ಮಕ್ಕಳಿಗೆ ಮನೆಯಲ್ಲಿಯೇ ಶುರುವಾಗಲಿ ಲೈಂಗಿಕತೆಯ ಪಾಠ
ಇವತ್ತಿನ ಮಕ್ಕಳ ಮನಸ್ಥಿತಿ ಎಲ್ಲಿಗೆ ಮುಟ್ಟುತ್ತಿದೆ? ನೆನಪಿಸಿಕೊಂಡರೆ ಗಾಬರಿಯಾಗುತ್ತದೆ. ಮಕ್ಕಳು ನಮ್ಮ ನಿರೀಕ್ಷೆಗೂ ಮೀರಿ ಬೆಳೆಯುತ್ತಿದ್ದಾರೆ. ಆಧುನಿಕ ತಂತ್ರಜ್ಞಾನದ ಹಾಗೆ ಹುಟ್ಟುವಾಗಲೇ ಮಿತಿಮೀರಿದ ಬುದ್ಧಿವಂತಿಕೆಯನ್ನು ಹೊತ್ತು ಬಂದಿರುತ್ತಾರೆ. ಅಷ್ಟೇ ಅಲ್ಲ, ಅದಕ್ಕೆ ತಕ್ಕಹಾಗೆ ಹೆತ್ತವರು ಕೂಡ ತಮ್ಮ ಮಕ್ಕಳನ್ನು ಎಲ್ಲರೂ ಗುರುತಿಸಲಿ ಅನ್ನುವ ಭರಾಟೆಯಲ್ಲಿ ಸಾಕುತ್ತಾರೆ.
ನನ್ನ ಮಗುವಿಗೇ ಎಲ್ಲವೂ ಗೊತ್ತಿರಬೇಕು. ಈ ಜಗತ್ತೆ ಅವನನ್ನು ಗುರುತಿಸಬೇಕು. ಇವನು ನಮ್ಮ ಮಗ/ಮಗಳು ಎಂದೂ ಎಲ್ಲರೂ ನಮ್ಮನ್ನು ಪ್ರಶಂಸಿಸಿ ಹೊಗಳಬೇಕು ಎನ್ನುವ ಭರದಲ್ಲಿ ಜಿದ್ದಿಗೆ ಬಿದ್ದು ಮಕ್ಕಳನ್ನು ಬೆಳೆಸುತ್ತಿದ್ದಾರೆ. ಇವತ್ತಿನ ಮಕ್ಕಳೂ ಕೂಡ ತಂತ್ರಜ್ಞಾನದಷ್ಟೆ ವೇಗವಾಗಿ ಬೆಳೆಯುತ್ತಿದ್ದಾರೆ.
ಆದರೆ ನಾವಿಲ್ಲಿ ಅವರನ್ನೂ ಗುರುತಿಸುವ ದಾರಿಯತ್ತ ನೂಕುವಾಗ ಅವರ ಮನಸ್ಥಿತಿಯನ್ನು ಅರಿಯಲು ಹೋಗುವುದೇ ಇಲ್ಲ. ಇದು ತುಂಬಾ ಜನ ಹೆತ್ತವರ ಇವತ್ತಿನ ಪರಿಸ್ಥಿತಿ. ಆದರೆ ಮಕ್ಕಳು ಇಲ್ಲಿ ತಮ್ಮ ಸ್ವಂತ ಯೋಚನೆ ಮರೆತು ಇನ್ಯಾರದೋ ತಾಳದಲ್ಲಿ ಕುಣಿವ ಕೈಗೊಂಬೆಯಾಗುತಿದ್ದಾರೆ. ಇವೆಲ್ಲ ಅವರ ಬೆಳವಣಿಗೆ ಮೇಲೆ ಯಾವ ರೀತಿ ಪರಿಣಾಮ ಬೀರುತ್ತಿದೆ ಅನ್ನುವುದನ್ನು ಅರಿತಾಗ ನಿಜಕ್ಕೂ ದಿಗಿಲಾಗುತ್ತದೆ.

ಮಕ್ಕಳಿಗೆ ಬರಿ ಓದು ಒಂದಿದ್ದರೆ ಸಾಕೆ? ಈ ಸಮಾಜಕ್ಕೆ ಬರಿ ವಿದ್ಯಾವಂತರಷ್ಟೆ ಬೇಕಾಗಿರುವುದಾ?
