿಕೊಳ್ಳುತ್ತಿರುವ ಟೈಂಬಾಂಬುಗಳನ್ನು ಎಚ್ಚರಿಕೆಯಿಂದ ಗಮನಿಸುವ ವಿಷಯದಲ್ಲಿ ಅವರು ಎಡವುತ್ತಿದ್ದಾರೆ.

      ಅವರ ಸರ್ಕಾರವನ್ನು ಉಳಿಸುವ ವಿಷಯದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರೇ ಮುತುವರ್ಜಿ ವಹಿಸಿದ್ದಾರೆ. ಸದ್ಯದಲ್ಲೇ ನಡೆಯಲಿರುವ ವಿವಿಧ ರಾಜ್ಯಗಳ ಚುನಾವಣೆ ಮತ್ತು ತದ ನಂತರ ಎದುರಾಗುವ ಲೋಕಸಭಾ ಚುನಾವಣೆಯನ್ನು ಎದುರಿಸುವ ದೃಷ್ಟಿಯಿಂದ ಅವರಿಗೆ ಕರ್ನಾಟಕದಲ್ಲಿರುವ ಸಮ್ಮಿಶ್ರ ಸರ್ಕಾರ ಭದ್ರವಾಗಿ ಉಳಿಯಬೇಕಿದೆ.

      ಅಂದ ಹಾಗೆ ಈ ಸರ್ಕಾರ ಅಸ್ತಿತ್ವದಲ್ಲಿದ್ದರೆ ಅವರಿಗೆ ಎರಡು ಉಪಯೋಗಗಳಿವೆ. ಒಂದು, ಈ ಸರ್ಕಾರ ನೆಮ್ಮದಿಯಿಂದಿದ್ದರೆ ಮುಂದಿನ ಲೋಕಸಭಾ ಚುನಾವಣೆಯ ವೇಳೆಗೆ ತೃತೀಯ ರಂಗ ಬಲಿಷ್ಠವಾಗಲು ದಾರಿ ಸುಗಮವಾಗುತ್ತದೆ. ಹಾಗೇನಾದರೂ ಅದು ನೂರೈವತ್ತಕ್ಕಿಂತ ಹೆಚ್ಚು ಸೀಟುಗಳನ್ನು ಗಳಿಸಿದರೆ ಕಾಂಗ್ರೆಸ್ ಜತೆ ಕೈಗೂಡಿಸಿ ಸರ್ಕಾರ ರಚಿಸಲು ಸಜ್ಜಾಗುತ್ತದೆ.

      ಎರಡು, ಕುಮಾರಸ್ವಾಮಿ ಸರ್ಕಾರ ಗಟ್ಟಿಯಾಗಿದ್ದರೆ ಮೈತ್ರಿಪಕ್ಷಗಳನ್ನು ಇನ್ನು ಮುಂದೆ ಕಾಂಗ್ರೆಸ್ ಗೌರವದಿಂದ ನಡೆಸಿಕೊಳ್ಳುತ್ತದೆ ಎಂಬ ಸಂದೇಶ ರವಾನೆಯಾಗುತ್ತದೆ. ಇಂತಹ ಸಂದೇಶ ರವಾನೆಯಾದರೆ ಸಹಜವಾಗಿಯೇ ತೃತೀಯ ರಂಗದ ಭಾಗವಾಗಲಿರುವ ಪಕ್ಷಗಳು ಕಾಂಗ್ರೆಸ್ ಪಕ್ಷದ ಮೇಲೆ ನಂಬಿಕೆ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ.

