ಕನ್ನಡ ಕ್ರೈಂ ಪತ್ರಿಕೋದ್ಯಮದ ಸಾಧಕಿಯರಿವರು
ಮೈಸೂರು, ಮಾರ್ಚ್ 7 : ಪತ್ರಿಕೋದ್ಯಮ ಎಂಬುದು ಸಾಗರ. ತೋಡಿದಷ್ಟು ಆಳ, ಬಗೆದಷ್ಟು ಮುಚ್ಚದ ಹುಳುಕುಗಳು. ಇಂತಹ ಏರು - ಪೇರುಗಳ ಅಲೆಯಲ್ಲಿ ಈಜಿ ಗೆದ್ದವನೇ ನಿಜವಾದ ಸಾಧಕ. ಜರ್ನಲಿಸಂ ಎಂಬ ತೂಗುತಗತ್ತಿ ನೋಡಲು ಬಲುಚೂಪು. ಇಲ್ಲಿ ಸನ್ಮಾನಕ್ಕಿಂತ, ಅವಮಾನವೇ ಹೆಚ್ಚು. ರಾಜಕೀಯ, ಸಿನಿಮಾ, ಮಹಿಳೆ, ಲೈಫ್ ಸ್ಟೈಲ್, ಕ್ರೈಂ ಹೀಗೆ ಹತ್ತು ಹಲವು ಹಲವು ಕಬಂಧಬಾಹುವಿರುವ ಪತ್ರಿಕೋದ್ಯಮ ಒಂದು ಕಾಲಕ್ಕೆ ಹೆಣ್ಣಿಗೆ ಕಬ್ಬಿಣದ ಕಡಲೆ. ಡಿಜಿಟಲ್ ಯುಗದ ಕಾಲದಲ್ಲಿ ತನಿಖಾ ವರದಿ ಎಂಬುದು ಅಸ್ತಿತ್ವದಲ್ಲಿ ಇದೆ ಎಂದರೆ ಅದು ಅಚ್ಚರಿಯೇ.
ತನಿಖಾ ವರದಿ ಅಥವಾ ಸ್ಟಿಂಗ್ ಆಪರೇಷನ್ ಎಂಬ ಪದ ಕೇಳಿದರೇ ಥಟ್ಟೆಂದು ನೆನಪಾಗುವ ಸಾಧಕಿ ವಿಜಯಲಕ್ಷ್ಮೀ ಶಿಬರೂರು. ಕನ್ನಡ ಪತ್ರಿಕೋದ್ಯಮದ ಇತಿಹಾಸದಲ್ಲಿಯೇ ಇವರ ಸಾಧನೆ ಅಪಾರ. ಹೆಣ್ಣಾಗಿ ತಾನು ಶಕ್ತಳು ಎಂಬುದನ್ನು ಸಾಬೀತುಪಡಿಸಿ ಗೆದ್ದು ತೋರಿಸಿದ ಈಕೆಗೆ ಇದು ಕಷ್ಟದ ಕೆಲಸವೇ ಅಲ್ಲವಂತೆ. 17 ವರುಷಗಳ ತಮ್ಮ ಸಾಧನೆಯ ಅವಧಿಯಲ್ಲಿ ವಿಜಯಲಕ್ಷ್ಮೀ ಸಾಧನೆಯ ಮೈಲಿಗಲನ್ನು ಎಲ್ಲರೂ ಮೆಲುಕು ಹಾಕಲೇ ಬೇಕು. ಇಂದಿನ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ(ಮಾರ್ಚ್ 8)ಯಂದು ಇಂಥ ಸಾಧಕಿಯರನ್ನು ನೆನಪಿಸಿಕೊಳ್ಳುವುದು ಸಂದರ್ಭೋಚಿತ.
ವಿಜಯಲಕ್ಷ್ಮೀ ಅವರು ಕವರ್ ಸ್ಟೋರಿ ಎನ್ನುವ ತನಿಖಾ ವರದಿಯ ಮೂಲಕ, ಓರ್ವ ಮಹಿಳೆಯಾಗಿ ದೃಶ್ಯಮಾಧ್ಯಮ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಿದವರು. ಆರಂಭದಲ್ಲಿ ಮಂಗಳೂರಿನ ಜನವಾಹಿನಿ ಪತ್ರಿಕೆಯಲ್ಲಿ ತಮ್ಮ ಪತ್ರಿಕಾಜೀವನವನ್ನು ಆರಂಭಿಸಿದ ಅವರು ಬಳಿಕ ಬೆಂಗಳೂರಿಗೆ ತೆರಳಿದ್ದರು. ಬೆಂಗಳೂರಿನಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಸುಮಾರು ವರ್ಷಗಳ ಕಾಲ ಡೆಸ್ಕ್ ಇಂಚಾರ್ಜ್, ಮ್ಯಾಗಜೀನ್ ಎಡಿಟರ್ ಆಗಿ ಕರ್ತವ್ಯ ನಿಭಾಯಿಸಿದ್ದರು. ಈ ಸಂದರ್ಭದಲ್ಲಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಿದ ಮೊದಲ ಮಹಿಳೆ ಎನ್ನುವ ಹೆಗ್ಗಳಿಕೆ ಶಿಬರೂರು ಅವರದ್ದು.