ಖಂಡಿತವಾಗಿಯೂ ಅಲ್ಲ. ಈ ಸಮಾಜಕ್ಕೆ ಒಂದೊಳ್ಳೆ ಸುಶಿಕ್ಷಿತ ಪ್ರಜೆ ಬೇಕು. ವಿದ್ಯೆಯ ಜೊತೆ ವಿನಯವೂ ಸೇರಿರಬೇಕು. ಇವೆಲ್ಲವನ್ನೂ ನೀಡುವತ್ತ ಗಮನ ಹರಿಸಬೇಕು. ಮಕ್ಕಳು ಬೆಳೆಯುತ್ತಾ ಹೋದಂತೆ ಬುದ್ಧಿ ವಿಕಸನಗೊಳ್ಳುತ್ತದೆ. ಆ ಸಮಯದಲ್ಲಿ ಸರಿತಪ್ಪುಗಳನ್ನು ತೋರಿಸಿ ಸರಿಯಾದ ದಾರಿಯತ್ತ ಕೊಂಡೊಯ್ಯಬೇಕು. ಅದಕ್ಕಾಗಿ ಅವರಿಗೆ ಮನೆಯೇ ಮೊದಲ ಗುರುಕುಲವಾಗಬೇಕು. ನಮ್ಮ ಮನೆಯ ವಾತಾವರಣ ಹೇಗಿರುತ್ತದೋ ಅದರಂತೆ ಮಗು ಬೆಳೆಯುತ್ತದೆ. ನಾವೂ ನಮ್ಮ ಮಕ್ಕಳಿಗೆ ಶಿಕ್ಷಣದ ಜೊತೆ ಸಂಸ್ಕಾರವನ್ನು ಕಲಿಸಬೇಕು. ಬರಿ ವಿದ್ಯೆ ಒಂದೇ ಸಾಕಾಗಲ್ಲ. ಇದನ್ನು ಇವತ್ತು ಪ್ರತಿಯೊಬ್ಬರೂ ಅರಿಯಬೇಕು.
ಇವತ್ತು ಚರ್ಚೆ ಆಗುತ್ತಿರುವ ವಿಷಯ, ಶಾಲೆಯಲ್ಲಿ ಮಕ್ಕಳಿಗೆ ಲೈಂಗಿಕ ಶಿಕ್ಷಣದ ಅಗತ್ಯವಿದೆಯೆ ಎಂದು. ಇಲ್ಲಿ ನಾವು ಗಮನಿಸಬೇಕಾದ ವಿಷಯ, ನಿಜವಾಗಿಯೂ ಮಕ್ಕಳಿಗೆ ಯಾವ ತರಹದ ಲೈಂಗಿಕ ಶಿಕ್ಷಣದ ಅಗತ್ಯವಿದೆ ಎಂದು. ಗುಡ್ ಟಚ್ ಬ್ಯಾಡ್ ಟಚ್ ಬಗ್ಗೆ ನಾವು ಹೆಣ್ಣುಮಕ್ಕಳಿಗೆ ಹೇಳಿಕೊಡುತ್ತೇವೆ. ಆದರೆ ಗಂಡುಮಕ್ಕಳಿಗೆ ಯಾವ ರೀತಿ ಹೇಳಬೇಕು, ಯಾವ ರೀತಿ ಹೇಳಿದರೆ ಅವರಿಗೆ ಅರ್ಥವಾಗಬಹುದು? ಎಂದು ತುಂಬಾ ಜನ ತಂದೆತಾಯಿಗಳು ಯೋಚಿಸುತ್ತಿರುತ್ತಾರೆ.

