ಒಪಿಎಸ್ vs ಇಪಿಎಸ್; ಅಣ್ಣಾ ದ್ರಾವಿಡ ಪಕ್ಷದೊಳಗಿನ ತುಮುಲಕ್ಕೆ ತೆರೆ?
ಚೆನ್ನೈ, ಜುಲೈ 11: ಎಐಎಡಿಎಂಕೆ ಪಕ್ಷದೊಳಗೆ ಇದ್ದ ಬಣ ರಾಜಕೀಯ ಮತ್ತು ಗೊಂದಲಗಳಿಗೆ ಕೊನೆಗೂ ತೆರೆ ಬಿದ್ದಿದೆ. ಎಐಎಡಿಎಂಕೆಯಿಂದ ಒ ಪನ್ನೀರ್ಸೆಲ್ವಂ ಹಾಗೂ ಅವರ ಮೂವರು ಬೆಂಬಲಿಗರನ್ನು ಸೋಮವಾರ ಉಚ್ಛಾಟಿಸಲಾಗಿದೆ.
ಇದರ ಜೊತೆಗೆ ಪಕ್ಷದಲ್ಲಿ ದ್ವಿ ನಾಯಕತ್ವದ ವ್ಯವಸ್ಥೆಗೆ ಹಾಡಲಾಗಿದೆ. ಪಕ್ಷದೊಳಗೆ ಇದ್ದ ಸಂಚಾಲಕ ಮತ್ತು ಜಂಟಿ ಸಂಚಾಲಕ ಹುದ್ದೆಗಳನ್ನು ರದ್ದು ಮಾಡಲಾಗಿದೆ. ಪ್ರಧಾನ ಕಾರ್ಯದರ್ಶಿ ಸ್ಥಾನವನ್ನು ಮತ್ತೆ ಸೃಷ್ಟಿಸಲಾಗಿದೆ. ಸೋಮವಾರ ನಡೆದ ಎಐಎಡಿಎಂಕೆ ಜನರಲ್ ಕೌನ್ಸಿಲ್ ಸಭೆಯಲ್ಲಿ ಈ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
ಎಐಡಿಎಎಂಕೆ ಪಕ್ಷದ ಮೇಲೆ ಪಳನಿಸ್ವಾಮಿ ಹಿಡಿತ: ಪನ್ನೀರ್ ಸೆಲ್ವಂ ಉಚ್ಛಾಟನೆ
ಎಐಎಡಿಎಂಕೆಯ ಹೊಸ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಮಾಜಿ ಸಿಎಂ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರನ್ನು ಸದ್ಯಕ್ಕೆ ಹಂಗಾಮಿಯಾಗಿ ನೇಮಿಸಲಾಗಿದೆ. ಪೂರ್ಣ ಪ್ರಮಾಣದಲ್ಲಿ ಪ್ರಧಾನ ಕಾರ್ಯದರ್ಶಿ ಆಯ್ಕೆ ಆಗುವವರೆಗೂ ಪಳನಿಸ್ವಾಮಿ ಆ ಸ್ಥಾನದ ಜವಾಬ್ದಾರಿ ಹೊರಲಿದ್ದಾರೆ.
ಅದಾದ ಬಳಿಕ ಪನ್ನೀರ್ ಸೆಲ್ವಂ ಮತ್ತವರ ಬೆಂಬಲಿಗರನ್ನು ಉಚ್ಛಾಟಿಸಲಾಗಿದೆ. ಈ ಕ್ರಮವನ್ನು ಪನ್ನೀರ್ ಸೆಲ್ವಂ ವಿರೋಧಿಸಿದ್ದು, ತನ್ನನ್ನು ಉಚ್ಛಾಟಿಸಲು ಪಳನಿಸ್ವಾಮಿಗೆ ಯಾವ ಅಧಿಕಾರವೂ ಇಲ್ಲ ಎಂದಿದ್ದಾರೆ.
ಇಪಿಎಸ್ಗೆ ಸುಪ್ರೀಂ ನೆರವು
ಎಐಎಡಿಎಂಕೆಯಲ್ಲಿ ಪಳನಿಸ್ವಾಮಿ ಮತ್ತು ಪನ್ನೀರ್ ಸೆಲ್ವಂ ಅವರು ಸಂಚಾಲಕ ಮತ್ತು ಜಂಟಿ ಸಂಚಾಲಕ ಸ್ಥಾನಗಳನ್ನು ಹೊಂದಿದ್ದರು. ಈ ಎರಡು ಪ್ರಬಲ ಸ್ಥಾನಗಳ ಬದಲು ಒಂದೇ ನಾಯಕ ಸ್ಥಾನ ಇರಬೇಕೆಂದು ಪಳನಿಸ್ವಾಮಿ ಬಣದವರು ಹಲವು ದಿನಗಳಿಂದ ಒತ್ತಾಯ ಮಾಡುತ್ತಿದ್ದರು. ಅದರಂತೆ ದ್ವಿ ನಾಯಕತ್ವವನ್ನು ರದ್ದು ಮಾಡಲು ಎಐಎಡಿಎಂಕೆಯ ಹಿಂದಿನ ಎರಡು ಜನರಲ್ ಕೌನ್ಸಿಲ್ ಸಭೆಯಲ್ಲಿ ಪ್ರಯತ್ನಗಳಾಗಿದ್ದವು.