      ಹೀಗಾಗಿ ರಾಹುಲ್ ಗಾಂಧಿ ಅವರಿಗೆ ಕುಮಾರಸ್ವಾಮಿ ಅವರ ಸರ್ಕಾರ ಬಲಿಷ್ಠವಾಗಿರಬೇಕು ಎಂಬ ಇಚ್ಛೆಯಿದೆ. ಇತ್ತೀಚೆಗೆ ಕರ್ನಾಟಕದ ಮೂರು ಲೋಕಸಭಾ ಕ್ಷೇತ್ರಗಳಲ್ಲಿ, ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆಗಳಲ್ಲಿ ಗಳಿಸಿದ ಯಶಸ್ಸು ಕೂಡಾ ರಾಹುಲ್ ಗಾಂಧಿ ಅವರ ಯೋಚನೆಯನ್ನು ಸಮರ್ಥಿಸುವಂತೆಯೇ ಇದೆ.

      ಆಪತ್ತು ತರುವ ಶಕ್ತಿ ಇರುವುದು ಒಬ್ಬರಿಗೇ

      ಆಪತ್ತು ತರುವ ಶಕ್ತಿ ಇರುವುದು ಒಬ್ಬರಿಗೇ

      ಈ ಸರ್ಕಾರಕ್ಕೆ ಆಪತ್ತು ತರುವ ಶಕ್ತಿ ಇರುವುದು ಮಾಜಿ ಸಿಎಂ ಸಿದ್ಧರಾಮಯ್ಯ ಅವರಿಗೆ ಮಾತ್ರ. ಈ ಹಿಂದೆ ಸಮನ್ವಯ ಸಮಿತಿ ಅಧ್ಯಕ್ಷರಾದ ನಂತರ ತಮ್ಮನ್ನು ನಡೆಸಿಕೊಂಡ ರೀತಿಯಿಂದ ಅಸಮಾಧಾನಗೊಂಡ ಸಿದ್ಧರಾಮಯ್ಯ ಒಳಗಿಂದೊಳಗೇ ಕುಮಾರಸ್ವಾಮಿ ಸರ್ಕಾರದ ಅಡಿಪಾಯವನ್ನು ಅಲುಗಾಡಿಸಲು ಯತ್ನಿಸಿದ್ದರು. ಆದರೆ ಇದರ ಅಪವಾದ ತಮ್ಮ ಮೇಲೆ ಬರದಿರಲಿ ಅಂತ ಅವರು ವಿದೇಶ ಪ್ರವಾಸಕ್ಕೆ ಹೋದರೆ, ಇಲ್ಲಿ ಅವರ ಬೆಂಬಲಿಗರ ಪಡೆ ದಿನ ಬೆಳಗಾದರೆ ಸರ್ಕಾರಕ್ಕೆ ಮುಜುಗರ ಉಂಟು ಮಾಡುತ್ತಾ, ಇನ್ನೇನು ಸರ್ಕಾರ ಉರುಳುತ್ತದೆ ಎಂಬ ಸನ್ನಿವೇಶವನ್ನು ಸೃಷ್ಟಿಸಿದ್ದು ರಹಸ್ಯವೇನಲ್ಲ. ಸರಕಾರ ಉರುಳಿದರೆ ಮುಖ್ಯಮಂತ್ರಿ ಪಟ್ಟಕ್ಕೇರಲು ಯಡಿಯೂರಪ್ಪ ಕೂಡ ತೆರೆ ಮರೆಯಲ್ಲಿ ಸಿದ್ಧತೆ ನಡೆಸಿದ್ದರು ಎಂಬುದು ಕೂಡ ರಹಸ್ಯವೇನಲ್ಲ.

