ಇಂದಿನ 'ಕೈ' ಶಾಸಕಾಂಗ ಸಭೆ ರಾಜಕೀಯ ದಿಕ್ಕು ಬದಲಿಸುತ್ತಾ?

ಅದ್ಯಾಕೋ ಗೊತ್ತಿಲ್ಲ, ಕಳೆದ ಆರು ತಿಂಗಳಿನಿಂದ ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ರಾಜ್ಯದ ಜನತೆಯ ಸಹನೆಯನ್ನು ಕೆಡಿಸುತ್ತಿದ್ದರೆ, ಇಡೀ ದೇಶದ ರಾಜಕೀಯ ಪಕ್ಷಗಳಿಗೆ ಮತ್ತು ನಾಯಕರಿಗೆ ಕುತೂಹಲದ ಆಟವಾಗಿ ಗೋಚರಿಸುತ್ತಿದೆ. ಜತೆಗೆ ಮುಂದೇನಾಗಬಹುದು ಎಂಬ ಕಾತರ ಅವರೆಲ್ಲರದ್ದಾಗಿದೆ.

ಇಂತಹ ಅಸಹ್ಯ ರಾಜಕೀಯ ಆಟವನ್ನು ರಾಜ್ಯದ ಜನತೆ ಇತಿಹಾಸದಲ್ಲಿಯೇ ನೋಡಿಲ್ಲವೇನೋ? ಆದರೆ ಯಾವುದೇ ಪಕ್ಷಕ್ಕೆ ಬಹುಮತ ನೀಡದ ಕಾರಣಕ್ಕೆ ಇಂತಹದೊಂದು ಪರಿಸ್ಥಿತಿಯನ್ನು ನಾವೇ ತಂದುಕೊಂಡಿದ್ದೇವೆ ಎಂಬ ಮನವರಿಕೆಯಂತು ಇಲ್ಲಿವರೆಗಿನ ಬೆಳವಣಿಗೆಯನ್ನು ನೋಡಿದ ಮೇಲೆ ಪ್ರತಿಯೊಬ್ಬರಿಗೂ ಆಗಿದೆ ಎಂಬುದಂತು ಸತ್ಯ.

ಒಂದು ಕಡೆ ಸರ್ಕಾರವನ್ನು ಅಸ್ಥಿರಗೊಳಿಸಲೇಬೇಕೆಂಬ ಹಠಕ್ಕೆ ಬಿದ್ದ ವಿಪಕ್ಷ. ಮತ್ತೊಂದೆಡೆ ಹೇಗಾದರೂ ಮಾಡಿ ಸರ್ಕಾರವನ್ನು ಉಳಿಸಿಕೊಳ್ಳಲೇಬೇಕೆಂಬ ಪಟ್ಟು ಹಿಡಿದು ಕುಳಿತ ಮೈತ್ರಿ ಸರ್ಕಾರ. ಇವರ ನಡುವಿನ ಹಾವು ಏಣಿ ಆಟದಲ್ಲಿ ಬಡವಾಗಿದ್ದು ರಾಜ್ಯದ ಜನ ಎಂಬುದರಲ್ಲಿ ಎರಡು ಮಾತಿಲ್ಲ.

ಬಿಜೆಪಿಗೆ ಮೈತ್ರಿ ಸರ್ಕಾರವನ್ನು ಕೆಡವಿ ತಾವು ಅಧಿಕಾರ ನಡೆಸಲೇಬೇಕೆಂಬ ದುರಾಸೆ ವಿಧಾನಸಭಾ ಚುನಾವಣೆ ನಡೆದು ಫಲಿತಾಂಶ ಪ್ರಕಟವಾದ ಕ್ಷಣದಿಂದಲೇ ಬಂದಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಸಿಎಂ ಕುರ್ಚಿ ಮೇಲಿನ ವ್ಯಾಮೋಹ ಹೇಗಿತ್ತು ಮತ್ತು ಅದಕ್ಕಾಗಿ ಏನೆಲ್ಲ ನಾಟಕಗಳನ್ನು ಮಾಡಿದರು ಎಂಬುದು ರಾಜ್ಯದ ಜನತೆ ನೋಡಿದ್ದಾರೆ.

ಆದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಅವತ್ತು ಬಿಜೆಪಿಯನ್ನು ದೂರವಿಡಲು ಮಾಡಿಕೊಂಡ ಒಪ್ಪಂದಗಳು ಮತ್ತು ಇವತ್ತು ಆ ಪಕ್ಷಗಳ ನಾಯಕರು ನಡೆದುಕೊಳ್ಳುವ ರೀತಿಯೇ ಇಂತಹ ರಾಜಕೀಯ ಮೇಲಾಟಕ್ಕೆ ಕಾರಣ ಎನ್ನುವುದನ್ನು ತಳ್ಳಿಹಾಕಲಾಗದು.

ಆ ದಿನ ಜೆಡಿಎಸ್ ನ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರ ಎದುರು ಮಂಡಿಯೂರಿ ನಿಂತ ಕಾಂಗ್ರೆಸ್ ನಾಯಕರು ಬೇಷರತ್ ಬೆಂಬಲ ನೀಡಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಗಳನ್ನಾಗಿ ಮಾಡುವಲ್ಲಿ ಯಶಸ್ವಿಯಾಗಿದ್ದರು. ಅವತ್ತು ಇಲ್ಲದ ಅತೃಪ್ತತೆ ಇವತ್ತೇಕೆ ಬಂತು?.

ಹಾಗಾದರೆ ಆ ದಿನ ಮೈತ್ರಿ ಸರ್ಕಾರ ರಚನೆ ಮಾಡುವಾಗ ಕೈ ಶಾಸಕರಲ್ಲಿ ತೆನೆ ಮೇಲಿದ್ದ ಒಲವು ಇವತ್ಯಾಕೆ ಮಂಕಾಯಿತು? ಸರ್ಕಾರ ರಚಿಸುವಾಗ ಇಲ್ಲದ ಅಧಿಕಾರದ ಆಸೆ ಇವತ್ಯಾಕೆ ಬಂತು? ಹೀಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳುತ್ತಾ ಹೋದರೆ ಅದಕ್ಕೆ ಉತ್ತರವನ್ನು ಕಾಂಗ್ರೆಸ್ ನಾಯಕರು ನೀಡಬೇಕು ಜತೆಗೆ ಇವತ್ತು ನಡೆಯುತ್ತಿರುವ ಬೆಳವಣಿಗೆಯ ಹೊಣೆಯನ್ನು ಅವರೇ ಹೊರಬೇಕು.

