Get Updates
Get notified of breaking news, exclusive insights, and must-see stories!

'ಮೌನ'ದ ಅರ್ಥ ಸುಮ್ಮನಿರುವುದು ಎಂದಲ್ಲ, ಅದು ಅಗಾಧ ಸಾಧನೆಯ ಲಕ್ಷಣ

ಮೌನ ಅಥವಾ ಶಾಂತಿ ಯಾರಿಗೆ ಬೇಡ? ಮೌನದ ಮಹತ್ವ ಅಪಾರವಾಗಿದೆ. ಮನೆ-ಮನೆಯಲ್ಲಿ ಮತ್ತು ಜನ-ಮನದಲ್ಲಿ ಶಾಂತಿ ನೆಲೆಸಲಿ ಎಂದು ದೇವರನ್ನು ಪ್ರಾರ್ಥಿಸುತ್ತಾರೆ. ಸುಖ-ಶಾಂತಿಗೋಸ್ಕರವೇ ಎಲ್ಲರೂ ಪ್ರಯತ್ನಶೀಲರಾಗಿದ್ದಾರೆ. ಆದರೆ ಶಾಂತಿಗೋಸ್ಕರ ಎರಡು ರಾಷ್ಟ್ರಗಳು ಯುದ್ಧ ಮಾಡುವುದು ಎಷ್ಟೊಂದು ವಿಪರ್ಯಾಸ!! ಮನುಷ್ಯ ತಾನು ಏನೂ ಮಾಡಿದರೂ ಕೊನೆಗೆ ನೆಮ್ಮದಿ ಅಥವಾ ಶಾಂತಿಯನ್ನು ಬಯಸುತ್ತಾನೆ. ನಗರಗಳಲ್ಲಿ ಗಲಾಟೆಗಳಾದಾಗ ಪೋಲಿಸರು ಶಾಂತಿಗಾಗಿ ಪ್ರಯತ್ನಿಸುತ್ತಾರೆ. 'ಮೌನ ಸರ್ವಸ್ವ ಸಾಧನಂ, ಮೌನ ಸನ್ಮತಿಯ ಲಕ್ಷಣಂ' ಎಂದು ಹೇಳಲಾಗುತ್ತದೆ. ಮೌನದಲ್ಲಿ ಶಾಂತಿಯಿದೆ, ಮೌನದಲ್ಲಿ ಕ್ರಾಂತಿಯಿದೆ, ಕೊನೆಯ ಉಸಿರಿನ ನಂತರ ಮೌನವೇ ವಿಶ್ರಾಂತಿ.

ಮೌನದ ಅರ್ಥ 'ಮಾತಿನಿಂದ ಸಂಪೂರ್ಣವಾಗಿ ದೂರವಿದ್ದು ಶಾಂತಿಯಲ್ಲಿರುವುದು.' ಶಾಂತಿಯಲ್ಲಿ ಆತ್ಮವನ್ನು ಪರಮಾತ್ಮನ ಜೊತೆಗೆ ಜೋಡಿಸುವ ಅಪಾರ ಶಕ್ತಿಯಿದೆ. ಮೌನದ ಅರ್ಥ ಕೇವಲ ಸುಮ್ಮನಿರುವುದಲ್ಲ. ಮೌನವೆಂದರೆ ಒಂದು ಅಗಾಧವಾದ ಸಾಧನೆ. ಇದರಿಂದ ಮನುಷ್ಯ ತನ್ನಲ್ಲಿರುವ ಅನೇಕ ಸಮಸ್ಯೆಗಳನ್ನು ದೂರ ಮಾಡಿಕೊಂಡು ತನ್ನ ವಾಸ್ತವಿಕ ಸ್ವರೂಪದ ಪರಿಚಯ ಮಾಡಿಕೊಳ್ಳುತ್ತಾನೆ. ಮೌನ ತನ್ನಲ್ಲಿರುವ ಆಂತರಿಕ ಸೌಂದರ್ಯ ಹಾಗೂ ಅಂತರಾಳವನ್ನು ಕಂಡುಕೊಳ್ಳುವ ಪ್ರಕ್ರಿಯೆಯಾಗಿದೆ.

