ನೈರುತ್ಯ ಮುಂಗಾರು ಕೇರಳ ಪ್ರವೇಶಿಸಲು 24 ಗಂಟೆ ಬಾಕಿ; ಉತ್ತರ ಭಾರತ ಧಗಧಗ
ಇನ್ನೆಷ್ಟು ಸಮಯ ಇದೆ? ಅಬ್ಬಬ್ಬಾ ಅಂದರೆ ಇಪ್ಪತ್ನಾಲ್ಕು ಗಂಟೆ. ನೈರುತ್ಯ ಮುಂಗಾರು ಜೂನ್ 8ನೇ ತಾರೀಕು ಕೇರಳ ಪ್ರವೇಶಿಸುವ ಸಾಧ್ಯತೆ ಇದೆ. ಮೊದಲ ಮಳೆಗೆ ಕೇರಳ ಸಾಕ್ಷಿ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಕಳೆದ ಬಾರಿ ಕೇರಳದಲ್ಲಿ ನಡೆದ ಅವಘಡಗಳನ್ನು ನೆನಪಿಸಿಕೊಂಡರೆ ಒಂದು ಕ್ಷಣ ಮೈ ನಡುಗುತ್ತದೆ.
ಸದ್ಯಕ್ಕೆ ಮುಂಗಾರು ಲಕ್ಷದ್ವೀಪ ಹಾಗೂ ಮಾಲ್ಡೀವ್ಸ್ ನಲ್ಲಿ ಚಲಿಸುತ್ತಿದೆ. ಅದು ನಿಧಾನಕ್ಕೆ ಉತ್ತರಕ್ಕೆ ತಿರುಗತ್ತದೆ. ಇದರ ಜತೆಗೆ ಜೂನ್ ಎಂಟರ ಹೊತ್ತಿಗೆ ಪೂರ್ಣವಾಗಿ ರೂಪುಗೊಂಡು, ಮಹಾರಾಷ್ಟ್ರ ಹಾಗೂ ಕೇರಳ ಕಡಲ ತೀರ ಪ್ರವೇಶಿಸುತ್ತದೆ. ಈ ಅನುಕೂಲಕರ ಸನ್ನಿವೇಶದಲ್ಲಿ ಜೂನ್ ಎಂಟನೇ ತಾರೀಕು ಮುಂಗಾರು ಕೇರಳವನ್ನು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಜೂನ್ ಒಂದನೇ ತಾರೀಕು ಕೇರಳಕ್ಕೆ ಮುಂಗಾರು ಪ್ರವೇಶ ಆಗಬೇಕಿತ್ತು. ಈಗಾಗಲೇ ಒಂದು ವಾರ ತಡವಾಗಿದೆ. ಇದು ಭಾರತದ ಕೇಂದ್ರ ಹಾಗೂ ದಕ್ಷಿಣದ ಇತರ ಭಾಗಗಳ ಮೇಲೂ ಪರಿಣಾಮ ಬೀರಲಿದೆ. ಜೂನ್ ಒಂಬತ್ತರಂದು ಕೇರಳ ಹಾಗೂ ಕರ್ನಾಟಕ ಕಡಲ ತೀರದಲ್ಲಿ ವಾಯುಭಾರ ಕುಸಿತ ಆಗಬಹುದು ಎಂದು ಎಚ್ಚರಿಸಲಾಗಿದೆ.

ಕೊಲ್ಲಂ ಮತ್ತು ಅಲಪ್ಪುಳದಲ್ಲಿ 'ಆರೆಂಜ್ ಅಲರ್ಟ್'
ಇದು ವಾಯುವ್ಯದ ಕಡೆಗೆ ಚಲಿಸಿದಂತೆ ಮತ್ತಷ್ಟು ಬಲಿಷ್ಠವಾಗುತ್ತದೆ. ಮೇಲ್ಮೈ ಚಂಡಮಾರುತವು ಸಮುದ್ರ ಮಟ್ಟಕ್ಕಿಂತ ಒಂದೂವರೆ ಎರಡು ಕಿ.ಮೀ. ಎತ್ತರದಲ್ಲಿ ಉತ್ತರ ಕೇರಳ ಹಾಗೂ ಸುತ್ತಮುತ್ತಲ ಭಾಗದಲ್ಲಿ ಕಾಣಿಸಿಕೊಳ್ಳಬಹುದು. ಜೂನ್ ಒಂಬತ್ತನೇ ತಾರೀಕು ಕೊಲ್ಲಂ ಮತ್ತು ಅಲಪ್ಪುಳದಲ್ಲಿ 'ಆರೆಂಜ್ ಅಲರ್ಟ್' ನೀಡಲಾಗಿದೆ. ಇತರ ಏಳು ಜಿಲ್ಲೆಗಳಲ್ಲಿ 'ಯೆಲ್ಲೋ ಅಲರ್ಟ್' ನೀಡಲಾಗಿದೆ.

