Get Updates
Get notified of breaking news, exclusive insights, and must-see stories!

ಭಾರತದ ಪರ ವಿಶ್ವಕ್ಕೆ ಶಾಂತಿ ಸಂದೇಶ ಸಾರಿದ ವಿವೇಕಾನಂದರು

ನ್ಯೂಯಾರ್ಕ್, ಜನವರಿ.12: ಯುವಕರ ಪಾಲಿನ ಸ್ಪೂರ್ತಿಯ ಚಿಲುಮೆ, ವಿಶ್ವಕ್ಕೆ ಏಕತೆಯ ಸಂದೇಶ ಸಾರಿದ ಭಾರತದ ವೀರ ಸನ್ಯಾಸಿಯೇ ಸ್ವಾಮಿ ವಿವೇಕಾನಂದರು. ಸರ್ವಧರ್ಮ ಸಹಿಷ್ಣುತೆಯನ್ನು ಪ್ರಪಂಚದ ಎದುರಿಗೆ ತೆರೆದಿದ್ದ ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ.12ನ್ನು ರಾಷ್ಟ್ರೀಯ ಯುವದಿನವನ್ನಾಗಿ ಆಚರಣೆ ಮಾಡಲಾಗುತ್ತದೆ.

ಜಾತಿ, ಧರ್ಮ, ಪಂಥಗಳ ವಿಚಾರದಲ್ಲಿ ಕಿತ್ತಾಟಗಳು ನಡೆಯುತ್ತಿದ್ದ ಸಂದರ್ಭದಲ್ಲೇ ವಿಶ್ವಕ್ಕೆ ಏಕಧರ್ಮದ ಸಂದೇಶವನ್ನು ಹಿಂದೂ ಧರ್ಮದ ಮಹತ್ವವನ್ನು ಎತ್ತಿ ತೋರಿಸಿದ್ದು ಸ್ವಾಮಿ ವಿವೇಕಾನಂದರು.

1893ರ ಸೆಪ್ಟೆಂಬರ್.11ರಲ್ಲಿ ಅಮೆರಿಕಾದ ಚಿಕಾಗೋದಲ್ಲಿ ಸರ್ವಧರ್ಮ ಸಮ್ಮೇಳನವು ನಡೆಯಿತು. ಈ ವೇಳೆ ಭಾರತವನ್ನು ಸ್ವಾಮಿ ವಿವೇಕಾನಂದರು ಪ್ರತಿನಿಧಿಸಿದ್ದರು. ದೇಶದ ಹಿರಿಮೆ ಹಾಗೂ ಹಿಂದೂ ಧರ್ಮದ ಸಾರವನ್ನು ವಿಶ್ವಕ್ಕೆ ಸಾರಿ ಹೇಳಿದ ವೀರ ಸನ್ಯಾಸಿಯನ್ನು ಪ್ರಪಂಚವೇ ಬೆಕ್ಕಸ ಬೆರಗಾಗಿ ನೋಡುತ್ತಿತ್ತು. ವೇದಿಕೆ ಮೇಲೆ ನಿಂತು ಸ್ವಾಮಿ ವಿವೇಕಾನಂದರು ಭಾಷಣ ಆರಂಭಿಸುತ್ತಿದ್ದಂತೆ ನೆರೆದ ಸಾವಿರ ಸಾವಿರ ಜನರು ಚಪ್ಪಾಳೆ ತಟ್ಟಿ, ಶಿಳ್ಳೆ ಹೊಡೆದರು.

ಸ್ವಾಮಿ ವಿವೇಕಾನಂದರ 157ನೇ ಜನ್ಮದಿನವಾದ ಹಿನ್ನೆಲೆಯಲ್ಲಿ ದೇಶವಷ್ಟೇ ಅಲ್ಲದೇ ಇಡೀ ಪ್ರಪಂಚವೇ ವೀರ ಸನ್ಯಾಸಿಯನ್ನು ಸ್ಮರಿಸಿಕೊಳ್ಳುತ್ತಿದೆ. ಇಂಥ ಸುಸಂದರ್ಭದಲ್ಲಿ ಈ ಹಿಂದೆ ಚಿಕಾಗೋದಲ್ಲಿ ಅವರು ನೀಡಿದ ಭಾಷಣದ ಸಾರಾಂಶವನ್ನು ಓದುಗರ ಮುಂದೆ ಇಡಲಾಗಿದೆ.

