Shakti Scheme; ಸಾರಿಗೆ ನಿಗಮಗಳಿಗೆ 'ಶಕ್ತಿ' ತುಂಬಿದ ಯೋಜನೆ!
ಕರ್ನಾಟಕದ ಕಾಂಗ್ರೆಸ್ ಚುನಾವಣೆಗೆ ಮುನ್ನ ನೀಡಿದ್ದ 5 ಗ್ಯಾರಂಟಿ ಯೋಜನೆಗಳಲ್ಲಿ ಮೊದಲು ಜಾರಿಗೆ ಬಂದಿದ್ದು 'ಶಕ್ತಿ' ಯೋಜನೆ. ಜೂನ್ 11ರಂದು ಜಾರಿಗೆ ಬಂದ ಯೋಜನೆಯಡಿ ಮಹಿಳೆಯರು ಸರ್ಕಾರಿ ಬಸ್ಗಳಲ್ಲಿ ಉಚಿತವಾಗಿ ಶೂನ್ಯ ದರದ ಟಿಕೆಟ್ ಪಡೆದು ಪ್ರಯಾಣಿಸಬಹುದು. ಈ ಯೋಜನೆ ಯಶಸ್ವಿಯಾಗಿದೆ.
ಸರ್ಕಾರವು ಅಧಿಕಾರದ ಚುಕ್ಕಾಣಿ ಹಿಡಿದು 100 ದಿನ ಪೂರೈಸಿದೆ. ನೂರು ದಿನಗಳ ತನ್ನ ಆಡಳಿತಾವಧಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ತಮ್ಮ ಚುನಾವಣಾ ಭರವಸೆಯ ಪಂಚ ಗ್ಯಾರಂಟಿಗಳ ಅನುಷ್ಟಾನಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ಆಡಳಿತದ ಮೇಲೆ ಹಿಡಿತ ಸಾಧಿಸುವ ಪ್ರಕ್ರಿಯೆಯಲ್ಲಿರುವ ಮುಖ್ಯಮಂತ್ರಿಗಳು ಕರ್ನಾಟಕದಲ್ಲಿ ಮಾದರಿ ಅಭಿವೃದ್ಧಿಯ ಆಡಳಿತವೆಂಬ ಪರಿಕಲ್ಪನೆಯೊಂದಿಗೆ ಹೆಜ್ಜೆ ಇಡುತ್ತಿದ್ದಾರೆ.

ಪಂಚ ಗ್ಯಾರಂಟಿಗಳಲ್ಲಿ ಒಂದಾದ 'ಶಕ್ತಿ ಯೋಜನೆ'ಯಿಂದ ಸಾರಿಗೆ ನಿಗಮಗಳು ಸ್ವಾವಲಂಬಿಯಾಗಿವೆ. ಸರ್ಕಾರಿ ಬಸ್ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಲು ಸರ್ಕಾರ ಚಾಲನೆ ನೀಡಿದ 'ಶಕ್ತಿ ಯೋಜನೆ' ಜಾರಿಯಾದ ನಂತರ ಹಣ ಪಾವತಿಸುವ ಪ್ರಯಾಣಿಕರು ಸೇರಿದಂತೆ ಪ್ರಯಾಣಿಕರ ಸಂಖ್ಯೆ ಹೆಚ್ಚಿರುವುದರಿಂದ ರಾಜ್ಯ ರಸ್ತೆ ಸಾರಿಗೆ ನಿಗಮಗಳು ಸ್ವಾವಲಂಬಿಯಾಗುತ್ತಿವೆ.
ಸರ್ಕಾರಿ ಬಸ್ ಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚಾದಂತೆ ಆದಾಯವು ಶೇ 20 ರಿಂದ 40 ಪ್ರತಿಶತದಷ್ಟು ಹೆಚ್ಚಾಗಿದೆ. ಮಹಿಳಾ ಪ್ರಯಾಣಿಕರ ಸಂಖ್ಯೆ ಮಾತ್ರವಲ್ಲದೆ ಹಣ ಪಾವತಿಸುವ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಿದೆ. ಇದು ನಿಗಮಗಳು ಶೀಘ್ರದಲ್ಲೇ ಸ್ವಾವಲಂಬಿಯಾಗಲು ಸಹಾಯ ಮಾಡುತ್ತದೆ. ಶಕ್ತಿ ಯೋಜನೆ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದರ ಜೊತೆಗೆ ಯೋಜನೆಯು ಉದ್ಯೋಗಗಳ ಸೃಷ್ಟಿ ಮತ್ತು ಆರ್ಥಿಕ ಬೆಳವಣಿಗೆಗೆ ಸಹಾಯ ಮಾಡಿದೆ.
