ಅಂದು ಒಂದು ಥರ, ಇಂದು ಇನ್ನೊಂದು ಥರ; ಹೀಗ್ಯಾಕೆ ಆಯಿತು ಕಣಿವೆ ರಾಜ್ಯ ಕಾಶ್ಮೀರ!?

ಶ್ರೀನಗರ್, ಜೂನ್ 3: ಅದು 2022ರ ಮಾರ್ಚ್ 11ರ ದಿನಾಂಕ. ಬಾಲಿವುಡ್ ಅಂಗಳದಲ್ಲಿ "ದಿ ಕಾಶ್ಮೀರಿ ಫೈಲ್ಸ್" ಎನ್ನುವ ಸಿನಿಮಾವೊಂದು ಬಿಡುಗಡೆ ಆಯಿತು. ಪ್ರಧಾನಮಂತ್ರಿ ಆದಿಯಾಗಿ ಕೇಂದ್ರ ಸಚಿವರೆು ಈ ಸಿನಿಮಾ ನೋಡುವಂತೆ ಕರೆ ನೀಡಿದರು. ಇಂದು ಕಣಿವೆ ರಾಜ್ಯದಲ್ಲಿ ಆವರಿಸಿದ ಕತ್ತಲೆಗೆ ಅದೊಂದು ಸಿನಿಮಾ ನೀಡಿದ ಸಂದೇಶ ಕಾರಣವಾಯಿತೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

ಕಾಶ್ಮೀರ ಕಣಿವೆಯಲ್ಲಿ ಮತ್ತೆ ಬಂದೂಕುಗಳು ಸದ್ದು ಮಾಡುತ್ತಿವೆ. ಒಂದು ನಿರ್ದಿಷ್ಟ ಗುಂಪನ್ನು ಗುರಿಯಾಗಿಸಿಕೊಂಡು ಉಗ್ರರ ದಾಳಿಗಳು ಹೆಚ್ಚುತ್ತಿವೆ. ಕಳೆದ 1990ರ ಘಟನೆಯನ್ನು ನೆನಪಿಸುವ ಚಿತ್ರ ಬಿಡುಗಡೆಯಾದ ನಂತರದಲ್ಲಿ ಪರಿಸ್ಥಿತಿ ಮತ್ತೆ ಹದಗೆಟ್ಟಿದೆ. ಎರಡು ದಶಕಗಳ ಹಿಂದೆ ಕಾಶ್ಮೀರದಲ್ಲಿ ಸೃಷ್ಟಿಯಾದ ದುಸ್ಥಿತಿಗಿಂತ ಇಂದಿನ ಪರಿಸ್ಥಿತಿ ಶೋಚನೀಯ ಎನ್ನುವಂತಾಗಿದೆ.

ದುಡಿದು ತಿನ್ನುವುದಕ್ಕಾಗಿ ಕಣಿವೆ ರಾಜ್ಯಕ್ಕೆ ಹೋಗಿರುವ ಕಾರ್ಮಿಕರು, ಶಿಕ್ಷಕರು, ಬ್ಯಾಂಕ್ ಮ್ಯಾನೇಜರ್ ಹೀಗೆ ಎಲ್ಲ ವರ್ಗದವರನ್ನೂ ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದೆ. ಉಗ್ರರ ಕ್ರೌರ್ಯಕ್ಕೆ ಸಾಲು ಸಾಲು ಹೆಣಗಳು ಬೀಳುತ್ತಿದ್ದು, ರಕ್ತಪಿಪಾಸುಗಳ ಕ್ರೌರ್ಯಕ್ಕೆ ಸಿಲುಕಿದ ಕುಟುಂಬಗಳು ಕಣ್ಣೀರು ಹಾಕುತ್ತಿವೆ. ನಮಗೆ ಕಾಶ್ಮೀರದ ಸಹವಾಸ ಬೇಕಾಗಿಲ್ಲ, ನಮ್ಮೂರಿಗೆ ಕಳುಹಿಸಿ ಕೊಡಿ, ನಾವು ಅಲ್ಲೇ ಬದುಕು ಕಟ್ಟಿಕೊಳ್ಳುತ್ತೇವೆ ಎನ್ನುತ್ತಾ ಕಾಶ್ಮೀರವನ್ನು ತೊರೆಯುವುದಕ್ಕೆ ನಿಂತಿದ್ದಾರೆ.