      ಮಧ್ಯಂತರ ಚುನಾವಣೆಗೆ ಹೋಗೋಣ ಅಂದಿದ್ದ ಗೌಡರು

      ಮಧ್ಯಂತರ ಚುನಾವಣೆಗೆ ಹೋಗೋಣ ಅಂದಿದ್ದ ಗೌಡರು

      ಆದರೆ ಆ ಸಂದರ್ಭದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಮಧ್ಯೆ ಪ್ರವೇಶಿಸಿದರು. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರೊಂದಿಗೆ ಮಾತುಕತೆ ನಡೆಸಿ, ಇದ್ಯಾಕೋ ನೆಮ್ಮದಿಯಾಗಿ ನಡೆಯುವ ಸರ್ಕಾರವಲ್ಲ ಅನ್ನಿಸುತ್ತಿದೆ. ಹೀಗಾಗಿ ಮಧ್ಯಂತರ ಚುನಾವಣೆಗೆ ಹೋಗೋಣ ಎಂದು ಬಿಟ್ಟರು. ಯಾವಾಗ ಅವರು ಮಧ್ಯಂತರ ಚುನಾವಣೆಗೆ ಹೋಗುವ ಮಾತನಾಡಿದರೋ? ಆಗ ರಾಹುಲ್ ಗಾಂಧಿ ನಿಜಕ್ಕೂ ಅಸಮಾಧಾನಗೊಂಡರು. ಮತ್ತು ಸರ್ಕಾರವನ್ನು ಅಲುಗಾಡಿಸುತ್ತಿರುವವರ ಹಿಂದೆ ಯಾರಿದ್ದಾರೆ ಅನ್ನುವುದನ್ನು ಅರ್ಥ ಮಾಡಿಕೊಂಡು ನೇರವಾಗಿ ಸಿದ್ಧರಾಮಯ್ಯ ಅವರ ಜತೆಗೇ ಮಾತನಾಡಿದರು.

      ಸಿದ್ದು ಪದಚ್ಯುತಿಗೆ ಪ್ರಯತ್ನಿಸಿದ್ದ ನಾಯಕ ಯಾರು?

      ಸಿದ್ದು ಪದಚ್ಯುತಿಗೆ ಪ್ರಯತ್ನಿಸಿದ್ದ ನಾಯಕ ಯಾರು?

      ಸಿದ್ರಾಮಯ್ಯಾಜೀ, ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಐದು ವರ್ಷಗಳ ಕಾಲವೂ ನಿಮ್ಮನ್ನು ಬದಲಿಸಲಿಲ್ಲ. ನಿಮ್ಮ ಸಚಿವ ಸಂಪುಟದಲ್ಲಿರುವ ಹಿರಿಯ ನಾಯಕರೊಬ್ಬರು ಮಹಾರಾಷ್ಟ್ರದ ಪವರ್ ಫುಲ್ ನಾಯಕರೊಬ್ಬರ ಮೂಲಕ ಹೈಕಮಾಂಡ್ ಅನ್ನು ಸಂಪರ್ಕಿಸಿ, ತಮ್ಮನ್ನು ಮುಖ್ಯಮಂತ್ರಿ ಪಟ್ಟಕ್ಕೇರಿಸಿದರೆ ತಾವು ಯಾವ ರೀತಿಯಲ್ಲಿ ಪಕ್ಷದ ಕೈಯ್ಯನ್ನು ಬಲಪಡಿಸುತ್ತೇವೆ ಎಂದು ಹೇಳಿದ್ದರು.

      ಅದೇ ರೀತಿ ಮತ್ತೋರ್ವ ಸಚಿವರು, ಸಿದ್ಧರಾಮಯ್ಯ ಅವರ ಜಾಗಕ್ಕೆ ತಮ್ಮನ್ನು ತಂದರೆ ಜೆಡಿಎಸ್ ಕೂಡಾ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಮಾಡುತ್ತೇನೆ ಎಂದು ಹೇಳಿದ್ದರು. ಹೀಗೆ ಹೇಳುತ್ತಾ ಹೋದರೆ ನಿಮ್ಮನ್ನು ಸಿಎಂ ಹುದ್ದೆಯಿಂದ ಬದಲಿಸಲು ನಿಮ್ಮ ಸಚಿವ ಸಂಪುಟದಲ್ಲಿದ್ದ ಹಲವರು ಯತ್ನಿಸಿದ್ದರು. ಅದು ನಿಮಗೂ ಗೊತ್ತು. ಆದರೆ ಅಂತಹ ಯಾವುದೇ ಪ್ರಯತ್ನಗಳಿಗೆ ಹೈಕಮಾಂಡ್ ಬೆಂಬಲ ಕೊಡಲಿಲ್ಲ.

