ವ್ಯಕ್ತಿಚಿತ್ರ : ತೆಲಂಗಾಣ ಸಿಎಂ ಹೋರಾಟಗಾರ ಕೆ ಚಂದ್ರಶೇಖರ ರಾವ್
ಹಲವು ದಶಕಗಳ ಹೋರಾಟ, ತ್ಯಾಗ, ಬಲಿದಾನಗಳ ನಂತರ ದೇಶದ 29ನೇ ರಾಜ್ಯವಾಗಿ ಉದಯವಾದ ತೆಲಂಗಾಣ ರಾಜ್ಯದ ಮುಖ್ಯಮಂತ್ರಿಯಾಗಿ ಎರಡನೇ ಬಾರಿಗೆ ಕಲ್ವಕುಂಟ್ಲ ಚಂದ್ರಶೇಖರ್ ರಾವ್ ಅವರು ಇಂದು(ಡಿಸೆಂಬರ್ 13) ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ತೆಲಂಗಾಣ ರಾಷ್ಟ್ರ ಪಕ್ಷದ ಅಧ್ಯಕ್ಷ ಕೆ ಚಂದ್ರಶೇಖರ್ ರಾವ್ ಅವರನ್ನು ತೆಲಂಗಾಣದ ಮುಂದಿನ ಮುಖ್ಯಮಂತ್ರಿಯಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು.
119 ಕ್ಷೇತ್ರಗಳ ತೆಲಂಗಾಣದಲ್ಲಿ ಡಿಸೆಂಬರ್ 07 ರಂದು ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಕೆಸಿಆರ್ ನೇತೃತ್ವದ ಟಿಆರ್ ಎಸ್ ಪಕ್ಷ 88 ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್-ಟಿಡಿಪಿ ಮೈತ್ರಿಪಕ್ಷ 21, ಬಿಜೆಪಿ 1 ಮತ್ತು ಎಐಎಂಐಎಂ ಒಟ್ಟು 7 ಸ್ಥಾನಗಳಲ್ಲಿ ಜಯಗಳಿಸಿತ್ತು.
ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿರುವ ತೆಲಂಗಾಣ ಪ್ರಾಂತ್ಯದಲ್ಲಿ ಹೈದರಾಬಾದ್ ಬಿಟ್ಟರೆ ಮಿಕ್ಕ ಭಾಗಗಳಿಗೆ ಅಂದಿನಿಂದ ಇಂದಿನವರೆಗೂ ಸರಿಯಾದ ಸ್ಥಾನ ಮಾನ ಸಿಕ್ಕಿರಲಿಲ್ಲ.
ಇದಕ್ಕಾಗಿ ಹಲವು ದಶಕಗಳ ಕಾಲ ಹೋರಾಟ ಕಾಣಬೇಕಾಯಿತು. ಕಲ್ವಕುಂಟ್ಲ ಚಂದ್ರಶೇಖರ ರಾವ್ ಅವರು ನಿರಶನ ಕೂತಮೇಲೆ ತೆಲಂಗಾಣ ಹೋರಾಟ ಮಹತ್ವದ ತಿರುವು ಪಡೆಯಿತು.

ಎರಡನೇ ಬಾರಿಗೆ ಮುಖ್ಯಮಂತ್ರಿಯಾದ ಕೆಸಿಆರ್
ಚಂದ್ರಬಾಬು ನಾಯ್ಡು ಅವರ ಕ್ಯಾಬಿನೆಟ್ ನಲ್ಲಿ ಸ್ಥಾನ ವಂಚಿತರಾದ ಮೇಲೆ ಪ್ರತ್ಯೇಕ ತೆಲಂಗಾಣ ರಾಜ್ಯಕಾರಿ ಕೆಸಿಆರ್ ಉಗ್ರ ಹೋರಾಟ ನಡೆಸಿದರು. ಟಿಡಿಪಿ ತೊರೆದು ತೆಲಂಗಾಣ ರಾಷ್ಟ್ರ ಸಮಿತಿ ಏಪ್ರಿಲ್ 27, 2001ರಲ್ಲಿ ಸ್ಥಾಪಿಸಲಾಯಿತು.
ಆದರೆ, ಇದರ ಉದ್ದೇಶ ಈಡೇರಿದ್ದು 2013ರ ನಂತರ, 16ನೇ ಲೋಕಸಭೆ ಚುನಾವಣೆಗೂ ಮುನ್ನ ಅಂದಿನ ಯುಪಿಎ ಸರ್ಕಾರವು ಆಂಧ್ರಪ್ರದೇಶದಿಂದ ತೆಲಂಗಾಣವನ್ನು ಭಾಗ ಮಾಡಿತು. ಸಂಸದ ಸ್ಥಾನಕ್ಕೆ ನೀಡಿ ಕೆ ಚಂದ್ರಶೇಖರ್ ರಾವ್ ಅವರು ಹೊಸ ರಾಜ್ಯದ ಮುಖ್ಯಮಂತ್ರಿಯಾಗಿ ಜೂನ್ 02, 2014ರಂದು ಪ್ರಮಾಣ ವಚನ ಸ್ವೀಕರಿಸಿದರು.
2018ರ ಸೆಪ್ಟೆಂಬರ್ 06ರಂದು ಅವಧಿಗೆ ಮುನ್ನ ಸರ್ಕಾರವನ್ನು ವಿಸರ್ಜಿಸಿ, ಚುನಾವಣೆ ಎದುರಿಸಿದರು. ಚುನಾವಣೆಯಲ್ಲಿ ಗೆಲುವು ದಾಖಲಿಸಿ ಮತ್ತೊಮ್ಮೆ ಇಂದು (ಡಿಸೆಂಬರ್ 13, 2018) ಮುಖ್ಯಮಂತ್ರಿಯಾಗಿದ್ದಾರೆ.

