ಮೈಸೂರು ದಸರಾ ಗಜಪಡೆಯ ಹಿರಿಯಣ್ಣ ಅರ್ಜುನನ ಬಗ್ಗೆ ನಿಮಗೆಷ್ಟು ಗೊತ್ತು?
ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾಗಿರುವ ಜಂಬೂಸವಾರಿಯಲ್ಲಿ ಪಾಲ್ಗೊಂಡಿರುವ ಗಜಪಡೆಯಲ್ಲಿ ಹಿರಿಯ ಅಣ್ಣನಂತಿರುವ ಅರ್ಜುನ(63) ಈಗಲೂ ಬಲಶಾಲಿಯಾಗಿದ್ದು, ಅಂಬಾರಿ ಹೊರುವ ಜವಬ್ದಾರಿಯನ್ನು ವಯಸ್ಸಿನ ಕಾರಣ ಅಭಿಮನ್ಯುಗೆ ವಹಿಸಿ ತಾನೀಗ ಸಹಾಯಕ ಆನೆಯಾಗಿ ಜಂಬೂಸವಾರಿಯಲ್ಲಿ ಹೆಜ್ಜೆಹಾಕುತ್ತಿದ್ದಾನೆ.
ಸುಮಾರು ಒಂಬತ್ತು ಬಾರಿ ಅಂಬಾರಿ ಹೊತ್ತಿರುವ ಅರ್ಜುನ ಪುಂಡಾನೆಗಳನ್ನು ಪಳಗಿಸುವಲ್ಲಿ ನಿಸ್ಸೀಮನಾಗಿದ್ದನು. ಈ ಹಿಂದೆ ಬಲರಾಮನ ನಿವೃತ್ತಿಯ ನಂತರ 2012ರಿಂದ ಜಂಬೂಸವಾರಿಯಲ್ಲಿ ಅಂಬಾರಿಯನ್ನು ಹೊರಲು ಆರಂಭಿಸಿದ್ದನು. ಅದಕ್ಕೂ ಹಿಂದೆ ಒಮ್ಮೆ ಅಂಬಾರಿ ಹೊತ್ತು ಸೈ ಎನಿಸಿಕೊಂಡಿದ್ದನು. 2012ರಿಂದ 2019ರವರಗೆ ಒಟ್ಟು ಒಂಬತ್ತು ಬಾರಿ ಅಂಬಾರಿ ಹೊತ್ತಿರುವ ಅರ್ಜುನ ಗಾತ್ರದಲ್ಲಿ ಬಲಭೀಮನಾಗಿ ಎಲ್ಲರ ಗಮನಸೆಳೆಯುತ್ತಿದ್ದಾನೆ. ಇದೀಗ ಗಜಪಡೆಯೊಂದಿಗೆ ಅರಮನೆ ಆವರಣದಲ್ಲಿ ಬೀಡುಬಿಟ್ಟಿರುವ ಅರ್ಜುನ ತುಂಟಾಟ ಆಡುತ್ತಾ ತಾಲೀಮಿನಲ್ಲಿ ಶಿಸ್ತಿನ ಹೆಜ್ಜೆ ಹಾಕುತ್ತಿದ್ದಾನೆ. ಅರ್ಜುನನ್ನು ಈಗ ಮಾವುತ ವಿನು ನೋಡಿಕೊಳ್ಳುತ್ತಿದ್ದಾರೆ.