450 ಕ್ಕೂ ಹೆಚ್ಚು ತನಿಖಾ ವರದಿಗಳು
ಬಳಿಕ ಸುಮಾರು 3 ವರ್ಷಗಳ ಕಾಲ ಹಿಂದಿನ ಈಟಿವಿ ಕನ್ನಡ ಚಾನೆಲ್ ನಲ್ಲಿ ಸೀನಿಯರ್ ರಿಪೋರ್ಟರ್ ಆಗಿ ಕೆಲಸ ಮಾಡಿದ್ದರು. ಮತ್ತೆ ಕನ್ನಡದ ನಂಬರ್ 1 ಚಾನೆಲ್ ಟಿವಿ9 ನಲ್ಲಿ ಸೀನಿಯರ್ ಕರೆಸ್ಪಾಂಡೆಂಟ್ ಮತ್ತು ಆಂಕರ್ ಆಗಿ 4 ವರ್ಷಗಳ ಕಾಲ ಕೆಲಸ ಮಾಡಿದ್ದರು. ಶಿಬರೂರು ಪ್ರಖ್ಯಾತರಾಗಿದ್ದು ಸುವರ್ಣ ನ್ಯೂಸ್ ಆರಂಭಿಸಿದ ಕವರ್ ಸ್ಟೋರಿಯ ಮೂಲಕ. ಸುವರ್ಣ ನ್ಯೂಸ್ ನ ಸಂಪಾದಕರ ಆಯ್ಕೆ ವಿಷಯ ಬಂದಾಗ ವಿಜಯಲಕ್ಷ್ಮೀ ಅವರನ್ನು ಸಂಪಾದಕ ಸ್ಥಾನಕ್ಕೆ ಆಯ್ಕೆ ಮಾಡುವ ಕುರಿತು ಚರ್ಚೆ ನಡೆದಿತ್ತು. ಓರ್ವ ಮಹಿಳೆಯಾಗಿ ಆ ಸ್ಥಾನವನ್ನು ಶಿಬರೂರು ತುಂಬಬಲ್ಲರೇ ಎನ್ನುವ ಕುರಿತು ಮಾತುಗಳು ಕೇಳಿಬಂದಿತ್ತು. ಶಿಬರೂರು ಆ ಸ್ಥಾನಕ್ಕೆ ಅರ್ಹರಾಗಿದ್ದರೂ, ಕೆಲವೊಂದು ಕಾರಣಗಳಿಂದಾಗಿ ಸಂಪಾದಕ ಸ್ಥಾನವು ತಪ್ಪಿಹೋಗಿತ್ತು. ವಿಜಯಲಕ್ಷ್ಮೀ ಅವರು ಈವರೆಗೆ ಸುಮಾರು 450ಕ್ಕೂ ಅಧಿಕ ಎಪಿಸೋಡ್ ಗಳ ಮೂಲಕ ತನಿಖಾ ವರದಿಯನ್ನು ಕರ್ನಾಟಕದ ಜನತೆಯ ಮುಂದಿಟ್ಟಿದ್ದನ್ನು ಜನ ಎಂದಿಗೂ ಮರೆಯುವುದಿಲ್ಲ.

ಪಾಕಿಸ್ತಾನಕ್ಕೆ ತೆರಳಿ ಡಾಕ್ಯುಮೆಂಟರಿ!
ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡು, ಅಲ್ಲಿನ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಯ ಬಗ್ಗೆ ಡಾಕ್ಯುಮೆಂಟರಿ ಮಾಡಿದ್ದು, ಶಿಬರೂರು ಅವರ ಸಾಹಸೀ ಪ್ರವೃತ್ತಿಗೆ ಸಾಕ್ಷಿ. ಇವರ ಮಾಧ್ಯಮಸೇವೆಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಮಾಧ್ಯಮ ರತ್ನ, ಬೆಂಗಳೂರು ರತ್ನ, ಮಾಧ್ಯಮ ಸನ್ಮಾನ ಸೇರಿದಂತೆ ಇನ್ನೂ ಅನೇಕ ಪ್ರಶಸ್ತಿ ಪುರಸ್ಕಾರಗಳು ಸಂದಿವೆ.