ಇದನ್ನು ಪ್ರಶ್ನಿಸಿ ಒಪಿಎಸ್ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದರು. ಅಲ್ಲಿ ಅವರಿಗೆ ಜನರಲ್ ಕೌನ್ಸಿಲ್ ಸಭೆಯಲ್ಲಿ ಯಾವುದೇ ಅಘೋಷತ ನಿರ್ಣಯಗಳನ್ನು ಜಾರಿಗೆ ತರದಂತೆ ತಡೆ ಸಿಕ್ಕಿತು. ಹೈಕೋರ್ಟ್ ನೀಡಿದ ತಡೆ ವಿರುದ್ಧ ಪಳನಿಸ್ವಾಮಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರು. ಸುಪ್ರೀಂ ಕೋರ್ಟ್ ತನ್ನ ಕೆಳಗಿನ ಕೋರ್ಟ್ ನೀಡಿದ ತಡೆಯನ್ನು ರದ್ದು ಮಾಡಿ ಜನರಲ್ ಕೌನ್ಸಿಲ್ ಸಭೆಗೆ ಅನುವು ಮಾಡಿಕೊಟ್ಟಿತು.
2500 ಮಂದಿ ಎಐಎಡಿಎಂಕೆ ಪದಾಧಿಕಾರಿಗಳು ಪಾಲ್ಗೊಂಡಿದ್ದ ಸಾಮಾನ್ಯ ಸಭೆಯಲ್ಲಿ ಓ ಪನ್ನೀರ್ಸೆಲ್ವಂ ಅವರನ್ನು ಉಚ್ಛಾಟಿಸಲಾಗಿದೆ. ಈ ಮೂಲಕ ಎಐಎಡಿಎಂಕೆಗೆ ಸದ್ಯಕ್ಕೆ ಪಳನಿಸ್ವಾಮಿಯೇ ಏಕಮಾತ್ರ ಅತ್ಯುನ್ನತ ನಾಯಕರಾಗಿದ್ದಾರೆ.
ತಮಿಳುನಾಡು ಸಂಸದ ರಾಜಾರಿಂದ ಪ್ರತ್ಯೇಕ ರಾಷ್ಟ್ರದ ಬೇಡಿಕೆ?
'ಪನ್ನೀರ್ಸೆಲ್ವಂ ನಿಜ ಮುಖ ಬೇರೆ'
ಪನ್ನೀರ್ಸೆಲ್ವಂ ಅವರ ಉಚ್ಛಾಟನೆ ಕ್ರಮವನ್ನು ಸಮರ್ಥಿಸಿಕೊಂಡಿರುವ ಎಐಎಡಿಎಂಕೆಯ ಹಿರಿಯ ಮುಖಂಡ ನಾತಮ್ ವಿಶ್ವನಾಥನ್, ಮಾಜಿ ಮುಖ್ಯಮಂತ್ರಿಯನ್ನು ಒಬ್ಬ ಗೋಮುಖ ವ್ಯಾಘ್ರ ಎಂದು ಟೀಕಿಸಿದ್ದಾರೆ.
"ಪನ್ನೀರ್ಸೆಲ್ವಂ ಬಹಳ ಶಾಂತ ವ್ಯಕ್ತಿಯಂತೆ ತೋರ್ಪಡಿಸುತ್ತಾರೆ. ಆದರೆ, ವಾಸ್ತವದಲ್ಲಿ ಅವರದ್ದು ರೌದ್ರ ಮುಖ. ಅವರು ಹೇಳುವುದು ಬೇರೆ, ಮಾಡುವುದೇ ಬೇರೆ" ಎಂದು ವಿಶ್ವನಾಥನ್ ಗುಡುಗಿದ್ದಾರೆ.