ಮಾತಿನ ಮೂಲಕ ಮಾನವ ಜಗತ್ತಿನೊಂದಿಗೆ ಸಂಬಂಧ ಬೆಸೆದುಕೊಳ್ಳುತ್ತಾನೆ. ಅವನು ಪಾಪಕರ್ಮಗಳಿಗೆ ವಶನಾಗಿ ಕರ್ಮಗಳ ಬಂಧನಕ್ಕೆ ಒಳಗಾದಾಗ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತಾನೆ. ವ್ಯಕ್ತಿಯು ತನ್ನ ವಾಣಿಗೆ ವಿರಾಮ ನೀಡಿ, ತನ್ನ ಅಂತರಾಳದಲ್ಲಿರುವ ಆಂತರಿಕ ಶಕ್ತಿಯನ್ನು ಅನುಭವಿಸುತ್ತಾ ಅಪಾರ ಶಾಂತಿಯ ಅನುಭವ ಮಾಡಬಹುದು. ಶಕ್ತಿಯು ವ್ಯರ್ಥವಾಗಿ ಹರಿದುಹೋಗುವುದನ್ನು ತಡೆಯುವ ಶಕ್ತಿ ಮೌನಕ್ಕಿದೆ. ಮಾನವ ವ್ಯರ್ಥ ಮಾತನಾಡಿ ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತಾನೆ. ಅದನ್ನು ಮೌನ ವ್ರತದಿಂದ ಮತ್ತೆ ಪಡೆದುಕೊಳ್ಳಬಹುದು.

ಮಾನವನು ಕಡಿಮೆ ಮಾತನಾಡಿದರೆ ಹಲವಾರು ಸಮಸ್ಯೆಗಳಿಂದ ಮುಕ್ತನಾಗಬಹುದು. ಆದರೆ ಅವನು ಮನೋವಿಕಾರಗಳಿಗೆ ವಶನಾಗಿ ವಾಣಿಯ ಮೂಲಕ ಹೆಚ್ಚೆಚ್ಚು ಸಮಸ್ಯೆಗಳನ್ನು ಸೃಷ್ಟಿಸಿಕೊಳ್ಳುತ್ತಿದ್ದಾನೆ.
ಖಡ್ಗದ ಗಾಯಗಿಂತಲೂ ಮಾತಿನ ಗಾಯ ಹೆಚ್ಚು ನೋವನ್ನುಂಟು ಮಾಡುತ್ತದೆ. ಮಾತಿನಿಂದ ಆದ ಗಾಯಗಳು ಬೇಗನೇ ವಾಸಿಯಾಗುವುದಿಲ್ಲ. ಆಧ್ಯಾತ್ಮಿಕ ಜೀವನದಲ್ಲಿ ಉನ್ನತ ಶಿಖರಕ್ಕೆ ತಲುಪಿದ ಮಹಾತ್ಮರೆಲ್ಲರೂ ಮೌನದ ಸಹಾಯವನ್ನು ಪಡೆದಿದ್ದಾರೆ. ಮಹಾವೀರ 12 ವರ್ಷ ಹಾಗೂ ಗೌತಮ ಬುದ್ಧ 6 ವರ್ಷಗಳ ಕಾಲ ಮೌನ ಮಾಡಿದಾಗ ಅವರಿಗೆ ದಿವ್ಯವಾಣಿ ಪ್ರಾಪ್ತಿಯಾಗಿತ್ತು.