ಶ್ರೀರಂಗಪಟ್ಟಣ ದಸರಾ 2022; ಅದ್ದೂರಿ ಆಚರಣೆಗೆ ಸಿದ್ಧತೆಗಳು
ಎಲ್ಲಾ ಆನೆಗಳಿಗಿಂತ ಹೆಚ್ಚು ತೂಕ
ಅರ್ಜುನ ಎಲ್ಲಾ ಆನೆಗಳಿಗಿಂತ ಹೆಚ್ಚು ಅಂದರೆ 5725 ಕೆ.ಜಿ. ತೂಕ ಹೊಂದಿದ್ದಾನೆ. ಆಸಕ್ತಿಯ ವಿಷಯ ಎಂದರೆ ಆನೆ ಅರ್ಜುನ 2010ರಲ್ಲಿ 4541 ಕೆಜಿ ತೂಕವಿದ್ದರೆ, 2011ರಲ್ಲಿ 5055 ಕೆಜಿ ತೂಕವಿದ್ದನು 2012ರಲ್ಲಿ 5520 ಕೆಜಿ ತೂಕಹೆಚ್ಚಿಸಿಕೊಂಡು ಅಂಬಾರಿ ಹೊತ್ತು ತಾನು ಶಕ್ತಿ ಶಾಲಿ ಎಂಬುದನ್ನು ನಿರೂಪಿಸಿದ್ದನು. ಜತೆಗೆ ಅಲ್ಲಿಂದ 2019ರವರೆಗೆ ಸುಸೂತ್ರವಾಗಿ ಅಂಬಾರಿ ಹೊತ್ತು ಗಮನಸೆಳೆದಿದ್ದನು.
ಈ ಹಿಂದೆ ಈತನ ಉಸ್ತುವಾರಿಯನ್ನು ಮಾವುತ ದೊಡ್ಡಮಾಸ್ತಿ ನೋಡಿಕೊಳ್ಳುತ್ತಿದ್ದರು. ಅವರ ನಿಧನದ ಬಳಿಕ ವಿನು ಅವರು ಮಾವುತರಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ. ಹೆಚ್.ಡಿ.ಕೋಟೆಯ ಬಳ್ಳೆ ಶಿಬಿರದ ಅರ್ಜುನ 2.80 ಮೀಟರ್ ಎತ್ತರ, 3.75 ಮೀಟರ್ ಉದ್ದ ಹೊಂದಿದ್ದಾನೆ. ಈತನನ್ನು 1968ರಲ್ಲಿ ಖೆಡ್ಡಾ ವಿಧಾನದಲ್ಲಿ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿತ್ತು. ಒಂಬತ್ತು ಅಂಬಾರಿ ಹೊತ್ತಿದ್ದರೂ ಜಂಬೂಸವಾರಿಯಲ್ಲಿ ಹಲವು ವರ್ಷಗಳ ಕಾಲ ಭಾಗವಹಿಸುತ್ತಾ ಬಂದಿರುವುದು ವಿಶೇಷವಾಗಿದೆ.
ಅರ್ಜುನನ ಜೀವನದ ಮರೆಯಲಾಗದ ಘಟನೆ
ಹಲವು ವರ್ಷಗಳ ಹಿಂದೆ ನಡೆದ ಆ ಒಂದು ಘಟನೆ ಅರ್ಜುನನಿಗೆ ನೋವು ತಂದಿದ್ದಂತು ನಿಜ. ಅದೇನೆಂದರೆ ಗಜಮಜ್ಜನಕ್ಕೆಂದು ಮೃಗಾಲಯದ ಬಳಿಯಿರುವ ಕಾರಂಜಿ ಕೆರೆಗೆ ಗಜಪಡೆಯನ್ನು ಕರೆದೊಯ್ಯಲಾಗಿತ್ತು. ಗಜಮಜ್ಜನದ ಬಳಿಕ ಕೆರೆಯಿಂದ ದಡಕ್ಕೆ ಹತ್ತಿಸುವ ವೇಳೆ ಅರ್ಜುನನ ಮುಂದೆ ಹೋಗುತ್ತಿದ್ದ ಇನ್ನೊಂದು ಆನೆಯ ಕಾವಡಿ ಜಾರಿ ಕೆಳಗೆ ಬಿದ್ದ. ಆ ಸಂದರ್ಭ ನೀರಿನಿಂದ ಮೇಲೆ ಬಂದ ಅರ್ಜುನನ ಕಾಲಿಗೆ ಆಕಸ್ಮಿಕವಾಗಿ ಸಿಕ್ಕಿ ಆತ ಸಾವನ್ನಪ್ಪಿದ್ದನು. ಅದೊಂದು ಕಹಿ ಘಟನೆ ಮರೆಯಲಾರದ್ದಾಗಿದೆ.
