ಹಿರಿಯರ ನೆನೆಯುವ ತುಳುವರ ದೀಪಾವಳಿ 'ಸೈದಿನಕ್ಲೆನ ಪರ್ಬ'
ಕರಾವಳಿಯಲ್ಲಿ ಸತ್ತವರೂ ಸಂಭ್ರಮಿಸುವ ಹಬ್ಬ ದೀಪಾವಳಿ. ತುಳುನಾಡನ್ನು ಕಾಪಾಡುವ ದೈವಗಣಗಳಿಗೂ ದೀಪಾವಳಿ ಬಂದರೆ ಅಚ್ಚುಮೆಚ್ಚು. ಬದುಕಿದ್ದವರ ಹಬ್ಬ ನೋಡಿದ್ದೇವೆ, ಆದರೆ ಅಗಲಿದವರನ್ನೂ ಸ್ಮರಿಸುವ 'ಜನಪದ ದೀಪಾವಳಿ' ನೋಡಬೇಕೆಂದರೆ ನೀವು ಉಡುಪಿಗೇ ಬರಬೇಕು.
ದೀಪಾವಳಿ ಬಂದಾಗ ಸತ್ತವರನ್ನೆಲ್ಲಾ ಬರಮಾಡಿಕೊಳ್ಳುವ ಸಂಪ್ರದಾಯ ಉಡುಪಿಯಲ್ಲಿದೆ. ತುಳುವರ ನಂಬಿಕೆಯ ಪ್ರಕಾರ ನಮ್ಮನ್ನು ಅಗಲಿದ ಹಿರಿಯರು ಸ್ವರ್ಗಕ್ಕೋ, ನರಕಕ್ಕೋ ಹೋಗುವುದಿಲ್ಲ. ಮನೆಯ ದೈವಗಳ ಸನ್ನಿಧಾನದಲ್ಲೇ ಇರುತ್ತಾರೆ. ಹಾಗಾಗಿ ದೀಪಾವಳಿಯಲ್ಲಿ ನಾವು ಸಂಭ್ರಮಿಸುವ ಮುನ್ನ ನಮ್ಮ ಪೂರ್ವಿಕರನ್ನು ಕರೆದು ಅವರಿಗೆ ಹೊಸಬಟ್ಟೆ ಕೊಟ್ಟು, ತಿನ್ನಲು ಖಾದ್ಯಗಳನ್ನಿಟ್ಟು ಬರಮಾಡಿಕೊಳ್ಳುವುದು ಸಂಪ್ರದಾಯ.

ದೀಪಾವಳಿಯ ಒಂದು ದಿನವನ್ನು 'ಸೈದಿನಕ್ಲೆನ ಪರ್ಬ', ಅಂದರೆ ಸತ್ತವರ ಹಬ್ಬ ಎಂದು ಆಚರಿಸಲಾಗುತ್ತದೆ. ನಾಲ್ಕಾರು ಶತಮಾನಗಳಿಂದ ಅಗಲಿದ ಹಿರಿಯರ ಆತ್ಮಗಳಣ್ನು ಆ ದಿನ ಕರೆಯಲಾಗುತ್ತೆ. ಅವರು ತೊಡಲೆಂದು ಮೀಸಲಿಟ್ಟ ಬಟ್ಟೆ, ಬಳಸುತ್ತಿದ್ದ ಬಳೆ, ಕರಿಮಣಿ ಇತ್ಯಾದಿಗಳನ್ನು ಪೆಟ್ಟಿಗೆಯಿಂದು ಹೊರ ತೆಗೆದು ಒಣಗಿಸಿ ಮತ್ತೆ ಪೆಟ್ಟಿಗೆಯಲ್ಲಿ ಭದ್ರವಾಗಿ ಇರಿಸಲಾಗುತ್ತದೆ. ಹಾಗಾಗಿ ಕರಾವಳಿಯಲ್ಲಿ ಪೂರ್ವಿಕರನ್ನು ಸ್ಮರಿಸುವ ಹಬ್ಬ ಈ ದೀಪಾವಳಿ.

ದೈವಾರಾಧನೆಗೂ ಮಹತ್ವ: ಕುಟುಂಬದ ಹಿರಿಯರು ಮಾತ್ರವಲ್ಲ, ದೈವಗಳ ಆರಾಧನೆಗೂ ದೀಪಾವಳಿಯಲ್ಲಿ ವಿಶೇಷ ಮಹತ್ವ. ಮನೆಯ ಆವರಣದಲ್ಲೇ ಇರುವ ದೈವದ ಗುಡಿಯನ್ನು ಸ್ವಚ್ಛ ಮಾಡಿ, ಅಲಂಕಾರ ಮಾಡಿ, ದೀಪ ಬೆಳಗಿ, ಆಹಾರ ಕೊಟ್ಟು ಆರಾಧಿಸುವ ಜನಪದ ಪದ್ಧತಿ ಇವತ್ತಿಗೂ ಜೀವಂತವಾಗಿದೆ. 'ಮುಳ್ಳು ಮುಟ್ಟೆ' ಎಂಬ ಇನ್ನೊಂದು ಬಗೆಯ ಸ್ವಚ್ಛತಾ ಆರಾಧನೆ ಅನಾದಿ ಕಾಲದಿಂದ ಜಾರಿಯಲ್ಲಿದೆ. ಕೃಷಿಗೆ ಅಡ್ಡಿ ಮಾಡುವ ಮುಳ್ಳು, ಕಸದ ರಾಶಿ ಹಾಕಿ ಅದಕ್ಕೆ ಬೆಂಕಿ ಹಾಕಿ ಸುಡುವ ಈ ಸ್ವಚ್ಛತಾ ಅಭಿಯಾನ ಕರಾವಳಿಯ ಸಂಸ್ಕೃತಿಯಲ್ಲೇ ಬೆಳೆದುಬಂದಿದೆ. ಬಳಿಕ ದೈವದ ನೇಮೋತ್ಸವ ನಡೆಸಿ ಮನಸ್ಸಿನ ಕೊಳಕನ್ನೂ ಶುದ್ಧಿ ಮಾಡುವ ಸಂಪ್ರದಾಯ ಇವತ್ತಿಗೂ ಚಾಲ್ತಿಯಲ್ಲಿದೆ.












Click it and Unblock the Notifications