ನಮ್ಮ ಮನಸ್ಸಿನಲ್ಲಿ ಸದಾಕಾಲ ವಿಚಾರಗಳ ಅಲೆ ಏಳುತ್ತಿರುತ್ತದೆ. ಪ್ರತಿಕ್ಷಣದಲ್ಲಿ ಮನಸ್ಸಿನಲ್ಲಿ ಒಂದು ವಿಚಾರ ಉತ್ಪತ್ತಿಯಾಗುತ್ತಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಮೌನದ ಅನುಭವ ಮಾಡಲು ಸಾಧ್ಯವಿಲ್ಲ. ಅದ್ದರಿಂದ ಮಾತಿನ ಮೌನದ ಜೊತೆಗೆ ಆಂತರಿಕ ಮೌನ ಬಹಳ ಅವಶ್ಯಕವಾಗಿದೆ.

ಪ್ರಕೃತಿಯ ಮಡಿಲಲ್ಲಿ ಶಾಂತಿಯ ಅನುಭವ

ಪ್ರಕೃತಿಯ ಮಡಿಲಲ್ಲಿ ಶಾಂತಿಯ ಅನುಭವ

ಪ್ರಾಪಂಚಿಕ ಸಮಸ್ಯೆಗಳಿಂದ ವಿಚಲಿತರಾದಾಗ ಜಗತ್ತಿನ ಜಂಜಾಟದಿಂದ ದೂರಹೋಗಿ ಪ್ರಕೃತಿಯ ಮಡಿಲನ್ನು ಸೇರಿ ಶಾಂತಿಯ ಅನುಭವ ಮಾಡಬೇಕು. ಆ ಸಮಯದಲ್ಲಿ ಪಕೃತಿಯಿಂದ ಹೊಸ ಸಂದೇಶವನ್ನು ಪಡೆಯಬಹುದು. ಕಣಕಣಗಳಲ್ಲಿ ದಿವ್ಯ ಸಂಗೀತವನ್ನು ಆಲಿಸಬಹುದು. ನಾವು ಆಂತರಿಕವಾಗಿ ಶಾಂತಿಯ ಅನುಭವ ಮಾಡಿದಾಗ ಪಕೃತಿಯ ಪ್ರತಿಯೊಂದು ಶಬ್ದಗಳನ್ನು ಗ್ರಹಿಸಬಹುದು. ದುಂಬಿಯ ಝೇಂಕಾರದಲ್ಲಿ ಅನಂತ ನಾದವನ್ನು ಕೇಳಬಹುದು. ಕೊಂಬೆಗಳ ಮೇಲೆ ಕುಳಿತಿರುವ ಹಕ್ಕಿಗಳ ಕಲರವದಿಂದ ದೀಪಕರಾಗ ಅಥವಾ ಭೈರವಿರಾಗ ಆಲಿಸಬಹುದು. ಪ್ರಕೃತಿಯನ್ನು ಅರಿತುಕೊಳ್ಳಲು ನಮ್ಮಲ್ಲಿರುವ ಮೌನವನ್ನು ಜಾಗೃತಗೊಳಿಸಬೇಕಾಗಿದೆ.

ಮೌನ ಸಂಜೀವನಿ ಔಷಧಿ

ಮೌನ ಸಂಜೀವನಿ ಔಷಧಿ

ಮೌನ ವಾಸ್ತವಿಕವಾಗಿ ಒಂದು ಸಂಜೀವನಿ ಔಷಧಿ. ಇದರಿಂದ ವ್ಯಕ್ತಿಯ ಪ್ರಾಣದಲ್ಲಿರುವ ಶಕ್ತಿಯು ಬೆಳೆದು ಉನ್ನತ ಸ್ಥಿತಿಯನ್ನು ತಲುಪುತ್ತದೆ. ದಿನನಿತ್ಯ 3 ರಿಂದ 4 ಗಂಟೆಗಳ ಕಾಲ ಮೌನವಾಗಿರುವುದು ಅತ್ಯಂತ ಲಾಭಧಾಯಕ.