ಪುಂಡಾನೆ, ಹುಲಿ ಸೆರೆ ಕಾರ್ಯಾಚರಣೆಯಲ್ಲಿ ನಿಸ್ಸೀಮ
ದಸರಾ ಹೊರತು ಪಡಿಸಿ ಇತರೆ ದಿನಗಳಲ್ಲಿ ಬಳ್ಳೆ ಆನೆ ಶಿಬಿರದಲ್ಲಿ ವಾಸ್ತವ್ಯ ಹೂಡುವ ಅರ್ಜುನ ಎಲ್ಲಿಯೇ ಹುಲಿ ಸೆರೆ, ಪುಂಡಾನೆ ಸೆರೆ ಕಾರ್ಯಾಚರಣೆ ಇರಲಿ ಅಲ್ಲಿಗೆ ರೆಡಿ. ಇವತ್ತು ಅಂಬಾರಿ ಹೊರುತ್ತಿರುವ ಅಭಿಮನ್ಯು ಜತೆ ಸೇರಿ ಹಲವು ಕಾರ್ಯಾಚರಣೆಗಳನ್ನು ಮಾಡಿರುವುದನ್ನು ನಾವು ನೆನಪಿಸಿಕೊಳ್ಳಬಹುದಾಗಿದೆ. ಇವರಿಬ್ಬರನ್ನು ಕರ್ನಾಟಕದ ಫೈಟರ್ ಆನೆಗಳು ಎಂದು ಕೂಡ ಕರೆಯಲಾಗುತ್ತದೆ. ಪಶ್ಚಿಮ ಬಂಗಾಳ, ಮಧ್ಯಪ್ರದೇಶ ಮತ್ತು ಒರಿಸ್ಸಾಗಳಲ್ಲಿ ಆನೆಗಳನ್ನು ಹಿಡಿಯಲು ಬಳಸಿರುವುದು ಅರ್ಜುನನ ಶೌರ್ಯಕ್ಕೆ ಸಾಕ್ಷಿ. ಈ ಫೈಟರ್ ಎಂತಹ ಕಾಡುಪ್ರಾಣಿಯನ್ನಾದರೂ ಹುಡುಕಿ ಸದ್ದಡಗಿಸುವುದರಲ್ಲಿ ನಿಸ್ಸೀಮ ಎನ್ನುವುದರಲ್ಲಿ ಎರಡು ಮಾತಿಲ್ಲ.
ಹುಲಿ ಕಾರ್ಯಾಚರಣೆಯಲ್ಲಿ ಪ್ರಶಸ್ತಿ
2019ರಲ್ಲಿ ನಾಲ್ಕು ಜನರನ್ನು ತಿಂದಿದ್ದ ಹುಲಿಯನ್ನು ಸೆರೆ ಹಿಡಿಯಲು ಅರ್ಜುನನ್ನು ಬಳಸಿಕೊಂಡು ಮೂರು ದಿನ ಕಾರ್ಯಾಚರಣೆ ನಡೆಸಿ ಹುಲಿಯ ಹೆಜ್ಜೆಗುರುತು ಆದರಿಸಿ ಹುಲಿಯನ್ನು ಹಿಡಿಯಲಾಗಿತ್ತು. ಇದಕ್ಕೆ ಮೆಚ್ಚಿ ಸರಕಾರ ಅರ್ಜುನ ಮತ್ತು ಮಾವುತ ವಿನುಗೆ ಪ್ರಶಸ್ತಿ ಪತ್ರ ನೀಡಿತ್ತು. ಒಟ್ಟಾರೆ ಅರ್ಜುನ ಅಂಬಾರಿ ಹೊರುವುದರಿಂದ ನಿವೃತ್ತನಾದರೂ ಜಂಬೂಸವಾರಿಯಲ್ಲಿ ಮುಂದುವರೆಯುತ್ತಿದ್ದು, ದೈತ್ಯನಾಗಿ ಆಕರ್ಷಕವಾಗಿ ಎಲ್ಲರ ಗಮನಸೆಳೆಯುತ್ತಿದೆ.