'ಡಿಎಂಕೆ ಜೊತೆಗೆ ಒಪಿಎಸ್'
'ಒಪಿಎಸ್ ಪನ್ನೀರ್ ಸೆಲ್ವಂ ಡಿಎಂಕೆ ಸರಕಾರದ ಜೊತೆ ಸೇರಿ ಎಐಎಡಿಎಂಕೆ ಕಚೇರಿಯಲ್ಲಿ ಹಿಂಸಾಚಾರ ನಡೆಸಿ ದಾಂದಲೆ ಎಸಗಿದ್ದಾರೆ. ಭದ್ರತೆ ಒದಗಿಸಬೇಕೆಂದು ಸರಕಾರಕ್ಕೆ ಮನವಿ ಮಾಡಿಕೊಂಡರೂ ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ದುರ್ಬಲ ಆಗುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ" ಎಂದು ಇಪಿಎಸ್ ಪಳನಿಸ್ವಾಮಿ ಕೆಂಡಕಾರಿದ್ದಾರೆ.
"ನಾನು ಶಾಸಕ, ಸಂಸದ, ಸಚಿವ ಮತ್ತು ಸಿಎಂ ಆಗಿದ್ದರೂ ಮೊದಲು ಪಕ್ಷದ ನಿಷ್ಠಾವಂತ ಕಾರ್ಯಕರ್ತನೇ. ಈಗಲೂ ನಾನು ಕಾರ್ಯಕರ್ತನೇ.... ಎರಡು ನಾಯಕತ್ವದ ವ್ಯವಸ್ಥೆಯಲ್ಲಿ ನಾನೆಷ್ಟು ಪಾಡು ಪಟ್ಟೆನೆಂದು ನನಗೆ ಗೊತ್ತು. ಪಕ್ಷದಲ್ಲಿ ಒಬ್ಬನೇ ನಾಯಕನಿರಬೇಕೆಂದು ಪಕ್ಷದ ಕಾರ್ಯಕರ್ತರು ಬಯಸಿದ್ದರು. ಆದರೆ, ಒಪಿಎಸ್ಗೆ ಕಿವಿಗೆ ಈ ಧ್ವನಿ ತಾಕುತ್ತಿರಲಿಲ್ಲ" ಎಂದು ಪಳನಿಸ್ವಾಮಿ ಹೇಳಿದ್ದಾರೆ.
"ಡಿಎಂಕೆ ಪಕ್ಷ ಕಮಿಷನ್ ಮತ್ತು ಕರಪ್ಷನ್ನಲ್ಲಿ ನಿರತವಾಗಿದೆ. ಆದರೂ ಕೂಡ ಡಿಎಂಕೆ ಸರಕಾರಕ್ಕೆ ಒಪಿಎಸ್ ಮಗ ಒಪಿ ರವೀಂದ್ರನ್ ಶಹಬ್ಬಾಸ್ಗಿರಿ ಕೊಟ್ಟಿದ್ದಾರೆ..." ಎಂದು ತರಾಟೆಗೆ ತೆಗೆದುಕೊಂಡ ಪಳನಿಸ್ವಾಮಿ, "ಎಐಎಡಿಎಂಕೆ ಸಂಸ್ಥಾಪಕ ಎಂಜಿ ರಾಮಚಂದ್ರನ್ ಅವರು ಡಿಎಂಕೆಯನ್ನು ಕೆಟ್ಟ ಶಕ್ತಿ ಎಂದು ಹೇಳುತ್ತಿದ್ದರು" ಎಂದು ನೆನಪಿಸಿದ್ದಾರೆ.
ಪನ್ನೀರ್ಸೆಲ್ವಂ ಪ್ರತಿಕ್ರಿಯೆ
ತನ್ನನ್ನು ಎಐಎಡಿಎಂಕೆ ಪಕ್ಷದಿಂದ ಉಚ್ಛಾಟಿಸಲಾಗಿರುವ ಕ್ರಮವನ್ನು ಪನ್ನೀರ್ಸೆಲ್ವಂ ವಿರೋಧಿಸಿದ್ದಾರೆ.
"ಪಕ್ಷದ ಒಂದೂವರೆ ಕೋಟಿ ಕಾರ್ಯಕರ್ತರು ನನ್ನನ್ನು ಸಂಚಾಲಕನಾಗಿ ಆಯ್ಕೆ ಮಾಡಿದ್ದಾರೆ. ಇಪಿಎಸ್ ಆಗಲಿ ಮತ್ತೊಬ್ಬನಾಗಲೀ ನನ್ನನ್ನು ಪಕ್ಷದಿಂದ ಉಚ್ಛಾಟಿಸುವ ಅಧಿಕಾರ ಹೊಂದಿಲ್ಲ. ನಾನೇ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟಿಸುತ್ತೇನೆ" ಎಂದು ಮಾಜಿ ಸಿಎಂ ಒಪಿಎಸ್ ಪನ್ನೀರ್ಸೆಲ್ವಂ ತಿಳಿಸಿದ್ದಾರೆ.