ಕಳೆದ ಮೂರು ತಿಂಗಳಿನಲ್ಲಿ ಕಾಶ್ಮೀರದ ಪರಿಸ್ಥಿತಿ ಹೇಗೆಲ್ಲಾ ಬದಲಾವಣೆ ಆಯಿತು?, ಕಾಶ್ಮೀರದಲ್ಲಿ ಉಗ್ರರ ಗುಂಡಿಗೆ ಜೀವ ಒಪ್ಪಿಸಿದ ಜನರೆಷ್ಟು?, ಕಣಿವೆ ರಾಜ್ಯದಿಂದ ಕಾಲ್ಕಿತ್ತು, ಬೇರೆಡೆ ಬದುಕು ಹುಡುಕಿ ಹೊರಟ ಕುಟುಂಬಗಳೆಷ್ಟು?, ಕಾಶ್ಮೀರದ ಪರಿಸ್ಥಿತಿಯ ಕುರಿತು ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಸಚಿವರು ನಡೆಸಿದ ಸಭೆಯಲ್ಲಿ ಏನೆಲ್ಲ ಆಯಿತು ಎನ್ನುವುದರ ಕುರಿತು ಒಂದು ವಿಸ್ತೃತ ವರದಿ ಇಲ್ಲಿದೆ ನೋಡಿ.

ಕಣಿವೆ ರಾಜ್ಯದ ಕಹಿ ಘಟನೆಗಳನ್ನು ನೆನಪಿಸಿದ

ಕಣಿವೆ ರಾಜ್ಯದ ಕಹಿ ಘಟನೆಗಳನ್ನು ನೆನಪಿಸಿದ "ದಿ ಕಾಶ್ಮೀರಿ ಫೈಲ್ಸ್"

ವಿವೇಕ್ ಅಗ್ನಿಹೋತ್ರಿ ನಿರ್ದೇಶಿಸಿದ "ದಿ ಕಾಶ್ಮೀರಿ ಫೈಲ್ಸ್" ಚಲನಚಿತ್ರ 2022ರ ಮಾರ್ಚ್ 11ರಂದು ಬಿಡುಗಡೆಯಾಗಿತ್ತು. 1990ರ ದಶಕದ ವೇಳೆಯಲ್ಲಿ ಕಾಶ್ಮೀರಿ ಪಂಡಿತರನ್ನು ಹೇಗೆ ಕೊಲ್ಲಲಾಯಿತು, ಎಷ್ಟರ ಮಟ್ಟಿಗೆ ಕಿರುಕುಳ ನೀಡಲಾಯಿತು ಎಂಬುದರ ಬಗ್ಗೆ ಈ ಚಿತ್ರದಲ್ಲಿ ಚಿತ್ರಿಸಲಾಗಿದ್ದು, ರಾತ್ರೋರಾತ್ರಿ ಕಾಶ್ಮೀರಿ ಪಂಡಿತರನ್ನು ಮನೆಯಿಂದ ಓಡಿಸುವುದಕ್ಕೆ ನಡೆಸಿದ ದೌರ್ಜನ್ಯದ ಕುರಿತು ಎತ್ತಿ ತೋರಿಸಲಾಗಿತ್ತು. ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್, ಪಲ್ಲವಿ ಜೋಶಿ, ಮಿಥುನ್ ಚಕ್ರವರ್ತಿ ಹಾಗೂ ಪ್ರಕಾಶ್ ಬೆಳವಡಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡ ಸಿನಿಮಾದ ಬಗ್ಗೆ ಕೇಂದ್ರ ಸಚಿವರು ಪರೋಕ್ಷವಾಗಿ ಪ್ರಚಾರ ನಡೆಸಿದರು.