ಶುರುವಾಗಿದೆ ಸರ್ಜಿಕಲ್ ಸ್ಟ್ರೈಕ್!
ಸದಾ ನಗುಮೊಗದಲ್ಲಿರುವ ವಿಜಯಲಕ್ಷ್ಮೀ, ನಾನೊಬ್ಬಳು ಹೆಣ್ಣೆಂದು, ಕೀಳೆಂದು ಭಾವಿಸಿಯೇ ಇಲ್ಲ. ಎಲ್ಲರ ಹಾಗೇ ನಾನೂ ಒಬ್ಬಳು ಎಂದು ಪತ್ರಿಕೋದ್ಯಮ ನನ್ನನ್ನು ಸ್ವೀಕರಿಸಿದೆ. ಜರ್ನಲಿಸಂಗೆ ಕಾಲಿಡುವ ಪ್ರತಿಯೊಬ್ಬರೂ ಇದನ್ನು ಫ್ಯಾಷನ್ ಎಂದುಕೊಳ್ಳದೇ ಪ್ಯಾಷನ್ ಎಂದು ಭಾವಿಸಿ. ಯಾವುದೇ ಒಂದು ವಿಷಯದ ಬಗ್ಗೆ ಪತ್ರಕರ್ತರು ಸ್ಟಿಕ್ ಆನ್ ಆಗಬಾರದು. ಎಲ್ಲಾ ಫೀಲ್ಡ್ ನಲ್ಲೂ ಕೆಲಸ ಮಾಡಬಲ್ಲವ ಮಾತ್ರ ನೈಜ ಪತ್ರಕರ್ತ. ನನ್ನದು ಸಾವಿನೊಂದಿಗೆ ಸೆಣೆಸಾಡುವ ಆಟ. ಎಂದಿಗೂ ಇಟ್ಟ ಹೆಜ್ಜೆ, ದಿಟ್ಟ ನಡೆಯಷ್ಟೇ ನನ್ನ ಗುರಿ. ಸದ್ಯ ನ್ಯೂಸ್ 18 ನ ಮುಖ್ಯಸ್ಥೆ ಯಾಗಿ ಮತ್ತೊಂದು ಹೊಸ ಆಯಾಮದೊಂದಿಗೆ ಸರ್ಜಿಕಲ್ ಸ್ಟ್ರೈಕ್ ಎಂಬ ಕಾರ್ಯಕ್ರಮ ನಡೆಸುತ್ತಿದ್ದೇನೆ. ಎಲ್ಲರೂ ಪ್ರೋತ್ಸಾಹಿಸಿ ಎಂದು ಮುಗುಳ್ನಕ್ಕರು.

ದಿಟ್ಟ ಮಹಿಳೆ ಪೂರ್ಣಿಮಾ ಹೆಗಡೆ
ಕ್ರೈಂ ಜಗತ್ತಿನಲ್ಲಿ ಪುರುಷರೊಂದಿಗೆ ಹೆಗಲು ಕೊಟ್ಟು ಒಬ್ಬ ಮಹಿಳೆ ಕೂಡ ಸಾಧಿಸಬಲ್ಲಳು ಎಂಬುದಕ್ಕೆ ದಿಟ್ಟ ಉದಾಹರಣೆ ಪೂರ್ಣಿಮಾ ಹೆಗಡೆ. ಉತ್ತರ ಕನ್ನಡದ ಸಿದ್ಧಪಾರರ ವಾಜಗೋಡು ಎಂಬ ಪುಟ್ಟ ಗ್ರಾಮದಲ್ಲಿ ಹುಟ್ಟಿ ಬೆಳೆದ ಈಕೆ ಕ್ರೈಂ ಸುದ್ದಿ ಲೋಕದಲ್ಲಿ ಮಾಡಿದ ಹೆಸರು ಅಪಾರ.. ಶುದ್ಧ ಸಂಪ್ರದಾಯಸ್ಥ ಕುಟುಂಬದಲ್ಲಿ ಬೆಳೆದ ಈಕೆ, ತನ್ನ 21 ನೇ ವಯಸ್ಸಿನಲ್ಲಿ ಸುಮಾರು 10 ವರುಷಗಳಿಂದಲೂ ಕ್ರೈಂ ಸುದ್ದಿ ಜಗತ್ತಿನಲ್ಲಿ ಛಾಪು ಮೂಡಿಸಿದ್ದಾರೆ. ಕೊಲೆ, ಕಳ್ಳತನ, ಅಪಘಾತ, ದರೋಡೆ, ಅತ್ಯಾಚಾರ, ಆತ್ಮಹತ್ಯೆ ಎಂದರೆ ಗಂಡುಮಕ್ಕಳು ಸಹ ಹೋಗಲು ಹಿಂಜರಿಯುವಂತಹ ಈಗಿನ ಯುಗದಲ್ಲಿ ತನ್ನ ದಿಟ್ಟತನ, ಛಲದಿಂದಲೂ ಸಾಧಿಸಿ ತೋರಿಸಿದ್ದಾಳೆ. ತನಿಖಾ ವರದಿಗಾರಕೆಯಲ್ಲಿ ಹೆಚ್ಚೆಚ್ಚು ಹೆಸರುಮಾಡಬೇಕೆಂಬ ಕುತೂಹಲದಿಂದ ಸಾಧಿಸಿರುವ ಪೂರ್ಣಿಮಾ ಪತ್ರಿಕೋದ್ಯಮದಲ್ಲಿ ಪುರುಷನ ಸಮವಾಗಿಯೇ ನಿಂತಿರುವ ದಿಟ್ಟ ಹೆಣ್ಣು.