ಜಯಲಲಿತಾ ಬಂಟನಿಗೆ ಸಂಕಟ
ಜಯಲಲಿತಾ ಮರಣ ಹೊಂದಿದಾಗಿನಿಂದಲೂ ಎಐಎಡಿಎಂಕೆಗೆ ಯಾರು ಬಾಸ್ ಎಂಬ ಗೊಂದಲ ಇದ್ದೇ ಇದೆ. ಜಯಲಲಿತಾ ಅಧಿಕಾರದಿಂದ ಕೆಳಗಿಳಿಯಬೇಕಾದಾಗೆಲ್ಲಾ ಸಿಎಂ ಸ್ಥಾನಕ್ಕೆ ಪನ್ನೀರ್ ಸೆಲ್ವಂ ಅವರನ್ನೇ ಕೂರಿಸಿದ್ದರು. ಜಯಲಲಿತಾರ ನಿಷ್ಠಾವಂತ ಬಂಟನೆಂದೇ ಪನ್ನೀರ್ಸೆಲ್ವಂ ಹೆಸರಾಗಿದ್ದರು. ಜಯಲಲಿತಾ ಮರಣವೊಂದಿದ ಬಳಿಕ ಶಶಿಕಲಾ ಪ್ರವೇಶದೊಂದಿಗೆ ಪಕ್ಷದ ನಾಯಕತ್ವಕ್ಕೆ ಜಂಘೀ ಕುಸ್ತಿ ನಡೆಯಿತು. ಶಶಿಕಲಾರನ್ನು ಮೂಲೆಗುಂಪು ಮಾಡಲು ಪನ್ನೀರ್ಸೆಲ್ವಂ ಯತ್ನಿಸಿದರು. ಅಗ ಇಪಿಎಸ್ ಮೂಲಕ ಎಐಎಡಿಎಂಕೆಯಲ್ಲಿ ಬಂಡಾಯ ಎದ್ದಿತು. ಪಳನಿಸ್ವಾಮಿ ಸಿಎಂ ಆದರು.
ಅಚ್ಚರಿ ಎಂದರೆ ಶಶಿಕಲಾ ಜೈಲಿಗೆ ಹೋದಾಗ ಪನ್ನೀರ್ ಸೆಲ್ವಂ ಮತ್ತು ಪಳನಿಸ್ವಾಮಿ ಮತ್ತೆ ಸ್ನೇಹ ಮಾಡಿಕೊಂಡರು. ಪಳನಿಸ್ವಾಮಿ ಸಿಎಂ ಆದರೆ, ಪನ್ನೀರ್ಸೆಲ್ವಂ ಪಕ್ಷಕ್ಕೆ ಬಾಸ್ ಅದರು. ಇಬ್ಬರೂ ಸೇರಿ ಶಶಿಕಲಾ ಅವರನ್ನೇ ಪಕ್ಷದಿಂದ ಉಚ್ಛಾಟಿಸಿದರು.
ಚುನಾವಣೆಯಲ್ಲಿ ಸೋತು ಎಐಎಡಿಎಂಕೆ ಅಧಿಕಾರದಿಂದ ಹೊರಗಿದೆ. ಶಶಿಕಲಾ ಕೂಡ ಜೈಲಿಂದ ಬಿಡುಗಡೆಯಾಗಿದ್ದಾರೆ. ಈಗ ಎಐಎಡಿಎಂಕೆಯಲ್ಲಿ ಮತ್ತೆ ಬದಲಾವಣೆ ಆಗುತ್ತಿದೆ. ಶಶಿಕಲಾ ವಿರುದ್ಧ ಹಿಂದೆ ಕತ್ತಿ ಮಸೆದಿದ್ದ ಪನ್ನೀರ್ಸೆಲ್ವಂಗೆ ಈಗ ಗೇಟ್ಪಾಸ್ ಸಿಕ್ಕಿದೆ. ಸಕ್ರಿಯ ರಾಜಕಾರಣದಿಂದ ದೂರ ಇರುವುಧಾಗಿ ಕಳೆದ ವರ್ಷ ಹೇಳಿದ್ದ ಶಶಿಕಲಾ ಆಡುತ್ತಿರುವ ಮತ್ತು ಆಡಿಸುತ್ತಿರುವ ಆಟವಾ ಇದು ಎಂಬ ಪ್ರಶ್ನೆ ಸಹಜವಾಗಿಯೇ ಏಳುತ್ತದೆ.
ಡಿಎಂಕೆ ಸರಕಾರದ ಬಗ್ಗೆ ಮೃದು ಧೋರಣೆ ಹೊಂದಿರುವ ಒಪಿಎಸ್ ಪನ್ನೀರ್ಸೆಲ್ವಂ ಮುಂದೆ ಡಿಎಂಕೆ ಪಕ್ಷದತ್ತ ಪ್ರಯಾಣಿಸಿದರೂ ಅಚ್ಚರಿ ಇಲ್ಲ.
(ಒನ್ಇಂಡಿಯಾ ಸುದ್ದಿ)
Recommended Video