      ಕಾಂಗ್ರೆಸ್ಸಿಗೆ ಸಿದ್ದರಾಮಯ್ಯ ಋಣಸಂದಾಯ

      ಕಾಂಗ್ರೆಸ್ಸಿಗೆ ಸಿದ್ದರಾಮಯ್ಯ ಋಣಸಂದಾಯ

      ಅವತ್ತು ಕಾಂಗ್ರೆಸ್ ಹೈಕಮಾಂಡ್ ನಿಮ್ಮ ಜತೆ ನಿಂತಿದ್ದಕ್ಕಾಗಿ ನೀವು ಇವತ್ತು ಋಣ ಸಂದಾಯ ಮಾಡಬೇಕಾದ ಸ್ಥಿತಿ ಇದೆ. ಅರ್ಥಾತ್, ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಸರ್ಕಾರಕ್ಕೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಬೇಕಿದೆ. ಇದನ್ನು ಮಾಡಬಲ್ಲವರು ನೀವು ಮಾತ್ರ ಎಂದು ರಾಹುಲ್ ಗಾಂಧಿ ಯಾವಾಗ ಹೇಳಿದರೋ? ಇದಾದ ನಂತರ ಸಿದ್ಧರಾಮಯ್ಯ ತಮ್ಮ ವರಸೆಯನ್ನೇ ಬದಲಿಸಿಬಿಟ್ಟರು.

      ಯಾವ ಕಾರಣಕ್ಕೂ ಈ ಸರ್ಕಾರ ಉರುಳುವುದಿಲ್ಲ. ಅಂತಹ ಉದ್ದೇಶವನ್ನು ಯಾರಾದರೂ ಇಟ್ಟುಕೊಂಡರೆ ಅದನ್ನು ನಿಶ್ಚಿತವಾಗಿ ತಡೆಯುತ್ತೇನೆ ಎಂದು ಹೇಳಿದ ಸಿದ್ಧರಾಮಯ್ಯ, ಆನಂತರದ ದಿನಗಳಲ್ಲಿ ಕುಮಾರಸ್ವಾಮಿ ಅವರ ಸರ್ಕಾರಕ್ಕೆ ಯಾವ ರೀತಿಯಲ್ಲೂ ತೊಂದರೆಯಾಗಲು ಬಿಡಲಿಲ್ಲ. ಇದು ಸಿದ್ದರಾಮಯ್ಯ ಅವರಿಗೆ ಶಕ್ತಿ ಕೂಡ. ಅವರು ಮನಸ್ಸು ಮಾಡಿದರೆ ಉರುಳಿಸಲೂ ಬಲ್ಲರು, ಉಳಿಸಲೂ ಬಲ್ಲರು.