Swami Vivekanannda Speech In Chicago Worlds Parliament Of Religions

ಅಮೆರಿಕಾದ ಸಹೋದರ, ಸಹೋದರಿಯರೇ,

"ನೀವು ತೋರಿದ ಆತ್ಮೀಯ ಸ್ವಾಗತಕ್ಕೆ ವಂದನೆಗಳನ್ನು ಅರ್ಪಿಸುತ್ತೇನೆ. ನೀವು ತೋರಿದ ಅಭಿಮಾನದಿಂದ ನನ್ನ ಹೃದಯ ತುಂಬಿ ಬಂದಿದೆ. ಪ್ರಪಂಚದ ಅತ್ಯಂತ ಪ್ರಾಚೀನ ಸನ್ಯಾಸಿಗಳ ಸಂಘದ ಪರವಾಗಿ ನಿಮಗೆ ಧನ್ಯವಾದಗಳು. ವಿವಿಧ ಧರ್ಮಗಳ ಮಾತೆಯ ಪರವಾಗಿ ನಿಮಗೆ ವಂದನೆಗಳನ್ನು ತಿಳಿಸಲು ಇಚ್ಛಿಸುತ್ತೇನೆ. ಹಿಂದೂ ಧರ್ಮಕ್ಕೆ ಸೇರಿದ ಎಲ್ಲ ವರ್ಗಗಳ, ಎಲ್ಲ ಪಂಥಗಳ ಕೋಟ್ಯಾನುಕೋಟಿ ಜನರ ಪರವಾಗಿ ನಿಮಗೆ ಅಭಿನಂದನೆಗಳನ್ನು ತಿಳಿಸುತ್ತೇನೆ."

ಇದೇ ವೇದಿಕೆಯಲ್ಲಿ ನಿಂತು ಕೆಲವು ಭಾಷಣಕಾರರು, ಪೂರ್ವ ದೇಶಗಳಿಂದ ಬಂದಿರುವ ಪ್ರತಿನಿಧಿಗಳು ಕುರಿತು ಹೀಗೆ ಹೇಳಿದ್ದಾರೆ. "ಬಹಳ ದೂರದಿಂದ ಬಂದಿರುವ ಇವರು ಧಾರ್ಮಿಕ ಸಹನೆಯ ಭಾವನೆಯನ್ನು ವಿವಿಧ ದೇಶಗಳಿಗೆ ಒಯ್ಯುವ ಗೌರವಕ್ಕೆ ಪಾತ್ರರಾಗುವರು. ಹಾಗೆ ಹೇಳಿದ ಭಾಷಣಕಾರರಿಗೂ ನಾನು ವಂದನೆಗಳನ್ನು ಅರ್ಪಿಸುತ್ತೇನೆ. ಧಾರ್ಮಿಕ ಸಹನೆಯನ್ನೂ, ಎಲ್ಲ ಧರ್ಮಗಳು ಸ್ವೀಕಾರಯೋಗ್ಯ ಎಂಬುದನ್ನು ಜನತ್ತಿಗೆ ಬೋಧಿಸಿದ ಧರ್ಮಕ್ಕೆ ಸೇರಿದವನು ನಾನು ಎಂಬ ಹೆಮ್ಮೆ ನನ್ನದು."

"ಪರಧರ್ಮ ಸಹಿಷ್ಣುತೆಯಲ್ಲಿ ನಮಗೆ ನಂಬಿಕೆಯುಂಟು. ಎಲ್ಲ ಧರ್ಮಗಳು ಸತ್ಯ ಎಂಬುದನ್ನು ನಾವು ಒಪುತ್ತೇವೆ. ಜಗತ್ತಿನ ಎಲ್ಲ ರಾಷ್ಟ್ರಗಳಲ್ಲಿ, ಎಲ್ಲ ಧರ್ಮಗಳಲ್ಲಿ ಯಾರು ಯಾರು ಹಿಂಸೆಗೆ ಒಳಗಾಗಿದ್ದಾರೋ ಅವರಿಗೆಲ್ಲ ನನ್ನ ದೇಶದಲ್ಲಿ ಆಶ್ರಯ ನೀಡಲಾಗಿದೆ ಎಂದು ಹೇಳುವುದಕ್ಕೆ ಹೆಮ್ಮೆ ಆಗುತ್ತದೆ. ಯಾವ ವರ್ಷ ರೋಮನರ ದೌರ್ಜನ್ಯದಿಂದ ಯಹೂದ್ಯರ ಪವಿತ್ರ ದೇವಾಲಯ ಒಡೆದು ಪುಡಿಪುಡಿಯಾಯಿತೋ ಅದೇ ವರ್ಷ ಅಳಿದುಳಿದ ಶುದ್ಧ ಯಹೂದಿಗಳ ಆಶ್ರಯವನ್ನು ಬಯಸಿ ದಕ್ಷಿಣ ಭಾರತಕ್ಕೆ ಬಂದರು. ಅವರಿಗೆ ಆಶ್ರಯ ನೀಡಿದ ದೇಶದಿಂದ ಬಂದವನು ನಾನು ಎಂಬ ಹೆಮ್ಮೆ ನನ್ನದು."