ಮೌನದ ನಿರಂತರ ಅಭ್ಯಾಸದಿಂದ ವಾಣಿಯಲ್ಲಿ ಪವಿತ್ರತೆ ಬಂದು ಸತ್ಯತೆಯ ಜಾಗೃತಿಯುಂಟಾಗುತ್ತದೆ. ಅಂತಹ ವ್ಯಕ್ತಿಯ ಎಲ್ಲಾ ನುಡಿಗಳು ನಿಜವಾಗುತ್ತವೆ. ಅವನ ವ್ಯಕ್ತಿತ್ವದಲ್ಲಿ ಗಂಭೀರತೆ ಬಂದು ಮನಸ್ಸು ಏಕಾಗ್ರತೆಯನ್ನು ಪಡೆಯುತ್ತದೆ.

ಮೌನದ ಸಂಪೂರ್ಣ ಸಿದ್ಧಿ ಪ್ರಾಪ್ತಿಯಾದಾಗ ಮನಸ್ಸು ಶಾಂತವಾಗಿ ಎಲ್ಲಾ ರೀತಿಯ ನಕಾರಾತ್ಮಕ ಮತ್ತು ವ್ಯರ್ಥ ವಿಚಾರಗಳಿಂದ ಮುಕ್ತವಾಗುತ್ತದೆ. ಆತ್ಮದ ದಿವ್ಯ ಶಕ್ತಿಯೇ ಮೌನ. ಪ್ರಶಾಂತ ಸಾಗರವನ್ನು ನೋಡಿದರೆ ಯಾವುದೇ ರೀತಿಯ ಅಲೆಗಳು ಕಾಣುವುದಿಲ್ಲ. ಅದು ಗಂಭೀರವಾಗಿ ನಿಶಬ್ದವಾಗಿರುತ್ತದೆ. ಮೌನದಲ್ಲಿಯು ಸಹ ಸಮುದ್ರದ ಅಲೆಗಳಂತೆ ವಿಚಾರ ತರಂಗಳು ಶಾಂತವಾಗುತ್ತವೆ. ಆತ್ಮಜ್ಞಾನದ ನಂತರ ಮನಸ್ಸು ಬಹಳ ನಿರ್ಮಲವಾಗುತ್ತದೆ. ನಾನು ಜಡದೇಹವಲ್ಲ, ಚೈತನ್ಯ ಆತ್ಮನಾಗಿದ್ದೇನೆ, ಪರಮಪಿತ ಪರಮಾತ್ಮನ ಪವಿತ್ರ ಸಂತಾನನಾಗಿದ್ದೇನೆ ಎಂಬ ಸತ್ಯ ಅನುಭವ ಆಗಲಿಕ್ಕೆ ಪ್ರಾರಂಭವಾಗುತ್ತದೆ.

ಮೌನ ಶಾಂತಿಯ ಸಂದೇಶ

ಮೌನ ಶಾಂತಿಯ ಸಂದೇಶ

ಮೌನ ಶಾಂತಿಯ ಸಂದೇಶ. ಇದು ಸ್ವಯಂ ಈಶ್ವರನ ಜೊತೆ ಸಂಬಂಧವನ್ನು ಬೆಸೆಯುತ್ತದೆ. ನೀವು ಯಾವುದೇ ಕಾಯಕ ಮಾಡಿ, ಎಲ್ಲಿಯೇ ಇರಿ, ನಿಮ್ಮ ವ್ಯಸ್ತಜೀವನದ ದಿನಚರಿಯಲ್ಲಿ ಸ್ವಲ್ಪ ಸಮಯ ಬಿಡುವು ಮಾಡಿಕೊಂಡು ಮೌನಸಾಧನೆಯಲ್ಲಿ ಪರಮಶಾಂತಿಯ ಅನುಭವ ಮಾಡಿ. ಈ ಸಾಧನೆಯನ್ನೇ ನಮ್ಮ ಋಷಿ-ಮುನಿಗಳು ಮಾಡಿದ್ದಾರೆ. ಇದೇ ರಾಜಯೋಗ. ಮನಸ್ಸು ಶಾಂತಿಸಾಗರ ಪರಮಪಿತ ಪರಮಾತ್ಮನ ನೆನಪಿನಲ್ಲಿ ಮಗ್ನವಾಗುವುದೇ ಯೋಗ.