      ಮಂತ್ರಿ ಅವಕಾಶ ತಪ್ಪಿದರೆ ಕಾಂಗ್ರೆಸ್ಸಿಗೆ ಬೈ, ಬಿಜೆಪಿಗೆ ಜೈ

      ಮಂತ್ರಿ ಅವಕಾಶ ತಪ್ಪಿದರೆ ಕಾಂಗ್ರೆಸ್ಸಿಗೆ ಬೈ, ಬಿಜೆಪಿಗೆ ಜೈ

      ಹಾಗಂತ ಕುಮಾರಸ್ವಾಮಿ ಸರ್ಕಾರಕ್ಕೆ ಮುಜುಗರವೇನೂ ತಪ್ಪಿಲ್ಲ. ಆದರೆ ಅದಕ್ಕೆ ಬೇರೆ ಬೇರೆ ಕಾರಣಗಳಿವೆ. ಈ ಕಾರಣಗಳಲ್ಲಿ ಹಲವು ಕಾರಣಗಳಿಗೆ ಕುಮಾರಸ್ವಾಮಿ ಅವರು ನೇರವಾಗಿ ಹೊಣೆಗಾರರಲ್ಲ. ಆದರೆ ಅವರು ಮುಖ್ಯಮಂತ್ರಿಯ ಪಟ್ಟದಲ್ಲಿ ಕುಳಿತಿರುವುದರಿಂದ ಸಹಜವಾಗಿ ತಮಗೆ ಸಂಬಂಧವಿಲ್ಲದ ವಿಷಯಗಳಲ್ಲೂ ಕಿರಿಕಿರಿ ಮಾಡಿಕೊಳ್ಳುವಂತಾಗಿದೆ.

      ಉದಾಹರಣೆಗೆ ಸಚಿವ ಸಂಪುಟ ವಿಸ್ತರಣೆಯ ವಿಷಯ. ಸಚಿವ ಸಂಪುಟದಲ್ಲಿ ಜೆಡಿಎಸ್ ಭರ್ತಿ ಮಾಡಲು ಇರುವುದು ಎರಡು ಸ್ಥಾನಗಳು ಮಾತ್ರ. ಆದರೆ ಕಾಂಗ್ರೆಸ್ ಪಕ್ಷ ಆರು ಸ್ಥಾನಗಳನ್ನು ಭರ್ತಿ ಮಾಡಬೇಕಿದೆ. ಕೆಲ ಕಾಲದ ಹಿಂದೆ, ಉಪ ಚುನಾವಣೆಗಳು ಮುಗಿದ ಕೂಡಲೆ ಸಂಪುಟ ವಿಸ್ತರಣೆ ಕಾರ್ಯ ಪೂರ್ಣವಾಗಲಿದೆ ಎಂದು ಹೇಳಲಾಗಿತ್ತು.

      ಈಗ ತಿಂಗಳಾಂತ್ಯದ ವೇಳೆಗೆ ಈ ಕಾರ್ಯ ನಡೆಯುತ್ತದೆ ಎಂದು ಹೇಳಲಾಗುತ್ತಿದೆ. ಆದರೆ ಅದು ತಿಂಗಳಾಂತ್ಯದ ವೇಳೆಗೆ ನಡೆಯುತ್ತದೋ? ವಿವಿಧ ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳ ನಂತರ ನಡೆಯುತ್ತದೋ? ಗೊತ್ತಿಲ್ಲ. ಹೀಗಾಗಿ ಸಚಿವ ಸ್ಥಾನದ ಆಕಾಂಕ್ಷಿಗಳು ಒಂದೇ ಸಮನೆ ತಮಗಿರುವ ಶಕ್ತಿಯಿಂದ ವರಿಷ್ಠರ ಮೇಲೆ ಒತ್ತಡ ಹೇರುತ್ತಲೇ ಇದ್ದಾರೆ.

      ಕೇವಲ ಅವರ ಮೇಲೆ ಒತ್ತಡ ಹೇರಿದರಷ್ಟೇ ಬೇರೆ ಮಾತು. ಆದರೆ ಹಲವರು, ತಮಗೆ ಮಂತ್ರಿಯಾಗುವ ಅವಕಾಶ ತಪ್ಪಿದರೆ ತಮ್ಮ ಬೆಂಬಲಿಗ ಶಾಸಕರ ಜತೆ ಸೇರಿ ಬಿಜೆಪಿ ಕಡೆ ಹೋಗುವುದು ಗ್ಯಾರಂಟಿ ಎಂಬ ಸಂದೇಶವನ್ನು ಕುಮಾರಸ್ವಾಮಿ ಅವರಿಗೂ ಮುಟ್ಟಿಸುತ್ತಿದ್ದಾರೆ.