ದೇಶದ ಹಲವು ರಾಜ್ಯಗಳಲ್ಲಿ "ದಿ ಕಾಶ್ಮೀರಿ ಫೈಲ್ಸ್" ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಲಾಯಿತು. ಒಂದು ಹಂತದಲ್ಲಿ ಹಿಂದೂಗಳು ಈ ಸಿನಿಮಾವನ್ನು ನೋಡಲೇಬೇಕು ಎನ್ನುವ ಸಂದೇಶವನ್ನು ಸಾರುವ ಪ್ರಯತ್ನವೂ ನಡೆಯಿತು. ಇನ್ನೂ ಕೆಲವು ರಾಜ್ಯಗಳಲ್ಲಿ "ದಿ ಕಾಶ್ಮೀರಿ ಫೈಲ್ಸ್" ಚಿತ್ರವನ್ನು ಉಚಿತವಾಗಿಯೇ ಪ್ರದರ್ಶಿಸಲಾಯಿತು. ಹೀಗೆ ಹೊಸ ಟ್ರೆಂಡ್ ಕ್ರಿಯೇಟ್ ಮಾಡಿದ ಸಿನಿಮಾ ಹಳೆಯ ನೆನಪುಗಳನ್ನು ಕೆದಕಿತು. ಆ ಹಳೆಯ ಘಟನೆಗಳು ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಯಿತು. ಅಲ್ಲಿಂದ ಮತ್ತೆ ಕಾಶ್ಮೀರದಲ್ಲಿ ಹಿಂಸಾಚಾರ ಮತ್ತು ಗುಂಡಿನ ದಾಳಿ, ಪಂಡಿತರಿಗೆ ಬೆದರಿಕೆಯ ಆಟ ಶುರುವಾಯಿತು.

ಕಾಶ್ಮೀರಿ ಪಂಡಿತರಿಗೆ ಬೆದರಿಕೆ ಹಾಕಿದ ಲಷ್ಕರ್-ಇ-ಇಸ್ಲಾಂ

ಕಾಶ್ಮೀರಿ ಪಂಡಿತರಿಗೆ ಬೆದರಿಕೆ ಹಾಕಿದ ಲಷ್ಕರ್-ಇ-ಇಸ್ಲಾಂ

ಮೇ ತಿಂಗಳ ಆರಂಭದಲ್ಲಿಯೇ ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿಕೊಂಡು ದಾಳಿಗಳು ಶುರುವಾಯಿತು. ಪಂಡಿತರ ಮೇಲಿನ ದಾಳಿಯನ್ನು ಖಂಡಿಸಿ ಕಾಶ್ಮೀರಿ ಪಂಡಿತರ ಸಂಘಟನೆಗಳು ಪ್ರತಿಭಟನೆಗೆ ಇಳಿದವು. ಇನ್ನೊಂದು ದಿಕ್ಕಿನಲ್ಲಿ ಕಾಶ್ಮೀರಿ ಪಂಡಿತರಿಗೆ ಲಷ್ಕರ್-ಇ-ಇಸ್ಲಾಂ ಸಂಘಟನೆಯು ಬೆದರಿಕೆ ಹಾಕಿತು. "ಕಾಶ್ಮೀರ ಬಿಟ್ಟು ತೊಲಗಿ, ಇಲ್ಲವೇ ಜೀವವನ್ನು ಬಿಡುವುದಕ್ಕೆ ಸಿದ್ಧರಾಗಿ," ಎಂದು ಪ್ರಕಟಣೆಯನ್ನು ಹೊರಡಿಸಲಾಗಿತ್ತು.