ತುಂಬಿ ತುಳುಕುತ್ತಿರುವ ಬಸ್ಸುಗಳು; ಸರ್ಕಾರಿ ಬಸ್ಗಳಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿನ ಏರಿಕೆ ಬಸ್ಸುಗಳಲ್ಲಿ ಪ್ರಯಾಣಿಕರ ಅದರಲ್ಲೂ ಮಹಿಳಾ ಪ್ರಯಾಣಿಕರ ದಟ್ಟಣೆಯನ್ನು ಹೆಚ್ಚಿಸಿದೆ. ಸರ್ಕಾರವು 'ಶಕ್ತಿ ಯೋಜನೆ'ಯನ್ನು ಕಾರ್ಮಿಕ ಬಲದಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಸಾಧನವಾಗಿ ಪರಿಗಣಿಸುತ್ತದೆ. ಇದು ಬಡ ಮತ್ತು ಕೆಳ ಮಧ್ಯಮ ವರ್ಗದವರಿಗೆ ಕೊಳ್ಳುವ ಶಕ್ತಿಯನ್ನು ಹೆಚ್ಚಿಸಲು ಕಾರಣವಾಗುತ್ತದೆ. ಇದಕ್ಕೆ ಪ್ರತಿಯಾಗಿ, ಸರ್ಕಾರಕ್ಕೆ ಹೆಚ್ಚಿನ ಆದಾಯವನ್ನು ಉಂಟುಮಾಡುತ್ತದೆ ಮತ್ತು ಆರ್ಥಿಕ ಬೆಳವಣಿಗೆಯನ್ನು ವೇಗಗೊಳಿಸುತ್ತದೆ.
'ಶಕ್ತಿ ಯೋಜನೆ'ಯಡಿ ಬಳ್ಳಾರಿ ಜಿಲ್ಲೆಯಲ್ಲಿ 3 ತಿಂಗಳಲ್ಲಿ 44 ಲಕ್ಷಕ್ಕೂ ಹೆಚ್ಚು ಮಹಿಳೆಯರು ಸಂಚಾರ ನಡೆಸಿದ್ದಾರೆ. ಯೋಜನೆ ಜಾರಿಗೊಂಡು ಮೂರು ತಿಂಗಳು ಪೂರ್ಣಗೊಂಡಿದ್ದು, ಯೋಜನೆ ಆರಂಭವಾದ ದಿನದಿಂದ ಈವರೆಗೂ 44 ಲಕ್ಷಕ್ಕೂ ಹೆಚ್ಚು ಮಹಿಳೆಯರು ಉಚಿತ ಬಸ್ ಸೌಲಭ್ಯ ಬಳಕೆ ಮಾಡಿಕೊಂಡಿದ್ದಾರೆ.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಂಕಿ-ಅಂಶಗಳ ಪ್ರಕಾರ, ಜೂನ್ 11ರಿಂದ ಆಗಸ್ಟ್ 27ರವರೆಗೆ 44,79,303 ಹೆಚ್ಚು ಮಹಿಳೆಯರು ಸೌಲಭ್ಯವನ್ನು ಪಡೆದುಕೊಂಡಿದ್ದು, ಈ ಅವಧಿಯಲ್ಲಿ ನೀಡಲಾದ ಶೂನ್ಯ ಮೊತ್ತದ ಟಿಕೆಟ್ಗಳ ಒಟ್ಟು ಮೌಲ್ಯ 16.47 ಕೋಟಿ ರೂ. ಆಗಿದೆ. 'ಶಕ್ತಿ ಯೋಜನೆ' ಜಾರಿಗೆ ಬಂದ ಬಳಿಕ ಪ್ರಯಾಣಿಕರ ಸಂಖ್ಯೆ ದಿಢೀರ್ ಏರಿಕೆಯಾಯಿತು. ಪುರುಷ ಪ್ರಯಾಣಿಕರ ಸಂಖ್ಯೆಯಲ್ಲಿಯೂ ಏರಿಕೆ ಕಂಡುಬಂದಿದ್ದು, ಬಸ್ ನಿಗಮಗಳ ಆದಾಯದಲ್ಲೂ ಜಿಗಿತ ಕಂಡು ಬಂದಿದೆ.