      ಸರ್ಕಾರವೆಂದರೆ, ನಾಲ್ಕೇ ಮಂದಿ ಎಂಬಂತಾಗಿದೆ

      ಸರ್ಕಾರವೆಂದರೆ, ನಾಲ್ಕೇ ಮಂದಿ ಎಂಬಂತಾಗಿದೆ

      ಆದರೆ ಈ ರೀತಿಯ ಟೈಂಬಾಂಬುಗಳನ್ನು ನಿಯಂತ್ರಿಸಲು ಕುಮಾರಸ್ವಾಮಿ ಅವರ ಬಳಿ ಯಾವ ರಿಮೋಟ್ ಕೂಡಾ ಇಲ್ಲ. ಸಾಲದು ಎಂದರೆ ತಮ್ಮ ಸರ್ಕಾರಕ್ಕಿರುವುದು ನಾಲ್ಕೇ ಪಿಲ್ಲರುಗಳು ಎಂಬ ಭಾವನೆ ಜನರಲ್ಲಿ ಮೂಡುತ್ತಿದ್ದರೆ, ಅದನ್ನು ನಿವಾರಿಸುವ ಯತ್ನಕ್ಕೆ ಅವರು ಕೈ ಹಾಕುತ್ತಲೇ ಇಲ್ಲ.

      ಹೀಗಾಗಿ ಕುಮಾರಸ್ವಾಮಿ ಅವರ ಸರ್ಕಾರದಲ್ಲಿ ಪ್ರಭಾವಿಗಳಾಗಿ ಕಾಣುತ್ತಿರುವವರೆಂದರೆ, ಖುದ್ದು ಕುಮಾರಸ್ವಾಮಿ, ಅವರನ್ನು ಹೊರತುಪಡಿಸಿದರೆ ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ, ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್.

      ದಿನನಿತ್ಯ ಈ ನಾಲ್ವರ ಪೈಕಿ ಯಾರಾದರೂ ಮುಖ್ಯವಾಗಿ ಕಾಣುತ್ತಾರೆಯೇ ಹೊರತು ಇತರ ಸಚಿವರಲ್ಲ. ಹೀಗಾಗಿ ಸರ್ಕಾರವೆಂದರೆ, ನಾಲ್ಕೇ ಮಂದಿ ಎಂಬಂತಾಗಿದೆ. ಇದು ಕೂಡಾ ಕುಮಾರಸ್ವಾಮಿ ಅವರು ಸೃಷ್ಟಿಸಿಕೊಂಡ ಟೈಂಬಾಂಬು.

      ಶಕ್ತಿಯ ಸಂಕೇತವಲ್ಲ, ದೌರ್ಬಲ್ಯದ ಸಂಕೇತ

      ಶಕ್ತಿಯ ಸಂಕೇತವಲ್ಲ, ದೌರ್ಬಲ್ಯದ ಸಂಕೇತ

      ಮುಖ್ಯಮಂತ್ರಿಯಾದವರು ಪ್ರತಿದಿನ ಸುದ್ದಿಯಾಗುತ್ತಾ ಹೋದರೆ ಉಳಿದ ಮಂತ್ರಿಗಳು ನೆಪಕ್ಕೆ ಎಂಬಂತಾಗಿ ಹೋಗುತ್ತಾರೆ. ಹೀಗಾಗಿ ಮುಖ್ಯಮಂತ್ರಿಯಾದವರು ಪ್ರತಿ ದಿನ ಮುಖ್ಯವಾಹಿನಿಗೆ ಬರುವ ಬದಲು, ಸರ್ಕಾರದ ವಿವಿಧ ಇಲಾಖೆಗಳ ಮಂತ್ರಿಗಳು ಜನರ ಕಣ್ಣ ಮುಂದೆ ಬರುವಂತೆ, ರಾಜ್ಯದ ಅಭಿವೃದ್ಧಿಗೆ ತಾವು ಕೈಗೊಂಡ ಕ್ರಮಗಳೇನು? ಅನ್ನುವ ಕುರಿತು ವಿವರ ನೀಡುವಂತೆ ನೋಡಿಕೊಳ್ಳಬೇಕು.

