5 ರು.ಗೆ ಊಟ ಕೊಟ್ಟ ಮಾಧವ್ ಭಟ್ ಇನ್ನು ನೆನಪು ಮಾತ್ರ
ಮಕ್ಕಳ ಪಾಲಿಗೆ ಅನ್ನದಾತರಾಗಿದ್ದ ಮಾಧವ ಭಟ್ ಮಂಗಳವಾರ ನಿಧನರಾಗಿದ್ದಾರೆ. ಅವರಿಗೆ ಅರವತ್ತು ವರ್ಷ ವಯಸ್ಸಾಗಿತ್ತು. ಗಂಟಲು ನೋವಿನ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಪತ್ನಿ ಹಾಗೂ ಮಗ ಇದ್ದಾರೆ. ಅವರ ಸಾವಿಗೆ ವಿದ್ಯಾರ್ಥಿಗಳ ಸಮೂಹ ಕಂಬನಿ ಮಿಡಿದಿದೆ. ಫೇಸ್ ಬುಕ್, ವಾಟ್ಸಾಪ್ ಗಳಲ್ಲಿ ಮಾಧವ ಭಟ್ ಅವರಿಗೆ ಹಲವರು ಶೃದ್ಧಾಂಜಲಿ ಸಲ್ಲಿಸಿದ್ದಾರೆ.
ಸಮಾಜ ಸೇವೆ ಹಲವು ದಾರಿಗಳಿವೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ, ಅವರದೇ ಆದ ವಿಶಿಷ್ಟ ಶೈಲಿಯಲ್ಲಿ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅಂಥವರ ಸಾಲಿನಲ್ಲಿ ನಿಲ್ಲುವಂಥವರಾಗಿದ್ದರು ಭಟ್ಕಳದ ಮಾಧವ ಭಟ್. ಭಟ್ಕಳದ ಹೃದಯ ಭಾಗದಲ್ಲಿರುವ ಹೋಟೆಲ್ ಶ್ರೀನಿವಾಸ ಡೀಲಕ್ಸ್ ನಲ್ಲಿ 25 ವರ್ಷಗಳಿಂದ ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಊಟ ನೀಡಲಾಗುತ್ತಿದೆ.
ಈ ಹೋಟೆಲ್ ನ ಮಾಲೀಕರಾಗಿದ್ದವರು ಮಾಧವ ಭಟ್. ಅವರ ಜತೆಗೆ ಪತ್ನಿ ರಜನಿ ಭಟ್ ಕೂಡ ನೆರವು ನೀಡುತ್ತಿದ್ದರು. ಈ ಹೋಟೆಲ್ ಪಟ್ಟಣದ ಹೃದಯ ಭಾಗದಲ್ಲಿದ್ದು, ಶಾಲಾ- ಕಾಲೇಜುಗಳಿಗೆ ಅತೀ ಸಮೀಪದಲ್ಲಿದೆ. ಜತೆಗೆ ಇದು ಶುದ್ಧ ಸಸ್ಯಹಾರಿ ಹೋಟೆಲ್.
ದೂರದೂರಿನಿಂದ ಬರುವ ಶಾಲಾ- ಕಾಲೇಜು ಮಕ್ಕಳಿಗೆ ಉಪಯೋಗವಾಗಲೆಂದು 25 ವರ್ಷಗಳ ಹಿಂದೆ ಈ ಹೋಟೆಲ್ ನಲ್ಲಿ 5 ರುಪಾಯಿ ಊಟವನ್ನು ಪ್ರಾರಂಭಿಸಲಾಯಿತು. ತೀರಾ ಎರಡು- ಮೂರು ವರ್ಷದ ಹಿಂದಿನವರೆಗೆ ಅದೇ ಅಂದು ಸರಕಾರದ ಬಿಸಿಯೂಟ ಯೋಜನೆ ಆರಂಭವಾಗಿರಲಿಲ್ಲ. ಹೀಗಾಗಿ ಮನೆಗೆ ಹೋಗಿ ಊಟ ಮಾಡಿ ಬರಲಾರದ ಐನೂರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಇಲ್ಲಿ ಬಂದು ಊಟ ಮಾಡುತ್ತಿದ್ದರು.