'ಶಕ್ತಿ ಯೋಜನೆ'ಯ ಫಲದಿಂದ ಕರ್ನಾಟಕದ ದೇವಾಲಯಗಳ ಆದಾಯವೂ ಹೆಚ್ಚುತ್ತಿದೆ. ಉಚಿತ ಬಸ್ ಸಂಚಾರ ಇರುವುದರಿಂದ ಮುಜರಾಯಿ ದೇಗುಲಗಳಿಗೆ ಭಕ್ತರ ಭೇಟಿ ಹೆಚ್ಚಿದೆ. ಇದರಿಂದ ಬಹುತೇಕ ದೇವಾಲಯಗಳ ಆದಾಯವೂ ದುಪ್ಪಟ್ಟಾಗಿದೆ. ಮಹಿಳೆಯರಿಗೆ ಟಿಕೆಟ್ ಉಚಿತ ಎಂದು ಹೊರಟರೆ ಅವರ ಜೊತೆ ಅವರ ಮನೆಯ ಪುರುಷರೂ, ಮಕ್ಕಳೂ ಬರ್ತಾರೆ. ಇದರಿಂದ ಸಾರಿಗೆ ಸಂಸ್ಥೆಗೆ ಆದಾಯ ಹೆಚ್ಚಳ. ಅತ್ತ ಪ್ರವಾಸಿಗರಿಂದ ಆಯಾ ಊರುಗಳಲ್ಲಿ ವ್ಯಾಪಾರ, ವಹಿವಾಟು ಹೆಚ್ಚಳ. ಒಟ್ಟಾರೆ ಇದರಿಂದ ಆರ್ಥಿಕ ಚಟುವಟಿಕೆಗೆ ಇದು ಸಹಕಾರಿ.
ಯೋಜನೆಯ ಫಲಾನುಭವಿ ಕುರುಗೋಡು ನಿವಾಸಿ ಹುಲಿಗೆಮ್ಮ ಮಾತನಾಡಿ, "ಮುಂಚೆ ದೇವಸ್ಥಾನಗಳನ್ನು ನೋಡಲು ಮತ್ತೆ ಅಲ್ಲಿಗೆ ಹೋಗಲು ಆಗುತ್ತಿರಲಿಲ್ಲ, ಬಸ್ ಫ್ರೀ ಬಂದಾಗಿನಿಂದ ಎಲ್ಲಾ ದೇವಸ್ಥಾನಗಳಿಗೆ ಭೇಟಿ ನೀಡಿ ಬಂದಿರುವೆ, ಯೋಜನೆ ಜಾರಿಗೊಳಿಸಿದ ಸಿಎಂ ಸಿದ್ದರಾಮಯ್ಯ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ" ಎಂದು ಹೇಳಿದ್ದಾರೆ.
ಬಳ್ಳಾರಿಯ ವಿದ್ಯಾರ್ಥಿನಿ ಅರುಣಾ ಮಾತನಾಡಿ, "ಈ ಹಿಂದೆ ಬಸ್ನಲ್ಲಿ ಓಡಾಡಲು ಬಸ್ಪಾಸ್ ಮಾಡಿಸಬೇಕಿತ್ತು. ಈಗ ಶಕ್ತಿ ಯೋಜನೆಯಿಂದ ಬಸ್ನಲ್ಲಿ ಓಡಾಡಲು ಉಚಿತ ಸೌಲಭ್ಯ ಸಿಕ್ಕಿದೆ. ಬಸ್ಪಾಸ್ಗೆ ವ್ಯಯಿಸುತ್ತಿದ್ದ ಹಣವನ್ನು ಪುಸ್ತಕ, ಪೆನ್ನು ಮತ್ತಿತರ ಲೇಖನ ಸಾಮಗ್ರಿ ಕೊಂಡುಕೊಳ್ಳಲು ಅನುಕೂಲ ಆಗಿದೆ" ಎಂದರು.
ಲೇಖನ ಕೃಪೆ; ವಾರ್ತಾ ಇಲಾಖೆ, ಬಳ್ಳಾರಿ











Click it and Unblock the Notifications