      ಇಲ್ಲದಿದ್ದರೆ ಅಭಿವೃದ್ಧಿ ಕಾರ್ಯಗಳಿಗಿಂತ ಮುಖ್ಯವಾಗಿ ವಿವಾದಗಳೇ ರಾರಾಜಿಸುತ್ತಾ ಒಂದು ಸರ್ಕಾರದ ಅಂತ:ಸತ್ವವನ್ನೇ ನಾಶ ಮಾಡಿಬಿಡುತ್ತವೆ. ವಾಸ್ತವವಾಗಿ ಕುಮಾರಸ್ವಾಮಿ ಸರ್ಕಾರದ ಕತ್ತಿನಲ್ಲಿ ಕಾಣುತ್ತಿರುವ ಟೈಂ ಬಾಂಬುಗಳ ಪೈಕಿ ಇದು ಕೂಡಾ ಒಂದು.

      ಒಂದು ವೇಳೆ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಅವರ ಸಚಿವ ಸಂಪುಟದಲ್ಲಿರುವ ಎಲ್ಲ ಮಂತ್ರಿಗಳು ಆಗಾಗ ಮಾತನಾಡುತ್ತಾ ಹೋದರೆ, ದಿನ ಬೆಳಗಾದರೆ ಮುಖ್ಯಮಂತ್ರಿಗಳೇ ಮುಖ್ಯವಾಹಿನಿಯಲ್ಲಿ ಕಾಣುವುದು ನಿಂತುಹೋಗುತ್ತದೆ. ಉನ್ನತ ಸ್ಥಾನದಲ್ಲಿರುವವರು ನಿರಂತರವಾಗಿ ಮಾತನಾಡುವುದು ಶಕ್ತಿಯ ಸಂಕೇತವಲ್ಲ, ದೌರ್ಬಲ್ಯದ ಸಂಕೇತ.

      ಅನಗತ್ಯ ಹೇಳಿಕೆಗಳಿಂದ ವಿವಾದದ ಸುಳಿಗೆ

      ಅನಗತ್ಯ ಹೇಳಿಕೆಗಳಿಂದ ವಿವಾದದ ಸುಳಿಗೆ

      ಆದರೆ ಕುಮಾರಸ್ವಾಮಿ ಅವರು ಆಂಬಿಡೆಂಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಲಿ ಜನಾರ್ದನ ರೆಡ್ಡಿ ಅವರ ಹೇಳಿಕೆಗೂ ಪ್ರತಿಕ್ರಿಯೆ ನೀಡುತ್ತಾರೆ, ರೈತರ ಸಮಸ್ಯೆಗಳನ್ನು ಪರಿಹರಿಸುವ ಕುರಿತು ಕ್ರಮ ಕೈಗೊಳ್ಳುವುದಕ್ಕಿಂತ ಮುಖ್ಯವಾಗಿ ಅನಗತ್ಯ ಹೇಳಿಕೆಗಳನ್ನು ಕೊಡುತ್ತಾ ವಿವಾದಗಳಿಗೆ ಸಿಲುಕಿಕೊಳ್ಳುತ್ತಾರೆ. ರೈತ ಮಹಿಳೆಯ ಬಗ್ಗೆ ದುಡುಕಿ, ಅನಗತ್ಯ ಹೇಳಿಕೆ ನೀಡಿ, ಸಲ್ಲದ ವಿವಾದದಲ್ಲಿ ಕುಮಾರಸ್ವಾಮಿ ಸಿಲುಕಿಕೊಂಡಿದ್ದಾರೆ.