ಪುಲ್ವಾಮಾದ ವಲಸಿಗರ ಕಾಲೋನಿಯ ಅಧ್ಯಕ್ಷರನ್ನು ಉದ್ದೇಶಿಸಿ ಬರೆದ ಪತ್ರದಲ್ಲಿ, ಈ ಭಯೋತ್ಪಾದಕ ಸಂಘಟನೆಯ "ಕಮಾಂಡರ್" ಕಾಶ್ಮೀರಿ ಪಂಡಿತರು ಕಣಿವೆಯಲ್ಲಿ ವಾಸಿಸುವ ಮುಸ್ಲಿಮರನ್ನು ಕೊಲ್ಲಲು ಬಯಸುತ್ತಾರೆ ಎಂದು ಅಸಂಬದ್ಧವಾದ ಹೇಳಿಕೆಯನ್ನು ನೀಡಿದ್ದಾರೆ. ಅಲ್ಲದೆ, ಕೇಂದ್ರಾಡಳಿತ ಪ್ರದೇಶದಲ್ಲಿ ಅವರಿಗೆ ಜಾಗವಿಲ್ಲ ಎಂದು ಪ್ರತಿಪಾದಿಸಲಾಗಿದೆ. ಏಪ್ರಿಲ್‌ನಲ್ಲಿ, ಕಾಶ್ಮೀರಿ ಪಂಡಿತರೊಂದಿಗೆ ಬೆರೆಯುವುದರ ವಿರುದ್ಧ ಮುಸಲ್ಮಾನರಿಗೆ ಎಚ್ಚರಿಕೆ ನೀಡುವ ಇನ್ನೊಂದು ಪತ್ರವನ್ನು ಲಷ್ಕರ್-ಇ-ಇಸ್ಲಾಂ ಹೊರಡಿಸಿತ್ತು. ಈ ನಿಯಮವನ್ನು ಪಾಲಿಸದಿದ್ದರೆ, ಅಂಥವರನ್ನೂ ಕೊಲ್ಲಲಾಗುವುದು ಎಂದು ಎಚ್ಚರಿಸಲಾಗಿತ್ತು.

ಕಣಿವೆಯಲ್ಲಿ ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿ

ಕಣಿವೆಯಲ್ಲಿ ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿ

ಕಾಶ್ಮೀರದಲ್ಲಿ ಪರಿಸ್ಥಿತಿ ದಿನದಿಂದ ದಿನಕ್ಕೆ ವಿಕೋಪಕ್ಕೆ ತಿರುಗಿತು. ಉಗ್ರರ ದಾಳಿ ಯಾವಾಗ, ಯಾರ ಮೇಲೆ, ಹೇಗೆ ನಡೆಯುತ್ತದೆ ಎನ್ನುವುದನ್ನು ಊಹಿಸುವುದಕ್ಕೂ ಸಾಧ್ಯವಾಗದಂಥ ದುಸ್ಥಿತಿ ಸೃಷ್ಟಿಯಾಯಿತು. ಲಷ್ಕರ್-ಇ-ಇಸ್ಲಾಂ ಹಾಕಿದ ಬೆದರಿಕೆಯ ರೀತಿಯಲ್ಲೇ ಮೇಲಿಂದ ಮೇಲೆ ಸಾಮಾನ್ಯರ ಮೇಲೆ ಗುಂಡಿನ ದಾಳಿಗಳು ನಡೆಯುವುದಕ್ಕೆ ಶುರುವಾಯಿತು. ದುಡಿದು ತಿನ್ನುವುದಕ್ಕಾಗಿ ಕಾಶ್ಮೀರದಲ್ಲಿ ಉದ್ಯೋಗ ಮಾಡುತ್ತಿರುವ ಸಾರ್ವಜನಿಕರನ್ನೇ ಉಗ್ರರು ಗುರಿಯಾಗಿಸಿಕೊಳ್ಳಲು ಶುರು ಮಾಡಿದರು. ಕಣಿವೆ ರಾಜ್ಯದ ರಸ್ತೆಗಳಲ್ಲಿ ಉದ್ಯೋಗಿಗಳು ಸಾರ್ವಜನಿಕರ ನೆತ್ತರು ಹರಿಯುವುದಕ್ಕೆ ಶುರುವಾಯಿತು. ಪರಿಸ್ಥಿತಿ 1990ರ ಆ ದಿನಗಳಿಗಿಂತಲೂ ಕ್ರೂರ ಮತ್ತು ಅಪಾಯಕಾರಿ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಯಿತು.