ಕೆಸಿಆರ್ ಕುಟುಂಬದ ಆಸ್ತಿ ವಿವರ
ತೆಲಂಗಾಣ ರಾಷ್ಟ್ರೀಯ ಸಮಿತಿ(ಟಿಆರ್ ಎಸ್) ಅಧ್ಯಕ್ಷ, ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಆಸ್ತಿ ವಿವರ ಬಹಿರಂಗಗೊಂಡಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಕೆಸಿಆರ್ ಅವರ ಆಸ್ತಿ 7 ಕೋಟಿ ರು ಅಧಿಕವಾಗಿದೆ, ಸ್ಥಿರಾಸ್ತಿ, ಆಭರಣಗಳ ಮೌಲ್ಯ 3.55 ಕೋಟಿ ರು ಹೆಚ್ಚಳವಾಗಿದೆ. 2017-18ರ ಅವಧಿಗೆ ಸಲ್ಲಿಸುವ ಅಫಿಡವಿಟ್ ಪ್ರಕಾರ, ರಾವ್ ಅವರು ನಿವ್ವಳ ಆದಾಯ 91.52 ಲಕ್ಷರು ಬಂದಿದೆ. ಎಲ್ಲವೂ ಕೃಷಿ ಭೂಮಿಯಿಂದ ಪಡೆದ ಆದಾಯವಾಗಿದೆ. ಉಳಿದ ಆದಾಯ ವ್ಯಯ ಲೆಕ್ಕ ಸೇರಿದಂತೆ ಈ ಅವಧಿಯಲ್ಲಿ 1.10 ಕೋಟಿ ರು ತೆರಿಗೆ ಮೊತ್ತವನ್ನು ಪಾವತಿಸಿದ್ದಾರೆ.

ಕುಟುಂಬದ ಮಾಹಿತಿ
* 17 ಫೆಬ್ರವರಿ 1954ರಲ್ಲಿ ತೆಲಂಗಾಣದ ಸಿದ್ದಿಪೇಟದ ಚಿಂಟಮಡಕ ಗ್ರಾಮದಲ್ಲಿ ಜನನ
* ಒಸ್ಮಾನಿಯಾ ಆರ್ಟ್ಸ್ ಕಾಲೆಜ್, ವಿವಿಯಿಂದ ಪದವಿ ತನಕ ವಿದ್ಯಾಭ್ಯಾಸ
* ತಂದೆ ರಾಘವ ರಾವ್, ತಾಯಿ ವೆಂಕಟಮ್ಮ
* ಪತ್ನಿ ಶೋಭಾ, ಮಗ ಕೆ.ಟಿ ರಾಮರಾವ್ (ಕೆಸಿಆರ್ ಸಂಪುಟದಲ್ಲಿ ಸಚಿವರಾಗಿದ್ದರು), ಮಗಳು ಕೆ ಕವಿತಾ(ಸಂಸದೆ)

ಸೋಲಿನಿಂದ ಗೆಲುವಿನತ್ತ ಚಂದ್ರಶೇಖರ್
ಸಿದ್ದಿಪೇಟದಲ್ಲಿ ಎ ಮದನ್ ಮೋಹನ್ ವಿರುದ್ಧ ಸ್ಪರ್ಧಿಸಿ ಆ ಚುನಾವಣೆಯಲ್ಲಿ ಸೋತರು. ಅವರು 1985 ಮತ್ತು 1999 ರ ಮಧ್ಯೆ ಸಿದ್ದಿಪೇಟ್ ನಿಂದ ಸತತ ನಾಲ್ಕು ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದಾರೆ.
1987-1988 ರಿಂದ ಎನ್.ಟಿ.ರಾಮ ರಾವ್ ಸಂಪುಟದಲ್ಲಿ ಬರ ಮತ್ತು ಪರಿಹಾರ, 1996 ರಲ್ಲಿ ಅವರು ಚಂದ್ರಬಾಬು ನಾಯ್ಡು ಅವರ ಸಂಪುಟದಲ್ಲಿ ಸಾರಿಗೆ ಮಂತ್ರಿಯಾಗಿ ಮತ್ತು 2000-2001 ಆಂಧ್ರ ಪ್ರದೇಶ ವಿಧಾನಸಭೆಯ ಉಪಸಭಾಪತಿ ಕಾರ್ಯನಿರ್ವಹಿಸಿದರು
27 ಏಪ್ರಿಲ್ 2001 ರಂದು, ರಾವ್ ಉಪ ಸ್ಪೀಕರ್, ಟಿಡಿಪಿ ಶಾಸಕ ಮತ್ತು ಟಿಡಿಪಿ ಪಕ್ಷಕ್ಕೆ ರಾಜೀನಾಮೆ ನೀಡಿದರು. ಅವರು ತೆಲಂಗಾಣ ಪ್ರತ್ಯೇಕ ರಾಜ್ಯ ಸಾಧಿಸಲು ಹೈದರಾಬಾದ್ ನಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ಪಕ್ಷವನ್ನು ಸ್ಥಾಪಿಸಿದರು. ಪ್ರತ್ಯೇಕ ತೆಲಂಗಾಣ ರಾಜ್ಯ ಸ್ಥಾಪನೆಗಾಗಿ ನಿರಶನ ಕುಳಿತು, ಗೆದ್ದರು.












Click it and Unblock the Notifications