ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜಕೀಯ ಪಕ್ಷಗಳ ಸಭೆ: ಏನಿದು ಗುಪ್ಕರ್ ಘೋಷಣೆ?
ಶ್ರೀನಗರ, ಅಕ್ಟೋಬರ್ 15: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ್ದು ಮತ್ತು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಂಗಡಿಸಿದ್ದರ ವಿರುದ್ಧ ಅಲ್ಲಿನ ರಾಜಕೀಯ ಪಕ್ಷಗಳು ಹೋರಾಟ ಮುಂದುವರಿಸಿವೆ. ಕಣಿವೆ ರಾಜ್ಯದಲ್ಲಿ 370ನೇ ವಿಧಿ ರದ್ದತಿಗೂ ಮುನ್ನ ಬಂಧನಕ್ಕೆ ಒಳಗಾಗಿದ್ದ ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ ಬಿಡುಗಡೆಯ ಬೆನ್ನಲ್ಲೇ ಕೇಂದ್ರ ಸರ್ಕಾರದ ವಿರುದ್ಧ ಅಲ್ಲಿನ ರಾಜಕೀಯ ಪಕ್ಷಗಳು ಜತೆಗೂಡಿವೆ.
ನ್ಯಾಷನಲ್ ಕಾನ್ಫರೆನ್ಸ್, ಪಿಡಿಪಿ, ಕಾಂಗ್ರೆಸ್, ಪೀಪಲ್ಸ್ ಕಾನ್ಫರೆನ್ಸ್, ಸಿಪಿಎಂ, ಎಎನ್ಸಿ- ಹೀಗೆ ಆರು ಪ್ರಮುಖ ಪಕ್ಷಗಳು ಜತೆಗೂಡಿ ಗುರುವಾರ ಮಹತ್ವದ 'ಗುಪ್ಕರ್ ಘೋಷಣೆ' ಸಭೆ ಆಯೋಜಿಸಿವೆ. ಜಮ್ಮು ಮತ್ತು ಕಾಶ್ಮೀರಕ್ಕೆ 370ನೇ ವಿಧಿಯನ್ನು ಮರಳಿ ತರುವ ಮೂಲಕ ವಿಶೇಷ ಸ್ಥಾನಮಾನವನ್ನು ವಾಪಸ್ ಪಡೆಯುವುದು ಹಾಗೂ ಕೇಂದ್ರಾಡಳಿತ ಪ್ರದೇಶಗಳ ವಿಭಜನೆಯನ್ನು ರದ್ದುಗೊಳಿಸಿ ಪುನಃ ಜಮ್ಮು ಮತ್ತು ಕಾಶ್ಮೀರ ರಾಜ್ಯ ಅಸ್ತಿತ್ವಕ್ಕೆ ತರುವ ನಿಟ್ಟಿನಲ್ಲಿ ಒಗ್ಗಟ್ಟಿನ ಹೋರಾಟ ನಡೆಸುವುದು ಈ ಸಭೆಯ ಉದ್ದೇಶ.
ಕಳೆದ ವರ್ಷ ಆಗಸ್ಟ್ನಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ಸುಳಿವು ದೊರೆತಾಗ ಎಲ್ಲ ರಾಜಕೀಯ ಪಕ್ಷಗಳು ಸೇರಿಕೊಂಡು ಗುಪ್ಕರ್ ಘೋಷಣೆಗೆ ಸಹಿ ಹಾಕಿದ್ದವು. ಕೇಂದ್ರ ಸರ್ಕಾರದ ವಿರುದ್ಧ ಒಗ್ಗಟ್ಟಿನಿಂದ ಹೋರಾಡುವ ಒಮ್ಮತದ ನಿರ್ಣಯ ತೆಗೆದುಕೊಂಡಿದ್ದವು. ಈ ಘೋಷಣೆಗೆ ಸಹಿ ಹಾಕಿದ ಬಳಿಕ ಪಕ್ಷಗಳು ಮೂರನೇ ಬಾರಿ ಜತೆಗೂಡಿವೆ. ಮುಂದೆ ಓದಿ.