ಸಾಧಿಸದ ಕ್ಷೇತ್ರವಿಲ್ಲ
ನನ್ನನ್ನು ಈಶ್ವರಪ್ಪನವರು ನಿಂದಿಸಿದಾಗ ಇಡೀ ಪತ್ರಿಕೋದ್ಯಮವೇ ನನ್ನ ಬೆಂಬಲವಾಗಿದ್ದು ನಾನೆಂದಿಗೂ ಮರೆಯುವುದಿಲ್ಲ. ಕ್ರೈಂ ಪತ್ರಿಕೋದ್ಯಮದಲ್ಲಿ ನನ್ನದು ಅಲ್ಪ ಸಾಧನೆಯಷ್ಟೆ. ಹಳ್ಳಿ ಹುಡುಗಿಯಾದ ನನ್ನನ್ನು ಗುರುತಿಸಿದ ಸಂಸ್ಥೆಯನ್ನು ನಾನೆಂದಿಗೂ ಮರೆಯುವುದಿಲ್ಲ. ಕರಾವಳಿ ಮುಂಜಾವು, ಸಮಯ, ರಾಜ್ ನ್ಯೂಸ್, ಬಿಟಿವಿ ಯಲ್ಲಿ ಕ್ರೈಂ ವರದಿಗಾರ್ತಿಯಾಗಿದ್ದೆ. ಹೆಣ್ಣು ಮಕ್ಕಳು ಕ್ರೈಂ ಸುದ್ದಿ ಲೋಕಕ್ಕೆ ಬರುವುದು ತೀರಾ ಕಡಿಮೆ. ಎಲ್ಲರೂ ಕಲರ್ ಫುಲ್ ಕನಸಿನತ್ತ ಒಲವು ತೋರಿಸುತ್ತಾರೆ. ಇದು ತಪ್ಪು. ಸಾಧನೆಯ ದಾರಿಯತ್ತ, ಎಲ್ಲಿದ್ದರೂ ನಾನು ಶಕ್ತಳು ಎಂದರೇ ಮಾತ್ರ ಇಲ್ಲಿ ಬದುಕಲು ಸಾಧ್ಯ. ಕ್ರೈಂ ಸುದ್ದಿ ಲೋಕದ ಬಗ್ಗೆ ತಿಳಿಯ ಹೊರಟಾಗ ಧೈರ್ಯ, ಬದುಕುವ ಹಠ ನಮ್ಮ ಬೆನ್ನು ಹತ್ತುತ್ತದೆ. ಜೀವನದಲ್ಲಿ ಮಹಿಳೆ ಧೈರ್ಯಗೆಡಬಾರದು. ಆಕೆಯು ಸ್ವಾವಲಂಬಿ ಎನ್ನುತ್ತಾರೆ ಪೂರ್ಣಿಮಾ. ಹೆಣ್ಣು ಸಾಧಿಸದ ಕ್ಷೇತ್ರವಿಲ್ಲ.
ಮಾನಿನಿ ನಿಮ್ಮೆಲ್ಲ ಆಸೆಗಳಿಗೆ ಗರಿಯಾಗುತ್ತಾಳೆ. ಅವಳೆಂದಿಗೂ ನಾಲ್ಕು ಗೋಡೆ ಮಧ್ಯೆಯಿಲ್ಲ. ಧೈರ್ಯವಂತೆ ಎಂಬುದಕ್ಕೆ ಈ ಇಬ್ಬರು ಮಹಿಳಾ ಸಾಧಕರೇ ಉತ್ತಮ ಉದಾಹರಣೆ. ಇವರು ಮುಂದಿನ ಪತ್ರರ್ಕರ್ತರಿಗೆ ಮಾದರಿಯಾಗಲಿ.












Click it and Unblock the Notifications