"ಕೊರೊನಾ ಸೋಂಕಿನಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಮತ್ತೊಂದು ಎಡವಟ್ಟು ಮಾಡಿಕೊಳ್ಳಬೇಡಿ"
ದೇಶದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ಆತಂಕ ಹುಟ್ಟು ಹಾಕಿದೆ. ಈ ಸೋಂಕಿನಿಂದ ನಮ್ಮನ್ನು ರಕ್ಷಿಸಿಕೊಳ್ಳಲು ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಪರಿಣಾಮಕಾರಿ ಮಾರ್ಗ ಎಂದು ಹಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಸೋಂಕಿನ ವಿರುದ್ಧ ಪ್ರತಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಹಲವು ಚಿಕಿತ್ಸೆಗಳ ಮಾರ್ಗಗಳನ್ನೂ ಕಂಡುಕೊಳ್ಳಲಾಗುತ್ತಿದೆ. ಕೆಲವರು ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಸ್ವಯಂ ಆಗಿ ಗುಳಿಗೆಗಳನ್ನು, ಟಾನಿಕ್ಗಳನ್ನು ಸೇವಿಸಲು ಆರಂಭಿಸಿದ್ದಾರೆ. ಆದರೆ ಹೀಗೆ ಮಾಡುವುದು ನಿಮ್ಮ ಆರೋಗ್ಯಕ್ಕೆ ಮಾರಕವಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ ತಜ್ಞರು.
ಕೊರೊನಾ ಮೊದಲ ಹಾಗೂ 2ನೇ ಅಲೆ ಲಕ್ಷಣಗಳ ನಡುವಿನ ವ್ಯತ್ಯಾಸ ಹೀಗಿದೆ!
ಇನ್ಸ್ಟಿಟ್ಯೂಟ್ ಆಫ್ ಲಿವರ್ ಅಂಡ್ ಬಿಲಿಯರಿ ಸೈನ್ಸ್ (ILBS) ನಿರ್ದೇಶಕ ಡಾ. ಎಸ್.ಕೆ. ಸಾರಿನ್ ಅವರು "ಹಿಂದೂಸ್ತಾನ್ ಟೈಮ್ಸ್"ನೊಂದಿಗೆ ರೋಗನಿರೋಧಕ ಔಷಧಗಳ ಕುರಿತು ಕೆಲವು ಉಪಯೋಗಕಾರಿ ಅಂಶಗಳನ್ನು ಹಂಚಿಕೊಂಡಿದ್ದಾರೆ. ಮುಂದೆ ಓದಿ...
"ಸಿಕ್ಕ ಸಿಕ್ಕ ಔಷಧಿ ತೆಗೆದುಕೊಳ್ಳಬೇಡಿ"
ಕೊರೊನಾ ಭೀತಿಯಿಂದಾಗಿ ಸೋಂಕಿನ ವಿರುದ್ಧ ಹೋರಾಡಲು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳೋಣ ಎಂದು ಸಿಕ್ಕಸಿಕ್ಕ ಮಾತ್ರೆಗಳನ್ನು ಸೇವಿಸಬೇಡಿ. ಇದು ಯಕೃತ್ತಿನ ಮೇಲೆ ಅಡ್ಡ ಪರಿಣಾಮ ಉಂಟು ಮಾಡಿ ಹಾನಿ ಮಾಡುತ್ತದೆ ಎಂದು ಸಾರಿನ್ ಅವರು ಎಚ್ಚರಿಕೆ ನೀಡಿದ್ದಾರೆ.
ಕೆಲವು ಔಷಧಗಳಿಂದ ಅಡ್ಡ ಪರಿಣಾಮ
ಕೊರೊನಾ ಸೋಂಕು ಹೆಚ್ಚೆಚ್ಚು ಹರಡುತ್ತಿರುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುತ್ತೇವೆ ಎಂದು ಜನರು ಈಗೀಗ ಸ್ವಯಂಪ್ರೇರಿತರಾಗಿ ಹಲವು ಔಷಧಿಗಳನ್ನು ಸೇವಿಸುತ್ತಿದ್ದಾರೆ. ಅದರಲ್ಲಿ ಕೆಲವು ಒಳ್ಳೆಯದಾಗಿದ್ದರೆ, ಮತ್ತಷ್ಟು ಅಡ್ಡಪರಿಣಾಮ ಬೀರುವಂತವಾಗಿರುತ್ತವೆ. ಕೆಲವು ಔಷಧಿಗಳನ್ನು ಹೆಚ್ಚು ಸೇವಿಸಿದರೆ ಲಿವರ್ಗೆ ಹಾನಿಯಾಗುವುದು ಖಚಿತ. ಹೀಗಾಗಿ ಯಾವುದೇ ಮಾತ್ರೆ ಸೇವಿಸುವ ಮುನ್ನ ಆಲೋಚಿಸಿ ಎಂದು ಸಲಹೆ ನೀಡಿದ್ದಾರೆ.
"ಯಕೃತ್ತು ಸಮಸ್ಯೆ ಉಂಟಾಗಬಹುದು ಹುಷಾರ್"
ಯಾವುದೇ ಔಷಧಿ ಪದ್ಧತಿಯಿರಲಿ, ಆಯುರ್ವೇದ, ಹೋಮಿಯೋಪಥಿ ಪದ್ಧತಿಯಾಗಲಿ, ಎಲ್ಲವನ್ನೂ ಪರಿಶೀಲಿಸುವುದೇ ಒಳ್ಳೆಯದು. ಕೊರೊನಾದಿಂದ ದೂರ ಉಳಿಯುವ ಪ್ರಯತ್ನದಲ್ಲಿ ಯಕೃತ್ತು ಸಂಬಂಧಿ ತೊಂದರೆಗಳಿಗೆ ಒಳಗಾಗಬಹುದು ಜೋಕೆ ಎಂದು ಎಚ್ಚರಿಸಿದ್ದಾರೆ ಅವರು.
ರೆಮ್ಡೆಸಿವಿರ್ ಬಗ್ಗೆ ಮಾತನಾಡಿದ್ದ ಗುಲೇರಿಯಾ
ಸೋಮವಾರ ರೆಮ್ಡೆಸಿವಿರ್ ಔಷಧದ ಕುರಿತು ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ ಕೆಲವು ಮಾತುಗಳನ್ನು ಹೇಳಿದ್ದರು. ರೆಮ್ಡೆಸಿವಿರ್ ಕೊರೊನಾಗೆ ಪರಿಣಾಮಕಾರಿ ಎಂದು ಹೆಚ್ಚೆಚ್ಚು ಬೇಡಿಕೆ ಬರುತ್ತಿದೆ. ಆದರೆ ರೆಮ್ಡೆಸಿವಿರ್ ಕೊರೊನಾಗೆ ಮ್ಯಾಜಿಕ್ ಬುಲೆಟ್ ಅಲ್ಲ ಎನ್ನುವುದನ್ನು ತಿಳಿದುಕೊಂಡಿರಿ ಎಂದು ಹೇಳಿದ್ದರು.