      ವಾಸ್ತವವಾಗಿ ಕುಮಾರಸ್ವಾಮಿ ಅವರ ಬಹುತೇಕ ಹೇಳಿಕೆಗಳ ಹಿಂದಿರುವ ವಾಸ್ತವಾಂಶಗಳು ಮರೆಯಾಗಿ, ಅವನ್ನು ಅರ್ಥೈಸಿಕೊಳ್ಳುವಿಕೆಯ ರೀತಿಯೇ ಹಲವು ವಿವಾದಗಳಿಗೆ ಕಾರಣವಾಗುತ್ತದೆ. ರೈತ ಮಹಿಳೆಯ ವಿಷಯದಲ್ಲಿ ಆಗಿರುವುದೂ ಇದೇ. ಹೀಗಾಗಿ ಕುಮಾರಸ್ವಾಮಿ ಸರ್ಕಾರ ಮತ್ತಷ್ಟು ಸುಭದ್ರವಾಗಿರಬೇಕೆಂದರೆ ಮಾತಿಗಿಂತ ಹೆಚ್ಚಾಗಿ ಕೆಲಸದ ಮೇಲೆ ಗಮನ ಕೊಡಬೇಕು. ಹಾಗೆಯೇ ಈ ಸರ್ಕಾರಕ್ಕೆ ನಾನಿಲ್ಲದಿದ್ದರೆ ಸಮರ್ಥಕರೇ ಇಲ್ಲ ಎಂಬಂತೆ ವರ್ತಿಸುತ್ತಾ ಹೋಗಬಾರದು.

      ಸರಕಾರ ಜನರ ಮನೆಬಾಗಿಲಿಗೆ ತಲುಪಿಸುವುದು

      ಸರಕಾರ ಜನರ ಮನೆಬಾಗಿಲಿಗೆ ತಲುಪಿಸುವುದು

      ವಾಸ್ತವವಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಯ ಸರಕಾರ ಅಸ್ತಿತ್ವಕ್ಕೆ ಬಂದ ಶುರುವಿನಲ್ಲಿ ಅವರ ಸರ್ಕಾರಕ್ಕೆ ಕಾಂಗ್ರೆಸ್ ನ ಭಿನ್ನರ ಕಾಟವಿತ್ತು. ಆದರೆ ಈಗ ಕೂಡ ಒಂದು ಮಟ್ಟದಲ್ಲಿ ಅವರ ಕಾಟವಿದ್ದರೂ, ಅದನ್ನು ನೋಡಿಕೊಳ್ಳುವ ಹೊಣೆಗಾರಿಕೆಯನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಬಿಟ್ಟು, ಸರ್ಕಾರವನ್ನು ಜನರ ಮನೆ ಬಾಗಿಲಿಗೆ ತಲುಪಿಸುವುದು ಹೇಗೆ? ಅನ್ನುವ ಕುರಿತಷ್ಟೇ ಕುಮಾರಸ್ವಾಮಿ ಚಿಂತಿಸಬೇಕು.

      ಆದರೆ ಅವರು ಅನಗತ್ಯವಾಗಿ ತಮಗೇ ತೊಂದರೆ ಉಂಟು ಮಾಡುವ ಟೈಂಬಾಂಬುಗಳನ್ನು ಮೇಲಿಂದ ಮೇಲೆ ಕತ್ತಿಗೆ ಕಟ್ಟಿಕೊಳ್ಳುತ್ತಾ ಸರ್ಕಾರದ ಪಂಚೇಂದ್ರಿಯಗಳು ಯಾವ ಸಮಯದಲ್ಲಿ ಸ್ಪೋಟಗೊಂಡು ವಿರೂಪವಾಗುತ್ತವೋ? ಎಂಬ ಭಾವನೆಯನ್ನು ಹುಟ್ಟಿಸುತ್ತಿದ್ದಾರೆ. ಇದಾಗದಂತೆ ನೋಡಿಕೊಳ್ಳುವುದೇ ಅವರ ತುರ್ತು ಕೆಲಸವಾಗಬೇಕು. ಇಲ್ಲದಿದ್ದರೆ ನಾಡಿನ ಜನ ರಾಜಕಾರಣದ ಬಗ್ಗೆ ಮತ್ತಷ್ಟು ಬೇಸತ್ತು ಹೋಗುವಂತಾಗುತ್ತದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+