"ಸೋದರರೆ, ಚಿಕ್ಕಂದಿನಿಂದ ನಾನು ಪಠಿಸುತ್ತಿದ್ದ, ಇಂದಿಗೂ ಕೋಟ್ಯಂತರ ಜನರು ಪಠಿಸುತ್ತಿರುವ ಶ್ಲೋಕವೊಂದರ ಕೆಲವು ಪಂಕ್ತಿಗಳನ್ನು ನಿಮ್ಮ ಮುಂದೆ ಹೇಳುತ್ತೆನೆ: ಬೇರೆ ಬೇರೆ ಕಡೆಗಳಲ್ಲಿ ಹುಟ್ಟಿದ ನದಿಗಳು ಕೊನೆಗೆ ಸಾಗರದಲ್ಲಿ ಸಂಗಮಗೊಳ್ಳುವಂತೆ, ಹೇ ಭಗವನ್, ಮಾನವರು ತಮ್ಮ ತಮ್ಮ ಸಂಸ್ಕಾರಗಳಿಗೆ ತಕ್ಕಂತೆ, ನೇರವಾಗಿಯೋ ಅಥವಾ ವಕ್ರವಾಗಿಯೋ ಇರುವ ಪಥಗಳನ್ನು ಅನುಸರಿಸುತ್ತಾರೆ. ಅವೆಲ್ಲವೂ ನಿನ್ನೆಡೆಗೆ ಕರೆದೊಯ್ಯುತ್ತವೆ."

"ಯಾರೇ ಆಗಲಿ, ಯಾವುದೇ ಸ್ವರೂಪದಲ್ಲೇ ಆಗಲಿ ನಾನು ಅವರನ್ನು ಸ್ವೀಕರಿಸುತ್ತೇನೆ. ಅಂತಿಮವಾಗಿ ನನ್ನ ಬಳಿಗೆ ಬರುವ ವಿವಿಧ ಪಥಗಳಲ್ಲಿ ಸಾಗಿದವರು ನನ್ನನ್ನೇ ಸೇರಲು ಪ್ರಯತ್ನಿಸುತ್ತಿದ್ದಾರೆ " ಎಂಬ ಗೀತೆಯ ಅದ್ಭುತ ತತ್ವಪದದ ಸತ್ಯವನ್ನು ಜಗತ್ತಿಗೆ ಸಾರುವುದಕ್ಕೆ ಇದೊಂದು ಸಭೆ ಸಾಕು. ಸಂಕುಚಿತ ಪಂಥಭಾವನೆ, ಅದರ ಭೀಕರ ಸಂತಾನವಾದ ಮತಾಂಧತೆ ಇವು ಈ ಸುಂದರ ಪೃಥ್ವಿಯನ್ನು ಬಹುಕಾಲದಿಂದ ಬಾಧಿಸುತ್ತಿವೆ. ಇವು ಈ ಭುಮಿಯನ್ನು ಹಿಂಸೆಯಿಂದ ತುಂಬಿವೆ, ಅದನ್ನು ಮತ್ತೆ ಮತ್ತೆ ನರ ರಕ್ತದಿಂದ ತೋಯಿಸಿವೆ, ನಾಗರಿಕತೆಯನ್ನು ನಾಶಗೊಳಿಸಿವೆ. ರಾಷ್ಟ್ರರಾಷ್ಟ್ರಗಳನ್ನೇ ನಿರಾಸೆಯ ಕೂಪಕ್ಕೆ ತಳ್ಳಿವೆ.

"ಎಂಥ ಭಯಂಕರ ಧರ್ಮಾಂಧತೆಯ ರಾಕ್ಷಸರು ಇಲ್ಲದಿದ್ದರೆ ಮಾನವ ಸಮಾಜ ಈಗ ಇರುವುದಕ್ಕಿಂತ ಎಷೋ ಪಾಲು ಮುಂದುವರಿಯುತ್ತಿತ್ತು. ಆದರೀಗ ಅವರ ಕಾಲ ಮುಗಿದಿದೆ. ಬೆಳ್ಳಗ್ಗೆ ಈ ಸಭೆಯ ಶುಭಾರಂಭತೆ ಆಗಲಿ. ಖಡ್ಗ ಇಲ್ಲವೇ ಲೇಖನಿಯಿಂದ ಸಾಧಿಸಿದ ಮತೀಯ ಹಿಂಸೆಗಳ, ಒಂದೇ ಗುರಿಯೆಡೆಗೆ ಸಾಗುತ್ತಿದ್ದರೂ ಪಥಿಕರಲ್ಲಿ ತಲೆದೋರುತ್ತಿರುವ ಅನುದಾರವಾದ ಎಲ್ಲ ಮನಸ್ತಾಪಗಳ ಅಂತ್ಯಕ್ರಿಯೆಯನ್ನು ಸೂಚಿಸುವ ಘಂಟಾನಾದವೂ ಆಗಲಿ ಎಂಬುದೇ ನನ್ನ ಆಶಯ" ಎಂದು ಸ್ವಾಮಿ ವಿವೇಕಾನಂದರು ಶಾಂತಿ ಮತ್ತು ಏಕತೆಯ ಸಂದೇಶವನ್ನು ವಿಶ್ವಕ್ಕೆ ಸಾರಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+