ಆಧುನಿಕ ಯುಗದಲ್ಲಿ ಎಲ್ಲವೂ ಅವಶ್ಯಕವಾಗಿರುವಾಗ-ಇಲ್ಲದಿರುವುದೆಲ್ಲವೂ ನಮಗೆ ಗೋಚರವಾಗುತ್ತಿದೆ. ಇಂತಹ ಸಮಯದಲ್ಲಿ ನಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಿ ಮಕ್ಕಳ ರಕ್ಷಣೆಯ ಜೊತೆಗೆ ಅವರ ಹಕ್ಕುಗಳ ರಕ್ಷಣೆಯನ್ನು ನಾವೇ ಮಾಡಬೇಕು. ಹೆಣ್ಣು ಮಕ್ಕಳಿಗೆ ನೀತಿ-ನಿಯಮಗಳ ಪಾಠ ಮಾಡುವ ನಾವು ಗಂಡು ಮಕ್ಕಳಿಗೆ ನೈತಿಕತೆ ಕಲಿಸುವುದನ್ನು ಮರೆಯುತ್ತೇವೆ. ಅಷ್ಟೇ ಅಲ್ಲ ಮಕ್ಕಳಿಗೆ ಲೈಂಗಿಕ ಶಿಕ್ಷಣ ಕೊಡುವಾಗ ಹೆತ್ತವರಿಗೂ ಕೆಲವೊಂದು ನಿಯಮಗಳನ್ನು ಅನುಸರಿಸುವಂತೆ ತಿಳಿಸಬೇಕಿದೆ.
ಹೌದು ಇವತ್ತು ಇದರ ಅಗತ್ಯವಿದೆ. ತಂದೆತಾಯಿ ಮಾಡುವ ಕೆಲವೊಂದು ತಪ್ಪುಗಳು ಮಕ್ಕಳನ್ನು ಹಾಳುಮಾಡುತ್ತವೆ. ಕೆಟ್ಟದಾರಿಯ ಪರಿಚಯ ಮಾಡಿಸಿಕೊಡುತ್ತದೆ. ಹಲವಾರು ಕುತೂಹಲಕಾರಿ ಯೋಚನೆಗಳು ಮಕ್ಕಳ ಮನಸ್ಸಿನಾಳದಲ್ಲಿ ಬೇರಿರೂತ್ತದೆ. ಇದಕ್ಕೊಂದು ಉದಾಹರಣೆ ಇಲ್ಲಿದೆ.
ಇತ್ತೀಚೆಗೆ ಶಾಲೆಯ ಪಕ್ಕ ಇರುವ ಮೋರಿಯಡಿಯಲ್ಲಿ ಇಬ್ಬರು ಮಕ್ಕಳು ಅಸಭ್ಯವಾಗಿ ವರ್ತಿಸುತ್ತ ಇದ್ದರಂತೆ. ಯಾವುದೋ ಮಕ್ಕಳು ಮೋರಿಯಡಿಯಲ್ಲಿ ಇದ್ದಾರೆ ಅಂತ ಕೆಳಗಿಳಿದ ಒಬ್ಬ ಹಿರಿಯ ವ್ಯಕ್ತಿಗೆ ಮಕ್ಕಳನ್ನು ಆ ಸ್ಥಿತಿಯಲ್ಲಿ ನೋಡಿ ಶಾಕ್ ಆಗಿದೆ. ಇದೇನಿದು ಇಷ್ಟು ಚಿಕ್ಕಮಕ್ಕಳು ಇದೇನು ಮಾಡುತ್ತಿದ್ದಾರೆ ಎಂದು ಗದರಿಸಿ ಅಲ್ಲಿಂದ ಅವರನ್ನು ಹಿಡಿದು ಮುಖ್ಯೋಪಾಧ್ಯಾಯರ ಬಳಿಗೆ ಕರೆದುಕೊಂಡು ಹೋಗಿದ್ದಾರೆ. ಮುಖ್ಯೋಪಾಧ್ಯಾಯರು ಮಕ್ಕಳನ್ನು ಕುಳ್ಳಿರಿಸಿ ವಿಚಾರಣೆ ಮಾಡಿದರು. ಇದೆಲ್ಲ ಏನು ಇಂತಹದೆಲ್ಲ ಎಲ್ಲಿಂದ ಕಲಿತಿರೋದು ಅಂತ ಗದರಿಸಿದ್ದಾರೆ.