ಏನಿದು ಗುಪ್ಕರ್ ಘೋಷಣೆ?
2019ರ ಆಗಸ್ಟ್ 4ರಂದು ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ಹೊರತಾದ ಜಮ್ಮು ಮತ್ತು ಕಾಶ್ಮೀರದ ಸರ್ವಪಕ್ಷಗಳ ಸಭೆಯಲ್ಲಿ ಗುಪ್ಕರ್ ಘೋಷಣೆವನ್ನು ತೆಗೆದುಕೊಳ್ಳಲಾಯಿತು. ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರ ಗುಪ್ಕರ್ ರಸ್ತೆಯ ನಿವಾಸದಲ್ಲಿ ತೆಗೆದುಕೊಂಡ ನಿರ್ಣಯಕ್ಕೆ ಗುಪ್ಕರ್ ಘೋಷಣೆ ಎಂದು ಕರೆಯಲಾಯಿತು.

ಒಮ್ಮತದ ನಿರ್ಣಯ
ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸುವ ಹಾಗೂ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿ ವಿಭಜಿಸುವ ಸಂಬಂಧ ಕೇಂದ್ರ ಸರ್ಕಾರ ತನ್ನ ನಿರ್ಧಾರ ಪ್ರಕಟಿಸುವ ಹಿಂದಿನ ದಿನ ಈ ಸಭೆ ನಡೆದಿತ್ತು. ಜಮ್ಮು ಮತ್ತು ಕಾಶ್ಮೀರದ ವಿರುದ್ಧದ ಎಲ್ಲ ದಾಳಿಗಳು, ಆಕ್ರಮಣಗಳ ವಿರುದ್ಧ ಅದರ ಅಸ್ಮಿತೆ, ಸ್ವಾಯತ್ತತೆ ಹಾಗೂ ವಿಶೇಷ ಸ್ಥಾನಮಾನವನ್ನು ರಕ್ಷಿಸುವ ಹಾಗೂ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಒಗ್ಗಟ್ಟಿನಿಂದ ಇರುವುದಾಗಿ ಪಕ್ಷಗಳು ಒಮ್ಮತದಿಂದ ನಿರ್ಣಯ ಕೈಗೊಂಡಿದ್ದವು.

ವಿಶೇಷ ಸ್ಥಾನಮಾನ
ಈ ವರ್ಷದ ಆಗಸ್ಟ್ನಲ್ಲಿ ಪಿಡಿಪಿ ನಾಯಕಿ ಮೆಹಬೂಬ ಮುಫ್ತಿ ಗೈರು ಹಾಜರಿ ನಡುವೆ ಸಭೆ ಸೇರಿದ್ದ ಆರು ಪಕ್ಷಗಳ ಮುಖಂಡರು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಮರಳಿ ಸ್ಥಾಪಿಸುವ ವಿಚಾರವಾಗಿ ಹೋರಾಟ ನಡೆಸಲು ಪ್ರತಿಜ್ಞೆ ಕೈಗೊಂಡಿದ್ದವು.

ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು
ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ತೆಗೆದುಹಾಕುವ ಕೇಂದ್ರ ಸರ್ಕಾರದ ನಿರ್ಧಾರ ಸಂಪೂರ್ಣ ಸಂವಿಧಾನ ವಿರೋಧಿ. 370ನೇ ವಿಧಿ ಮತ್ತು 35 ಎ ವಿಧಿಯ ರದ್ದತಿ ಜಮ್ಮು ಮತ್ತು ಕಾಶ್ಮೀರದ ಜನರನ್ನು ಅಧಿಕಾರಹೀನರನ್ನಾಗಿಸುವ ಕ್ರಮವಾಗಿದೆ ಎಂದು ಆರೋಪಿಸಿದ್ದ ಪಕ್ಷಗಳು, ರಾಜ್ಯದಲ್ಲಿ ನಮ್ಮ ಅಸ್ತಿತ್ವವಿಲ್ಲದೆ ಏನೂ ಇರಲು ಸಾಧ್ಯವಿಲ್ಲ. ಸಂವಿಧಾನದಲ್ಲಿ ಯಾವುದೇ ಬದಲಾವಣೆಗಳನ್ನು ತರುವ ಮುನ್ನ ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರದ ಜನತೆಯನ್ನು ವಿಶ್ವಾಸಕ್ಕೆ ಪಡೆದುಕೊಳ್ಳಬೇಕಿತ್ತು ಎಂದು ಜಂಟಿ ಹೇಳಿಕೆ ಬಿಡುಗಡೆ ಮಾಡಲಾಗಿತ್ತು.












Click it and Unblock the Notifications