 ಕಾಂಗ್ರೆಸ್‌ನ ಶಾಸಕರೇ ಕಾರಣ

ಕಾಂಗ್ರೆಸ್‌ನ ಶಾಸಕರೇ ಕಾರಣ

ಒಂದು ವೇಳೆ ಕಾಂಗ್ರೆಸ್‌ನ ಶಾಸಕರು ಅವತ್ತಿನ ಒಪ್ಪಂದಕ್ಕೆ ತಕ್ಕಂತೆ ಇದ್ದಿದ್ದರೆ ಇವತ್ತು ರಾಜಕೀಯದ ದೊಂಬರಾಟ ನಡೆಯುತ್ತಲೇ ಇರಲಿಲ್ಲ. ಮೈತ್ರಿ ನಾಯಕರು ಇವತ್ತಿನ ರಾಜಕೀಯ ದೊಂಬರಾಟದ ಬಗ್ಗೆ ಬಿಜೆಪಿ ನಾಯಕರತ್ತ ಬೊಟ್ಟು ಮಾಡಿ ತಮ್ಮ ಹುಳುಕನ್ನು ಮುಚ್ಚಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಆದರೆ ಇಷ್ಟೆಲ್ಲ ಬೆಳವಣಿಗೆಗೆ ಕಾಂಗ್ರೆಸ್‌ನ ಶಾಸಕರೇ ಕಾರಣ ಎಂಬುದನ್ನೇಕೆ ಒಪ್ಪಿಕೊಳ್ಳುತ್ತಿಲ್ಲ ಎಂಬುದೇ ಅರ್ಥವಾಗುತ್ತಿಲ್ಲ. ವಿಧಾನಸೌಧಕ್ಕೆ ಕಾಂಗ್ರೆಸ್‌ನ ಎಲ್ಲ ಶಾಸಕರನ್ನು ಕರೆಯಿಸಿ ಒಟ್ಟಿಗೆ ನಿಂತು ನಾವೆಲ್ಲರೂ ಒಟ್ಟಾಗಿದ್ದೇವೆ. ಒಗ್ಗಟ್ಟಾಗಿದ್ದೇವೆ ಎಂಬುದನ್ನು ಕೈ ಎತ್ತಿ ರಾಜ್ಯ ನಾಯಕರು ತೋರಿಸಿಬಿಟ್ಟಿದ್ದರೆ ಬಹುಶಃ ಇಂತಹ ಪರಿಸ್ಥಿತಿಯೇ ಬರುತ್ತಿರಲಿಲ್ಲ. ಆದರೆ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಈಗಾಗಲೇ ಗೊತ್ತಾಗಿದೆ.

 ಯಡಿಯೂರಪ್ಪ ಸಿದ್ಧವಾಗಿಯೇ ನಿಂತಿದ್ದಾರೆ

ಯಡಿಯೂರಪ್ಪ ಸಿದ್ಧವಾಗಿಯೇ ನಿಂತಿದ್ದಾರೆ

ಇಲ್ಲಿ ಅಧಿಕಾರ ಸಿಕ್ಕವರು ಒಗ್ಗಟ್ಟಿನ ಮಂತ್ರ ಪಠಿಸುತ್ತಿದ್ದಾರೆ. ಅಧಿಕಾರ ಸಿಗದವರು ಗೊಣಗುತ್ತಿದ್ದಾರೆ. ಅವರೆಲ್ಲರನ್ನು ಒಟ್ಟಿಗೆ ಸೇರಿಸಿ ಶಕ್ತಿ ಪ್ರದರ್ಶನ ಮಾಡುವ ಪ್ರಯತ್ನವನ್ನು ನಾಯಕರು ಯಾರೂ ಮಾಡುತ್ತಿಲ್ಲ. ಅದರ ಬದಲಿಗೆ ಬಿಜೆಪಿಯತ್ತ ಬೊಟ್ಟು ಮಾಡಿ ತಾವು ನುಣುಚಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ನಾಯಕರ ಭಿನ್ನಾಭಿಪ್ರಾಯ ಮತ್ತು ಅಸಮಾಧಾನವನ್ನು ಬಿಜೆಪಿ ತನ್ನ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ. ಅದರಲ್ಲಿ ತನ್ನ ಬೇಳೆ ಬೇಯಿಸಿಕೊಳ್ಳಲು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸಿದ್ಧವಾಗಿಯೇ ನಿಂತಿದ್ದಾರೆ. ಮೇಲಿಂದ ಮೇಲೆ ಅವರ ಪ್ರಯತ್ನಗಳು ವಿಫಲವಾದರೂ ಛಲ ಬಿಡದ ತ್ರಿವಿಕನಂತೆ ಅವರು ಪಟ್ಟು ಸಡಿಲಿಸದೆ ಮಾಡುತ್ತಿರುವ ಆಪರೇಷನ್ ಕಮಲದ ಚಟುವಟಿಕೆ ಜನರ ಆಕ್ರೋಶಕ್ಕೆ ಕಾರಣವಾಗಿದೆ.

 ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ

ಮೈತ್ರಿ ಪಕ್ಷದವರು ಅಧಿಕಾರ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದರೆ, ವಿಪಕ್ಷ ಸ್ಥಾನದಲ್ಲಿ ಕುಳಿತು ಜವಬ್ದಾರಿಯುತವಾಗಿರಬೇಕಾದ ಬಿಜೆಪಿ ಸರ್ಕಾರವನ್ನು ಉರುಳಿಸಲು ಏನೇನು ಪಟ್ಟು ಹಾಕಬಹುದು ಎಂಬುದರಲ್ಲಿ ತಲ್ಲೀನವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಇಷ್ಟು ಮಾತ್ರವೇ ರಾಜಕೀಯ ನಾಯಕರಿಗೆ ಮುಖ್ಯವಾಗಿದೆ. ಇದರಾಚೆಗೆ ರಾಜ್ಯದ ಜನತೆಯ ಒಳಿತು ಬೇಡವಾಗಿದೆ. ಇಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ಈ ಸಭೆ ಹೇಗೆ ನಡೆಯುತ್ತದೆ? ಎಷ್ಟು ಶಾಸಕರು ಹಾಜರಾಗುತ್ತಾರೆ? ಯಾವ ತೀರ್ಮಾನ ಕೈಗೊಳ್ಳುತ್ತಾರೆ? ಮುಂತಾದ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದರಷ್ಟೆ ಸದ್ಯದ ಮಟ್ಟಿಗೆ ಮೈತ್ರಿ ಸರ್ಕಾರದ ಸರ್ಕಸ್‌ಗೆ ತೆರೆ ಬೀಳಬಹುದು.

 ಬಿಜೆಪಿ ರತ್ನಗಂಬಳಿ ಹಾಸಿ ಕಾಯುತ್ತಿದೆ

ಬಿಜೆಪಿ ರತ್ನಗಂಬಳಿ ಹಾಸಿ ಕಾಯುತ್ತಿದೆ

ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದ ಕಾಂಗ್ರೆಸ್ ನಾಯಕರು ಹಲ್ಲು ಕಿತ್ತ ಹಾವಿನಂತಾಗಿದ್ದಾರೆ. ತಮ್ಮ ಶಾಸಕರ ಮೇಲೆ ಆವಾಜ್ ಹಾಕಿ ಅಥವಾ ಹೆದರಿಸಿ ತಮ್ಮ ಅಂಕೆಯಲ್ಲಿಟ್ಟುಕೊಳ್ಳುವ ಪರಿಸ್ಥಿತಿಯಲ್ಲಿಲ್ಲ. ಏನಿದ್ದರೂ ಅವರ ಬೇಡಿಕೆ ಈಡೇರಿಸಿ, ವಿಶ್ವಾಸಕ್ಕೆ ಪಡೆದುಕೊಂಡೇ ಜತೆಯಲ್ಲಿಟ್ಟುಕೊಳ್ಳಬೇಕಾದ ಅನಿವಾರ್ಯತೆಯಿದೆ. ಏಕೆಂದರೆ ಇಲ್ಲಿ ಏನಾದರೂ ಕಠಿಣ ಕ್ರಮದ ಮಾತುಗಳನ್ನಾಡಿದರೆ ಅಲ್ಲಿ ಬಿಜೆಪಿ ರತ್ನಗಂಬಳಿ ಹಾಸಿ ಕಾಯುತ್ತಿದೆ. ಜತೆಗೆ ಮುಂದೆ ಲೋಕಸಭಾ ಚುನಾವಣೆ ಇರುವುದರಿಂದ ತೊಂದರೆ ಎದುರಿಸಬೇಕಾಗುತ್ತದೆ. ಅದು ನೇರವಾಗಿ ರಾಹುಲ್ ಗಾಂಧಿ ಅವರ ಪ್ರಧಾನಿ ಕನಸಿಗೆ ತಣ್ಣೀರು ಎರಚುವ ಸಾಧ್ಯತೆಯಿದೆ. ಹೀಗಾಗಿ ಸಿದ್ದರಾಮಯ್ಯನವರು ಯಾವ ರೀತಿಯಲ್ಲಿ ಅತೃಪ್ತರನ್ನು ಮನವೊಲಿಸುತ್ತಾರೆ ಎಂಬುದು ಬಹುಮುಖ್ಯವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+