ಆಗ ಆ ಹುಡುಗನ ಬಾಯಿಂದ ಬಂದ ಉತ್ತರ, 'ಇದನ್ನು ನಾನು ಮನೆಯಿಂದನೇ ಕಲಿತಿದ್ದು..' ಈಗ ಬೆರಗಾಗುವ ಸರದಿ ಉಪಾಧ್ಯಾಯರದು.. ಮಕ್ಕಳ ಮನೆಗೆ ಬುಲಾವ್ ಹೋಯಿತು. ಹೆತ್ತವರು ಬಂದರೂ ಮಕ್ಕಳ ಇವತ್ತಿನ ಅವತಾರದ ಕತೆ ಕೇಳಿ ಸಿಟ್ಟು ನೆತ್ತಿಗೇರಿದೆ ಹೆತ್ತವರಿಗೆ. ಇನ್ನೇನು ಹೊಡೆಯೋಕೆ ಕೈ ಎತ್ತಿದಾಗ ಟೀಚರ್ ಕೇಳಿದರು, 'ನೀವು ಹೊಡೆಯುವುದಕ್ಕೆ ಮೊದಲು ನಿಮ್ಮ ಮಗು ಇದನ್ನು ಎಲ್ಲಿಂದ ಕಲಿತದ್ದು ಅನ್ನೋದನ್ನು ತಿಳಿದುಕೊಳ್ಳಿ' ಅಂದಿದ್ದಾರೆ.
ನಿಮ್ಮ ಮಕ್ಕಳು ಇದನ್ನು ಮೊದಲು ಕಲಿತದ್ದು ತಮ್ಮ ಹೆತ್ತವರಿಂದ. ದಿನ ರಾತ್ರಿ ಅಪ್ಪ ಅಮ್ಮ ಏನು ಮಾಡುತ್ತಿದ್ದಾರೆ ಅಂತ ಕದ್ದು ನೋಡುವ ಮಕ್ಕಳ ಮನಸ್ಸಲ್ಲಿ ಕುತೂಹಲ ಸಹಜವಾಗಿಯೇ ಹುಟ್ಟಿರುತ್ತದೆ. ಮಕ್ಕಳು ಪಕ್ಕದಲ್ಲೇ ಮಲಗಿದ್ದರೂ ಮೈಮರೆಯುವ ಹೆತ್ತವರು. ತಮ್ಮ ಮಕ್ಕಳು ಮಲಗಿದ್ದಾರಾ ಇಲ್ಲವಾ ಅನ್ನುವುದನ್ನು ಖಾತ್ರಿ ಮಾಡಿಕೊಳ್ಳದೆ ಮೈಮರೆತು ಹೋಗಿರುತ್ತಾರೆ. ಮಕ್ಕಳಿಗೂ ಸಹಜ ಸ್ವಾಭಾವಿಕ ಕುತೂಹಲ ಆಗಿಯೇ ಆಗುತ್ತದೆ. ಅವರೇನು ಮಾಡುತ್ತಿದ್ದಾರೆ ಎಂದು ಕದ್ದು ನೋಡುವ ಮಕ್ಕಳು, ಇದನ್ನು ತಮ್ಮ ವಯಸ್ಸಿನವರ ಜೊತೆ ಪ್ರಯೋಗಿಸುತ್ತಾರೆ. ಇವತ್ತು ತಮ್ಮ ಮಕ್ಕಳಿಂದಲೇ ಇಂತಹದನ್ನೆಲ್ಲ ಎಲ್ಲರ ಮುಂದೆ ಕೇಳಿದಾಗ ಮತ್ತೊಮ್ಮೆ ಬೆತ್ತಲಾಗುವ ಸರದಿ ಹೆತ್ತವರದು.
ಇಂತಹ ಅದೆಷ್ಟೋ ಪ್ರಕರಣಗಳಿವೆ. ಇಲ್ಲಿ ಯಾರಿಗೆ ಯಾವ ಪಾಠದ ಅಗತ್ಯವಿದೆ? ಬರಿ ಮೊಬೈಲ್ ಇಂಟರ್ನೆಟ್ ಮಾತ್ರ ಮಕ್ಕಳನ್ನು ಹಾಳು ಮಾಡುತ್ತಿಲ್ಲ. ನಮ್ಮ ಸುತ್ತಮುತ್ತ ನಡೆಯುವ ಅದೆಷ್ಟೋ ವಿಷಯಗಳು ಕೂಡ ಎಳೆಯ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ. ಯಾವುದು ಬೇಕು ಯಾವುದು ಬೇಡ ಅನ್ನುವ ದ್ವಂದ್ವದಲ್ಲೇ ಮಕ್ಕಳ ಮನಸ್ಥಿತಿ ಬೆಳೆಯುತ್ತಿರುತ್ತದೆ. ಮಕ್ಕಳಿಗೆ ಲೈಂಗಿಕತೆಯ ಬಗ್ಗೆ ಕುತೂಹಲಗಳು ಇದೆ ಅಂದ್ರೆ ನಾವು ಅವರಿಗೆ ಅರ್ಥವಾಗುವ ಹಾಗೇ ಪರಿಸ್ಥಿತಿಯನ್ನು ನಿಭಾಯಿಸಿ ವಿವರಿಸಬೇಕು. ಸರಿ ತಪ್ಪುಗಳ ಬಗ್ಗೆ ಅರ್ಥೈಹಿಸಬೇಕು.