ಓಂ ಸಹನಾಭವತು, ಸಹನೌ ಭುನಕ್ತು, ಸಹವಿರ್ಯಂಕರವಾವಹೈ, ತೇಜಸ್ವಿನಾವ ಧಿತಮಸ್ತು ಮಾವಿದ್ವಿಷಾವಹೈ ಓಂ ಶಾಂತಿ ಶಾಂತಿ ಶಾಂತಿಃ

ಏಕಾಂತದಲ್ಲಿ ಚಿಂತನೆ ಮಾಡಿರಿ

ಏಕಾಂತದಲ್ಲಿ ಚಿಂತನೆ ಮಾಡಿರಿ

ನಾನು ಈ ದೇಹವಲ್ಲ, ಈ ದೇಹದಲ್ಲಿರುವ ಚೈತನ್ಯ ಆತ್ಮನಾಗಿದ್ದೇನೆ. ನಾನು ಶಾಂತಿಸಾಗರ ಪರಮಾತ್ಮನ ಶಾಂತಿದೂತನಾಗಿದ್ದೇನೆ. ನನ್ನ ಮನಸ್ಸಿನಲ್ಲಿ ಶಾಂತಿಗಳ ಅಲೆಗಳು ಏಳುತ್ತಿವೆ. ನಾನು ಸರ್ವ ಮನುಷ್ಯಾತ್ಮರಿಗೂ ಶಾಂತಿಯ ಕಿರಣಗಳನ್ನು ನೀಡುತ್ತಿದ್ದೇನೆ. ನನ್ನಿಂದ ಪ್ರಕೃತಿಗೂ ಶಾಂತಿಯ ಕಿರಣಗಳು ಸಿಗುತ್ತಿವೆ. ನನ್ನ ಸುತ್ತಮುತ್ತಲೂ ಶಾಂತಿಯ ಕಿರಣಗಳನ್ನು ಹರಡಿಸುತ್ತಿದ್ದೇನೆ. ನಾನು ಸರ್ವರಿಗೂ ಶಾಂತಿಯನ್ನೇ ನೀಡುತ್ತೇನೆ. ಆ ಶಾಂತಿಸಾಗರ ಪರಮಾತ್ಮನ ಸವಿನೆನಪಿನಲ್ಲಿದ್ದುಕೊಂಡು ಶಾಂತಿದೂತನಾಗಿ ಇಡೀ ವಿಶ್ವದಲ್ಲಿ ಶಾಂತಿಯ ಪ್ರಕಂಪನಗಳನ್ನು ಹರಿಡಿಸುತ್ತಿದ್ದೇನೆ. ಆ ಶಾಂತಿಸಾಗರದ ನೆನಪಿನಲ್ಲಿ ಮಗ್ನನಾಗಿ ಅಪಾರ ಶಾಂತಿಯ ಅನುಭವವನ್ನು ಮಾಡುತ್ತಿದ್ದೇನೆ. ಇದೇ ಪರಮಶಾಂತಿಯಾಗಿದೆ. ಈ ಶಾಂತಿಗಾಗಿಯೇ ನಾನು ಜನ್ಮಜನ್ಮಾಂತರ ಅಲೆದಾಡುತ್ತಿದ್ದೆ. ಈಗ ಶಾಂತಿಯ ಸಾಗರಸಾಗರ ಪರಮಾತ್ಮನನ್ನೇ ಪಡೆದುಕೊಂಡಿದ್ದೇನೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+