ಕಣಿವೆ ರಾಜ್ಯದಲ್ಲಿ ಪಂಡಿತರನ್ನು ಗುರಿಯಾಗಿಸಿಕೊಂಡು ದಾಳಿ

ಕಣಿವೆ ರಾಜ್ಯದಲ್ಲಿ ಪಂಡಿತರನ್ನು ಗುರಿಯಾಗಿಸಿಕೊಂಡು ದಾಳಿ

ಕಾಶ್ಮೀರದಲ್ಲಿ ಪಂಡಿತ್ ಸಮುದಾಯವನ್ನು ಗುರಿಯಾಗಿಸಿಕೊಂಡು ದಾಳಿಗಳನ್ನು ನಡೆಸಲಾಗುತ್ತಿದೆ. ಕಳೆದ ಕೆಲವು ತಿಂಗಳಿನಿಂದ ಎಂಟಕ್ಕೂ ಹೆಚ್ಚು ಜನರು ಉಗ್ರರ ಗುಂಡಿಗೆ ಗುರಿಯಾಗಿ ಪ್ರಾಣ ಬಿಟ್ಟಿದ್ದಾರೆ. ಗುರುವಾರವಷ್ಟೇ ಬಿಹಾರದ ಕಾರ್ಮಿಕ ದಿಲ್ಖುಷ್ ಕುಮಾರ್ (17) ಬುದ್ಗಾಮ್‌ನಲ್ಲಿ ಭಯೋತ್ಪಾದಕರ ದಾಳಿಗೆ ತುತ್ತಾಗಿ ಜೀವ ಬಿಟ್ಟಿದ್ದಾರೆ. ಕುಲ್ಗಾಮ್‌ನಲ್ಲಿ ರಾಜಸ್ಥಾನದ ಬ್ಯಾಂಕ್ ಉದ್ಯೋಗಿ ಸೇರಿ ಮೇ 1ರ ಹೊತ್ತಿಗೆ ಎಂಟು ಜನರನ್ನು ಉದ್ದೇಶಪೂರ್ವಕವಾಗಿ ಹತ್ಯೆ ಮಾಡಲಾಗಿದೆ. ಇದು ಇಂದಿನ ಕಾಶ್ಮೀರದ ಪರಿಸ್ಥಿತಿಯನ್ನು ಸಾರಿ ಹೇಳುತ್ತಿದೆ.

ಕಾಶ್ಮೀರದಲ್ಲಿ ಆತಂಕ ಸೃಷ್ಟಿಸಿದ ಸರಣಿ ಹತ್ಯೆಗಳು

ಕಾಶ್ಮೀರದಲ್ಲಿ ಆತಂಕ ಸೃಷ್ಟಿಸಿದ ಸರಣಿ ಹತ್ಯೆಗಳು

ಕಾಶ್ಮೀರದಲ್ಲಿ ಇತ್ತೀಚಿಗೆ ನಡೆದ ಉದ್ದೇಶಿತ ಹತ್ಯೆಗಳ ಸರಣಿ ಮುಂದುವರಿಯಿತು. ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಗೋಪಾಲ್ಪೋರಾ ಪ್ರದೇಶದಲ್ಲಿ ಮೇ 31ರಂದು ಹಿಂದೂ ಮಹಿಳೆಯೊಬ್ಬರ ಹತ್ಯೆ ನಡೆಯಿತು. ಜಮ್ಮು ವಿಭಾಗದ ಸಾಂಬಾದಲ್ಲಿ ವಾಸಿಸುತ್ತಿದ್ದ ರಜನಿ ಬಾಲಾ ಎಂಬ ಶಾಲಾ ಶಿಕ್ಷಕಿಯನ್ನು ಕೊಲ್ಲಲಾಯಿತು. ಅದಾಗಿ ಎರಡೇ ದಿನಕ್ಕೆ ಅಂದರೆ ಜೂನ್ 2ರಂದು ಕುಲ್ಗಾಮ್ ಜಿಲ್ಲೆಯಲ್ಲಿ ರಾಜಸ್ಥಾನ ಮೂಲದ ಬ್ಯಾಂಕ್ ಮ್ಯಾನೇಜರ್ ವಿಜಯ್ ಕುಮಾರ್ ಅನ್ನು ಗುರಿಯಾಗಿಸಿಕೊಂಡು ಉಗ್ರರು ಗುಂಡಿನ ದಾಳಿ ನಡೆಸಿದರು.