ವಿದ್ಯಾರ್ಥಿಗಳಿಗೆ ಮೃಷ್ಟಾನ್ನ ಭೋಜನ
ಜತೆಗೆ ಮನೆಗೆ ಹೋಗಿ ಬರುವ ಸಮಯ ಇಲ್ಲಿ ಊಟ ಮಾಡುವುದರಿಂದ ಉಳಿಯುತ್ತಿದ್ದರಿಂದ ಆಟ, ಪಾಠ, ಓದಿನ ಕಡೆ ಗಮನ ಹರಿಸುತ್ತಿದ್ದರು. ಊಟದಲ್ಲಿ ಅನ್ನ, ಸಾಂಬಾರು, ಪಲ್ಯ, ಉಪ್ಪಿನಕಾಯಿ ಇರುತ್ತಿತ್ತು. ಶಾಲಾ ಮಕ್ಕಳಿಗೆ ಇದಕ್ಕಿಂತ ಹೆಚ್ಚಿನ ಊಟ ಬೇಕೆ? ಮಕ್ಕಳು ಇದೇ ಮೃಷ್ಟಾನ್ನ ಭೋಜನವೆಂದು ಸ್ವೀಕರಿಸುತ್ತಿದ್ದರು.

ಪ್ರೌಢಶಾಲೆ ವಿದ್ಯಾರ್ಥಿಗಳಿಗೆ 10 ರು., ಕಾಲೇಜು ವಿದ್ಯಾರ್ಥಿಗಳಿಗೆ 15 ರು.
ಈಗ ಸರಕಾರದಿಂದ ಮಧ್ಯಾಹ್ನದ ಬಿಸಿಯೂಟದ ಯೋಜನೆ ಪ್ರಾರಂಭವಾಗಿದೆ. ಆದರೂ ಇಲ್ಲಿಗೆ ಬರುವ ಮಕ್ಕಳ ಸಂಖ್ಯೆಯಲ್ಲಿ ಅಷ್ಟೇನೂ ಇಳಿಕೆಯಾಗಿಲ್ಲ. ಶಾಲೆಯಲ್ಲಿ ಬಿಸಿಯೂಟ ಇದ್ದರೂ ಸುಮಾರು ಇನ್ನೂರು ಮಕ್ಕಳು ದಿನಂಪ್ರತಿ ಇಲ್ಲಿ ಊಟ ಮಾಡುತ್ತಿದ್ದಾರೆ. ಆದರೆ ಪ್ರಸ್ತುತ ದಿನಗಳಲ್ಲಿ ದಿನಸಿ, ಬೇಳೆಕಾಳುಗಳು ಸೇರಿದಂತೆ ಅಗತ್ಯ ಸಾಮಗ್ರಿಗಳ ದರ ಏರಿಕೆ ಆಗಿರುವುದರಿಂದ ಇತ್ತೀಚಿಗೆ ಊಟದ ದರವನ್ನು ಹೆಚ್ಚಿಸಲಾಗಿದೆ. ಪ್ರೌಢಶಾಲೆಯ ಒಳಗಿನ ಮಕ್ಕಳಿಗೆ 10 ರು. ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ 15 ರು.ನಲ್ಲಿ ಊಟ ನೀಡಲಾಗುತ್ತಿದೆ.