ಮಕ್ಕಳ ಸುರಕ್ಷತೆಯ ಬಗ್ಗೆ ನಾವೇ ಮೊದಲು ಯೋಚಿಸಬೇಕು. ಇದೆಲ್ಲವೂ ಮಕ್ಕಳ ಬೆಳವಣಿಗೆ ಮತ್ತು ಶಿಕ್ಷಣದ ಮೂಲ ಉದ್ದೇಶಗಳಿಗೆ ಧಕ್ಕೆ ಉಂಟು ಮಾಡುವಂತಹವುಗಳು. ಆದ್ದರಿಂದ ಈ ಕುರಿತು ಶಿಕ್ಷಕರೂ, ಪೋಷಕರೂ, ಸಾಮಾಜಿಕ ಕಾರ್ಯಕರ್ತರೂ ಗಂಭೀರವಾಗಿ ಚಿಂತಿಸುವ ಅಗತ್ಯವಿದೆ.
ಈ ತರಹದ ಪ್ರಸಂಗಗಳು ಮರುಕಳಿಸಬಾರದು ಅಂದ್ರೆ ಮೊದಲು ಹೆತ್ತವರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ. ಬೆಳೆಯುತ್ತಿರುವ ಮಕ್ಕಳಿಗೆ ನೈತಿಕತೆಯ ಪಾಠವನ್ನು ನೀಡಬೇಕಿದೆ. ಅನೈತಿಕತೆಯ ಗಾಳಿಯೂ ಅವರತ್ತ ಸೋಕದಂತೆ ಎಚ್ಚರವಹಿಸಬೇಕಾಗಿದೆ..
ಮಕ್ಕಳ ಬಾಲ್ಯದ ಸ್ವಯಂಕೃತ ತಪ್ಪಿಗೆ ನಾವೂ ಕಾರಣವಾಗಬಾರದು. ಕೆಲವು ಮಕ್ಕಳ ಮನಸ್ಥಿತಿ ಸೂಕ್ಷ್ಮವಾಗಿರುತ್ತದೆ. ಕೆಲವೊಂದು ಘಟನೆಗಳನ್ನು ಅವರೆಂದೂ ಮರೆಯಲಾರರು. ಈ ಸಮಾಜದ ಆಸ್ತಿ ನಮ್ಮ ಮಕ್ಕಳು. ಅವರನ್ನು ವಿದ್ಯಾವಂತರನ್ನಾಗಿ ಮಾತ್ರ ಮಾಡೋದಲ್ಲ.. ಸಂಸ್ಕಾರವನ್ನು ಕಲಿಸಿ ವಿಧೇಯತೆಯನ್ನು ಕಲಿಸೋಣ. ನಾವೂ ಮಾಡುವ ತಪ್ಪುಗಳು ಅವರನೆಂದೂ ಬಾಧಿಸದೇ ಇರಲಿ. ಬಾಲ್ಯದ ನೆನಪುಗಳು ವರವಾಗಿ ಬರಲಿ ಶಾಪವಾಗಿ ಎಂದೂ ಕಾಡದಿರಲಿ. ಇದೊಂದೇ ಮನವಿ. ಸುಂದರ ಕ್ಷಣಗಳನ್ನು ಅವರ ಬದುಕಿನ ಬುಟ್ಟಿಯಲ್ಲಿ ತುಂಬಿಸಿ ಸುಂದರ ಪ್ರಜೆಯನ್ನಾಗಿ ರೂಪಿಸುವ ಜವಾಬ್ದಾರಿ ನಮ್ಮ ಮೇಲಿದೆ.
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ












Click it and Unblock the Notifications