ಜೂನ್ ಹತ್ತನೇ ತಾರೀಕಿಗೆ ಎಚ್ಚರಿಕೆ
ಜೂನ್ ಹತ್ತನೇ ತಾರೀಕಿಗೆ ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ನಾಲ್ಕು ಜಿಲ್ಲೆಗಳಿಗೆ 'ಆರೆಂಜ್ ಅಲರ್ಟ್' ನೀಡಿದೆ. ತಿರುವನಂತಪುರ, ಕೊಲ್ಲಂ, ಅಲಪ್ಪುಳ, ಎರ್ನಾಕುಲಂ ಜಿಲ್ಲೆಗಳಲ್ಲಿ ವಿಪರೀತ ಮಳೆ ಆಗಬಹುದು ಎಂದು ಎಚ್ಚರಿಕೆ ನೀಡಿದ್ದು, ಇವೇ ಐದು ಜಿಲ್ಲೆಗಳಿಗೆ, ಅದೇ ದಿನಕ್ಕೆ 'ಯೆಲ್ಲೋ ಅಲರ್ಟ್' ನೀಡಲಾಗಿದೆ.

ಚುರುವಿನಲ್ಲಿ ಗರಿಷ್ಠ ಐವತ್ತು ಡಿಗ್ರಿ ಸೆಲ್ಷಿಯಸ್ ದಾಟಿತ್ತು
ಇನ್ನು ಉತ್ತರ ಭಾರತದ ರಾಜಸ್ತಾನ, ಉತ್ತರಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ತಾಪಮಾನ ನಲವತ್ತೇಳು ಡಿಗ್ರಿ ಸೆಲ್ಷಿಯಸ್ ದಾಟಿಹೋಗಿದೆ. ಕೆಲವು ಪ್ರದೇಶಗಳಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆ ಕೂಡ ಆಗಿದೆ. ಜೈಪುರ್ ನಲ್ಲಿ ಹವಾಮಾನ ಕೇಂದ್ರ ಹೇಳಿರುವ ಪ್ರಕಾರ: ಹಲವು ಪ್ರದೇಶಗಳಲ್ಲಿ ಗಂಭೀರ ಸ್ವರೂಪದಲ್ಲಿ ಉಷ್ಣಗಾಳಿ ಬೀಸುತ್ತಿದೆ. ಜೂನ್ ಒಂದನೇ ತಾರೀಕು ರಾಜಸ್ತಾನದ ಚುರುವಿನಲ್ಲಿ ಗರಿಷ್ಠ ಐವತ್ತು ಡಿಗ್ರಿ ಸೆಲ್ಷಿಯಸ್ ದಾಟಿತ್ತು.

ನಾಲ್ಕೈದು ಡಿಗ್ರಿ ಉಷ್ಣಾಂಶ ತಗ್ಗಬಹುದು
ಅರೇಬಿಯನ್ ಸಮುದ್ರದಿಂದ ನೈರುತ್ಯ ಮಾರುತವು ಜೂನ್ ಹತ್ತನೇ ತಾರೀಕಿನ ನಂತರ ರಾಜಸ್ತಾನ ಪ್ರವೇಶಿಸಬಹುದು. ಆಗ ಗರಿಷ್ಠ ಉಷ್ಣಾಂಶ ನಾಲ್ಕೈದು ಡಿಗ್ರಿ ಸೆಲ್ಷಿಯಸ್ ಕಡಿಮೆ ಆಗಬಹುದು. ಜತೆಗೆ ಇನ್ನೈದು ದಿನದಲ್ಲಿ ಉಷ್ಣ ಮಾರುತ ಸಹ ತಗ್ಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಮಧ್ಯಪ್ರದೇಶದಲ್ಲಿ ಬಿಸಿಲ ತಾಪಕ್ಕೆ ಮಹಿಳೆ ಸಾವು
ಮಧ್ಯಪ್ರದೇಶದಲ್ಲಿ ಏರುತ್ತಿರುವ ತಾಪಮಾನಕ್ಕೆ ಯಾವುದೇ ಪರಿಹಾರವೇ ಸಿಗುತ್ತಿಲ್ಲ. ಬಿಸಿಲ ತಾಪಕ್ಕೆ ವೃದ್ಧೆಯೊಬ್ಬರು ಮಧ್ಯಪ್ರದೇಶದಲ್ಲಿ ಪ್ರಜ್ಞಾಹೀನರಾಗಿದ್ದು, ಆ ನಂತರ ಸಾವನ್ನಪ್ಪಿದ್ದಾರೆ. ಕಳೆದ ಇಪ್ಪತ್ನಾಲ್ಕು ಗಂಟೆಯಲ್ಲಿ ಹಿಮಾಚಲಪ್ರದೇಶದ ಅಲ್ಲಲ್ಲಿ ಮಳೆಯಾಗಿದೆ. ಕಾಂಗ್ರಾದಲ್ಲಿ ಮೂವತ್ತೇಳು ಡಿಗ್ರಿ ಸೆಲ್ಷಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ಬಿಲಾಸ್ ಪುರ್, ಹಮಿರ್ ಪುರ್, ಚಂಬಾದಲ್ಲಿ ಮೂವತ್ತೈದು ಡಿಗ್ರಿ ಸೆಲ್ಷಿಯಸ್ ಗೂ ಹೆಚ್ಚು ತಾಪಮಾನವಿತ್ತು.
-
ಎಲ್ಪಿಜಿ ಸಿಲಿಂಡರ್ ಪೂರೈಕೆ ಸ್ಥಗಿತ: ನಾಳೆಯಿಂದ ಬೆಂಗಳೂರಿನಾದ್ಯಂತ ಹೋಟೆಲ್ಗಳು ಬಂದ್ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ












Click it and Unblock the Notifications