ಗ್ರಾಮೀಣ ಭಾಗದ ಮಕ್ಕಳು ಹೆಚ್ಚಿನವರು
"ನಮ್ಮ ಹೋಟೆಲ್ ನಲ್ಲಿ ಬರುವ ಮಕ್ಕಳಲ್ಲಿ ಹೆಚ್ಚಿನವರು ಗ್ರಾಮೀಣ ಭಾಗದವರು. ಅವರಿಗೆ ಒಂದು ಹೊತ್ತಿಗೆ ರಿಯಾಯಿತಿ ದರದಲ್ಲಿ ಊಟ ಹಾಕಿದರೆ ನಾವೇನೂ ಬಡವರಾಗುವುದಿಲ್ಲ. ನಮ್ಮ ವ್ಯಾಪಾರ ಹಾಗೇ ನಡೆಯುತ್ತಿರುತ್ತದೆ. ಹೀಗಾಗಿ ಸಮಾಜ ಸೇವೆ ಎಂದು ತಿಳಿದು ಈ ಕಾಯಕವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇನೆ" ಎಂದು ಮಾಲೀಕ ಮಾಧವ ಭಟ್ ಹಿಂದೊಮ್ಮೆ ಭೇಟಿ ನೀಡಿದಾಗ ತಿಳಿಸಿದ್ದರು.

ಮರಳಿ ಬಂದು ಕೃತಜ್ಞತೆ ಹೇಳಿದ್ದೇ ಪ್ರೇರಣೆ
ನಮ್ಮ ಹೋಟೆಲ್ ನಲ್ಲಿ ಊಟ ಮಾಡುತ್ತಾ ಇಲ್ಲಿನ ಶಾಲಾ- ಕಾಲೇಜುಗಳಲ್ಲಿ ಕಲಿಯುತ್ತಿದ್ದ ಅದೆಷ್ಟೋ ಮಕ್ಕಳು ಈಗ ದೊಡ್ಡವರಾಗಿ ದೇಶ- ವಿದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಲ್ಲಿ ಅನೇಕರು ಮರಳಿ ಊರಿಗೆ ಬಂದಾಗ ನಮ್ಮನ್ನು ಭೇಟಿ ಮಾಡಿ, ಹಿಂದಿನ ಕಥೆಗಳನ್ನು ಹೇಳಿ ಧನ್ಯತೆ ಮೆರೆಯುತ್ತಾರೆ. ಈ ಧನ್ಯತೆಯೇ ನಮಗೆ ರಿಯಾಯಿತಿ ದರದಲ್ಲಿ ಊಟ ನೀಡುವ ಕಾಯಕವನ್ನು ಮುಂದುವರಿಸಿಕೊಂಡು ಹೋಗಲು ಪ್ರೇರಣೆ ಎನ್ನುತ್ತಿದ್ದರು ಮಾಧವ್ ಭಟ್.

ಬಾಬಾ ರಾಮ್ ದೇವ್ ರ ಅಭಿಮಾನಿಗಳು
ಮಾಧವ ಭಟ್ ದಂಪತಿ ಪತಂಜಲಿ ಪೀಠದ ಬಾಬಾ ರಾಮದೇವ್ ರ ಅಭಿಮಾನಿಗಳು. ಹೀಗಾಗಿ ಹೋಟೆಲ್ ಸ್ವದೇಶಿಮಯವಾಗಿಯೇ ಇದೆ. ತಂಪು ಪಾನೀಯಗಳೆಲ್ಲವೂ ಇಲ್ಲಿ ಪತಂಜಲಿ ಸಂಸ್ಥೆಯದ್ದು. ಯೋಗ ತರಬೇತಿಗಳನ್ನು ಕೂಡ ಇಲ್ಲಿ ಆಯೋಜಿಸಲಾಗುತ್ತದೆ. ಪತಂಜಲಿ ಸಂಸ್ಥೆಯ ಉತ್ಪನ್ನಗಳ ಮಳಿಗೆಯನ್ನು ಕೂಡ ಇದೇ ಹೋಟೆಲ್ ನಲ್ಲಿ ತೆರೆಯಲಾಗಿದೆ.












Click it and Unblock the Notifications