ಕಳೆದ ವಾರ ಬುದ್ಗಾಮ್‌ನ ಚದೂರ ಪ್ರದೇಶದಲ್ಲಿ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕರು ಗುಂಡಿಗೆ ಟಿವಿ ನಿರೂಪಕಿ ಅಮ್ರೀನ್ ಭಟ್ ಸಾವನ್ನಪ್ಪಿದ್ದರು. ಅದಕ್ಕೂ ಮೊದಲು ಮೇ 12ರಂದು ಬುದ್ಗಾಮ್ ಜಿಲ್ಲೆಯಲ್ಲಿ ಕಂದಾಯ ಇಲಾಖೆ ನೌಕರ ರಾಹುಲ್ ಭಟ್ ಉಗ್ರರ ಗುಂಡಿಗೆ ಉಸಿರು ಚೆಲ್ಲಿದರು. ಇದೇ ರೀತಿ ಮೇ 1 ರಿಂದ ಈಚೆಗೆ ಬರೋಬ್ಬರಿ ಎಂಟು ಜನರನ್ನು ಉಗ್ರರು ಹತ್ಯೆ ಮಾಡಿದ್ದಾರೆ.

ಕಾಶ್ಮೀರ ತೊರೆಯುತ್ತಿರುವ ಸರ್ಕಾರಿ ಉದ್ಯೋಗಿಗಳು

ಕಾಶ್ಮೀರ ತೊರೆಯುತ್ತಿರುವ ಸರ್ಕಾರಿ ಉದ್ಯೋಗಿಗಳು

"ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ನಲ್ಲಿ ಬ್ಯಾಂಕ್ ಮ್ಯಾನೇಜರ್‌ ವಿಜಯ್ ಕುಮಾರ್ ಹತ್ಯೆಯ ನಂತರ ಜನರಲ್ಲಿ ಭಯದ ವಾತಾವರಣ ಹೆಚ್ಚಾಗಿದೆ. ಉದ್ಯೋಗಿಗಳು ಕಣಿವೆ ರಾಜ್ಯ ತೊರೆಯಲು ಪ್ರಾರಂಭಿಸಿದೆ. ಕಾಶ್ಮೀರವನ್ನು ತೊರೆಯುವ ಕುಟುಂಬಗಳಿಗೆ ಬನಿಹಾಲ್ ಸುರಂಗದವರೆಗೆ ಭದ್ರತೆ ಒದಗಿಸುವಂತೆ ಕಾಶ್ಮೀರಿ ಪಂಡಿತ್ ಸಂಘರ್ಷ ಸಮಿತಿಯು (ಕೆಪಿಎಸ್ಎಸ್) ಒತ್ತಾಯಿಸುತ್ತಿದೆ. "ಗುರುವಾರ ಅನೇಕ ಕಾಶ್ಮೀರಿ ಪಂಡಿತರು ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ತೊರೆದಿದ್ದಾರೆ. ಅಲ್ಲದೇ ನನ್ನ ಮಾಹಿತಿಯ ಪ್ರಕಾರ ಸುಮಾರು 65 ಸರ್ಕಾರಿ ಉದ್ಯೋಗಿಗಳು ತಮ್ಮ ಕುಟುಂಬ ಸಮೇತ ಶ್ರೀನಗರ ತೊರೆದಿದ್ದಾರೆ,'' ಎಂದು ಕಾಶ್ಮೀರಿ ಪಂಡಿತ್ ಸಂಘರ್ಷ ಸಮಿತಿ(ಕೆಪಿಎಸ್ಎಸ್) ಅಧ್ಯಕ್ಷ ಸಂಜಯ್ ಟಿಕ್ಕೂ ಹೇಳಿದ್ದಾರೆ.

ನಮ್ಮನ್ನು ವರ್ಗಾವಣೆ ಮಾಡಿ ಇಲ್ಲವೇ ರಾಜೀನಾಮೆ ಸ್ವೀಕರಿಸಿ

ನಮ್ಮನ್ನು ವರ್ಗಾವಣೆ ಮಾಡಿ ಇಲ್ಲವೇ ರಾಜೀನಾಮೆ ಸ್ವೀಕರಿಸಿ

ಕಾಶ್ಮೀರ ಕಣಿವೆಯಲ್ಲಿ ಉದ್ಯೋಗ ಮಾಡುತ್ತಿರುವ ಹಿಂದೂಗಳು ತಮ್ಮನ್ನು ಬೇರೆ ರಾಜ್ಯಗಳಿಗೆ ವರ್ಗಾವಣೆ ಮಾಡುವಂತೆ ಮೇಲಿಂದ ಮೇಲೆ ಮನವಿ ಸಲ್ಲಿಸುತ್ತಿದ್ದಾರೆ. ಈ ಹಂತದಲ್ಲಿ ದೂರದ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹಿಂದೂ ಸರ್ಕಾರಿ ನೌಕರರನ್ನು ಕಾಶ್ಮೀರ ಕಣಿವೆಯ ಜಿಲ್ಲಾ ಕೇಂದ್ರ ಕಚೇರಿಗಳಿಗೆ ವರ್ಗಾಯಿಸಲಾಗುವುದು. ಜಮ್ಮು ಮತ್ತು ಕಾಶ್ಮೀರದ ಎಲ್ಲಾ ಹಿಂದೂ ಸರ್ಕಾರಿ ನೌಕರರಿಗೆ ಸೂಕ್ತ ಭದ್ರತೆ ಮತ್ತು ಸುರಕ್ಷಿತ ವಸತಿಗಳನ್ನು ಸರ್ಕಾರವು ಖಚಿತಪಡಿಸುತ್ತದೆ ಎಂದು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಹೇಳಿದ್ದಾರೆ.

ಕಳೆದ ತಿಂಗಳು ನಡೆದ ರಾಹುಲ್ ಭಟ್ ಹತ್ಯೆಯ ನಂತರದಲ್ಲಿ ಕಾಶ್ಮೀರಿ ಪಂಡಿತರನ್ನೂ ಭೀತಿ ಹೆಚ್ಚಾಗಿದೆ. ಈ ಹಿನ್ನೆಲೆ 350ಕ್ಕೂ ಹೆಚ್ಚು ಉದ್ಯೋಗಿಗಳು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ಈ 350 ಮಂದಿಯೂ ಕಾಶ್ಮೀರಿ ಪಂಡಿತರಾಗಿದ್ದಾರೆ ಎನ್ನುವುದು ಮತ್ತೊಂದು ವಿಶೇಷವಾಗಿದೆ. ಆ ಮೂಲಕ ಕಾಶ್ಮೀರವು ಪಂಡಿತರಿಗೆ ಸುರಕ್ಷಿತವಾಗಿಲ್ಲ ಎನ್ನುವ ಅನುಮಾನವು ಖಾತ್ರಿಯಾಗುತ್ತಿದೆ.

ಅಮಿತ್ ಶಾ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆ

ಅಮಿತ್ ಶಾ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆ

ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಉದ್ದೇಶಿತ ಹತ್ಯೆಗಳ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಉನ್ನತ ಮಟ್ಟದ ಸಭೆ ನಡೆಸಿದರು. ಈ ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ, ಜಮ್ಮು ಮತ್ತು ಕಾಶ್ಮೀರದ ಉನ್ನತ ಪೊಲೀಸ್ ಅಧಿಕಾರಿ ದಿಲ್ಬಾಗ್ ಸಿಂಗ್ ಮತ್ತು ದೇಶದ ವಿದೇಶಿ ಗುಪ್ತಚರ ಸಂಸ್ಥೆ ಆರ್ & ಎಡಬ್ಲ್ಯೂ ಮುಖ್ಯಸ್ಥ ಸಮಂತ್ ಗೋಯೆಲ್ ಹಾಜರಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+